Advertisement

ಈ ಸೋಲು ಎಚ್ಚರಿಕೆಯ ಗಂಟೆ: ಸುರೇಶ್‌ ರೈನಾ

09:56 AM Apr 19, 2019 | Team Udayavani |

ಹೈದರಾಬಾದ್‌: ನಾಯಕ ಮಹೇಂದ್ರ ಸಿಂಗ್‌ ಧೋನಿ ಗೈರಲ್ಲಿ ಕಳಪೆ ಪ್ರದರ್ಶನ ನೀಡಿದ ಚೆನ್ನೈ ಸೂಪರ್‌ ಕಿಂಗ್ಸ್‌ ಬುಧವಾರದ ಐಪಿಎಲ್‌ ಪಂದ್ಯದಲ್ಲಿ ಆತಿಥೇಯ ಸನ್‌ರೈಸರ್ ಹೈದರಾಬಾದ್‌ ತಂಡಕ್ಕೆ 6 ವಿಕೆಟ್‌ಗಳಿಂದ ಶರಣಾಗಿದೆ. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಚೆನ್ನೈ ತಂಡದ ಉಸ್ತುವಾರಿ ನಾಯಕ ಸುರೇಶ್‌ ರೈನಾ, ಈ ಸೋಲು ಎಚ್ಚರಿಕೆಯ ಗಂಟೆ ಎಂಬುದಾಗಿ ಹೇಳಿದ್ದಾರೆ.

Advertisement

“ಖಂಡಿತವಾಗಿಯೂ ನಮ್ಮ ಪಾಲಿಗೆ ಇದೊಂದು ಬಲವಾದ ಎಚ್ಚರಿಕೆಯ ಗಂಟೆ. ಸ್ಕೋರ್‌ಬೋರ್ಡ್‌ನಲ್ಲಿ ನಾವು ಉತ್ತಮ ಮೊತ್ತ ದಾಖಲಿಸುವಲ್ಲಿ ವಿಫ‌ಲರಾದೆವು. ಸತತವಾಗಿ ವಿಕೆಟ್‌ ಕಳೆದುಕೊಳ್ಳುತ್ತ ಹೋದೆವು. ನಾವು ದೊಡ್ಡ ಜತೆಯಾಟ ದಾಖಲಿಸುವ ಜತೆಗೆ ಸ್ಟ್ರೈಕ್‌ ರೊಟೇಟ್‌ ಮಾಡುವತ್ತ ಹೆಚ್ಚಿನ ಗಮನ ಹರಿಸಬೇಕಿದೆ’ ಎಂದು ರೈನಾ ಹೇಳಿದರು.

ವಾರ್ನರ್‌-ಬೇರ್‌ಸ್ಟೊ ಫಿಫ್ಟಿ
ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ಚೆನ್ನೈ 5 ವಿಕೆಟಿಗೆ 132 ರನ್‌ ಗಳಿಸಿದರೆ, ಹೈದರಾಬಾದ್‌ 16.5 ಓವರ್‌ಗಳಲ್ಲಿ 4 ವಿಕೆಟಿಗೆ 137 ರನ್‌ ಬಾರಿಸಿ ಸುಲಭ ಜಯ ಸಾಧಿಸಿತು.

ಆರಂಭಿಕರಾದ ಡೇವಿಡ್‌ ವಾರ್ನರ್‌ ಮತ್ತು ಜಾನಿ ಬೇರ್‌ಸ್ಟೊ ಅರ್ಧ ಶತಕ ಬಾರಿಸುವ ಮೂಲಕ ಹೈದರಾಬಾದ್‌ ಗೆಲುವನ್ನು ಇನ್ನಷ್ಟು ಸುಲಭಗೊಳಿಸಿದರು. ಇವರಿಂದ ಮೊದಲ ವಿಕೆಟಿಗೆ 5.4 ಓವರ್‌ಗಳಿಂದ 66 ರನ್‌ ಒಟ್ಟುಗೂಡಿತು. ಆದರೆ ನಾಯಕ ಕೇನ್‌ ವಿಲಿಯಮ್ಸನ್‌ (3), ವಿಜಯ್‌ ಶಂಕರ್‌ (7), ದೀಪಕ್‌ ಹೂಡಾ (13) ವಿಫ‌ಲರಾದರು.

ಜಾನಿ ಬೇರ್‌ಸ್ಟೊ 44 ಎಸೆತಗಳಿಂದ ಸರ್ವಾಧಿಕ 61 ರನ್‌ ಬಾರಿಸಿದರೆ (3 ಬೌಂಡರಿ, 3 ಸಿಕ್ಸರ್‌), ಡೇವಿಡ್‌ ವಾರ್ನರ್‌ 25 ಎಸೆತ ಎದುರಿಸಿ ಭರ್ತಿ 50 ರನ್‌ ಹೊಡೆದರು. ಇದರಲ್ಲಿ 10 ಬೌಂಡರಿ ಸೇರಿತ್ತು. ವಾರ್ನರ್‌ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿಯಿತು.

Advertisement

ಇದು 8 ಪಂದ್ಯಗಳಲ್ಲಿ ಹೈದರಾಬಾದ್‌ಗೆ ಒಲಿದ 4ನೇ ಜಯ. ಚೆನ್ನೈ 9 ಪಂದ್ಯಗಳಲ್ಲಿ 2ನೇ ಸೋಲನುಭವಿಸಿತು. ಆದರೆ ಅಗ್ರಸ್ಥಾನಕ್ಕೇನೂ ಧಕ್ಕೆಯಾಗಿಲ್ಲ.

ವೀಕ್ಷಕರ ಬೆಂಬಲ ಅಮೋಘ
ಈ ಪಂದ್ಯದ ವೇಳೆ ಆತಿಥೇಯ ತಂಡಕ್ಕೆ ಅಮೋಘ ಬೆಂಬಲ ನೀಡಿದ ವೀಕ್ಷಕರಿಗೆ ಡೇವಿಡ್‌ ವಾರ್ನರ್‌ ಅಭಿನಂದನೆ ಸಲ್ಲಿಸಿದರು. “ಸ್ಟೇಡಿಯಂನಲ್ಲಿ ಸಾಕಷ್ಟು ಹಳದಿ ಜೆರ್ಸಿ ಕಂಡುಬಂದರೂ ಸನ್‌ರೈಸರ್ ಅಭಿಮಾನಿಗಳ ಬೆಂಬಲ ಭರ್ಜರಿಯಾಗಿತ್ತು’ ಎಂದು ವಾರ್ನರ್‌ ಹೇಳಿದರು.

ಸಂಕ್ಷಿಪ್ತ ಸ್ಕೋರ್‌
ಚೆನ್ನೈ-5 ವಿಕೆಟಿಗೆ 132. ಹೈದರಾಬಾದ್‌-16.5 ಓವರ್‌ಗಳಲ್ಲಿ 4 ವಿಕೆಟಿಗೆ 137 (ಬೇರ್‌ಸ್ಟೊ 61, ವಾರ್ನರ್‌ 50, ತಾಹಿರ್‌ 20ಕ್ಕೆ 2, ಚಹರ್‌ 31ಕ್ಕೆ 1, ಕಣ್‌ì ಶರ್ಮ 33ಕ್ಕೆ 1).
ಪಂದ್ಯಶ್ರೇಷ್ಠ: ಡೇವಿಡ್‌ ವಾರ್ನರ್‌.

ಎಕ್ಸ್‌ಟ್ರಾ ಇನ್ನಿಂಗ್ಸ್‌
– ಸನ್‌ರೈಸರ್ ಹೈದರಾಬಾದ್‌ ಕೇವಲ 3ನೇ ಸಲ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಸೋಲುಣಿಸಿತು. ಆದರೆ ಚೆನ್ನೈ 8 ಸಲ ಹೈದರಾಬಾದ್‌ ವಿರುದ್ಧ ಜಯ ಸಾಧಿಸಿದೆ. ಕಳೆದ ಋತುವಿನ ಎಲ್ಲ 4 ಪಂದ್ಯಗಳಲ್ಲೂ ಅದು ಹೈದರಾಬಾದ್‌ ವಿರುದ್ಧ ಜಯ ಸಾಧಿಸಿತ್ತು.
– ಚೆನ್ನೈ ಕೇವಲ 3ನೇ ಸಲ 125 ಪ್ಲಸ್‌ ರನ್ನಿನ ಟಾರ್ಗೆಟ್‌ ನೀಡಿದ ವೇಳೆ 3 ಅಥವಾ ಹೆಚ್ಚು ಓವರ್‌ ಬಾಕಿ ಉಳಿದಿರುವಾಗ ಸೋಲನುಭವಿಸಿತು. 2008ರ ಪಂದ್ಯದಲ್ಲಿ ಚೆನ್ನೈ ವಿರುದ್ಧ ಮುಂಬೈ 6.1 ಓವರ್‌ ಬಾಕಿ ಇರುವಾಗಲೇ 157 ರನ್‌ ಗುರಿಯನ್ನು ಯಶಸ್ವಿಯಾಗಿ ತಲುಪಿತ್ತು.
– ಧೋನಿ ಕೇವಲ 4ನೇ ಸಲ ಐಪಿಎಲ್‌ ಪಂದ್ಯವೊಂದರಿಂದ ಹೊರಗುಳಿದರು. 2010ರ ವೇಳೆ ಗಾಯಾಳಾದ ಕಾರಣ 3 ಪಂದ್ಯಗಳನ್ನು ಧೋನಿ ತಪ್ಪಿಸಿಕೊಂಡಿದ್ದರು. ಆ ಸಂದರ್ಭದಲ್ಲೂ ಸುರೇಶ್‌ ರೈನಾ ಚೆನ್ನೈ ತಂಡವನ್ನು ಮುನ್ನಡೆಸಿದ್ದರು.
– ಈ ಪಂದ್ಯಕ್ಕೂ ಮುನ್ನ ಧೋನಿ ಸತತ 85 ಟಿ20 ಪಂದ್ಯಗಳಲ್ಲಿ ಚೆನ್ನೈ ತಂಡವನ್ನು ಮುನ್ನಡೆಸಿದ್ದರು. ಈ ಸಾಧನೆಯಲ್ಲಿ ಅವರಿಗೆ 2ನೇ ಸ್ಥಾನ. ಗೌತಮ್‌ ಗಂಭೀರ್‌ ಸತತ 107 ಟಿ20 ಪಂದ್ಯಗಳಲ್ಲಿ ಕೆಕೆಆರ್‌ ತಂಡವನ್ನು ಮುನ್ನಡೆಸಿದ್ದು ದಾಖಲೆ.
– ಇದಕ್ಕೂ ಮುನ್ನ ಧೋನಿ ಕೊನೆಯ ಸಲ 2012ರ ಚಾಂಪಿಯನ್ಸ್‌ ಲೀಗ್‌ ಟಿ20 ಪಂದ್ಯದಲ್ಲಿ ಚೆನ್ನೈ ನಾಯಕತ್ವದಿಂದ ಹೊರಗುಳಿದಿದ್ದರು.
– ಚೆನ್ನೈ ಸೂಪರ್‌ ಕಿಂಗ್ಸ್‌ ಪಾಲ್ಗೊಂಡ ಸತತ 145 ಪಂದ್ಯಗಳಲ್ಲಿ ಧೋನಿ ಆಡಿದ್ದರು. ಒಂದೇ ತಂಡದ ಪರ ಸತತ ಅತ್ಯಧಿಕ ಪಂದ್ಯಗಳನ್ನಾಡಿದ ಆಟಗಾರರ ಯಾದಿಯಲ್ಲಿ ಧೋನಿಗೆ 3ನೇ ಸ್ಥಾನ. ಸುರೇಶ್‌ ರೈನಾ ಚೆನ್ನೈ ಪರ ಸತತ 158 ಪಂದ್ಯಗಳನ್ನಾಡಿದ್ದು ದಾಖಲೆ. 2006-2018ರ ಅವಧಿಯಲ್ಲಿ ಸ್ಟೀವನ್‌ ಕ್ರಾಫ್ಟ್ ಲ್ಯಾಂಕಾಶೈರ್‌ ಪರ ಸತತ 148 ಪಂದ್ಯಗಳನ್ನಾಡಿ ದ್ವಿತೀಯ ಸ್ಥಾನದಲ್ಲಿದ್ದಾರೆ.
– ರವೀಂದ್ರ ಜಡೇಜ 20 ಎಸೆತಗಳಿಂದ 10 ರನ್‌ ಮಾಡಿ 50.00 ಸ್ಟ್ರೈಕ್‌ರೇಟ್‌ ದಾಖಲಿಸಿದರು. ಕನಿಷ್ಠ 20 ಎಸೆತಗಳ ಮಾನದಂಡದಲ್ಲಿ ಇದು ಜಂಟಿ 9ನೇ ಅತೀ ಕಡಿಮೆ ಸ್ಟ್ರೈಕ್‌ರೇಟ್‌ ಆಗಿದೆ. ಇದು ಚೆನ್ನೈ ತಂಡದ ಅತೀ ಕಡಿಮೆ ಸ್ಟ್ರೈಕ್‌ರೇಟ್‌ ಕೂಡ ಹೌದು. 2015ರ ಡೆಲ್ಲಿ ಎದುರಿನ ಪಂದ್ಯದಲ್ಲಿ ಬ್ರೆಂಡನ್‌ ಮೆಕಲಮ್‌ 52.38 ಸ್ಟ್ರೈಕ್‌ರೇಟ್‌ ದಾಖಲಿಸಿದ್ದರು. (21 ಎಸೆತಗಳಿಂದ 11 ರನ್‌).
– ಡೇವಿಡ್‌ ವಾರ್ನರ್‌ ಸನ್‌ರೈಸರ್ ಪರ ಆಡುತ್ತ ಐಪಿಎಲ್‌ನಲ್ಲಿ 3 ಸಾವಿರ ರನ್‌ ಪೂರ್ತಿಗೊಳಿಸಿದರು (3,029). ಇದಕ್ಕಾಗಿ ಅವರು ಕೇವಲ 67 ಇನ್ನಿಂಗ್ಸ್‌ ತೆಗೆದುಕೊಂಡರು. ಇದರಲ್ಲಿ 2 ಶತಕ, 31 ಅರ್ಧ ಶತಕ ಸೇರಿದೆ. ವಾರ್ನರ್‌ ಹೈದರಾಬಾದ್‌ ಪರ ಈ ಸಾಧನೆ ಮಾಡಿದ ಮೊದಲ ಆಟಗಾರ. ಹಾಗೆಯೇ ಒಂದೇ ತಂಡದ ಪರ 3 ಸಾವಿರ ರನ್‌ ಪೂರೈಸಿದ 8ನೇ ಐಪಿಎಲ್‌ ಆಟಗಾರ.

ಮುಂದಿನ ಪಂದ್ಯಕ್ಕೆ ಧೋನಿ
ಚೆನ್ನೈ ನಾಯಕ ಮಹೇಂದ್ರ ಸಿಂಗ್‌ ಧೋನಿ ಬೆನ್ನು ನೋವಿನಿಂದ ಈ ಪಂದ್ಯದಿಂದ ಹೊರಗುಳಿದರು ಎಂಬುದಾಗಿ ಹೇಳಿದ ಸುರೇಶ್‌ ರೈನಾ, ಮುಂದಿನ ಪಂದ್ಯದಲ್ಲಿ ಅವರು ಬಹುತೇಕ ಆಡಲಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next