Advertisement

ಕೆಮ್ಮೋರ ಸಂಖ್ಯೆ ಮೂರುಪಟ್ಟು!

12:01 PM Aug 01, 2018 | |

ಬೆಂಗಳೂರು: ಕಳೆದೆರಡು ದಶಕದಿಂದ ನಗರದಲ್ಲಿ ನಿರಂತರ ಕೆಮ್ಮಿನಿಂದ ಬಳಲುತ್ತಿರುವವರ ಸಂಖ್ಯೆ ಮೂರುಪಟ್ಟು ಏರಿಕೆಯಾಗಿದೆ. ಇದು ಇಡೀ ಕುಟುಂಬದ ನೆಮ್ಮದಿ ಕದಡುತ್ತಿದೆ. ಇದೆಲ್ಲದರ ಮೂಲ-ನಗರದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯ!

Advertisement

ಹೌದು, ನಗರದಲ್ಲಿ 1999ರಲ್ಲಿ ನಿರಂತರ ಕೆಮ್ಮಿನಿಂದ (chronic cough) ಬಳಲುತ್ತಿರುವವರ ಪ್ರಮಾಣ ಶೇ.8ರಷ್ಟಿತ್ತು. ಈಗ ಶೇ.21.5ರಷ್ಟು ಜನ ನಿರಂತರ ಕೆಮ್ಮಿನಿಂದ ಬಳಲುತ್ತಿದ್ದಾರೆ. ಅದರಲ್ಲೂ 18 ವರ್ಷದ ಒಳಗಿನ ಹಾಗೂ ಕೊಳಚೆ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳು ಮತ್ತು ಮಹಿಳೆಯರಲ್ಲಿ ಇದು ಹೆಚ್ಚಾಗಿ ಕಂಡುಬರುತ್ತಿದೆ. ಹೆಚ್ಚುತ್ತಿರುವ ವಾಯು ಮಾಲಿನ್ಯ ಇದಕ್ಕೆ ಮುಖ್ಯ ಕಾರಣವಾಗಿದೆ. ವಿಚಿತ್ರ ವೆಂದರೆ ಈ ಕಾಯಿಲೆಗೆ ತುತ್ತಾಗುತ್ತಿರುವವರ್ಯಾರೂ ವಾಯುಮಾಲಿನ್ಯದ ಪಾಲುದಾರರಲ್ಲ.

ಇದು ಪರಿಸರವಾದಿ ಮತ್ತು ಮುಖ್ಯ ಶ್ವಾಸಕೋಶ ತಜ್ಞ ಡಾ.ಎಚ್‌.ಪರಮೇಶ್‌ ಅವರು “ನಿರಂತರ ಕೆಮ್ಮಿನ ಮೌಲ್ಯಮಾಪನ’ ಕುರಿತು ನಡೆಸಿದ ಅಧ್ಯಯನದಿಂದ ಬೆಳಕಿಗೆ ಬಂದಿದೆ. ಈ ಅಧ್ಯಯನ ವರದಿಯು ಇದೇ ತಿಂಗಳು ಅಮೆರಿಕದ ಜರ್ನಲ್‌ವೊಂದರಲ್ಲಿ ಪ್ರಕಟಗೊಂಡಿದೆ.

ನಗರದ ಐಟಿಸಿ ಗಾಡೇನಿಯಾ ಹೋಟೆಲ್‌ನಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಾಗೂ ಲಂಡನ್‌ ಮಹಾನಗರದ ಸಹಯೋಗದಲ್ಲಿ ಹಮ್ಮಿಕೊಂಡ ಸಿ-40 ನಗರಗಳ ಮೂರು ದಿನಗಳ ಕಾರ್ಯಾಗಾರದಲ್ಲಿ ಡಾ.ಎಚ್‌.ಪರಮೇಶ್‌ ಅವರು ಈ ವಿಷಯ ಪ್ರಸ್ತಾಪಿಸುವ ಮೂಲಕ ಗಮನಸೆಳೆದರು.

ಧೂಳಿನ ಕಣಗಳಿಂದ ಕೆಮ್ಮು: ನಿರಂತರ ಕೆಮ್ಮು ಮುಖ್ಯವಾಗಿ ಉಸಿರಾಡುವಾಗ ದೇಹವನ್ನು ಸೇರುವ ಧೂಳಿನ ಕಣಗಳಿಂದ ಬರುತ್ತದೆ. ಈ ಧೂಳಿನ ಕಣಗಳು ಗಂಟಲಲ್ಲಿ ಕುಳಿತು, ಕಫ‌ಕ್ಕೆ ಕಾರಣವಾ ಗುತ್ತದೆ. ಅಷ್ಟೇ ಅಲ್ಲ, ಧೂಳು ದೇಹ ಸೇರದಂತೆ ತಡೆಯುವ ಮೂಗಿನಲ್ಲಿನ ಕೂದಲುಗಳಿಗೂ ತೊಂದರೆ ಉಂಟುಮಾಡುತ್ತದೆ. ನಂತರ ನಿರಂತರ ಕೆಮ್ಮಿಗೆ ಎಡೆಮಾಡಿಕೊಡುತ್ತದೆ.

Advertisement

ಇದರಿಂದ ಮಗುವಿಗೆ ನಿದ್ರಾಹೀನತೆ ಸಮಸ್ಯೆ ಉಂಟಾಗುತ್ತದೆ. ಸಹಜವಾಗಿ ತಾಯಿ ಮತ್ತು ತಂದೆ ನಿದ್ರೆಗೆಡಬೇಕಾಗುತ್ತದೆ. ಅಧ್ಯಯನದ ಪ್ರಕಾರ ಈ ಕಾಯಿಲೆಯಿಂದ ಬಳಲುತ್ತಿರುವವರು ಚಿಕಿತ್ಸೆಗಾಗಿ ಸರಾಸರಿ ಐದು ಜನ ವೈದ್ಯರನ್ನು ಸಂಪರ್ಕಿಸುತ್ತಾರೆ. ಆದರೂ ನಿರೀಕ್ಷಿತ ಮಟ್ಟದಲ್ಲಿ ಪರಿಹಾರ ಸಿಗುತ್ತಿಲ್ಲ ಎಂದೂ ಡಾ.ಪರಮೇಶ್‌ ತಿಳಿಸಿದರು.

ಇತರೆ ಕಾಯಿಲೆಗಳಿಗೂ ಕಾರಣ: ನಿರಂತರ ಕೆಮ್ಮು ಮಾತ್ರವಲ್ಲ; 1979ರಲ್ಲಿ ಶೇ.8ರಷ್ಟಿದ್ದ ಅಸ್ತಮಾದಿಂದ
ಬಳಲುತ್ತಿರುವವರ ಸಂಖ್ಯೆ ಈಗ ಶೇ.26.5ಕ್ಕೆ ಏರಿಕೆಯಾಗಿದೆ. ಶೇ.27.35ರಷ್ಟು ಜನ ಕಣ್ಣು ಉಜ್ಜುವುದು, ಶೇ.42.45ರಷ್ಟು ಜನ ಗೊರಕೆ, ಶೇ.17ರಷ್ಟು ಹಲ್ಲು ಕಡಿಯುವುದು, ಶೇ.43.4ರಷ್ಟು ಬಾಯಿಂದ ಉಸಿರಾಡುವುದು ಕಂಡುಬಂದಿದೆ ಎಂದೂ ವಿವರಿಸಿದರು.

ಇದಕ್ಕೂ ಮೊದಲು ನಡೆದ ಚರ್ಚೆಯಲ್ಲಿ ಮಾತನಾಡಿದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ ಜಿ.ವಿ.ರಂಗರಾವ್‌, ನಗರದಲ್ಲಿ ಈಗಾಗಲೇ 14 ವಾಯು ಗುಣಮಟ್ಟ ಮಾಪನ ಕೇಂದ್ರಗಳನ್ನು ಅಳವಡಿಸಲಾಗಿದೆ. ಇನ್ನೂ 19 ಕೇಂದ್ರಗಳನ್ನು ಅಳವಡಿಸಲಿದ್ದು, ಈ ಪೈಕಿ ಪೂರ್ವಭಾಗದಲ್ಲಿ ಹೆಚ್ಚು ಆದ್ಯತೆ ನೀಡುವ ಚಿಂತನೆ ಇದೆ ಎಂದರು. 

ಲಂಡನ್‌ನ ಇಲಿಯಟ್‌ ಟ್ರೆಹಾರ್ನ್ ಮಾತನಾಡಿ, ಲಂಡನ್‌ ಭೌಗೋಳಿಕವಾಗಿ ಮತ್ತು ವಾಹನದಟ್ಟಣೆಯಲ್ಲಿ ಬೆಂಗಳೂರನ್ನು ಹೋಲುತ್ತದೆ. ಅಲ್ಲಿ ನೂರು ಅತ್ಯಾಧುನಿಕ ವಾಯುಮಾಪನ ಕೇಂದ್ರಗಳನ್ನು ಅಳವಡಿಸಿದ್ದು, ಇನ್ನೂ ನೂರು ಅಳವಡಿಸುವ ಚಿಂತನೆ ನಡೆದಿದೆ. ಅಲ್ಲದೆ, ದಟ್ಟಣೆ ತೆರಿಗೆ ಕೂಡ ವಿಧಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ ಮಾತನಾಡಿ, ದೇಶದ ಉಳಿದ ನಗರಗಳಿಗೆ ಹೋಲಿಸಿದರೆ, ಬೆಂಗಳೂರು ಸುರಕ್ಷಿತ ವಲಯದಲ್ಲಿದೆ. ಹಾಗಂತ ಸುಮ್ಮನೆ ಕುಳಿತುಕೊಳ್ಳುವಂತಿಲ್ಲ. ಮಿಥೆನಾಲ್‌ ಬಳಕೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಎಲೆಕ್ಟ್ರಿಕ್‌ ವಾಹನ ನೀತಿ ಜಾರಿಗೊಳಿಸಲಾಗಿದೆ. ಇದು ಸಾಲದು, ಜನರಲ್ಲಿ ತಮ್ಮಿಂದ ವಾಯುಮಾಲಿನ್ಯ ಉಂಟಾಗುತ್ತಿದೆ ಎಂಬುದರ ಬಗ್ಗೆ ಅರಿವು ಮೂಡುವಂತಾಗಬೇಕು ಎಂದರು.

ಮೇಯರ್‌ ಸಂಪತ್‌ರಾಜ್‌, ಉಪ ಮೇಯರ್‌ ಪದ್ಮಾವತಿ ನರಸಿಂಹಮೂರ್ತಿ, ಲಂಡನ್‌ ಉಪಮೇಯರ್‌ ಶರ್ಲೆ ರೋಡ್ರಿಗ್ರಸ್‌, ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಜೈನ್‌ ಮತ್ತಿತರರು ಉಪಸ್ಥಿತರಿದ್ದರು. 

ಎಲಿವೇಟೆಡ್‌ ಕಾರಿಡಾರ್‌ ಪಿಡಬ್ಲ್ಯೂಡಿಗೆ 
ಬೆಂಗಳೂರು: ನಗರದಲ್ಲಿ ಸಂಚಾರ ದಟ್ಟಣೆ ನಿವಾರಣೆಗೆ ಕೈಗೆತ್ತಿಕೊಂಡಿರುವ ಎಲಿವೇಟೆಡ್‌ ಕಾರಿಡಾರ್‌ ನಿರ್ಮಾಣ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಲೋಕೋಪಯೋಗಿ ಇಲಾಖೆಗೆ ಉಸ್ತುವಾರಿ ವಹಿಸಲಾಗಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ್‌ ತಿಳಿಸಿದ್ದಾರೆ.

“ಸಿ-40 ನಗರಗಳ ಕಾರ್ಯಾಗಾರ’ದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕ ಕಾಮಗಾರಿಗಳನ್ನು ಯಾರು ಅನುಷ್ಠಾನಗೊಳಿಸುತ್ತಾರೆ ಎಂಬುದು ಮುಖ್ಯವಲ್ಲ. ಪರಿಣಾಮಕಾರಿ ಅನುಷ್ಠಾನ
ಮುಖ್ಯ. ಈ ನಿಟ್ಟಿನಲ್ಲಿ ಇಂತಹ ಸಾಕಷ್ಟು ಯೋಜ ನೆಗಳನ್ನು ಅನುಷ್ಠಾನಗೊಳಿಸಿದ ಅನುಭವವಿರುವ ಲೋಕೋಪಯೋಗಿ ಇಲಾಖೆಗೆ ವಹಿಸಲಾಗಿದೆ ಎಂದು ಹೇಳಿದರು. 

ಎಲಿವೇಟೆಡ್‌ ಕಾರಿಡಾರ್‌ ಯೋಜನೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಈ ಸಂಬಂಧ ಯೋಜನಾ ವರದಿ ಸಿದ್ಧಗೊಳ್ಳಬೇಕು, ಹಣಕಾಸು ಹೊಂದಿಸುವ ಸಾಧ್ಯತೆಗಳ ಕುರಿತು ಚರ್ಚೆ ಆಗಬೇಕು. ನಂತರ ಯೋಜನೆ ಅನುಷ್ಠಾನಗೊಳ್ಳಲಿದೆ ಎಂದರು.

ಪೌರಕಾರ್ಮಿಕರಿಗೆ ನೀಡಲಾಗುತ್ತಿರುವ ಸೌಲಭ್ಯಗಳ ದುರುಪಯೋಗ ತಡೆಯಲೆಂದೇ ಬಯೋಮೆಟ್ರಿಕ್‌, ಫೋಟೋಗ್ರಾಫ್ ಮತ್ತು ದಾಖಲೆಗಳ ಪರಿಶೀಲನೆಯಂತಹ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಮೂಲಕ ನಕಲಿ ಪೌರಕಾರ್ಮಿಕರನ್ನು ಹಂತ-ಹಂತವಾಗಿ ತೆಗೆದುಹಾಕಲಾಗುವುದು. ಅಗತ್ಯಬಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪರಿವರ್ತನೆಗೊಳ್ಳದ ಬಸ್‌ಗಳು ವಾಯುಮಾಲಿನ್ಯದಲ್ಲಿ ಬಿಎಂಟಿಸಿ ಬಸ್‌ಗಳ ಪಾಲೂ ಇದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್‌ ತಿಳಿಸಿದರು. ಬಿಎಂಟಿಸಿ ವ್ಯಾಪ್ತಿಯಲ್ಲಿ 6,500 ಬಸ್‌ಗಳಿದ್ದು, ಈ ಪೈಕಿ ಬಿಎಸ್‌ (ಭಾರತ್‌ ಸ್ಟೇಜ್‌)
-4 ಮತ್ತು 5ಕ್ಕೆ ಪರಿವರ್ತನೆಗೊಂಡ ಬಸ್‌ಗಳ ಸಂಖ್ಯೆ ಕೇವಲ 600. ಉಳಿದ ಬಸ್‌ಗಳ ಪರಿವರ್ತನೆಗೆ ಸಾಕಷ್ಟು ಹಣ ಹೂಡಿಕೆ ಮಾಡಬೇಕಾಗುತ್ತದೆ. ಅಷ್ಟೊಂದು ಹಣ ಕ್ರೋಡೀಕರಣ ಕಷ್ಟ. ಈ ನಿಟ್ಟಿನಲ್ಲಿ ಜನರಿಂದ ಒತ್ತಾಯಗಳು
ಬರಬೇಕು. ಆಗ, ಸರ್ಕಾರದ ಮಟ್ಟದಲ್ಲಿ ಮತ್ತಷ್ಟು ಉತ್ತಮ ನೀತಿಗಳು ರೂಪುಗೊಳ್ಳಲು ಹಾಗೂ ಆ ಮೂಲಕ ಬದಲಾವಣೆ ತರಲು ಸಾಧ್ಯವಾಗುತ್ತದೆ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next