Advertisement

ಹೆಜ್ಜೆ-ಗೆಜ್ಜೆಯ ಬೆಳ್ಳಿಹೆಜ್ಜೆಯಲ್ಲಿ ಸಿಂಹನಂದಿನಿ –ಮಯೂರನೃತ್ಯ

06:00 AM Nov 09, 2018 | |

ಸಿಂಹನಂದನ ಎನ್ನುವುದು ಪುರಾತನ ಸಂಗೀತ ಪ್ರಕಾರದ ಕ್ಲಿಷ್ಟ ಹಾಗೂ ದೀರ್ಘಾವಧಿಯ ತಾಳಕ್ಕೆ ಸಿಂಹ ವಾಹಿನಿಯಾದ ಶ್ರೀದೇವಿಯನ್ನು ಸ್ತುತಿಸುತ್ತಾ ಪಾದ ವಿನ್ಯಾಸದಿಂದ ರಂಗದ ಕೆಳಗೆ ಹರಡಿರುವ ಅಕ್ಕಿಹುಡಿಯಲ್ಲಿ ಸಿಂಹದ ಚಿತ್ತಾರ ಬಿಡಿಸುವ ವಿಶಿಷ್ಟ ನೃತ್ಯ. 

Advertisement

ಹೆಜ್ಜೆ ಗೆಜ್ಜೆ ನೃತ್ಯ ಸಂಸ್ಥೆಯ ರಜತ ಮಹೋತ್ಸವದಂಗವಾಗಿ ಹಮ್ಮಿಕೊಂಡ ನೃತ್ಯಾಂಜಲಿ 8ನೇ ಸರಣಿ ಕಾರ್ಯಕ್ರಮದಲ್ಲಿ ಬೆಂಗಳೂರಿನ ಯುವ ದಂಪತಿ ವಿ| ಚೇತನ್‌ ಗಂಗಟ್ಕರ್‌ ಮತ್ತು ವಿ| ಚಂದ್ರಪ್ರಭಾ ಚೇತನ್‌ ಅವರ ಕೂಚಿಪುಡಿ ನೃತ್ಯ ಪ್ರದರ್ಶನ ಒಂದು ಸುಂದರ ರಸಾನುಭವ ನೀಡಿತು. 

ಪಿ.ಎನ್‌.ಆಚಾರ್ಯಲು ರಚನೆಗೆ ಪ್ರದೋಷ ಸಮಯದಲ್ಲಿ ಪರಶಿವನು ಸಂಧ್ಯಾ ತಾಂಡವದಲ್ಲಿ ತೊಡಗಿರುವ ಸಂದರ್ಭ ಬ್ರಹ್ಮನು ತಾಳಧಾರಿಯಾಗಿ ಮತ್ತು ಮಹಾವಿಷ್ಣುವು ಲಯವಾದ್ಯ ವಾದಕನಾಗಿಯೂ ಸಹಕರಿಸಿದರು ಎಂಬ ವರ್ಣನೆಯಿದ್ದು ಇದು ರಾಗಮಾಲಿಕೆ ಮತ್ತು ತಾಳಮಾಲಿಕೆಯಲ್ಲಿ ಸಂಯೋಜನೆಗೊಂಡಿತ್ತು. ಕೊನೆಯ ಭಾಗದಲ್ಲಿ ಅಹಂ ಅಜ್ಞಾನದ ಸಂಕೇತವಾದ ಮುಯ್ಯಲಗನ ಮೇಲೆ ನರ್ತಿಸುವ ಶಿವನ ವರ್ಣನೆ ಉತ್ತಮವಾಗಿ ಮೂಡಿಬಂತು. ಈ ನೃತ್ಯ ಸಂಯೋಜನೆಯಲ್ಲಿ ದೇಶಿ ಮತ್ತು ಮಾರ್ಗಿ ಕರಣಗಳಾದ ರೇಚಿತ, ನಿಕುಟ್ಟ,ಭುಜಂಗಾಂಚಿತ, ಗರುಡಪು, ತಗಂಡಸೂಚಿ, ವಿಷ್ಣುಕ್ರಾಂತ, ವೃಚಿಕ ಮುಂತಾದ ಕರಣಗಳನ್ನು ಅಳವಡಿಸಿಕೊಂಡಿದ್ದು ಭೂಷಣಪ್ರಾಯದಂತಿತ್ತು. 

ಎರಡನೇ ನೃತ್ಯಬಂಧವಾಗಿ ಜಾವಳಿಯ ಪತಿ-ಪತ್ನಿಯರ ಸರಸ ಸಲ್ಲಾಪವನ್ನು ಪ್ರತಿಬಿಂಬಿಸುವಂತಿದ್ದು ಪತಿಯು ವಿದೇಶದಿಂದ ಬರುವಾಗ ಮನದನ್ನೆ ತರಲು ಹೇಳಿರುವ ಆಭರಣ ಮರೆತು ಬಂದಾಗ ಆಕೆಯನ್ನು ಸಮಾಧಾನಪಡಿಸುವ ಬಗೆಯನ್ನು ಕಲಾವಿದರು ಮನೋಜ್ಞವಾಗಿ ನಿರ್ವಹಿಸಿದರು. ಕಮಾಚ್‌ ರಾಗ ಆದಿತಾಳದಲ್ಲಿ ಸಂಯೋಜಿಸಲಾದ ಈ ಜಾವಳಿಯನ್ನು ಭವಾನಿ ರಾಮನಾಥನ್‌ ಕನ್ನಡದಲ್ಲಿ ರಚಿಸಿದ್ದರು. 

ರಾಜ ಶ್ರೀಕೃಷ್ಣ ದೇವರಾಯನ ಕಾಲದಲ್ಲಿ ಆಸ್ಥಾನದಲ್ಲಿ ಪ್ರದರ್ಶಿಸಲ್ಪಡುತ್ತಿದ್ದ “ಮಂಡೋದರಿ ಶಪಥಂ’ ಮೋಹನ ರಾಗದಲ್ಲಿ ಆರಂಭಗೊಂಡು ಮೊದಲಿಗೆ ನರ್ತಕಿಯು ತನ್ನೊಡೆಯ ಶ್ರೀಕೃಷ್ಣದೇವರಾಯನನ್ನು ಹಾಡಿ ಹೊಗಳಿ ಪರಾಕು ಎಂದು ನಂತರ ಮಂಡೋದರಿಯ ವೃತ್ತಾಂತವನ್ನು ವಿವರಿಸುತ್ತಾ ರಾವಣನ ಆರ್ಭಟ ಪ್ರವೃತ್ತಿವುಳ್ಳ ರಾಜಸಿಕ ಪಾತ್ರವನ್ನು ವರ್ಣಿಸುತ್ತಾ ಮುಂದುವರಿದು ಮಂಡೋದರಿಯ ಸುಕುಮಾರವಾದ ಲಾಸ್ಯಭರಿತ ಪಾತ್ರವನ್ನು ಕಲಾವಿದೆಯು ಮುಂದಿನ ಪ್ರಸ್ತುತಿಯಲ್ಲಿ ಉತ್ತಮವಾಗಿ ಅಭಿವ್ಯಕ್ತಿಗೊಳಿಸಿದರು. 

Advertisement

ಕೂಚಿಪುಡಿ ನೃತ್ಯದ ಪ್ರಸಿದ್ಧ ನೃತ್ಯ ನಾಟಕಗಳಲ್ಲಿ ಒಂದಾದ “ಭಾಮಕಲಾಪಂ’ವನ್ನು ಮುಂದಿನ ನೃತ್ಯ ಪ್ರಸ್ತುತಿಯಾಗಿ ಪ್ರದರ್ಶಿಸ ಲಾಯಿತು. ಯಕ್ಷಗಾನಕ್ಕೆ ಸಾಮ್ಯವಿರುವ ಈ ನೃತ್ಯಬಂಧ ಹಿಂದಿನ ಕಾಲದಲ್ಲಿ ಮೂರು ರಾತ್ರಿಗಳ ಕಾಲ ನಡೆಯುತ್ತಿತ್ತು. ಆತ್ಮ-ಪರಮಾತ್ಮನ ಸಮ್ಮಿಲನದ ದ್ಯೋತಕವಾಗಿರುವ ಇದರಲ್ಲಿ ನಾಯಕಿ ಸತ್ಯಭಾಮೆ ಮತ್ತು ಸಖೀ ಮಾಧವಿಯ ಪಾತ್ರಗಳನ್ನು ಮುಖ್ಯವಾಗಿ ಕಾಣಬಹುದು. ಕಲಾವಿದೆ ರಂಗ ಪ್ರವೇಶಿಸಿ ತಾನು ಸತ್ರಾರ್ಜಿತನ ಮಗಳು ಸತ್ಯಭಾಮೆಯೆಂದು , ಶ್ರೀಕೃಷ್ಣ ನನ್ನ ನಾಯಕನೆಂದು ಪರಿಚಯಿಸುವ ದೃಶ್ಯ ಶೃಂಗಾರರಸಭರಿತವಾಗಿ ಮೂಡಿಬಂತು. 

ಮುಂದಿನ ಪ್ರಸ್ತುತಿಯಾಗಿ ನಾರಾಯಣ ತೀರ್ಥರ ಪ್ರಸಿದ್ಧ ರಚನೆಯಾದ “ನೀಲಮೇಘ ಶರೀರ’ ಎಂಬ ತರಂಗವನ್ನು ಕಲಾವಿದ ದಂಪತಿ ಹಿತ್ತಾಳೆಯ ತಟ್ಟೆಯ ಮೇಲೆ ನಿಂತು ಲಯಬದ್ಧವಾಗಿ ನರ್ತಿಸಿದ್ದು ಕಾರ್ಯಕ್ರಮಕ್ಕೆ ಇನ್ನಷ್ಟು ಹುರುಪು ತಂದು ಕೊಟ್ಟಿತು. 

ಕೊನೆಗೆ ಪ್ರದರ್ಶನವಾದ ಸಿಂಹನಂದಿನಿ – ಮಯೂರಕೌತ್ವ ಆಕರ್ಷಕವೂ, ಮನಮೋಹಕವೂ ಆದ ಎರಡು ನೃತ್ಯಬಂಧಗಳು ಪ್ರೇಕ್ಷಕರಿಗೆ ನೃತ್ಯದ ಅದ್ಭುತ ಪ್ರಪಂಚವನ್ನು ಅನಾವರಣಗೊಳಿಸಿತು. ಸಿಂಹನಂದನ ಎನ್ನುವ ಪುರಾತನ ಸಂಗೀತ ಪ್ರಕಾರದ ಕ್ಲಿಷ್ಟ ಹಾಗೂ ದೀರ್ಘಾವಧಿಯ ತಾಳಕ್ಕೆ ಸಿಂಹವಾಹಿನಿಯಾದ ಶ್ರೀದೇವಿಯನ್ನು ಸ್ತುತಿಸುತ್ತಾ ಪಾದ ವಿನ್ಯಾಸದಿಂದ ರಂಗದ ಕೆಳಗೆ ಹರಡಿರುವ ಅಕ್ಕಿಹುಡಿಯಲ್ಲಿ ಸಿಂಹದ ಚಿತ್ತಾರ ಬಿಡಿಸುತ್ತಾ ಚಂದ್ರಪ್ರಭಾ ನರ್ತಿಸಿದರೆ ಚೇತನ್‌ ಮಯೂರ ಕೌತ್ವ ಪ್ರಸ್ತುತಪಡಿಸಿದರು. 

ಎರಡೂ ನೃತ್ಯ ಪ್ರಕಾರಗಳು ಕಲಾವಿದರ ತಾಳ ಜ್ಞಾನ, ಶಾರೀರಿಕ ಕ್ಷಮತೆ, ಏಕಾಗ್ರತೆ ಹಾಗೂ ಚಿತ್ರಕಲೆಯ ಪರಿಣತಿಗೆ ಕನ್ನಡಿ ಹಿಡಿಯುವಂತಿತ್ತು. ಗಂಗಟ್ಕರ್‌ವರ ನಿರೂಪಣೆ ನೃತ್ಯಕ್ಕೆ ಪೂರಕ ಅಂಶವಾಗಿತ್ತು. ಪ್ರತಿಯೊಂದು ನೃತ್ಯಬಂಧದ ಐತಿಹಾಸಿಕ ಮಾಹಿತಿ ಯೊಂದಿಗೆ ಆ ನೃತ್ಯ ಯಾವ ಪರಂಪರೆಯಿಂದ ಬೆಳೆದುಬಂದಿದೆ, ವೈಶಿಷ್ಟ್ಯವೇನು ಎನ್ನುವುದನ್ನು ಚುಟುಕಾಗಿ ವಿವರಿಸಿದರು.

 ವಿ| ಕೆ.ಭವಾನಿಶಂಕರ್‌ ಅಮ್ಮುಂಜೆ 

Advertisement

Udayavani is now on Telegram. Click here to join our channel and stay updated with the latest news.

Next