Advertisement

ವಿಭಿನ್ನಶೈಲಿ ಗಡಿಯಾರ ಕಲಾಕಾರ ವಿಜಯ

01:22 PM Mar 09, 2020 | Naveen |

ಚಿಕ್ಕಮಗಳೂರು: ಸಾಧನೆ ಯಾರ ಸ್ವತ್ತು ಅಲ್ಲ, ಸಾಧಿಸುವ ಛಲವಿರಬೇಕಷ್ಟೇ. ಅನೇಕರು ದೈಹಿಕವಾಗಿ ಶಕ್ತರಾಗಿದ್ದರೂ ತಮ್ಮ ಶೈಕ್ಷಣಿಕ ಅರ್ಹತೆಗೆ ಸರಿದೂಗುವ ಅವಕಾಶ ಸಿಗಲಿಲ್ಲ ಎಂದು ಮೂಲೆಗುಂಪಾದವರ ನಡುವೆ ಹುಟ್ಟಿನಿಂದ ಕಿವುಡ-ಮೂಗನಾಗಿರುವ ನಗರದ ವಿಜಯ್‌ಕುಮಾರ್‌ ಛಲ ಬಿಡದೇ ವಿಭಿನ್ನ ರೀತಿಯ ಗಡಿಯಾರವನ್ನು ತಯಾರಿಸುವ ಮೂಲಕ ಎಲೆಮರೆ ಕಾಯಿಯಂತೆ ಸಾಧನೆಯಲ್ಲಿ ತೊಡಗಿದ್ದಾರೆ.

Advertisement

ಚಿಕ್ಕಮಗಳೂರು ನಗರದ ಹನುಮಂತಪ್ಪ ಸರ್ಕಲ್‌ನಲ್ಲಿ ಗಡಿಯಾರದ ಅಂಗಡಿ ನಡೆಸುತ್ತಿರುವ ವಿಜಯ್‌ಕುಮಾರ್‌ ಹುಟ್ಟು ವಿಕಲಚೇತನ. ಇವರಿಗೆ ಕಿವಿ ಕೇಳಿಸುವುದಿಲ್ಲ, ಮಾತು ಬಾರದು. ಹುಟ್ಟಿನಿಂದ ಇವರಿಗೆ ಅಂಗವೈಕಲ್ಯ ಬಂದಿದ್ದರೂ ಅದಕ್ಕೆ ಶಪಿಸುತ್ತ ಕಾಲ ಕಳೆಯದೇ ಸ್ವ ಸಾಮರ್ಥ್ಯದಿಂದ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.

ತರಬೇತಿ ಪಡೆದು ಕಲಿತಿಲ್ಲ: ಅಪರೂಪ, ವೈವಿಧ್ಯಮಯ ಗಡಿಯಾರ ತಯಾರಿಸುವ ಹಾಗೂ ಯಾರಿಂದಲೂ ರಿಪೇರಿ ಮಾಡಲಾಗದ ವಾಚ್‌ಗಳು, ಗಡಿಯಾರಗಳನ್ನು ಕೆಲವೇ ಕ್ಷಣಗಳಲ್ಲಿ ರಿಪೇರಿ ಮಾಡುವ ಕಲೆ ಸಿದ್ಧಿಸಿಕೊಂಡಿದ್ದಾರೆ. ವಿಜಯ್‌ಕುಮಾರ್‌ ಗಡಿಯಾರ ತಯಾರಿಸುವ ಕಲೆ ಯಾರಿಂದಲೂ ತರಬೇತಿ ಪಡೆದು ಕಲಿತದ್ದಲ್ಲ. ಕೇವಲ 7ನೇ ತರಗತಿ ಓದಿರುವ ಇವರು ಚಿಕ್ಕ ವಯಸ್ಸಿನಲ್ಲಿ ವಾಚ್‌ ರಿಪೇರಿ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದರು.

ಅಲ್ಲಿ ನೋಡಿದ್ದನ್ನೇ ಮನಸ್ಸಿನಲ್ಲಿ ತೆಗೆದುಕೊಂಡು ತಮ್ಮ ಮನೋಸಾಮರ್ಥ್ಯದಿಂದ ಸ್ವತಃ ತಾವೇ ಗಡಿಯಾರ ರಿಪೇರಿ ಮಾಡುವುದನ್ನು ಕಲಿತಿದ್ದಾರೆ.

ಅಪರೂಪದ ಗಡಿಯಾರ ತಯಾರಿಕೆ: ಸಮಾಜ ತಮ್ಮನ್ನು ನೋಡುವ ದೃಷ್ಟಿ ಬದಲಾಗಬೇಕಾದಲ್ಲಿ ಏನಾದರೂ ಸಾಧಿಸಿ ತೋರಬೇಕೆಂದು ನಿಶ್ಚಯಿಸಿ 20 ವರ್ಷಗಳಿಂದ ಯಾರೂ ನೋಡಿರದಂತಹ 400 ವರ್ಷಗಳ ಹಿಂದೆ ಬಳಸುತ್ತಿದ್ದ ಅಪರೂಪದ ಜಲಗಡಿಯಾರ, ಪೆಂಡ್ಯುಲಮ್‌ ಗಡಿಯಾರ, ಮರಳಿನಿಂದ ಓಡುವ ಗಡಿಯಾರ, ಸೈಕಲ್‌ನಿಂದ ಚಲಿಸುವ ಗಡಿಯಾರ, ನೀರಿನಿಂದ ಓಡುವ ಗಡಿಯಾರ ಸೇರಿದಂತೆ ವಿಸ್ಮಯಕಾರಿ ಗಡಿಯಾರ ತಯಾರಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Advertisement

ಎಲ್ಲೆಡೆ ಬೇಡಿಕೆ: ಇವರು ತಯಾರಿಸುವ ಅಪರೂಪದ ಗಡಿಯಾರಗಳಿಗೆ ಎಲ್ಲೆಡೆ ಬೇಡಿಕೆ ಇದೆ. ಹೆಚ್ಚಾಗಿ ಗ್ರಾಹಕರು ಇಂತಹ ಗಡಿಯಾರ ಮನೆಯಲ್ಲಿ ಅಲಂಕಾರಕ್ಕಾಗಿ ಬಳಸುತ್ತಾರೆ. ಅದರಲ್ಲೂ ಬೆಂಗಳೂರಿನಿಂದ ಇಂತಹ ಗಡಿಯಾರಕ್ಕೆ ಬೇಡಿಕೆ ಹೆಚ್ಚು ಬರುತ್ತಿದೆ. ಇಂತಹ ಗಡಿಯಾರಗಳನ್ನು ವಿಜಯ್‌ಕುಮಾರ್‌ ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ನೀಡುತ್ತಿದ್ದಾರೆ.

ಗಡಿಯಾರಕ್ಕೆ ಬೇಕಾಗುವ ಕಚ್ಚಾ ವಸ್ತುಗಳನ್ನು ಸುತ್ತಮುತ್ತಲು ಸಿಗುವ ಅನುಪಯುಕ್ತ ವಸ್ತುಗಳಿಂದಲೇ ಆಯ್ದುಕೊಳ್ಳುತ್ತಾರೆ. ವಿಜಯ್‌ಕುಮಾರ್‌ ಒಬ್ಬ ಉತ್ತಮ ಚಿತ್ರಕಲಾವಿದರೂ ಆಗಿರುವುದರಿಂದ ಆ್ಯಂಟಿಕ್ಯೂ ಗಡಿಯಾರಗಳನ್ನು ಸುಂದರವಾಗಿ ಸ್ವತಃ ಅವರೇ ತಯಾರಿಸುತ್ತಾರೆ.

ತಮ್ಮ ಬಳಿ ಬರುವವರು ಹಿಂದಿನ ಕಾಲದ ಮರಳು, ನೀರು ಚಾಲಿತ ಗಡಿಯಾರಗಳನ್ನು ಆರ್ಡರ್‌ ಕೊಟ್ಟು ಮಾಡಿಸುತ್ತಾರೆ. ಇವರ ಅಸಾಧಾರಣ ಪ್ರತಿಭೆಗೆ ಬೆರಾಗಾಗುವ ಗ್ರಾಹಕರು ಸಣ್ಣಪುಟ್ಟ ವಾಚ್‌ ರಿಪೇರಿಗೂ ವಿಜಯ್‌ ಬಳಿಗೆ ಬರುತ್ತಾರೆ. ಇದರಿಂದ ವಿಜಯ್‌ ಅವರ ಅಂಗಡಿ ಸದಾ ಗ್ರಾಹಕರಿಂದಲೇ ತುಂಬಿರುತ್ತದೆ.

ಅಪರೂಪದ ಬಹುಮುಖ ಪ್ರತಿಭೆ ವಿಜಯ್‌ ಕುಮಾರ್‌ ನಗರದ ಹನುಮಂತಪ್ಪ ಸರ್ಕಲ್‌ನ ಷರೀಫ್‌ ಗಲ್ಲಿಯಲ್ಲಿ ಸಣ್ಣದೊಂದು ಅಂಗಡಿಯಿಂದ ಜೀವನ ನಡೆಸುತ್ತಿದ್ದಾರೆ. ವಿವಾಹಿತರಾಗಿರುವ ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಬಡತನದ ಬೇಗೆಯಲ್ಲೂ ದೈಹಿಕ ನ್ಯೂನತೆ ನಡುವೆ ವಿಶಿಷ್ಟ ಸಾಧನೆ ಮಾಡುತ್ತಿರುವ ಅವರು ತಮ್ಮ ಅಂಗಡಿಯಲ್ಲಿ ಯಾವಾಗಲೂ ಗಡಿಯಾರಗಳ ಪ್ರಪಂಚದಲ್ಲಿಯೇ ಮುಳುಗಿರುತ್ತಾರೆ. ತಾನೊಬ್ಬ ಅಂಗವಿಕಲ ಎಂಬುದನ್ನು ಮರೆತು ಸದಾ ಹೊಸ ಬಗೆಯ ಗಡಿಯಾರಗಳ ತಯಾರಿಕೆ ಬಗ್ಗೆ ಸಂಶೋಧನೆಯಲ್ಲಿ ನಿರತರಾಗಿರುತ್ತಾರೆ .

ಸಾಧಕರನ್ನು ಗುರುತಿಸಿ-ಚೈತನ್ಯ ತುಂಬಿ
ಪ್ರತಿನಿತ್ಯ ಹೊಸ ಮಾದರಿ ಗಡಿಯಾರ ತಯಾರಿಕೆಯಲ್ಲಿ  ಜಯಕುಮಾರ ನಿರತರಾಗಿರುತ್ತಾರೆ. ತಮ್ಮಂತೆ ಅಂಗವಿಕಲತೆ ಹೊಂದಿದವರಿಗೆ ತಾವು ಕಲಿತ ವಿದ್ಯೆ ಹೇಳಿಕೊಡುತ್ತಾರೆ. ಉತ್ತಮ ಚಿತ್ರಕಲಾವಿದರಾಗಿರುವ ವಿಜಯ್‌ ಕರಾಟೆಯಲ್ಲಿ ಪರಿಣಿತರಾಗಿದ್ದು, ಬ್ಲ್ಯಾಕ್‌ಬೆಲ್ಟ್ ಚಾಂಪಿಯನ್‌. ಕಿವುಡ-ಮೂಗನಾಗಿದ್ದುಕೊಂಡು ಸಾಧನೆಗೈದ ಇವರನ್ನು ಕೆಲ ಸಂಘ ಸಂಸ್ಥೆಗಳು ಸನ್ಮಾನಿಸಿವೆ. ಸರ್ಕಾರ ಇಂತಹ ಅಪರೂಪದ ಸಾಧಕರನ್ನು ಗುರುತಿಸಿ ಇನಷ್ಟು ಚೈತನ್ಯ ತುಂಬಲಿ ಎಂಬುದು ಹಿತೈಷಿಗಳ ಮನವಿ.

Advertisement

Udayavani is now on Telegram. Click here to join our channel and stay updated with the latest news.

Next