Advertisement

ಚದುರಂಗ, ಇದು ಬುದ್ಧಿವಂತರಾಟ

01:30 PM Oct 31, 2018 | |

ಚದುರಂಗ ಎಂದಾಕ್ಷಣ ನಮಗೆ ನೆನಪಾಗುವುದು ಬುದ್ಧಿವಂತಿಕೆ, ಜಾಣ್ಮೆ ಅಥವಾ ಮೈಂಡ್‌ ಗೇಮ್‌. ಸಾಮಾನ್ಯವಾಗಿ ಜೀವನದಲ್ಲೊಮ್ಮೆ ಎಲ್ಲರೂ ಇದನ್ನು ಆಟವಾಡಿದ್ದರೂ ಕೆಲವರು ಮಾತ್ರ ಇದನ್ನು ಮುಂದುವರಿಸಿಕೊಂಡು ಹೋಗಿ, ಇದನ್ನೇ ಜೀವನ ನಿರ್ವಹಣೆಗೆ ಬಳಸಿಕೊಳ್ಳುತ್ತಾರೆ. ಈ ಆಟದಿಂದ ತಮ್ಮನ್ನು ಇತರರು ಗುರುತಿಸುವಂತೆ ಮಾಡುವುದು ಮಾತ್ರವಲ್ಲದೆ ದೇಶದ ಹೆಸರನ್ನು ವಿಶ್ವ ವಿಖ್ಯಾತ ಮಾಡಿದವರೂ ಇದ್ದಾರೆ. ಚೆಸ್‌ ಜಗತ್ತಿನಲ್ಲಿ ಜಗತ್ತೇ ನೆನಪಿಟ್ಟ ಹೆಸರೆಂದರೆ ಭಾರತದ ಹಿರಿಯ ಚೆಸ್‌ ಚಾಪಿಯನ್‌ ವಿಶ್ವನಾಥ್‌ ಆನಂದ್‌.

Advertisement

ಅತ್ಯಂತ ಕಿರಿಯ ಚೆಸ್‌ ಗ್ರ್ಯಾಂಡ್‌ ಮಾಸ್ಟ್‌ರ್‌ ಆಗಿ ಎಲ್ಲರನ್ನು ತನ್ನತ್ತ ನೋಡುವಂತೆ ಮಾಡಿದ ಭಾರತದ ಬಾಲಕ ಪರಿಮಾರ್ಜನ್‌ ನೇಗಿ ತನ್ನ 13ನೇ ವರ್ಷದಲ್ಲೇ ಭಾರತದ ಚೆಸ್‌ ಗ್ರ್ಯಾಂಡ್‌ಮಾಸ್ಟ್‌ರ್‌ ಎಂದೆನಿಸಿಕೊಂಡರೆ, ಕಿರಿಯ ಸಾಧಕರ ಸಾಲಿಗೆ 2018ರಲ್ಲಿ ಭಾರತದ ರಮೇಶ್‌ಬಾಬು ಪ್ರಗ್ನಾನಂದ ಗ್ರ್ಯಾಂಡ್‌ ಮಾಸ್ಟರ್‌ ಆಗಿ ಹೊರಹೊಮ್ಮಿದ್ದಾರೆ. ಹೀಗೆ ಈ ಚೆಸ್‌ ಎಂಬ ಮಾಯಾ ಆಟಕ್ಕೆ ಹೊಸ ಕಿರಿಯ ಮುಖಗಳು ಸಾಧನೆ ಮಾಡುತ್ತಿರುವುದು ಇತರರಿಗೂ ಸ್ಫೂರ್ತಿಯಾಗಿರುವುದು ಸತ್ಯ. ಶಾಲೆ, ಕಾಲೇಜುಗಳಲ್ಲಿ ಈ ಚೆಸ್‌ ಆಟದಲ್ಲಿ ಆಸಕ್ತಿ ತೋರಿಸಿ, ಮುಂದೆಯೂ ಇದರಲ್ಲಿ ಆಸಕ್ತಿ ಬೆಳೆಸಿಕೊಂಡರೆ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಉತ್ತಮ ಅವಕಾಶಗಳನ್ನು ಪಡೆಯಬಹುದು. ಸಾಮಾನ್ಯ ಜ್ಞಾನದ ಜತೆಗೆ ಆಟದ ನಿಯಮ ಹಾಗೂ ಪರಿಣತರ ಸಲಹೆಗಳನ್ನು ಪಡೆದರೆ ಉತ್ತಮ ಆಟಗಾರರಾಗಬಹುದು.

ಅವಕಾಶಗಳು ಅಪಾರ
ಏಕಾಗ್ರತೆ, ಗ್ರಹಿಕೆ, ಮುಂದಾಲೋಚನೆ, ಕೆಲವು ರಹಸ್ಯ, ಎದುರಾಳಿಯ ಆಲೋಚನಾಶಕ್ತಿಯನ್ನು ಗ್ರಹಿಸುವ ಬುದ್ಧಿವಂತಿಕೆ ಈ ಆಟಗಾರನಿಗೆ ಇರಬೇಕು. ಇದರ ಕುರಿತು ತಿಳಿದುಕೊಂಡರೆ ಚೆಸ್‌ ತರಬೇತುದಾರರಾಗಿ, ತೀರ್ಪುಗಾರರಾಗಿ ಭಾಗವಹಿಸಲೂ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಅವಕಾಶಗಳು ಸಾಕಷ್ಟಿವೆ. ಜೀವನ ನಿರ್ವಹಣೆಗಾಗಿ ಇದನ್ನೇ ಅವಲಂಭಿಸಬಹುದು ಅಥವಾ ಹವ್ಯಾಸವನ್ನಾಗಿ ಮಾಡಿ ಪಾರ್ಟ್‌ ಟೈಮ್‌ ಆಗಿಯೂ ಇದರಲ್ಲಿ ಮುಂದುವರಿಸಬಹುದು.

ಭರತ್‌ ರಾಜ್‌ ಕರ್ತಡ್ಕ

Advertisement

Udayavani is now on Telegram. Click here to join our channel and stay updated with the latest news.

Next