Advertisement

ನಕ್ಸಲರಿಗೆ ತಕ್ಕ‌ ಉತ್ತರ 

08:19 AM Nov 14, 2018 | |

ನಕ್ಸಲೀಯರ ಪ್ರಯೋಗ ಶಾಲೆ ಎಂದೇ ಗುರುತಿಸಲ್ಪಟ್ಟಿರುವ ಛತ್ತೀಸ್‌ಗಢ ರಾಜ್ಯದ ಅರಣ್ಯ ಪ್ರದೇಶಗಳ ಸರಹದ್ದಿನಲ್ಲಿರುವ ಎಂಟು ಜಿಲ್ಲೆಗಳ 18 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಮತದಾನದಲ್ಲಿ ಮೊದಲ ಬಾರಿಗೆ ಮತದಾರರು ದಾಖಲೆಯ ಪ್ರಮಾಣದಲ್ಲಿ ಮತ ಚಲಾಯಿಸಿ ತಾವು ಪ್ರಜಾಪ್ರಭುತ್ವದ ಪರ ಎಂದು ಸ್ಪಷ್ಟಪಡಿಸಿದ್ದಾರೆ. ಮೊದಲ ಹಂತದಲ್ಲಿ ನಡೆದ ಮತದಾನದಲ್ಲಿ ಬಹುತೇಕ ಕ್ಷೇತ್ರಗಳು ನಕ್ಸಲ್‌ ಬಾಧಿತ ಪ್ರದೇಶಗಳಾಗಿದ್ದವು. ಆದಿವಾಸಿಗಳು ಅಧಿಕ ಸಂಖ್ಯೆಯಲ್ಲಿರುವ ಪ್ರದೇಶಗಳ ಸಹಿತ ಹೆಚ್ಚಿನ ಮತಗಟ್ಟೆಗಳಲ್ಲಿ ಶೇ.70ಕ್ಕೂ ಅಧಿಕ ಪ್ರಮಾಣದಲ್ಲಿ ಮತದಾನವಾಗಿದೆ. 

Advertisement

ಮತದಾನವನ್ನು ಬಹಿಷ್ಕರಿಸುವಂತೆ ನಕ್ಸಲೀಯರು ಹಲವು ಬಾರಿ ಇಲ್ಲಿನ ಜನತೆಗೆ ಕರೆ ನೀಡಿದ್ದರಲ್ಲದೆ, ಹಕ್ಕು ಚಲಾಯಿಸಿದ್ದೇ ಆದಲ್ಲಿ ಅಂಥವರ ಕೈ ಕತ್ತರಿಸುವುದಾಗಿಯೂ ಬೆದರಿಕೆ ಒಡ್ಡಿದ್ದರು. ಅಲ್ಲದೇ ಕಳೆದೆರಡು ವಾರಗಳಿಂದ ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿನ ಗ್ರಾಮಗಳಲ್ಲಿ ಸುಧಾರಿತ ಸ್ಫೋಟಕಗಳನ್ನು ಸ್ಫೋಟಿಸುವ ಮೂಲಕ ಭೀತಿಯನ್ನು ಹುಟ್ಟಿಸಿದ್ದರು. ಈ  ಸ್ಫೋಟಗಳಲ್ಲಿ ಕೇವಲ ನಾಗರಿಕರು ಮಾತ್ರವಲ್ಲದೆ ಭದ್ರತಾ ಸಿಬಂದಿಗಳೂ ಬಲಿಯಾಗಿದ್ದರು. ಆದರೆ ಈ ಎಲ್ಲ ಬೆದರಿಕೆ ತಂತ್ರಗಳಿಗೆ ಮಣಿಯದ ಇಲ್ಲಿನ ನಾಗರಿಕರು ಮತದಾನದ ಹಕ್ಕನ್ನು ಚಲಾಯಿಸಿ ಪ್ರಜಾಸತ್ತೆಗೇ ನಮ್ಮ ಆದ್ಯತೆ ಎಂಬ ಸ್ಪಷ್ಟ ಸಂದೇಶವನ್ನು ನಕ್ಸಲರಿಗೆ ರವಾನಿಸಿದ್ದಾರೆ. 

ಕೆಲವೊಂದು ಮತಗಟ್ಟೆಗಳಲ್ಲಿ ನಾಗರಿಕರು ದಶಕಗಳ ಬಳಿಕ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಪ್ರತಿಯೊಂದೂ ಚುನಾವಣೆಯ ಸಂದರ್ಭದಲ್ಲಿಯೂ ನಕ್ಸಲೀಯರ ಬೆದರಿಕೆ ಮತ್ತು ನಕ್ಸಲರನ್ನು ದಮನಿಸಲು ಭದ್ರತಾ ಪಡೆಗಳು ನಡೆಸುವ ಪ್ರತಿ ದಾಳಿಗಳಿಗೆ ಹೆದರಿ ಜನರು ಮತಗಟ್ಟೆಗಳತ್ತ ಮುಖ ಮಾಡಲು ಹಿಂಜರಿಯುತ್ತಿದ್ದರು. ಆದರೆ ಈ ಬಾರಿ ನಕ್ಸಲೀಯರ ಬೆದರಿಕೆಯ ಹೊರತಾಗಿಯೂ ಜನರು ಮತಗಟ್ಟೆಗಳಿಗೆ ತೆರಳಿ ತಮ್ಮ ಹಕ್ಕು ಚಲಾಯಿಸಿರುವುದು ಚುನಾವಣಾ ಆಯೋಗ ಮಾತ್ರವಲ್ಲದೇ ನಕ್ಸಲೀಯರ ಹಾವಳಿಯಿಂದ ತಮ್ಮನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ಸರಕಾರ ಕೈಗೊಂಡ ಕ್ರಮಗಳ ಬಗೆಗೆ ಸಮಾಧಾನ ಮೂಡಿರುವುದನ್ನು ಸಾಬೀತುಪಡಿಸಿದೆ. 

 ಭಾರತದ ವಿವಿಧ ರಾಜ್ಯಗಳಲ್ಲಿ ಅದರಲ್ಲೂ ಗುಡ್ಡಗಾಡು ಪ್ರದೇಶಗಳನ್ನು ಹೊಂದಿರುವ ರಾಜ್ಯಗಳ ಅರಣ್ಯ ತಪ್ಪಲಿನ ಪ್ರದೇಶಗಳು ಮತ್ತು ಇಲ್ಲಿನ ಆದಿವಾಸಿಗಳನ್ನು ಆಡಳಿತಾರೂಢ ಸರಕಾರಗಳು ನಿರ್ಲಕ್ಷಿಸುತ್ತಲೇ ಬಂದಿದ್ದರಿಂದ ನಕ್ಸಲ್‌ ಚಳವಳಿ ಹುಟ್ಟಿಕೊಂಡಿತ್ತು. ಇನ್ನೊಂದೆಡೆಯಿಂದ ಗುಡ್ಡಗಾಡು ಪ್ರದೇಶದಲ್ಲಿನ ನೈಸರ್ಗಿಕ ಸಂಪನ್ಮೂಲದ ಮೇಲೆ ಹಿಡಿತ ಸಾಧಿಸಲು ಮಾಫಿಯಾಗಳು ಪೈಪೋಟಿಗೆ ಬಿದ್ದರೆ ಇವುಗಳಿಗೆ ಕಡಿವಾಣ ಹಾಕಲು ಭದ್ರತಾ ಪಡೆಗಳು ಇನ್ನಿಲ್ಲದ ಬಲ ಪ್ರಯೋಗಿಸುತ್ತಿದ್ದವು. ಇವೆಲ್ಲದರಿಂದಾಗಿ ಈ ಪ್ರದೇಶದ ಮೂಲವಾಸಿಗಳು ತಮ್ಮ ಅಸ್ತಿತ್ವಕ್ಕಾಗಿ ಪರದಾಡುವಂತಾಯಿತು. ಇದನ್ನೇ ಬಂಡವಾಳವನ್ನಾಗಿಸಿಕೊಂಡ ನಕ್ಸಲೀಯರು ಜನರ ಸಮಸ್ಯೆಯನ್ನು ಮುಂದು ಮಾಡಿ ಅವರನ್ನು ತಮ್ಮತ್ತ ಒಲಿಸಿಕೊಳ್ಳುವ ಪ್ರಯತ್ನಕ್ಕೆ ಕೈಹಾಕಿದರು. ಈ ಹೋರಾಟ ಹಿಂಸಾರೂಪ ಪಡೆದುದರಿಂದಾಗಿ ನಕ್ಸಲ್‌ ಚಳವಳಿ ಸರಕಾರದ ಪಾಲಿಗೆ ಬಲುದೊಡ್ಡ ಸವಾಲಾಗಿ ಪರಿಣಮಿಸಿತು. ನಕ್ಸಲರು ಚಳವಳಿಯ ಸೋಗಿನಲ್ಲಿ ಉಗ್ರಗಾಮಿ ಕೃತ್ಯಗಳಲ್ಲಿ ತೊಡಗಿರುವುದನ್ನು ಮನಗಂಡ ಆದಿವಾಸಿಗಳು ನಕ್ಸಲ್‌ ಚಳವಳಿಯಿಂದ ವಿಮುಖರನ್ನಾಗಿಸುವಂತೆ ಮಾಡಿವೆ. 

ನಕ್ಸಲರ ವಿರುದ್ಧದ ಹೋರಾಟವನ್ನು ಹತ್ತಿಕ್ಕುವಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೈಗೊಂಡ ನಿಷ್ಠುರ ಕ್ರಮಗಳು ಈಗ ಫ‌ಲ ನೀಡತೊಡಗಿವೆ. ಎನ್ನುವುದಕ್ಕೆ ದಾಖಲೆ ಪ್ರಮಾಣದ ಮತದಾನವೇ ಸಾಕ್ಷಿ. ಹಾಗೆಂದ ಮಾತ್ರಕ್ಕೆ ಇದನ್ನೇ ದೊಡ್ಡ ಗೆಲುವು ಎಂದು ಸರಕಾರವಾಗಲೀ, ಸ್ಥಳೀಯಾಡಳಿತವಾಗಲೀ ನಕ್ಸಲ್‌ ವಿರುದ್ಧದ ಕ್ರಮಗಳು ಮತ್ತು ನಿರ್ಲಕ್ಷ್ಯಕ್ಕೊಳಗಾದ ಪ್ರದೇಶಗಳಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಸ್ಥಗಿತಗೊಳಿಸದೇ ಮುಂದುವರಿಸಬೇಕಿದೆ. ದಾಖಲೆ ಮತದಾನದ ಮೂಲಕ ಈ ಪ್ರದೇಶಗಳ ಜನರೂ ನಾವು ಸರಕಾರದೊಂದಿಗಿದ್ದೇವೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಸ್ಥಳೀಯರು ಪ್ರಜಾಸತ್ತೆಯ ಮೇಲೆ ಇರಿಸಿರುವ ನಂಬಿಕೆ, ವಿಶ್ವಾಸವನ್ನು ಉಳಿಸಿಕೊಳ್ಳುವ ಮಹತ್ತರ ಹೊಣೆಗಾರಿಕೆ ಆಡಳಿತ ವ್ಯವಸ್ಥೆಯ ಮೇಲಿದೆ. ಹಿಂಸಾತ್ಮಕ ಹೋರಾಟ, ಚಳವಳಿಗಳು ತಾತ್ಕಾಲಿಕ ಯಶಸ್ಸನ್ನು ಕಾಣಬಹುದೇ ವಿನಾ ಇವುಗಳಿಗೆ ಭವಿಷ್ಯವಿಲ್ಲ ಎಂಬುದಕ್ಕೆ ಇದೇ ನಿದರ್ಶನ. ಹಾಗಾಗಿ ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಜನರಿಟ್ಟ ಭರವಸೆ ಈಡೇರಿಸಬೇಕೆಂಬ ಜವಾಬ್ದಾರಿಯನ್ನು ಸರಕಾರಗಳೂ ಅರಿತು ಕಾರ್ಯ ನಿರ್ವಹಿಸಬೇಕಾದುದು ಅವಶ್ಯ.

Advertisement
Advertisement

Udayavani is now on Telegram. Click here to join our channel and stay updated with the latest news.

Next