Advertisement

ವಿದ್ಯಾರ್ಥಿ-ಶಿಕ್ಷಕರ ನೆಮ್ಮದಿ ಕಸಿದ ಅತಿವೃಷ್ಟಿ!

11:43 AM Aug 19, 2019 | Naveen |

ವಿಶೇಷ ವರದಿ
ಚಿಕ್ಕಮಗಳೂರು:
ಜಿಲ್ಲೆಯಲ್ಲಿ ಹತ್ತು ದಿನ ಸುರಿದ ನಿರಂತರ ಮಳೆ ಅನೇಕ ಕುಟುಂಬಗಳ ಸೂರನ್ನೇ ಕಿತ್ತುಕೊಂಡಿದ್ದಲ್ಲದೆ ಕಾಫಿ, ಅಡಕೆ ತೋಟದ ಮಾಲೀಕರನ್ನು ಬೀದಿಗೆ ತಂದು ನಿಲ್ಲಿಸಿದೆ. ಅತಿವೃಷ್ಟಿ ಸಾಮಾಜಿಕ, ಆರ್ಥಿಕ ಹಾಗೂ ಪರಿಸರ ಸಮಸ್ಯೆ ತಂದೊಡ್ಡಿದ್ದರ ಜೊತೆಗೆ ಶೈಕ್ಷಣಿಕ ವಲಯಕ್ಕೂ ದೊಡ್ಡ ಮಟ್ಟದ ಪೆಟ್ಟು ಕೊಟ್ಟಿದೆ.

Advertisement

ಎಡಬಿಡದೆ ಸುರಿದ ಮಳೆಗೆ ಜಿಲ್ಲೆಯಲ್ಲಿ 622ಕ್ಕೂ ಅಧಿಕ ಶಾಲಾ ಕೊಠಡಿಗಳು ಶಿಥಿಲಗೊಂಡಿವೆ. ಇದರಲ್ಲಿ 350 ಕ್ಕೂ ಹೆಚ್ಚು ಕೊಠಡಿಗಳನ್ನು ಬಳಸುವಂತೆಯೇ ಇಲ್ಲ. ವರುಣಾರ್ಭಟದಿಂದ ಶಿಕ್ಷಣ ಇಲಾಖೆಗೆ 7.73 ಕೋಟಿ ರೂ. ನಷ್ಟವಾಗಿದೆ. ಇನ್ನೊಂದೆಡೆ ಶಿಥಿಲಗೊಂಡ ಕೊಠಡಿಗಳಲ್ಲಿ ವಿದ್ಯಾರ್ಥಿಗಳನ್ನು ಕೂರಿಸಿ ಪಾಠ ಮಾಡುವ ದುಸ್ಸಾಹಸ ಮಾಡುವಂತಿಲ್ಲ. ಏಕೆಂದರೆ ಅವು ಯಾವ ಕ್ಷಣದಲ್ಲಾದರೂ ನೆಲಕ್ಕುರುಳಬಹುದು.

ಮಲೆನಾಡಿನ ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್‌.ಆರ್‌. ಪುರ ಹಾಗೂ ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಇನ್ನೂ ಮಳೆ ಸಣ್ಣದಾಗಿ ಬರುತ್ತಿದೆ. ಮಳೆ ಜೋರಾದರೆ ಇಂಥ ಕೊಠಡಿಗಳಲ್ಲಿ ಬೋಧನೆ ಮಾಡುವುದು ಹೇಗೆಂಬ ಚಿಂತೆ ಶಿಕ್ಷಕ ಸಮುದಾಯದ್ದಾಗಿದೆ.

ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌ ಅವರ ಖಡಕ್‌ ಸೂಚನೆಯಿಂದ ಮುಂಜಾಗ್ರತಾ ಕ್ರಮವಾಗಿ ಎಲ್ಲ ಕಟ್ಟಡಗಳನ್ನು ಸ್ಥಳೀಯ ಇಂಜಿನಿಯರ್‌ಗಳ ಮೂಲಕ ಪರಿಶೀಲನೆ ಮಾಡಿಸಲಾಗಿದೆ. ಅವರು ನೀಡುವ ವರದಿ ಆಧಾರದಲ್ಲಿ ಕೊಠಡಿಗಳನ್ನು ಬಳಕೆ ಮಾಡಲಾಗುತ್ತದೆ.

ಜಿಲ್ಲೆಯಲ್ಲಿ ಸರ್ಕಾರಿ ಪ್ರೌಢ ಹಾಗೂ ಪ್ರಾಥಮಿಕ ಶಾಲೆ ಸೇರಿ ಒಟ್ಟು 1551 ಶಾಲೆಗಳಿವೆ. 327 ಶಾಲೆಗಳಿಗೆ ಹಾನಿಯಾಗಿದೆ. ಒಂದೇ ಕಟ್ಟಡದಲ್ಲಿ ಹಲವು ಕೊಠಡಿಗಳಿರುವುದರಿಂದ ಒಂದು ವೇಳೆ ಶಿಥಿಲ ಕೊಠಡಿ ಕುಸಿದರೆ ಅದಕ್ಕೆ ಹೊಂದಿಕೊಂಡಂತಿರುವ ಸರಿಯಾದ ಕೊಠಡಿಯೂ ನೆಲಕ್ಕುರುಳುವ ಅಪಾಯವಿರುತ್ತದೆ.

Advertisement

ಜಿಲ್ಲಾಧಿಕಾರಿ ಹಾಗೂ ಡಿಡಿಪಿಐ ಹಂತದಲ್ಲಿ ಎಚ್ಚರಿಕೆಯ ಸಂದೇಶ ರವಾನೆಯಾದರೂ ಅಂತಿಮವಾಗಿ ಎಲ್ಲದರ ಜವಾಬ್ದಾರಿ ಹೊರಬೇಕಾದವರು ಶಾಲೆಯ ಮುಖ್ಯ ಶಿಕ್ಷಕರೇ. ಸಹಜವಾಗಿಯೇ ಶಿಕ್ಷಕರ ಮೇಲೆ ಒತ್ತಡ ಹೆಚ್ಚಿದೆ. ಇನ್ನು ಗ್ರಾಮೀಣ ಭಾಗದಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸುವುದೂ ಕಷ್ಟದ ಕೆಲಸವಾಗಿದೆ.

ಪರ್ಯಾಯ ವ್ಯವಸ್ಥೆ: ಜಿಲ್ಲೆಯ ಮೂಡಿಗೆರೆ ತಾಲೂಕಿನ ಎಂಟು ಶಾಲೆಗಳಲ್ಲಿ ಪಾಠ ಮಾಡಲು ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಬಾಳೂರು ಹೊರಟ್ಟಿ ಶಾಲೆ ಸಂಪೂರ್ಣ ಹಾನಿಯಾಗಿದ್ದು, ಸಮೀಪದ ಸಮುದಾಯ ಭವನದಲ್ಲಿ ಶಾಲೆ ನಡೆಸಲಾಗುತ್ತಿದೆ. ಇದೇ ರೀತಿ ಇತರೆ ಶಾಲೆಗಳನ್ನು ಪರ್ಯಾಯ ಸ್ಥಳದಲ್ಲಿ ನಡೆಸಲಾಗುತ್ತಿದೆ. ಆದರೆ, ಈ ಶಾಲೆಗಳಿಗೆ ಕಟ್ಟಡ ನಿರ್ಮಿಸುವ ತನಕ ಈ ಶಾಲೆ ಹೇಗೆ ನಡೆಸಬೇಕು, ಬಿಸಿಯೂಟ ಹೇಗೆ ತಯಾರಿಸಿ ಕೊಡಬೇಕೆಂಬ ಚಿಂತೆ ಶಿಕ್ಷಕರನ್ನು ಕಾಡ ತೊಡಗಿದೆ.

ಹೊಸ ಕಟ್ಟಡಕ್ಕೆ ಅವಕಾಶ: ಶತಮಾನ ಪೂರ್ಣಗೊಳಿಸಿದ ಅನೇಕ ಶಾಲಾ ಕಟ್ಟಡಗಳು ಜಿಲ್ಲೆಯಲ್ಲಿವೆ. ಈಗ ಹಲವು ಶಿಥಿಲಗೊಂಡ ಕಟ್ಟಡಗಳಾಗಿವೆ. ಅತಿವೃಷ್ಟಿ ಕಾರಣದಿಂದ ಈಗ ಶಿಥಿಲಗೊಂಡ ಕೊಠಡಿಗಳಿಗೆ ಪರ್ಯಾಯವಾಗಿ ಕೊಠಡಿ ನಿರ್ಮಾಣಕ್ಕೆ ಈಗಾಗಲೆ ನಿರ್ಧರಿಸಲಾಗಿದೆ.

ಸ್ವಚ್ಛಗೊಳಿಸಿದ ಶಿಕ್ಷಕರು: ಹತ್ತು ದಿನ ಸುರಿದ ಮಳೆಯಿಂದ ಹಲವು ಶಾಲೆಗಳಲ್ಲಿ ನೀರು ನುಗ್ಗಿತ್ತು. ಇಂಥ ಶಾಲಾ ಕೊಠಡಿಯಲ್ಲಿ ಕಸ ಕಡ್ಡಿ, ಕೆಸರು ಸೇರಿಕೊಂಡಿತ್ತು. ಬಿಸಿಯೂಟ ಕಾರ್ಯಕರ್ತರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸೇರಿ ಒಟ್ಟಾಗಿ ಸ್ವಚ್ಛಗೊಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next