Advertisement

ಅಕ್ಷರ ಜಾತ್ರೆ: ಆಸಕ್ತರಿಗೆ ಸೀಮಿತ ವಸತಿ ಹಾಕಲಿದೆಯೇ ಬ್ರೇಕ್‌?

11:01 PM Jan 21, 2020 | Lakshmi GovindaRaj |

ಬೆಂಗಳೂರು: 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೊರಡಲು ಸಜ್ಜಾದ ಸಾಹಿತ್ಯಾಸಕ್ತರ “ಓಟ’ಕ್ಕೆ ಕಲಬುರಗಿಯ ಸೀಮಿತ ವಸತಿ ಸೌಲಭ್ಯವು ಸಣ್ಣ ಬ್ರೇಕ್‌ ಹಾಕುವ ಸಾಧ್ಯತೆ ಇದೆ! ಯಾಕೆಂದರೆ, ಉಳಿದ ನಗರಗಳಿಗೆ ಹೋಲಿಸಿದರೆ ಕಲಬುರಗಿಯಲ್ಲಿ ಲಾಡ್ಜ್ ಗಳ ಸಂಖ್ಯೆ ಕಡಿಮೆ. ಅವುಗಳೂ ಈಗಾಗಲೇ ಗಣ್ಯಾತಿಗಣ್ಯರು, ಗಣ್ಯರು, ನೋಂದಣಿ ಮಾಡಿಸಿಕೊಂಡ ಕನ್ನಡ ಸಾಹಿತ್ಯ ಪರಿಷತ್ತು ಸದಸ್ಯರಿಗಾಗಿ ಕಾಯ್ದಿರಿಸಲ್ಪಟ್ಟಿವೆ. ಇವರನ್ನು ಹೊರತುಪಡಿಸಿ, ಸಮ್ಮೇಳನಕ್ಕೆ ಲಕ್ಷಾಂತರ ಜನ ಬರುತ್ತಾರೆ. ಅವರಿಗೆ ವಸತಿ ಸಮಸ್ಯೆ ಕಾಡಲಿದ್ದು, ಸದ್ಯದ ಸ್ಥಿತಿಯಲ್ಲಿ ಹೆಚ್ಚುವರಿ ಶುಲ್ಕ ಪಾವತಿಸಿದರೂ ಸಿಗುವುದು ಅನುಮಾನ.

Advertisement

ಪಟ್ಟಣದಲ್ಲಿ ಸುಮಾರು 25ರಿಂದ 30 ಲಾಡ್ಜ್ಗಳಿವೆ. ತಲಾ ಒಂದರಲ್ಲಿ ಸರಾಸರಿ 30 ಕೊಠಡಿಗಳಿದ್ದು, ಒಟ್ಟಾರೆ ಕೊಠಡಿಗಳ ಸಂಖ್ಯೆ 900 ಆಗಬಹುದು. ತಲಾ ಒಂದರಲ್ಲಿ ಇಬ್ಬರಿಗೆ ತಂಗಲು ಅವಕಾಶ ನೀಡಿದರೂ 1,800ರಿಂದ 2,000 ಜನರಿಗೆ ವಸತಿ ವ್ಯವಸ್ಥೆ ಆಗಬಹುದು. ಅದೇ ರೀತಿ, ಸಮ್ಮೇಳನ ನಡೆಯುವ ವಿಶ್ವವಿದ್ಯಾಲಯದ ಅತಿಥಿ ಗೃಹಗಳಿದ್ದು, ಅಲ್ಲಿ ಸುಮಾರು 20 ಕೊಠಡಿಗಳು, ವಿದ್ಯಾರ್ಥಿಗಳ ವಸತಿ ನಿಲಯಗಳಿವೆ. ಅವುಗಳನ್ನೆಲ್ಲ ಲೆಕ್ಕಕ್ಕೆ ತೆಗೆದುಕೊಂಡರೂ ಗಣ್ಯರಿಗೇ ಸಾಕಾಗುತ್ತವೆ. ಉಳಿದವರ ಕತೆ ಏನು ಎಂಬ ಆತಂಕ ಆಯೋಜಕರನ್ನು ಕಾಡುತ್ತಿದೆ ಎಂದು ಮೂಲಗಳು ತಿಳಿಸಿವೆ.

ಅಗತ್ಯಬಿದ್ದರೆ ಶಾಲಾ ಕೊಠಡಿ ಬಳಕೆ: ಮನೆಗಳಲ್ಲಿ ವಸತಿ ಕಲ್ಪಿಸುವಷ್ಟರ ಮಟ್ಟಿಗೆ ಕೊರತೆ ಆಗದು. ಅತಿ ಗಣ್ಯರು, ಗಣ್ಯ ವ್ಯಕ್ತಿಗಳಿಗಾಗಿ ಸಾವಿರ ಕೊಠಡಿಗಳನ್ನು ಈಗಾಗಲೇ ಕಾಯ್ದಿರಿಸಲಾಗಿದೆ. ನಿರೀಕ್ಷೆ ಮೀರಿ ಗಣ್ಯರು ಪಾಲ್ಗೊಂಡರೆ ಪ್ರತ್ಯೇಕ ಕೊಠಡಿಗಳ ಕೊರತೆ ಆಗಬಹುದು. ಅಂತಹ ಸಂದರ್ಭದಲ್ಲಿ ಇಬ್ಬರು ಮೂವರಿಗೊಂದು ಕೊಠಡಿ ನೀಡಬೇಕಾಗುತ್ತದೆ. ಉಳಿದಂತೆ 20 ಸಾವಿರ ಪ್ರತಿನಿಧಿಗಳಿಗೆ ಉಳಿದು ಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿದೆ.

ನಗರದ ಲಾಡ್ಜ್ ಗಳಲ್ಲಿರುವ ಶೇ.75 ಕೊಠಡಿಗಳನ್ನು ಸಮ್ಮೇಳನಕ್ಕೆ ಬರುವ ಅತಿಥಿಗಳಿಗಾಗಿ ಮೀಸಲಿಡಲು ಸೂಚಿಸಲಾಗಿದೆ ಎಂದು ವಸತಿ ಮತ್ತು ಸಾರಿಗೆ ಸಮಿತಿ ಕಾರ್ಯಾಧ್ಯಕ್ಷ ಹಾಗೂ ಕಲಬುರಗಿ ಜಿಪಂ ಸಿಇಒ ಡಾ. ರಾಜಾ ಪಿ. ಮಾಹಿತಿ ನೀಡಿದರು. ಇನ್ನೂ ಮುಂದುವರಿದು, ಫ್ಯಾನ್‌, ನೀರು, ಶೌಚಾಲಯ ಸೇರಿ ಮೂಲಸೌಕರ್ಯ ಇರುವ ಶಾಲೆ ಗಳನ್ನು ಗುರುತಿಸಲಾಗಿದೆ. ಅಗತ್ಯಬಿದ್ದರೆ, ಅವುಗಳನ್ನೂ ಬಳಸಿಕೊಳ್ಳಲಾಗುವುದು.

ಅಲ್ಲಿ ಸುಮಾರು 15 ಸಾವಿರ ಜನ ಉಳಿದುಕೊಳ್ಳಬಹುದು. ಆದರೆ, ಜಿಲ್ಲಾವಾರು ಎಷ್ಟು ಮಂದಿ ನೋಂದಣಿ ಮಾಡಿದ್ದಾರೆ ಎಂಬುದರ ಮಾಹಿತಿ ಕಲೆಹಾಕುತ್ತಿದ್ದು, ಆಗ ಇದರ ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ತಿಳಿಸಿದರು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಸ್ಥಳೀಯ ಶಿಕ್ಷಣ ಸಂಸ್ಥೆಗಳು, ಕಲ್ಯಾಣ ಮಂಟಪಗಳ ಮೊರೆಹೋಗಿದೆ. ಹತ್ತಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳಿದ್ದು, ಆಡಳಿತ ಮಂಡಳಿಗಳು ಇದಕ್ಕೆ ಸಹಮತ ವ್ಯಕ್ತಪಡಿಸಿವೆ ಎನ್ನಲಾಗಿದೆ. ಈ ಮಧ್ಯೆ ವಸತಿ ಸೌಲಭ್ಯ ಕೊರತೆ ಜತೆಗೆ ಸಂಪರ್ಕ ವ್ಯವಸ್ಥೆ ಮತ್ತೂಂದು ತಲೆನೋವಾಗಿದೆ.

Advertisement

ಸಮ್ಮೇಳನ ನಡೆಯುವ ಸ್ಥಳದಿಂದ ಅತಿಥಿಗಳು ತಂಗುವ ಜಾಗಗಳು ಆರೇಳು ಕಿ.ಮೀ. ದೂರದಲ್ಲಿವೆ. ಅಲ್ಲಿಂದ ಅವರನ್ನು ಮೂರೂ ದಿನವೂ ಕರೆತರಲು ಹಾಗೂ ವಾಪಸ್‌ ಕಳುಹಿಸಿಕೊಡಲು ವಾಹನಗಳ ವ್ಯವಸ್ಥೆ ಆಗಬೇಕೆಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಕಲಬುರಗಿ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಬಹಮನಿ ಕೋಟೆ, ಬುದ್ಧ ವಿಹಾರ, ವಿಜಯಪುರದ ಗೋಳಗುಮ್ಮಟ, ಬರೀದ್‌ಶಾಹಿ ಕೋಟೆ, ಮಹಮ್ಮದ ಗವಾನ್‌ ಮದರಸ ಸೇರಿ ಹತ್ತಾರು ಪ್ರೇಕ್ಷಣೀಯ ತಾಣಗಳೂ ಇವೆ. ಇದಕ್ಕಾಗಿ ಸಾರಿಗೆ ನಿಗಮಗಳ ಬಸ್‌ಗಳು ಮತ್ತು ಶಿಕ್ಷಣ ಸಂಸ್ಥೆಗಳ ವಾಹನಗಳನ್ನು ಪಡೆಯಲು ನಿರ್ಧರಿಸಲಾಗಿದೆ ಎಂದೂ ವಿವರಿಸಿದರು.

ಲಾಡ್ಜ್ಗಳು ಹೌಸ್‌ಫ‌ುಲ್‌!: “ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅವಧಿ ಸೇರಿ ಆಸುಪಾಸಿನ 2-3 ದಿನಗಳು ಈಗಾಗಲೇ ಲಾಡ್ಜ್ಗಳು ಬುಕಿಂಗ್‌ ಆಗಿವೆ. ಯಾವುದೇ ಕೊಠಡಿಗಳು ಖಾಲಿ ಇಲ್ಲ. ಕೇವಲ ನಮ್ಮಲ್ಲಿ ಅಲ್ಲ; ಪಟ್ಟಣದ ಬಹುತೇಕ ಎಲ್ಲ ಲಾಡ್ಜ್ಗಳ ಸ್ಥಿತಿಯೂ ಇದೇ ಆಗಿದೆ’ ಎಂದು ಕಲಬುರಗಿಯ ಹೋಟೆಲ್‌ ಆಶ್ರಯ ಕಂಫ‌ರ್ಟ್ಸ್ ಸಿಬ್ಬಂದಿಯೊಬ್ಬರು ಸ್ಪಷ್ಟಪಡಿಸಿದರು.

“ನಮ್ಮಲ್ಲಿ ವಿವಿಧ ಪ್ರಕಾರದ ಕೊಠಡಿಗಳಿಗೆ ಬೇರೆ ಬೇರೆ ಶುಲ್ಕ ಇದೆ. ಕನಿಷ್ಠ 800ರಿಂದ ಗರಿಷ್ಠ 2,300 ರೂ.ವರೆಗಿನ ಕೊಠಡಿಗಳಿವೆ. ಆದರೆ, ಸಮ್ಮೇಳನ ನಡೆಯುವ ಮೂರು ದಿನಗಳು ಅಂದರೆ ಫೆ. 5-7ರ ಅವಧಿಯಲ್ಲಿ ಯಾವುದೇ ಕೊಠಡಿಗಳು ಖಾಲಿ ಇಲ್ಲ. ಬೇಡಿಕೆ ಹಿನ್ನೆಲೆಯಲ್ಲಿ ದರ ಹೆಚ್ಚಳ ಮಾಡಿಲ್ಲ. ವರ್ಷಪೂರ್ತಿ ನಮ್ಮಲ್ಲಿ ಒಂದೇ ದರ ಇರುತ್ತದೆ’ ಎಂದು ಆದಿತ್ಯ ಲಾಡ್ಜ್ನ ವ್ಯವಸ್ಥಾಪಕರು ತಿಳಿಸುತ್ತಾರೆ.

ಮನೆ ಆತಿಥ್ಯ?: ಈ ಹಿಂದೆ ಗಂಗಾವತಿ ಸೇರಿ ಹಲವು ಸಮ್ಮೇಳನಗಳಲ್ಲೂ ಈ ರೀತಿ ವಸತಿ ಸಮಸ್ಯೆ ಆಗಿತ್ತು. ಆಗ ಅಲ್ಲೆಲ್ಲಾ ಬಂದ ಅತಿಥಿಗಳಿಗೆ ಸ್ಥಳೀಯರ ಮನೆಗಳಲ್ಲಿಯೇ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಸಮ್ಮೇಳನಕ್ಕೆ ಬರುವವರು ಕನ್ನಡದ ಬಂಧುಗಳು ಎಂದು ಮನೆ ಆತಿಥ್ಯ ನೀಡುವ ಮೂಲಕ ಅಭಿಮಾನ ಮೆರೆಯಬೇಕು. ಇದು ಸಾಧ್ಯವಾದರೆ, ಕಲಬುರಗಿಗೆ ಹೆಸರೂ ಬರುತ್ತದೆ. ಸಮ್ಮೇಳನ ಯಶಸ್ವಿಯೂ ಆಗುತ್ತದೆ ಎಂದು ಕಲಬುರಗಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಕಾರ್ಯದರ್ಶಿಯೊಬ್ಬರು ಸಲಹೆ ನೀಡಿದರು.

ಕಲಬುರಗಿ ಜಿಲ್ಲಾ ಕೇಂದ್ರ. ಸಾಕಷ್ಟು ಶಿಕ್ಷಣ ಸಂಸ್ಥೆಗಳು, ಕಲ್ಯಾಣ ಮಂಟಪಗಳು ಅಲ್ಲಿವೆ. ಉಪ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಮೂರು ಸಭೆಗಳಾಗಿವೆ. ನಾನೂ ನಾಲ್ಕು ಸಭೆಗಳಲ್ಲಿ ಭಾಗವಹಿಸಿದ್ದೇನೆ. ಅಲ್ಲಿ ಯಾರೂ ವಸತಿ ಸಮಸ್ಯೆ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಹಾಗಾಗಿ, ನನ್ನ ಪ್ರಕಾರ ಸಮಸ್ಯೆ ಆಗಲಿಕ್ಕಿಲ್ಲ.
-ಮನು ಬಳಿಗಾರ್‌ ಕಸಾಪ ಅಧ್ಯಕ್ಷ

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next