Advertisement

ಕೈಗಾರಿಕೆಗಳ ಸ್ಥಾಪನೆ ವಿಳಂಬಕ್ಕೆ ಡಿಸಿ ಗರಂ

11:31 AM Jun 19, 2019 | Team Udayavani |

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳುವಲ್ಲಿ ಅನಗತ್ಯ ವಿಳಂಬ ಆಗಿದೆ ಎಂದು ಏಕಗವಾಕ್ಷಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ತೀವ್ರ ಅಸಮಾಧಾನ ಹೊರಹಾಕಿದರು.

Advertisement

ನಗರದ ತಮ್ಮ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕೈಗಾರಿಕಾ ಇಲಾಖೆಯ ಪ್ರಸಕ್ತ ಸಾಲಿನ ಪ್ರಥಮ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

2018ರ ಡಿಸೆಂಬರ್‌ 3ರಂದು ನಡೆದ ಹಿಂದಿನ ಸಭಾ ನಿರ್ಣಯಗಳ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಇರುವ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಹಾಗೂ ಕಡೂರು ತಹಶೀಲ್ದಾರರನ್ನು ತರಾಟೆಗೆ ತೆಗೆದುಕೊಂಡರು. ಈ ಸಂಬಂಧ ಮೌನವಾಗಿರುವ ಕೈಗಾರಿಕಾ ಇಲಾಖೆ ಅಧಿಕಾರಿ, ಸಿಬ್ಬಂದಿ ವರ್ತನೆ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದರು.

ಕೆಐಎಡಿಬಿ ಉದಾಸೀನ: ಸಖರಾಯಪಟ್ಟಣ ಸಮೀಪದ ಕಬ್ಬಳ್ಳಿ ಗ್ರಾಮದಲ್ಲಿ ಕೈಗಾರಿಕಾ ಪ್ರದೇಶಾಭಿವೃದ್ಧಿಗೆ ಸರ್ವೆ ನಂ.42ರಲ್ಲಿ 24.22ಎಕರೆ, 43ರಲ್ಲಿ 23.37ಎಕರೆ, 44ರಲ್ಲಿ 16.12ಎಕರೆ ಜಾಗ ಪರಿಶೀಲಿಸಿ ಸೂಕ್ತ ಪ್ರಸ್ತಾವನೆ ಸಲ್ಲಿಸಲು ಅಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದರು. ಆದರೂ, ಕೆಐಎಡಿಬಿ ಅಧಿಕಾರಿಗಳಾಗಲಿ, ತಹಶೀಲ್ದಾರರಾಗಲಿ ಯಾವ ಕ್ರಮವನ್ನೂ ಕೈಗೊಳ್ಳದೇ ಇರುವುದು ಜಿಲ್ಲಾಧಿಕಾರಿಗಳ ಕೋಪಕ್ಕೆ ಕಾರಣವಾಯಿತು.

ತಹಶೀಲ್ದಾರ ವರ್ತನೆಗೆ ಆಕ್ಷೇಪ: ಕಡೂರು ತಹಶೀಲ್ದಾರರು ಏಕಗವಾಕ್ಷಿ ಸಮಿತಿ ಸಭೆಗೆ ಬಾರದೆ ತಮ್ಮ ಸಹಾಯಕರನ್ನೂ ಕಳುಹಿಸದ ಬಗ್ಗೆ ಜಿಲ್ಲೆಯಿಂದ ಹೊರಗೆ ಹೋಗಿದ್ದ ತಹಶೀಲ್ದಾರರನ್ನು ಮೊಬೈಲ್ ಮೂಲಕವೇ ಸಂಪರ್ಕಿಸಿದ ಜಿಲ್ಲಾಧಿಕಾರಿಗಳು, ಅವರ ಈ ವರ್ತನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದೇ ರೀತಿ ಮುಂದುವರಿದರೆ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದರು. ಒಂದು ವಾರದಲ್ಲಿ ಕೆಐಎಡಿಬಿ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲಿಸಿ ಪ್ರಗತಿಯ ವರದಿ ನೀಡಬೇಕೆಂದು ಖಡಕ್‌ ಆದೇಶ ನೀಡಿದರು.

Advertisement

ಕಾರಣ ಕೇಳಿ ನೋಟಿಸ್‌ ನೀಡಿ: ಸಭೆಗೆ ಬಾರದೇ ಹಾಗೂ ತಮ್ಮ ಸಹಾಯಕರನ್ನು ಕಳುಹಿಸದೆ ಇರುವ ಬಗ್ಗೆ ತಹಶೀಲ್ದಾರರಿಗೆ ನೋಟಿಸ್‌ ನೀಡಿ ಕಾರಣ ಕೇಳಲು ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ರಮೇಶ್‌ ಅವರಿಗೆ ಸೂಚಿಸಿದರು. ಅಲ್ಲದೇ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೂ ನೋಟಿಸಿನ ಪ್ರತಿಯನ್ನು ಕಳುಹಿಸಿಕೊಡಲು ತಿಳಿಸಿದರು.

ಬೆನ್ನುಹತ್ತಿ ಕೆಲಸ ಮಾಡಿಸಿ: ಕೈಗಾರಿಕಾ ಇಲಾಖೆ ಅಧಿಕಾರಿಗಳು ಕೇವಲ ಪತ್ರ ವ್ಯವಹಾರ ಮಾಡಿ ಮೌನವಾಗಿರಬಾರದು. ಕೈಗಾರಿಕಾ ಅಭಿವೃದ್ಧಿ ಬಗ್ಗೆ ತೆಗೆದುಕೊಂಡ ನಿರ್ಧಾರಗಳು ಕಾರ್ಯಗತವಾಗುವಂತೆ ಆಗಾಗ ಆ ಜವಾಬ್ದಾರಿ ಹೊತ್ತ ಅಧಿಕಾರಿಗಳ ಬೆನ್ನುಹತ್ತಿ ಒತ್ತಡ ಹಾಕಿ ಕೆಲಸ ಮಾಡಿಸಬೇಕು. ಅವರು ಮಾಡಲು ಮುಂದಾಗದಿದ್ದಲ್ಲಿ ಅದನ್ನು ತಮ್ಮ ಗಮನಕ್ಕಾದರೂ ತರಬೇಕಿತ್ತು ಎಂದು ಹೇಳಿದರು.

ಮೆಸ್ಕಾಂ ಸಬ್‌ಸ್ಟೇಷನ್‌ಗೆ ಜಾಗ ಹುಡುಕಿ: ಮೆಸ್ಕಾಂಗೆ ಸಬ್‌ ಸ್ಟೇಷನ್‌ ನಿರ್ಮಾಣಕ್ಕೆ ಲಕ್ಯಾ ಸುತ್ತಮುತ್ತ 2ಎಕರೆ ಜಾಗದ ಅವಶ್ಯಕತೆ ಇದ್ದು, ಆ ಬಗ್ಗೆ ಸಹ ಯಾವುದೇ ಪ್ರಗತಿ ಆಗಿಲ್ಲದೇ ಇರುವುದನ್ನು ಜಿಲ್ಲಾಧಿಕಾರಿಗಳು ಇದೇ ವೇಳೆ ಪ್ರಸ್ತಾಪಿಸಿದರು. ತಹಶೀಲ್ದಾರರು ಅತ್ಯಂತ ಕ್ರಿಯಾಶೀಲರಾಗಿರಬೇಕು. ಮೆಸ್ಕಾಂ ಸಬ್‌ ಸ್ಟೇಷನ್‌ ಆದಲ್ಲಿ ಅದು ಕೈಗಾರಿಕೆಗಳಿಗೆ ಮಾತ್ರವಲ್ಲ ಗ್ರಾಮೀಣ ಜನರಿಗೂ ಉತ್ತಮ ವಿದ್ಯುತ್‌ ಸರಬರಾಜಿಗೆ ಕಾರಣವಾಗುತ್ತದೆ. ಇನ್ನೊಂದು ವಾರದಲ್ಲಿ ಮೆಸ್ಕಾಂಗೆ ಜಾಗ ನೀಡುವ ಬಗ್ಗೆ ಪೂರ್ಣ ವರದಿ ತಮಗೆ ಸಲ್ಲಿಕೆಯಾಗಬೇಕು. ಆ ಪ್ರದೇಶದಲ್ಲಿ ಭೂಮಿ ಇಲ್ಲದಿದ್ದರೆ ಪರ್ಯಾಯ ಭೂಮಿ ಬಗ್ಗೆ ಮಾಹಿತಿ ಹೊಂದಿರಬೇಕೆಂದು ಖಡಕ್‌ ಸೂಚನೆ ನೀಡಿದರು.

ಪ್ರಸ್ತಾವನೆ ಸಲ್ಲಿಸಿ: ಜಿಲ್ಲಾಧಿಕಾರಿಗಳು ಮಾತನಾಡಿ, 500ಎಕರೆ ಎಂದಾಕ್ಷಣ ಭಾರಿ ವಿಶಾಲ ಪ್ರದೇಶವಾಗುತ್ತದೆ. ಅಗತ್ಯವಿರುವಷ್ಟು ಜಾಗ ಗುರುತಿಸಲು ಕೈಗಾರಿಕಾ ಇಲಾಖೆಗೆ ಸೂಚಿಸಿದಾಗ, ಕನಿಷ್ಠ 200 ಎಕರೆ ಜಾಗ ಪ್ರತಿ ತಾಲೂಕಿನಲ್ಲಿ ಅವಶ್ಯಕತೆ ಇದೆ ಎಂಬ ಮಾಹಿತಿ ಹೊರಬಂತು. ಕೆಐಎಡಿಬಿ ಅಧಿಕಾರಿಗಳು ತಹಶೀಲ್ದಾರರೊಂದಿಗೆ ಸೇರಿ ಪರಿಶೀಲಿಸಿ ಈ ಪ್ರದೇಶವನ್ನು ಗುರುತಿಸಲು ಸೂಚಿಸಿದ ಜಿಲ್ಲಾಧಿಕಾರಿಗಳು, ತರೀಕೆರೆ ಮತ್ತು ಚಿಕ್ಕಮಗಳೂರು ತಹಶೀಲ್ದಾರರಿಗೆ ಸರ್ಕಾರಿ ಭೂಮಿ ಎಲ್ಲಿದೆ ಎಂದು ಪರಿಶೀಲಿಸಿ ತಮಗೆ ಪ್ರಸ್ತಾವನೆ ಸಲ್ಲಿಸಬೇಕೆಂದರು.

Advertisement

Udayavani is now on Telegram. Click here to join our channel and stay updated with the latest news.

Next