Advertisement

ವಿಶ್ವಗುರು ಬಸವಣ್ಣ ಅಪೂರ್ವ ಚೇತನ

04:29 PM May 08, 2019 | Naveen |

ಚಿಕ್ಕಮಗಳೂರು: ವಿಶ್ವಗುರು ಬಸವಣ್ಣ ಎಂದರೆ ವಿಶೇಷ ಶಕ್ತಿ. ಅಪೂರ್ವ ಚೇತನ. ಕನ್ನಡ ನಾಡು ವಿಶ್ವಕ್ಕೆ ಕೊಟ್ಟಿರುವ ಅಮೂಲ್ಯ ಕಾಣಿಕೆ ಎಂದು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ ಹುಲ್ಲಹಳ್ಳಿ ಅಭಿಪ್ರಾಯಪಟ್ಟರು.

Advertisement

ಜಿಲ್ಲಾಧಿಕಾರಿ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತದ ವತಿಯಿಂದ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅವರು ‘ಬಸವೇಶ್ವರರ’ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.

ವಿಶ್ವದ ಎಲ್ಲ ಸಾಹಿತ್ಯ ಪ್ರಕಾರಗಳನ್ನು ಗಮನಿಸಿದಾಗ ಬಸವ ಸಾಹಿತ್ಯ ಅಪಾರ ಮೌಲ್ಯ ಹೊಂದಿದೆ. ಬಸವೇಶ್ವರರು ಎಂದರೆ ಅವರ ಸ್ಥಾನ ವಿಶ್ವ ಭೂಪಟದಲ್ಲಿ ವಿಶಿಷ್ಟವಾಗಿದೆ. ಅವರು ವಿಶ್ವ ಮಾನವತಾವಾದಿಯಾಗಿ ಎಲ್ಲರ ಗಮನ ಸೆಳೆದಿದ್ದಾರೆ ಎಂದು ತಿಳಿಸಿದರು.

ವಿಶ್ವ ಸಂಸತ್‌ ಪರಿಕಲ್ಪನೆ ಅನುಭವ ಮಂಟಪದಲ್ಲಿ ಕಟ್ಟಿಕೊಟ್ಟ ಮೊದಲ ಪ್ರಜಾಪ್ರಭುತ್ವವಾದಿ ಬಸವಣ್ಣ. ಪ್ರಜಾಪ್ರಭುತ್ವ ಎಂದರೆ ಹೇಗಿರಬೇಕು ಎಂಬುದನ್ನು ಅನುಭವ ಮಂಟಪದ ಮೂಲಕ ಅವರು ತೋರಿಸಿಕೊಟ್ಟಿದ್ದಾರೆ. ಅವರ ಅಶಯಗಳು ಈಗ ವಿಶ್ವದ ಎಲ್ಲ ಕಡೆ ಸಾಕಾರಗೊಳ್ಳುತ್ತಿವೆ ಎಂದರು.

ಬಸವಣ್ಣ ಅವರು ಪ್ರತಿಪಾದಿಸಿದ ಆರ್ಥಿಕ ತತ್ವ, ಚಿಂತನೆಗಳನ್ನು ಜಗತ್ತು ಇಂದಿಗೂ ಮಾನ್ಯ ಮಾಡುತ್ತಿದೆ. ಕಾಯಕ, ದಾಸೋಹ, ಅಸಂಗ್ರಹ ಮತ್ತು ಅಪರಿಗ್ರಹ ಈ ನಾಲ್ಕು ತತ್ವಗಳು ಬಸವಣ್ಣ ಹೇಳಿದ ಜೀವನ ಮೌಲ್ಯಗಳು. ಮಿತಿ ಮೀರಿ ಸಂಗ್ರಹ ಮಾಡಬಾರದು, ಬೇಡದಿರುವುದನ್ನು ಸ್ವೀಕರಿಸಬಾರದು. ಕಾಯಕ ಮಾಡದೆ ತಿನ್ನಲು ಯಾರೂ ಯೋಗ್ಯರಲ್ಲ. ದುಡಿದಿದ್ದನ್ನು ದಾಸೋಹದ ಮೂಲಕ ಹಂಚಿ ತಿನ್ನಬೇಕು. ಈ ಪರಿಕಲ್ಪನೆಗಳು ಇಂದಿಗೂ ಕೂಡ ಸಮಾಜಕ್ಕೆ ಪ್ರಸ್ತುತವಾಗಿವೆ ಎಂದು ತಿಳಿಸಿದರು.

Advertisement

‘ಕಲಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ ಅನ್ಯರಿಗೆ ಅಸಹ್ಯ ಪಡಬೇಡ ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ’ ಎಂದು ಹೇಳಿದ ಬಸವಣ್ಣನ ವಚನ ಇಂದಿಗೂ ಕೂಡ ಧಾರ್ಮಿಕ ಸಪ್ತ ಸೂತ್ರವಾಗಿದೆ. ಇವು ಬಸವಣ್ಣನವರಿಂದಲೇ ಬಂದಂತಹ ಅಪೂರ್ವವಾದ ಮಾತುಗಳು ಎಂದರು.

ಧರ್ಮಕ್ಕೆ ಹೊಸ ವ್ಯಾಖ್ಯಾನ ನೀಡಿರುವ ಬಸವಣ್ಣ ಅವರು ‘ದಯೆಯೇ ಇಲ್ಲದ ಧರ್ಮ ಯಾವುದಯ್ನಾ’ ಎಂದಿದ್ದಾರೆ. ಎಲ್ಲ ಧರ್ಮಗಳ ಮೂಲ ದಯೆಯೇ ಆಗಿರಬೇಕು. ದಯೆ, ಕರುಣೆ ಇಲ್ಲದ್ದು ಅದು ಧರ್ಮ ಎನಿಸಿಕೊಳ್ಳುವುದಿಲ್ಲ. ಬಸವಣ್ಣ ನೀಡಿರುವ ಸಮಾನತೆ, ಸಹೋದರತ್ವ ಮತ್ತು ಸ್ವಾತಂತ್ರ್ಯ ಈ ಮೂರು ಸೂತ್ರಗಳನ್ನು ಅರ್ಥೈಸಿಕೊಂಡರೆ ಈ ವ್ಯವಸ್ಥೆಯಲ್ಲಿ ಹೊಸ ಆಯಾಮವನ್ನೇ ಸೃಷ್ಟಿಸಬಹುದು ಎಂದು ವ್ಯಾಖ್ಯಾನಿಸಿದರು.

ಜಗಜ್ಯೋತಿ ಬಸವಣ್ಣ ಅವರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್‌.ಅಶ್ವತಿ ಪುಷ್ಪ ನಮನ ಸಲ್ಲಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಮೇಶ್‌, ಜಿಲ್ಲಾ ಹಿಂದುಳಿದ ವರ್ಗಗಳ ಅಧಿಕಾರಿ ಮಂಜುನಾಥ್‌, ಮುಖಂಡರಾದ ಕೆ.ಟಿ.ರಾಧಾಕೃಷ್ಣ, ರವೀಶ್‌ ಕ್ಯಾತನಬೀಡು, ಕಸಾಪ ಜಿಲ್ಲಾಧ್ಯಕ್ಷ ಕುಂದೂರು ಅಶೋಕ್‌, ವಿವಿಧ ಇಲಾಖೆಯ ಅಧಿಕಾರಿಗಳು ವಿವಿಧ ಸಮಾಜದ ಮುಖಂಡರು ಉಪಸ್ಥಿತರಿದ್ದರು.

ವಿಶೇಷ ಪೂಜೆ: ನಗರದ ಹನುಮಂತಪ್ಪ ವೃತ್ತದ ಬಳಿಯ ಶ್ರೀಬಸವೇಶ್ವರ ದೇವಾಲಯದಲ್ಲಿ ಬಸವ ಜಯಂತಿಯನ್ನು ಮಂಗಳವಾರ ಭಕ್ತರು ಸಡಗರ, ಸಂಭ್ರಮದಿಂದ ಆಚರಿಸಿದರು.

ಜಯಂತಿ ಪ್ರಯುಕ್ತ ಬೆಳಗ್ಗೆ ದೇವಾಲಯದಲ್ಲಿರುವ ಬಸವನ ವಿಗ್ರಹಕ್ಕೆ ಅಭಿಷೇಕ, ವಿಶೇಷ ಪೂಜೆ, ಅಲಂಕಾರ ನಡೆಯಿತು. ಬೆಳಗ್ಗೆಯಿಂದ ಸಂಜೆಯವರೆಗೆ ತಂಡೋಪತಂಡವಾಗಿ ಆಗಮಿಸಿದ ಭಕ್ತರು ನಂದಿ ವಿಗ್ರಹಕ್ಕೆ ಪೂಜೆ ಸಲ್ಲಿಸಿ ಆರತಿ ಬೆಳಗಿ ಭಕ್ತಿ ಸಮರ್ಪಿಸಿದರು.

ಭಕ್ತರಿಂದ ಸಾಮೂಹಿಕ ಭಜನೆ, ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು. ಮಧ್ಯಾಹ್ನದ ನಂತರ ಹಮಾಲಿ ಕಾರ್ಮಿಕರಿಂದ ವಿಶೇಷ ಪೂಜೆ ನಡೆಯಿತು.

ಬಸವಣ್ಣನವರು ಪ್ರತಿಪಾದಿಸಿದ ಆರ್ಥಿಕ ತತ್ವ, ಚಿಂತನೆಗಳನ್ನು ಜಗತ್ತು ಇಂದಿಗೂ ಮಾನ್ಯ ಮಾಡುತ್ತಿದೆ. ಕಾಯಕ, ದಾಸೋಹ, ಅಸಂಗ್ರಹ ಮತ್ತು ಅಪರಿಗ್ರಹ ಈ ನಾಲ್ಕು ತತ್ವಗಳು ಬಸವಣ್ಣ ಹೇಳಿದ ಜೀವನ ಮೌಲ್ಯಗಳು. ಮಿತಿ ಮೀರಿ ಸಂಗ್ರಹ ಮಾಡಬಾರದು, ಬೇಡದಿರುವುದನ್ನು ಸ್ವೀಕರಿಸಬಾರದು. ಕಾಯಕ ಮಾಡದೆ ತಿನ್ನಲು ಯಾರೂ ಯೋಗ್ಯರಲ್ಲ. ದುಡಿದಿದ್ದನ್ನು ದಾಸೋಹದ ಮೂಲಕ ಹಂಚಿ ತಿನ್ನಬೇಕು. ಈ ಪರಿಕಲ್ಪನೆಗಳು ಇಂದಿಗೂ ಕೂಡ ಸಮಾಜಕ್ಕೆ ಪ್ರಸ್ತುತವಾಗಿವೆ.
•ಮಂಜುಳಾ,
ಸಹಾಯಕ ನಿರ್ದೇಶಕಿ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ.

Advertisement

Udayavani is now on Telegram. Click here to join our channel and stay updated with the latest news.

Next