Advertisement

ಕಾರ್ಖಾನೆಗಳ ಕೆಮಿಕಲ್ ತ್ಯಾಜ್ಯಕ್ಕೆ ಮುಕ್ತಿ ಯಾವಾಗ.?

07:05 PM Feb 16, 2022 | Team Udayavani |

ಹುಮನಾಬಾದ: ಒಂದು ಕಾಲದಲ್ಲಿ ಧಾರ್ಮಿಕತೆಗೆ ಹೆಸರಾದ ಮಾಣಿಕನಗರದ ಹಳ್ಳ ಇಂದು ಕೈಗಾರಿಕೆಗಳ ತ್ಯಾಜ್ಯದಿಂದ ಸಂಪೂರ್ಣ ತುಂಬಿಕೊಂಡಿದ್ದು, ಗಬ್ಬು ವಾಸನೆ ಹರಡುತ್ತಿದೆ. ಹಳ್ಳದಲ್ಲಿನ ಜಲಚರಗಳು ಸಂಪೂರ್ಣ ನಾಶವಾಗಿದ್ದು, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಮಾತ್ರ ಮೌನಕ್ಕೆ ಶರಣಾಗಿದ್ದಾರೆ.

Advertisement

2016-17ನೇ ಸಾಲಿನಲ್ಲಿ ಉದಯವಾಣಿ ಇಲ್ಲಿನ ಕಾರ್ಖಾನೆಗಳ ಕೆಮಿಕಲ್ ತ್ಯಾಜ್ಯದ ಸಮಸ್ಯೆಗಳ ಕುರಿತು ಸಮಗ್ರ ಸರಣಿ ವರದಿಗಳು ಪ್ರಕಟಿಸಿತ್ತು. ನಂತರದ 22-11-2017ರಂದು ಅಂದಿನ ಜಿಲ್ಲಾಧಿಕಾರಿ ಎಚ್.ಆರ್ ಮಹಾದೇವ ನೇತೃತ್ವದಲ್ಲಿ ಒಟ್ಟಾರೆ 12 ತಂಡಗಳು ರಚಿಸಿಕೊಂಡು ಪಟ್ಟಣ ಹೊರವಲಯದ ಕೈಗಾರಿಕಾ ಘಟಕಗಳ ಮೇಲೆ ದಾಳಿ ನಡೆಸಿ ವಿವಿಧ ದಾಖಲೆಗಳ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಪರಿಸರಕ್ಕೆ ಹಾನಿ ಉಂಟು ಮಾಡುತ್ತಿರುವ ಕೆಲ ಕಾರ್ಖಾನೆಗಳ ಬಂದ್ ಮಾಡುವ ನಿಟ್ಟಿನಲ್ಲಿ ಪರಿಸರ ಇಲಾಖೆಗೆ ಸೂಚನೆ ಕೂಡ ನೀಡಿದರು. ನಂತರ ದಿನಗಳಲ್ಲಿ ಗಡವಂತಿ ಹಾಗೂ ಮಾಣಿಕನಗರದ ಹಳ್ಳಕ್ಕೆ ಕೈಗಾರಿಕೆಗಳ ಕೆಮಿಕಲ್ ಮಿಶ್ರಿತ ತ್ಯಾಜ್ಯ ಹೆಚ್ಚಾಗಿ ಬಂದಿಲ್ಲ. ಆದರೆ, ಕಳೆದ ಕೆಲ ತಿಂಗಳಿಂದ ಮತ್ತೆ ಅದೇ ಕತೆ ಆರಂಭಗೊಂಡಿದ್ದು, ಗಡವಂತಿ ಹಾಗೂ ಮಾಣಿಕನಗರದ ಗ್ರಾಮಸ್ಥರು ಮತ್ತೆ ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ.

ಬಗೆಹರಿಯದ ಸಮಸ್ಯೆ: ಕಳೆದ ಕೆಲ ವರ್ಷಗಳಿಂದ ಗಡವಂತಿ ಹಾಗೂ ಮಾಣಿಕನಗರದ ಜನರು ಕೈಗಾರಿಕಾ ಘಟಕದಿಂದ ಬರುತ್ತಿರುವ ಕೆಮಿಕಲ್ ಮಿಶ್ರಿತ ತ್ಯಾಜ್ಯದ ವಿರುದ್ಧ ಹೋರಾಟ ನಡೆಸಿದ್ದಾರೆ. ಮಾಣಿಕಪ್ರಭು ಸಂಸ್ಥಾನದ ನೇತೃತ್ವದಲ್ಲಿ ಬೀದರ ಜಿಲ್ಲಾಧಿಕಾರಿಗಳ ಕಚೇರಿ ಎದುರಿಗೆ ಭ್ರಹತ್ ಪ್ರತಿಭಟನೆ ನಡೆದಿತ್ತು. ಅಲ್ಲದೆ, ಸ್ಥಳೀಯ ಶಾಸಕ ರಾಜಶೇಖರ ಪಾಟೀಲರು ಕೂಡ ಅನೇಕ ಬಾರಿ ಈ ಗ್ರಾಮಗಳಿಗೆ ಭೇಟಿನೀಡಿದ ಸಂದರ್ಭದಲ್ಲಿ ಪರಿಸರ ಹಾಳುಮಾಡುತ್ತಿರುವ ಕಾರ್ಖಾನೆಗಳ ವಿರುದ್ಧ ಕ್ರಮಕ್ಕೆ ಶೀಫಾರಸು ಮಾಡುವುದಾಗಿ ಭರವಸೆ ನೀಡಿದರು. ಜಗದೀಶ ಶೆಟ್ಟರ ಸೇರಿದಂತೆ ರಾಜ್ಯಮಟ್ಟದ ನಾಯಕರು ಕೂಡ ಇಲ್ಲಿಗೆ ಭೇಟಿನೀಡಿ ಸಮಸ್ಯೆ ಸರಿಪಡಿಸುವ ಭರವಸೆ ನೀಡಿದರು. ಒಟ್ಟಾರೆ ಈ ವರೆಗೂ ಗಡವಂತಿ, ಮಾಣಿಕನಗರದ ಗ್ರಾಮಸ್ಥರಿಗೆ ನ್ಯಾಯ ಕೊಡಿಸುವಲ್ಲಿ ಯಾರುಕೂಡ ಪ್ರಾಮಾಣಿಕ ಪ್ರಯತ್ನ ನಡೆಸಿಲ್ಲ ಎಂಬುವುದು ವಿಪರಿಯಾಸ.

ಮತ್ತೆ ಹೋರಾಟದ ಸಿದ್ಧತೆ: ಕಳೆದ ಕೆಲ ತಿಂಗಳಿಂದ ಅಧಿಕ ಪ್ರಮಾಣದಲ್ಲಿ ಕೈಗಾರಿಕೆಗಳ ಕೆಮಿಕಲ್ ಮಿಶ್ರಿತ ತ್ಯಾಜ್ಯ ಹಳ್ಳ ಹಾಗೂ ಅಂರ್ತಜಲಕ್ಕೆ ಸೇರುತ್ತಿದುಭ್ರಿಲ್ಲಿನ ಜನರು ಚರ್ಮರೋಗ, ತುರುಸುವಿಕೆ ಇತರೆ ರೋಗಗಳಿಂದ ಬಳಲುತ್ತಿದ್ದಾರೆ. ಹೀಗೆ ಆದರೆ ಎಲ್ಲಾ ಗ್ರಾಮಸ್ಥರು ರೋಗಿಗಳಾಗಬೇಕಾಗುತ್ತದೆ ಎಂದು ಇದೀಗ ಮತ್ತೆ ಗ್ರಾಮಸ್ಥರು ಹೋರಾಟ ನಡೆಸಲು ಸಿದ್ದತೆ ನಡೆಸಿದ್ದಾರೆ. ಬುಧವಾರ ಆನಂದರಾಜ ಪ್ರಭುಗಳ ನೇತೃತ್ವದಲ್ಲಿ ತಹಶೀಲ್ದಾರ ಕಚೇರಿಗೆ ಭೇಟಿನೀಡಿ ಸಮಸ್ಯೆ ಕುರಿತು ತಹಶೀಲ್ದಾರ ಜಯಶ್ರೀ ಅವರಿಗೆ ವಿವರಿಸಿದರು. ನಂತರ ತಹಶೀಲ್ದಾರ ಅವರು ಕೂಡ ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ, ಇಂಟರರ್ನ್ಯಾಷನಲ್ ಹುಮನ್‌ರೈಟ್ಸ್ ಸೋಶಿಯಲ್ ಜಸ್ಟಿಸ್ ಸಂಸ್ಥೆಯ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಭೇಟಿನೀಡಿ ಇಲ್ಲಿನ ಸಮಸ್ಯೆ ಕೂಡಲೇ ಬಗೆಹರಿಸುವಂತೆ ಒತ್ತಾಯಿಸಿ ಬುಧವಾರ ಮನವಿ ಪತ್ರ ಕೂಡ ಸಲ್ಲಿಸಿದ್ದಾರೆ.

Advertisement

ಮಾಣಿಕಪ್ರಭುಗಳ ಪುಣ್ಯಭೂಮಿ ಇಂದು ಕೆಮಿಕಲ್ ವಿಷಮಯವಾಗಿದೆ. ಹಳ್ಳದಲ್ಲಿ ನೀರಿನ ಬದಲಿಗೆ ಕೆಮಿಕಲ್ ಕಾರ್ಖಾನೆಗಳ ತ್ಯಾಜ್ಯ ತುಂಬಿಕೊಂಡು ಗಬ್ಬು ವಾಸನೆ ಹರಡುತ್ತಿದೆ. ಜಲಚರಗಳು ಸಂಪೂರ್ಣ ನಾಶವಾಗಿವೆ. ಕೈಗಾರಿಕೆಗಳ ಕಲುಷಿತ ನೀರು ಅಂತರ್ಜಲವನ್ನು ಸಹ ಕಲುಷಿತಗೊಳಿಸಿದೆ. ಕೊಳವೆ ಬಾವಿ ನೀರನ್ನು ಕುಡಿಯುವುದಿರಲಿ ಸ್ನಾನ ಮಾಡಿದರು ಚರ್ಮ ರೋಗಗಳು ಜನರನ್ನು ಬಾದಿಸುತ್ತಿವೆ. ಜನರ ಜೀವಕ್ಕೆ ಆಪತ್ತು ಉಂಟುಮಾಡುವ ಕಾರ್ಖಾನೆಗಳು ಕೂಡಲೇ ಬಂದ್ ಮಾಡಿಸಬೇಕು.- ಆನಂದರಾಜ ಪ್ರಭುಗಳು, ಮಾಣಿಕಪ್ರಭು ಸಂಸ್ಥಾನದ ಕಾರ್ಯದರ್ಶಿಗಳು

ಹಳ್ಳಿದಲ್ಲಿ ಕೆಮಿಕಲ್ ಮಿಶ್ರಿತ ನೀರು ತುಂಬಿಕೊಂಡಿರುವ ಕುರಿತು ಗ್ರಾಮಸ್ಥರು ಕಚೇರಿಗೆ ಬಂದು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಭೇಟಿನೀಡಿ ಸಮಸ್ಯೆ ಆಲಿಸಿದ್ದೇನೆ. ಭಾವಿ ಹಾಗೂ ತೆರೆದ ಭಾವಿಗಳ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂದು ಜನರು ದೂರಿದ ಹಿನ್ನೆಲೆಯಲ್ಲಿ ತಾಲೂಕು ಆರೋಗ್ಯಾಧಿಕಾರಿಗಳಿಗೆ ಪತ್ರ ಬರೆದಿದ್ದು, ಗ್ರಾಮದಲ್ಲಿನ ನೀರು ಪರೀಕ್ಷೆ ನಡೆಸುವಂತೆ ತಿಳಿಸಲಾಗಿದೆ. ಅಲ್ಲದೆ, ಸಂಬಂಧಿಸಿದವರಿಂದ ಸೂಕ್ತ ವಿವರಣೆ ಪಡೆದುಕೊಂಡು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು. ಜಯಶ್ರೀ ತಹಶೀಲ್ದಾರರು

 

-ದುರ್ಯೋಧನ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next