Advertisement

ಚೆಂಬೂರು ಕರ್ನಾಟಕ ಸಂಘದ ವಾರ್ಷಿಕ “ಸಾಹಿತ್ಯ ಸಹವಾಸ-2017 ಸಂಭ್ರಮ’

04:45 PM Feb 01, 2017 | Team Udayavani |

ಮುಂಬಯಿ: ಉತ್ತಮ ಅಥವಾ ಅತ್ಯುತ್ತಮ ವಿದ್ಯಾರ್ಥಿಗಳನ್ನು ಅತ್ಯಂತ ಶ್ರೇಷ್ಠ ಶ್ರೇಣಿಗಳಲ್ಲಿ ಉತ್ತೀರ್ಣರಾಗಿಸುವ ವಿದ್ಯಾಸಂಸ್ಥೆಗಳನ್ನು ಶ್ರೇಷ್ಠ ಸಂಸ್ಥೆಗಳು ಎನ್ನಲಾಗದು. ಕನಿಷ್ಠ ಮತ್ತು ಏನೂ ಇಲ್ಲದ ಕಡು ಬಡತನದ ಹಿನ್ನಲೆಯ ವಿದ್ಯಾರ್ಥಿಗಳನ್ನು ಉತ್ತಮ ಮಟ್ಟದಲ್ಲಿ ತಯಾರು ಮಾಡುವ ವಿದ್ಯಾಲಯಗಳೇ ನಿಜವಾದ ಗುಣಮಟ್ಟದ ಶಿಕ್ಷಣ ಸಂಸ್ಥೆಗಳು. ಸಾಮಾನ್ಯ ವಿದ್ಯಾರ್ಥಿಗಳನ್ನು ಅಸಾಮಾನ್ಯರಾಗಿ ಪರಿವರ್ತಿಸುವುದೇ ಶ್ರೇಷ್ಠ ವಿದ್ಯಾಸಂಸ್ಥೆಗಳ ಅರ್ಹತೆ ಆಗಬೇಕು. ಸಾಮಾನ್ಯ ವಿದ್ಯಾರ್ಥಿಗಳಿಂದ ಶ್ರೇಷ್ಠ ಫಲಿತಾಂಶವೇ ನಿಜವಾದ ಸಾಧನೆ ಇದಕ್ಕೆ ಅತ್ಯುತ್ತಮ ಮಾದರಿ ಚೆಂಬೂರು ಕರ್ನಾಟಕ ಸಂಘದ ವಿದ್ಯಾಸಂಕುಲ ಎಂದು ಕರ್ನಾಟಕದ ಮಾಜಿ ಲೋಕಾಯುಕ್ತ, ಸರ್ವೋಚ್ಚ ನ್ಯಾಯಲಯದ ನಿವೃತ್ತ ನ್ಯಾಯಮೂರ್ತಿ ಡಾ|   ಜಸ್ಟಿಸ್‌ ಶಿವರಾಜ್‌ ವಿ. ಪಾಟೀಲ್‌ ನುಡಿದರು.

Advertisement

ಜ. 28ರಂದು ಸಂಜೆ ಚೆಂಬೂರು ಘಾಟ್ಲಾ ವಿಲೇಜ್‌ನ ಚೆಂಬೂರು ಕರ್ನಾಟಕ ಹೈಸ್ಕೂಲ್‌ ಸಂಕುಲದಲ್ಲಿ ಚೆಂಬೂರು ಕರ್ನಾಟಕ ಸಂಘದ ಸಂಚಾಲಕತ್ವದ ಚೆಂಬೂರು ಕರ್ನಾಟಕ ಪ್ರೌಢ ಶಾಲೆ ಮತ್ತು ಕಿರಿಯ ಮಹಾ ವಿದ್ಯಾಲಯದ  ವಾರ್ಷಿಕ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳ “ಸಾಹಿತ್ಯ ಸಹವಾಸ-2017 ಸಂಭ್ರಮ’ವನ್ನು ಉದ್ಘಾಟಿಸಿದ ಮಾತನಾಡಿದ ಅವರು, ಚೆಂಬೂರಿನ ಮುಖ್ಯ ಪ್ರದೇಶದಲ್ಲಿದ್ದರೂ ಸುತ್ತಲಿನ ಕಡುಬಡತನದ ಹಿನ್ನಲೆಯ ಉಪೇಕ್ಷಿತ ವರ್ಗದ ವಿದ್ಯಾರ್ಥಿಗಳನ್ನು ಹೊಂದಿರುವ ಈ ಶಾಲೆ ಶೇ. ನೂರರಷ್ಟು ತೇರ್ಗಡೆ ಸಾಧಿಸುವುದು ಎಂದರೆ ಅದು ಚೆಂಬೂರು ಕರ್ನಾಟಕ ಸಂಘದ ಆಡಳಿತ ಮಂಡಳಿ, ಶಿಕ್ಷಕವರ್ಗದ ಬದ್ಧತೆ ಮತ್ತು ಕಠಿನ ಪರಿಶ್ರಮದ ಸತ್ಪಲವಾಗಿದೆ. ಈ ಸಂಸ್ಥೆಯ ವೈಶಿಷ್ಟéತೆಯನ್ನು ಮೆಚ್ಚಿ ನನ್ನದಾದ ಕಿಂಚಿತ್‌ ಸೇವೆಯ ಅವಕಾಶವಿರಲಿ ಎಂದು ನುಡಿದ ರಾಷ್ಟ್ರೀಯ ಬಸವಶ್ರೀ ಪ್ರಶಸ್ತಿ ವಿಜೇತ‌, “ರಾಷ್ಟ್ರೀಯ ಕನ್ನಡ ರತ್ನ ಪ್ರಶಸ್ತಿ-2016’ಕ್ಕೆ ಭಾಜನರಾದ  ಜಸ್ಟಿಸ್‌  ಪಾಟೀಲ್‌ ಒಂದು ಲಕ್ಷ ರೂ. ದೇಣಿಗೆಯನ್ನು ಚೆಂಬೂರು ಕರ್ನಾಟಕ ಸಂಘಕ್ಕೆ ನೀಡಿ ಮಾನವೀಯತೆ ಮೆರೆದರು.

ಸಂಘದ ಉಪಾಧ್ಯಕ್ಷ ಪ್ರಭಾಕರ್‌ ಟಿ. ಬೋಳಾರ್‌, ಮಾಜಿ ಅಧ್ಯಕ್ಷ ಜಯ ಎನ್‌. ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘವು ವಾರ್ಷಿಕವಾಗಿ ಕೊಡಮಾಡುವ “ರಾಷ್ಟ್ರೀಯ ಕನ್ನಡ ರತ್ನ ಪ್ರಶಸ್ತಿ-2017′ ಪುರಸ್ಕಾರವನ್ನು ಬೆಂಗಳೂರು ದೂರದರ್ಶನ ಕೇಂದ್ರದ ದಕ್ಷಿಣ ವಿಭಾಗೀಯ ಹೆಚ್ಚುವರಿ ಪ್ರಧಾನ ನಿರ್ದೇಶಕ ನಾಡೋಜ ಡಾ| ಮಹೇಶ್‌ ಜೋಶಿ ಅವರಿಗೆ, ಸಂಘದ ವಾರ್ಷಿಕ “ವೈ. ಜಿ. ಶೆಟ್ಟಿ ಶ್ರೇಷ್ಠ ಶಿಕ್ಷಕಿ ಪ್ರಶಸ್ತಿ’ಯನ್ನು ನಿಷ್ಠಾವಂತ ಶಿಕ್ಷಕಿಯಾಗಿ ಹೆಸರು ಮಾಡಿದ ನಿವೃತ್ತ ಶಿಕ್ಷಕಿ ಸುಭಾಷಿಣಿ ಎಸ್‌. ಹೆಗ್ಡೆ ಅವರಿಗೆ, “ಅರಾಟೆ ನಾಗಮ್ಮ ಶೇಷಪ್ಪ ಪೂಜಾರಿ ಸ್ಮರಣಾರ್ಥ ಪ್ರಶಸ್ತಿ’ಯನ್ನು ಕನ್ನಡ ಮತ್ತು ತುಳು ಭಾಷಾ ಸಂಘಟಕ, ಪ್ರಸಿದ್ಧ ಸಾಹಿತಿ, ಪ್ರಕಾಶಕ ವಸಂತ ಶೆಟ್ಟಿ ಬೆಳ್ಳಾರೆ ಅವರಿಗೆ ಹಾಗೂ ಜೋಗೇಶ್ವರಿ ಪೂರ್ವದ ಶ್ರೀ ಜಗದಂಬಾ ಕಾಳಭೈರವ ದೇವಸ್ಥಾನ ಮಾಜಿ ಆಡಳಿತ ಮುಖ್ಯಸ್ಥ ಜಿ. ಟಿ. ಆಚಾರ್ಯ ಅವರಿಗೆ (ಪತ್ನಿ ಉಷಾ ಗೋಪಾಕೃಷ್ಣ ಅವರನ್ನೊಳಗೊಂಡು) “ಸುಬ್ಬಯ್ಯ ಶೆಟ್ಟಿ ದತ್ತಿ’ ಗೌರವ ಪ್ರದಾನಿಸಿ ಗೌರವಿಸಿ ಅಭಿನಂದಿಸಿದರು.

ಸಂಘವು ಆಯೋಜಿಸುತ್ತಿರುವ ವಾರ್ಷಿಕ ಸಾಹಿತ್ಯ ಸಹವಾಸ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮ, ಪ್ರದಾನಿಸುವ ರಾಷ್ಟ್ರೀಯ ಕನ್ನಡ ರತ್ನ ಪ್ರಶಸ್ತಿ, ದತ್ತಿ ಗೌರವ ಅಥವ ಉಪನ್ಯಾಸ ಇತ್ಯಾದಿ ಕನ್ನಡಾಂಬೆಯ ಮಕ್ಕಳನ್ನು ಒಗ್ಗೂಡಿಸುವ ಪ್ರಯತ್ನ ಮಾತ್ರವಲ್ಲ,  ನಮ್ಮಲ್ಲಿನ ಏಕತೆ ಸಾರುವ ಕಾರ್ಯಕ್ರಮಗಳಾಗಿವೆ. ಅರ್ಹ ಗಣ್ಯರನ್ನು ಪುರಸ್ಕರಿಸುವ ಈ ಸಂಘವು ದೂರದೃಷ್ಟಿಯನ್ನು ಹೊಂದಿದೆ.

ಶಿಕ್ಷಣದ ಜತೆಗೆ ಸಂಸ್ಕಾರವನ್ನು ರೂಪಿಸುವಲ್ಲಿ ಶ್ರಮಿಸುವ ಸಂಘವು ತನ್ನದೇ ಆದ ಪ್ರತಿಷ್ಠೆಯನ್ನು ರೂಪಿಸಿ ಕೊಂಡಿದೆ. ನಮ್ಮ ಸಾಧನೆಗೆ ಈ ವೇದಿಕೆಯೇ ಸಾಕ್ಷಿಯಾಗಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ನ್ಯಾಯವಾದಿ ಸುಧಾಕರ್‌ ಅರಾಟೆ ಹೇಳಿದರು.

Advertisement

ವಿದ್ಯಾರ್ಥಿ ಮಾ| ಮನೀಷ್‌ ಗೌಡ ಪ್ರಾರ್ಥನೆಗೈದರು. ಸಂಘದ ಉಪಾಧ್ಯಕ್ಷ ಪ್ರಭಾಕರ್‌ ಟಿ. ಬೋಳಾರ್‌ ಮತ್ತು ಗೌರವ  ಪ್ರಧಾನ ಕಾರ್ಯದರ್ಶಿ ರಂಜನ್‌ ಕುಮಾರ್‌ ಅಮೀನ್‌ ಸ್ವಾಗತಿಸಿದರು. ಸಾಂಸ್ಕೃತಿಕ ಉಪ ಸಮಿತಿಯ ಕಾರ್ಯದರ್ಶಿ ದಯಸಾಗರ್‌ ಚೌಟ ಅತಿಥಿಗಳು, ಸಮ್ಮಾನಿತರನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು.  ಕೋಶಾಧಿಕಾರಿ ಟಿ. ಆರ್‌. ಶೆಟ್ಟಿ  ವಂದಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಜತೆ ಕಾರ್ಯದರ್ಶಿ ದೇವದಾಸ್‌ ಕೆ. ಶೆಟ್ಟಿಗಾರ್‌, ಜತೆ ಕೋಶಾಧಿಕಾರಿ ಸುಂದರ್‌ ಎನ್‌. ಕೋಟ್ಯಾನ್‌, ಕಾರ್ಯಕಾರಿ ಸಮಿತಿಯ ಸದಸ್ಯರಾದ ಅಶೋಕ್‌ ಸಾಲ್ಯಾನ್‌, ವಿಶ್ವನಾಥ ಶೇಣವ, ಗುಣಾಕರ ಎಚ್‌. ಹೆಗ್ಡೆ, ಸುಧೀರ್‌ ಪುತ್ರನ್‌, ಯೋಗೇಶ್‌ ಗುಜರನ್‌, ಮಧುಕರ್‌ ಜಿ. ಬೈಲೂರು, ರಾಮ ಪೂಜಾರಿ, ಸುಧಾಕರ ಅಂಚನ್‌, ಮೋಹನ್‌ ಕೆ. ಕಾಂಚನ್‌, ಚಂದ್ರಶೇಖರ ಎ. ಅಂಚನ್‌, ಜಯ ಎಂ. ಶೆಟ್ಟಿ, ಸುಧೀರ್‌ ಪುತ್ರನ್‌, ಸಂಜೀವ ಎನ್‌. ಶೆಟ್ಟಿ ಸೇರಿದಂತೆ ನೂರಾರು ಶಿಕ್ಷಣಾಭಿಮಾನಿಗಳು, ತುಳು-ಕನ್ನಡಿಗ ಬಂಧ‌ುಗಳು, ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ ಮತ್ತು ಶಿಕ್ಷಕಿ ವಿಜೇತಾ ಸುವರ್ಣ ಮತ್ತು ಬಳಗದಿಂದ ಕರ್ನಾಟಕ ವೈಭವ ಕಾರ್ಯಕ್ರಮ, ವಿದ್ವಾನ್‌ ಕೋಲಾರ ರಮೇಶ್‌, ಪದ್ಮನಾಭ ಸಸಿಹಿತ್ಲು ಮತ್ತು ತಂಡದಿಂದ ಸಾಂಸ್ಕೃತಿಕ ಹಾಗೂ ಜಾನಪದ ನೃತ್ಯ ವೈಭವ ಜರಗಿತು. 

ಚೆಂಬೂರು ಕರ್ನಾಟಕ ಸಂಘದ ಸೇವಾ ವೈಖರಿಯನ್ನು  ಅವಲೋಕಿಸಿದಾಗ ಇಲ್ಲಿನ ಕನ್ನಡಿಗರ ಸೇವೆ ನಿಜವಾದ ಕನ್ನಡಮಾತೆ ಮೆಚ್ಚುವ ಸೇವೆಯಾಗಿದೆ. ಎಲ್ಲಿವರೆಗೆ ಕನ್ನಡತನ, ಕನ್ನಡದ ಮನಸ್ಸುಗಳು ಇವೆಯೋ ಅವೇ ಕನ್ನಡದ ಊರು ಮತ್ತು ಕನ್ನಡಿಗರ ಊರು. ಹಾಗೆ ನೋಡಿದರೆ ಚೆಂಬೂರು ಹೆಸರೇ ತಿಳಿಸುವಂತೆ ಇದು ಕನ್ನಡದ ಊರಾಗಿದೆ 
  –  ಡಾ| ಮಹೇಶ್‌ ಜೋಶಿ (ಸಂಘದ ವಾರ್ಷಿಕ ರಾಷ್ಟ್ರೀಯ ಕನ್ನಡ ರತ್ನ ಪ್ರಶಸ್ತಿ ವಿಜೇತರು).

ಶಿಕ್ಷಣ ಮಾದ್ಯಮದಲ್ಲಿನ ಭಾಷಾ ಕೀಳರಿಮೆ ಸಲ್ಲದು. ಭವಿಷ್ಯ ರೂಪಿಸುವ ವಿದ್ಯಾಲಯಗಳು ಮಕ್ಕಳಲ್ಲಿನ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕೇ ಹೊರತು ಭಾಷಾವೈಷಮ್ಯ ಬಿತ್ತಬಾರದು. ಪಾಲಕರಾಗಲೀ, ಶಿಕ್ಷಕರಾಗಲೀ ಮುನ್ಸಿಪಾಲಿಟಿ, ಸರಕಾರಿ, ಖಾಸಗಿ ವಿದ್ಯಾಲಯಗಳೆಂಬ ತಾರತಮ್ಯದ ವ್ಯವಸ್ಥೆಯಿಂದ ಮುಕ್ತರಾಗಿ ಸಾಮರಸ್ಯದ ಬದುಕಿಗೆ ಪ್ರೇರಕರಾಗಬೇಕು. ಅಂತಹ ಸೇವಾ ಪ್ರಯತ್ನಕ್ಕೆ ಸ್ಪಂದಿಸಿದ ಫಲವೇ ಈ ಗೌರವವಾಗಿದೆ 
   – ಸುಭಾಷಿಣಿ ಎಸ್‌. ಹೆಗ್ಡೆ (“ವೈ. ಜಿ. ಶೆಟ್ಟಿ ಶ್ರೇಷ್ಠ ಶಿಕ್ಷಕಿ ಪ್ರಶಸ್ತಿ’ ವಿಜೇತರು).

ರಾಷ್ಟ್ರದ ರಾಜಧಾನಿಯಿಂದ ದೇಶದ ಆರ್ಥಿಕ ರಾಜಧಾನಿಗೆ ಬರಮಾಡಿಸಿಕೊಂಡು ನೀಡಿದ ಗೌರವಕ್ಕೆ ಋಣಿಯಾಗಿದ್ದೇನೆ. ಇದು ನನ್ನಪಾಲಿನ ನಿಜಾರ್ಥದ ಸತ್ಕಾರವೇ ಸರಿ. ಪ್ರಶಸ್ತಿಗೆ ಆಯ್ಕೆಗೊಳಿಸಿದ ಸರ್ವರಿಗೂ ಆಭಾರಿಯಾಗಿದ್ದೇನೆ 
 – ವಸಂತ ಶೆಟ್ಟಿ ಬೆಳ್ಳಾರೆ (“ಅರಾಟೆ ನಾಗಮ್ಮ ಶೇಷಪ್ಪ ಪೂಜಾರಿ ಸ್ಮರಣಾರ್ಥ ಪ್ರಶಸ್ತಿ’ ವಿಜೇತರು).

ಯಕ್ಷಗಾನ ಎನ್ನುವುದು ಆರಾಧನಾ ಕಲೆ. ರಾಮಾಯಣ, ಮಹಾಭಾರತ ಮುಂತಾದ ನಮ್ಮ ಮೂಲ ಗ್ರಂಥಗಳ ಮುಖಾಂತರ ಶಾಲಾ ಮೆಟ್ಟಲೇರದ ಕಲಾವಿದರು ಇಂತಹ ಕಲೆಯ ಮುಖೇನ ಧರ್ಮಜಾಗೃತಿ ಮೂಡಿಸಿದ್ದಾರೆ. ಆದುದರಿಂದ ಯಕ್ಷಗಾನದ ಪ್ರತಿಯೊಂದು ಪಾತ್ರಕ್ಕೂ ತನ್ನದೆ ಆದ ಮಹತ್ತರವಾದ ವಿಶೇಷತೆಯಿದೆ. ತನ್ನದೇ ಆದ ಭಾಷಾ ಗೌರವ, ಸಂಸ್ಕಾರವಿದೆ. ಆದುದರಿಂದ  ಜಿ. ಟಿ. ಆಚಾರ್ಯ (“ಸುಬ್ಬಯ್ಯ ಶೆಟ್ಟಿ ದತ್ತಿ’ ಗೌರವ ಪ್ರಶಸ್ತಿ ಪುರಸ್ಕೃತರು).

  ಚಿತ್ರ-ವರದಿ: ರೋನ್ಸ್‌  ಬಂಟ್ವಾಳ್‌
 

Advertisement

Udayavani is now on Telegram. Click here to join our channel and stay updated with the latest news.

Next