Advertisement

ಚಾರ್ಮಾಡಿ ಘಾಟಿ ಸೌಂದರ್ಯ ಕಸಿದ ಭೂಕುಸಿತ

09:59 PM Aug 27, 2021 | Team Udayavani |

ಸೌಂದರ್ಯದ ಗಣಿಯನ್ನು ಹೊಂದಿರುವ ಚಾರ್ಮಾಡಿ ಗ್ರಾಮದಲ್ಲಿ ಪ್ರವಾಸೋದ್ಯಮ ಬೆಳೆಯಲು ವಿಪುಲ ಅವಕಾಶಗಳಿದ್ದರೂ ಇಲ್ಲಿರುವ ವ್ಯವಸ್ಥೆಗಳು ಅದಕ್ಕೆ ಪೂರಕವಾಗಿ ಇನ್ನೂ ಬೆಳೆದಿಲ್ಲ. ಇದು ಅಲ್ಲದೆ ಇಲ್ಲಿ ಮೂಲ ಸೌಕರ್ಯಗಳ ಹಲವು ಕೊರತೆ ಕಾಡುತ್ತಿದೆ. ಈ ಕುರಿತು ಇಂದಿನ ಒಂದು ಊರು; ಹಲವು ದೂರು ಅಂಕಣದಲ್ಲಿ ಬೆಳಕು ಚೆಲ್ಲುವ ಪ್ರಯತ್ನ.

Advertisement

ಬೆಳ್ತಂಗಡಿ: ರಾಜ್ಯ ರಾಜಧಾನಿಗೆ ಬಹುಮುಖ್ಯ ಸಂಪರ್ಕ ಬೆಸುಗೆಯಾಗಿದ್ದುಕೊಂಡೇ ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಪಶ್ಚಿಮ ಘಟ್ಟದ ತಪ್ಪಲಾದ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮ ವ್ಯಾಪ್ತಿಯ ಚಾರ್ಮಾಡಿ ಮಂದಿ ಮಾತ್ರ ಕರೆಗೆ ಸಿಗುತ್ತಿಲ್ಲ.

ಚಾರ್ಮಾಡಿ ಗ್ರಾಮ ವ್ಯಾಪ್ತಿಗೆ ಬರುವ ಚಾರ್ಮಾಡಿ ಘಾಟಿ ಕಳೆದ ಎರಡು ವರ್ಷಗಳ ಹಿಂದಿನ ಭೂಕುಸಿತದ ಹೊಡೆತಕ್ಕೆ ಸಿಲುಕಿ ಸೌಂದರ್ಯ ಕಳೆದು ಕೊಂಡಿದೆ. ಚಾರ್ಮಾಡಿ ಘಾಟಿಯ 11ನೇ ತಿರುವಿನವರೆಗೆ ಚಾರ್ಮಾಡಿ ಗ್ರಾ.ಪಂ. ವ್ಯಾಪ್ತಿಗೆ ಸೇರಿದೆ. ಅಲ್ಲಿಂದ ಬಳಿಕ ಮೂಡಿಗೆರೆ ಗ್ರಾಮ. 2ನೇ ತಿರುವಿನಿಂದ ಆರಂಭವಾಗಿ ಮಲೆಯ ಮಾರುತದವರೆಗೆ ನೆಟ್‌ವರ್ಕ್‌ ಸಮಸ್ಯೆ ಇಂದು ನಿನ್ನೆಯದಲ್ಲ. ಅಪಘಾತ ವಲಯವಾಗಿದ್ದರೂ ಯಾವುದೇ ಕಾರಣಕ್ಕೂ ಸಂಪರ್ಕ ಸಾಧಿಸಲು ಸಾಧ್ಯವಿಲ್ಲ. ರಾತ್ರಿ ಸಂಚಾರ ಅಪಾಯಕಾರಿಯಾಗಿ ಪರಿಣಮಿಸಿದೆ. ಸೂಚನ ಫಲಕವಿಲ್ಲ, ಸಾರ್ವಜನಿಕ ಶೌಚಾಲಯ ಪ್ರಮುಖ ಬೇಡಿಕೆಯಾಗಿದೆ.

ಬಸ್‌ ಸಮಯಕ್ಕೆ ಬರುತ್ತಿಲ್ಲ
ಚಾರ್ಮಾಡಿ, ಅಣಿಯೂರು, ಪುದುವೆಟ್ಟು, ಕಾಯ ರ್ತಡ್ಕ ಗ್ರಾಮದ 1ರಿಂದ 10ನೇ ತರಗತಿ ವಿದ್ಯಾರ್ಥಿಗಳು ಚಾರ್ಮಾಡಿಗೆ ಬರಬೇಕು. ಕಕ್ಕಿಂಜೆಯಲ್ಲಿ 10ನೇ ತರಗತಿವರೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಿದೆ. ಇಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿಯಾದಲ್ಲಿ 25 ಕಿ.ಮೀ. ದೂರ ಸಾಗುವ 500 ವಿದ್ಯಾರ್ಥಿಗಳು ಸ್ಥಳೀಯವಾಗಿಯೇ ಶಿಕ್ಷಣ ಪಡೆಯಬಹುದಾಗಿದೆ. ಬಸ್‌ ವ್ಯವಸ್ಥೆ ಇದ್ದರೂ ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ ಎಂಬ ದೂರುಗಳಿವೆ. ಹೀಗಾಗಿ ಖಾಸಗಿ ವಾಹನ ಅವಲಂಬಿ ಸಬೇಕಾಗಿದ್ದು ಬಸ್‌ಗೆ ಉಜಿರೆಗೆ 14 ರೂ., ಇದ್ದರೆ ಖಾಸಗಿ ವಾಹನದವರು 25 ರೂ. ಪಡೆಯುತ್ತಾರೆ. ವಿದ್ಯಾರ್ಥಿಗಳು ದಿನಕ್ಕೆ 50 ರೂ. ಸಂಚಾರಕ್ಕೆ ಮೀಸಲಿರಿಸುವಂತಾಗಿದೆ.

ಗಾಂಧಿನಗರ ಕಕ್ಕಿಂಜೆ ರಸ್ತೆ
ಗಾಂಧಿನಗರದಿಂದ ಕಕ್ಕಿಂಜೆಗೆ ಬರುವ ಎರಡು ಕಿ.ಮೀ. ಮಣ್ಣಿನ ರಸ್ತೆ ಕಳಪೆಯಾಗಿದೆ. 300ಕ್ಕೂ ಅಧಿಕ ಮನೆ ಗಳಿರುವುದರಿಂದ ಸರ್ವಋತು ರಸ್ತೆ ಆಗಬೇಕೆಂಬ ಬೇಡಿಕೆಯಿದೆ. ರಸ್ತೆ ನಿರ್ಮಾಣವಾದಲ್ಲಿ ಕಕ್ಕಿಂಜೆಗೆ ನೇರವಾಗಿ ತೆರಳಲು ಅನುಕೂಲವಾಗಲಿದೆ. ಇಲ್ಲವಾದಲ್ಲಿ ಮುಖ್ಯ ರಸ್ತೆಯಾಗಿ 4 ಕಿ.ಮೀ. ಸುತ್ತು ಬಳಸಿ ಬರಬೇಕಿದೆ. ಅನ್ನಾರು ಕಾಲನಿಯಿಂದ ಚಿಬಿದ್ರೆ ಗ್ರಾಮದ ಎಸ್‌.ಟಿ. ಕಾಲನಿ 2 ಕಿ.ಮೀ. ರಸ್ತೆ ಹದಗೆಟ್ಟಿದೆ. ಈ ರಸ್ತೆಯಾದಲ್ಲಿ ಚಿಬಿದ್ರೆ ಹಾಗೂ ಚಾರ್ಮಾಡಿ ಗ್ರಾಮದ ಮಂದಿಗೆ ಪ್ರಮುಖ ರಸ್ತೆ ಸಂಪರ್ಕ ವಾಗಲಿದೆ. ಚಿಬಿದ್ರೆ ಗ್ರಾಮದಿಂದ ವಿದ್ಯಾರ್ಥಿಗಳಿಗೆ ಅನ್ನಾರು ಸೇತುವೆಯಾಗಿ ಬರಲೂ ಹತ್ತಿರದ ರಸ್ತೆಯಾಗಲಿದೆ.

Advertisement

ಇದನ್ನೂ ಓದಿ:ವಿಮಾನ ಚಲಿಸುತ್ತಿರುವಾಗಲೇ ಪೈಲಟ್‌ಗೆ ಹೃದಯಾಘಾತ; ನಾಗ್ಪುರದಲ್ಲಿ ವಿಮಾನ ತುರ್ತು ಭೂಸ್ಪರ್ಶ

ಅನ್ನಾರು ಸೇತುವೆ ಸಂಪರ್ಕ ರಸ್ತೆ
ಕಕ್ಕಿಂಜೆಯಿಂದ ಅನ್ನಾರು ಸಾಗುವ 2 ಕಿ.ಮೀ. ರಸ್ತೆ ಕಾಂಕ್ರೀಟ್‌ ರಸ್ತೆಯಾಗಬೇಕೆಂಬ ಬೇಡಿಕೆ ಹಲವು ದಿನ ಗಳದ್ದು. ಕುಸಿತಗೊಂಡ ಅನ್ನಾರು ಸೇತುವೆ ನಿರ್ಮಾಣದ ಹಂತದಲ್ಲಿದೆ. ಹೀಗಾಗಿ ಮಳೆಗಾಲದಲ್ಲಿ ಅನ್ನಾರು ಕಾಲ ನಿಯ ಮಲೆಕುಡಿಯ ಸಮುದಾಯಕ್ಕೆ ಕಕ್ಕಿಂಜೆಗೆ ಬರಲು ಪ್ರಯೋಜನವಾಗಲಿದೆ. ಬೀಟಿಗೆ ಪ್ರಾ.ಆರೋಗ್ಯ ಕೇಂದ್ರದ ಟ್ಯಾಂಕ್‌ ಹಳೆಯ ದಾಗಿದೆ. ಜತೆಗೆ ಆರೋಗ್ಯ ಕೇಂದ್ರಕ್ಕೆ 10 ಅಡಿ ಎತ್ತರ, 50 ಮೀಟರ್‌ ಉದ್ದದ ತಡೆಗೋಡೆ ನಿರ್ಮಿಸಬೇಕೆಂಬ ಬೇಡಿಕೆ ಕೇಳಿಬಂದಿದೆ. ಗಾಂಧಿನಗರದಲ್ಲಿ 100ಕ್ಕೂ ಅಧಿಕ ಮನೆಗಳಿದ್ದು ನೀರಿನ ಸೌಕರ್ಯವಿಲ್ಲ. ಬೀಟಿಗೆ ಹಾಗೂ ಗಾಂಧಿನಗರದಲ್ಲಿ ಎರಡು ಓವರ್‌ ಹೆಡ್‌ ಟ್ಯಾಂಕ್‌ ನಿರ್ಮಾಣವಾದಲ್ಲಿ ನೀರಿನ ತೊಂದರೆ ಶಾಶ್ವತ ನೀಗಲಿದೆ.

ಅರಣೆಪಾದೆ ಸೇತುವೆ
ಪ್ರತೀ ಮಳೆಗಾಲದಲ್ಲಿ ಅರಣೆ ಪಾದೆ ಸಂಪರ್ಕ ರಸ್ತೆಯದೇ ಸಮಸ್ಯೆ. 11 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಕಿಂಡಿ ಅಣೆಕಟ್ಟು ಮಳೆಗಾಲದಲ್ಲಿ ಮರಮಟ್ಟು ಬಡಿದು ಹಾನಿಯಾಗಿದೆ. ಇಲ್ಲಿ ಸೇತುವೆ ನಿರ್ಮಾಣವಾದಲ್ಲಿ 100ಕ್ಕೂ ಅಧಿಕ ಮನೆಗಳಿಗೆ ಪ್ರಯೋಜನವಾಗಲಿದೆ. ಈಗಾಗಲೆ 2 ಕೋ.ರೂ. ವೆಚ್ಚದಲ್ಲಿ ಅನ್ನಾರಿನಿಂದ ಅರಣೆಪಾದೆವರೆಗೆ ರಸ್ತೆ ನಿರ್ಮಾಣವಾಗಿದೆ. ಸೇತುವೆ ನಿರ್ಮಾಣವಾದರೆ ಮತ್ತಷ್ಟು ಪ್ರಯೋಜನವಾಗಲಿದೆ.

ಇತರ ಬೇಡಿಕೆಗಳೇನು?
– ಚಾರ್ಮಾಡಿ ಪಂಚಲಿಂಗೇಶ್ವರ ದೇವಸ್ಥಾನದ ಸಮುದಾಯ ಭವನಕ್ಕೆ ಹೆಚ್ಚುವರಿ ಅನುದಾನಕ್ಕೆ ಬೇಡಿಕೆ
– ಚಾರ್ಮಾಡಿ ಘಾಟಿ ರಸ್ತೆಗೆ ಸೋಲಾರ್‌ ದೀಪ
– ಅಕ್ರಮ ಮರಳುಗಾರಿಕೆಗೆ ತಡೆ
– ಪೊಲೀಸ್‌ ಗೇಟ್‌ ಬಳಿ ಸಾರ್ವಜನಿಕ ಶೌಚಾಲಯ

– ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next