Advertisement

ಮತ್ತೆ ಅಧ್ಯಾದೇಶ ಮಾರ್ಗ: ವಿವಾದಿತ ಮೂರು ಕೃಷಿ ಮಸೂದೆಗಳಿಗೆ ಅಧ್ಯಾದೇಶ ಬಲ

12:19 AM Oct 02, 2020 | mahesh |

ಬೆಂಗಳೂರು: ಭೂ ಸುಧಾರಣೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ ಹಾಗೂ ಕೈಗಾರಿಕಾ ವ್ಯಾಜ್ಯಗಳ (ಕಾರ್ಮಿಕ ಕಾಯ್ದೆ) ತಿದ್ದುಪಡಿ ಕಾಯ್ದೆಗೆ ಮತ್ತೆ ಅಧ್ಯಾದೇಶ ಯೋಗ ಬಂದಿದೆ!

Advertisement

ವಿಪಕ್ಷಗಳು ಮತ್ತು ರೈತರ ವಿರೋಧದ ನಡುವೆಯೂ ರಾಜ್ಯ ಸರಕಾರ ಈ ಮೂರೂ ತಿದ್ದುಪಡಿ ಮಸೂದೆಗಳಿಗೆ ವಿಧಾನಸಭೆಯಲ್ಲಿ ಒಪ್ಪಿಗೆ ಪಡೆದುಕೊಂಡಿತ್ತು. ಆದರೆ ಪರಿಷತ್‌ನಲ್ಲಿ ಬಹುಮತವಿಲ್ಲದ ಕಾರಣ ಈ ಮಸೂದೆಗಳು ಬಿದ್ದು ಹೋಗಿದ್ದವು. ಹೀಗಾಗಿ ಮತ್ತೆ ರಾಜ್ಯ ಸರಕಾರ ಅಧ್ಯಾದೇಶ ಮೂಲಕ ಈ ತಿದ್ದುಪಡಿ ಮಸೂದೆಗಳನ್ನು ಜಾರಿಗೆ ತಂದಿದೆ. ಗುರುವಾರ ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ.

ಬಿದ್ದು ಹೋಗಿದ್ದೇಕೆ?
ಅಧಿವೇಶನದ ಕೊನೆಯ ದಿನ ವಿಧಾನ ಪರಿಷತ್ತಿನಲ್ಲಿ ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯ ಬಗ್ಗೆ ಚರ್ಚೆಯಾಗಿದ್ದರೂ ಸಭಾಪತಿಗಳು ಕಲಾಪವನ್ನು ಅನಿರ್ದಿ ಷ್ಟಾವಧಿಗೆ ಮುಂದೂಡಿದ್ದರಿಂದ ತಿದ್ದುಪಡಿ ಮಸೂದೆ ಅಂಗೀಕಾರವಾಗದೆ ಬಾಕಿ ಉಳಿದುಕೊಂಡಿತ್ತು. ಎಪಿಎಂಸಿ ಮಸೂದೆಯನ್ನು ಪರಿಷತ್ತಿನಲ್ಲಿ ಮಂಡನೆ ಮಾಡಲು ಸರಕಾರಕ್ಕೆ ಸಮಯದ ಅಭಾವವಿತ್ತು. ಇನ್ನು ಕೈಗಾರಿಕಾ ವ್ಯಾಜ್ಯಗಳ ತಿದ್ದುಪಡಿ ಮಸೂದೆ ಪರಿಷತ್ತಿನಲ್ಲಿ ಮಂಡನೆಯಾಗಿ ಚರ್ಚೆಯಾಗಿದ್ದರೂ ಆಡಳಿತ ಪಕ್ಷದ ಸದಸ್ಯರ ಸಂಖ್ಯಾಬಲದ ಕೊರತೆಯಿಂದ ಮಸೂದೆ ತಿದ್ದುಪಡಿ ವಿಫ‌ಲವಾಗಿತ್ತು.

ಆರು ತಿಂಗಳ ಬಲ
ರಾಜ್ಯ ಸರಕಾರ ಮೂರು ಮಸೂದೆ‌ಗಳನ್ನು ಮತ್ತೆ ಅಧ್ಯಾದೇಶದ ಮೂಲಕ ಜಾರಿಗೆ ತರಲು ನಿರ್ಧರಿಸಿ ಅಧ್ಯಾದೇಶ ಹೊರಡಿಸಲು ಸಂಪುಟದಲ್ಲಿ ನಿರ್ಧರಿಸಿದೆ. ಈಗಾಗಲೇ ಹೊರಡಿಸಿರುವ ಅಧ್ಯಾದೇಶದ ಅವಧಿ ರದ್ದುಪಡಿಸಿ ಮಸೂದೆ ಮಂಡಿಸಿದ್ದರಿಂದ ಹೊಸದಾಗಿ ಅಧ್ಯಾದೇಶ ಹೊರಡಿಸಿ ಮತ್ತೆ ಆರು ತಿಂಗಳಲ್ಲಿ ವಿಧಾನ ಮಂಡಲದಲ್ಲಿ ಪಾಸ್‌ ಮಾಡಿಕೊಳ್ಳಲು ಸರಕಾರ ನಿರ್ಧಾರ ಮಾಡಿದೆ ಎಂದು ತಿಳಿದು ಬಂದಿದೆ.

ಕೆಲವು ಸಚಿವರ ಗೈರು
ಗುರುವಾರದ ಸಚಿವ ಸಂಪುಟ ಸಭೆಗೆ ಹಲವು ಸಚಿವರು ಗೈರಾಗಿದ್ದರು. ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಜೆ.ಸಿ. ಮಾಧುಸ್ವಾಮಿ, ಶಶಿಕಲಾ ಜೊಲ್ಲೆ, ಕೆ. ಗೋಪಾಲಯ್ಯ, ಪ್ರಭು ಚೌವ್ಹಾಣ್‌ಗೆ ಕೊರೊನಾ ಪಾಸಿಟಿವ್‌ ಇರುವ ಕಾರಣ ಸಂಪುಟ ಸಭೆಗೆ ಬಂದಿರಲಿಲ್ಲ. ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಬಸವರಾಜ ಬೊಮ್ಮಾಯಿ, ಆನಂದ್‌ ಸಿಂಗ್‌, ಆರ್‌. ಅಶೋಕ್‌, ಶ್ರೀಮಂತ ಪಾಟೀಲ್‌, ಸಿ.ಸಿ. ಪಾಟೀಲ್‌ ಕೂಡ ಗೈರು ಹಾಜರಾಗಿದ್ದರು.

Advertisement

ಇಂದು ರೈತರ ಉಪವಾಸ ಹೋರಾಟ
ರಾಜ್ಯ ಸರಕಾರದ ಅಧ್ಯಾದೇಶವನ್ನು ಖಂಡಿಸಿ ರೈತ, ದಲಿತ, ಕಾರ್ಮಿಕರ ಐಕ್ಯ ಹೋರಾಟ ಸಮಿತಿಯವರು ಅ. 2ರಂದು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಿರುವುದಾಗಿ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ತಿಳಿಸಿದ್ದಾರೆ.

ಇಂದು ಕಾಂಗ್ರೆಸ್‌ ಪ್ರತಿಭಟನೆ
ರಾಜ್ಯ ಸರಕಾರ ಜಾರಿಗೆ ಮುಂದಾಗಿರುವ ವಿವಾದಾತ್ಮಕ ತಿದ್ದುಪಡಿ ಕಾಯ್ದೆಗಳನ್ನು ವಾಪಸ್‌ ಪಡೆಯುವಂತೆ ಆಗ್ರಹಿಸಿ ಕಾಂಗ್ರೆಸ್‌ ಶುಕ್ರವಾರ ಎಲ್ಲ ವಿಧಾನ ಸಭಾ ಕ್ಷೇತ್ರಗಳಲ್ಲಿ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ. ಪ್ರತಿ ತಾಲೂಕು ಕೇಂದ್ರದಲ್ಲಿ ಪಕ್ಷದ ಹಾಲಿ ಶಾಸಕರ ನೇತೃತ್ವದಲ್ಲಿ, ಶಾಸಕರಿಲ್ಲದ ಕ್ಷೇತ್ರಗಳಲ್ಲಿ 2018ರ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಜಿತರಾಗಿರುವ ಅಭ್ಯರ್ಥಿಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಿದೆ. ಜತೆಗೆ ತಹಶೀಲ್ದಾರ್‌ಗಳ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಿದೆ. ಅನಂತರ ಅ. 10ರಿಂದ ಮೂರು ಕಾಯ್ದೆಗಳ ವಿರುದ್ಧ ಸಹಿ ಸಂಗ್ರಹಿಸಿ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲು ಕಾಂಗ್ರೆಸ್‌ ನಾಯಕರು ತೀರ್ಮಾನಿಸಿದ್ದಾರೆ.

ಐಟಿಐ ಕಾಲೇಜುಗಳು ಮೇಲ್ದರ್ಜೆಗೆ
ರಾಜ್ಯದ 150 ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಖಾಸಗಿ ಸಹಭಾಗಿತ್ವದಲ್ಲಿ 4,636.50 ಕೋ.ರೂ. ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸಲು ಸಂಪುಟ ಸಭೆ ಅನುಮೋದನೆ ನೀಡಿದೆ. ಐಟಿಐಗಳನ್ನು ಟಾಟಾ ಟೆಕ್ನಾಲಜಿಸ್‌ ಲಿಮಿಟೆಡ್‌ ಸಂಸ್ಥೆಯ ನಿರ್ವಹಣೆಗೆ ರಾಜ್ಯ ಸರಕಾರ ನೀಡಲು ತೀರ್ಮಾನಿಸಿದ್ದು, ಟಾಟಾ ಟೆಕ್ನಾಲಜೀಸ್‌ ಸಂಸ್ಥೆ ಶೇ. 88ರಷ್ಟು ಪಾಲು ಹೊಂದಲಿದೆ. ಸರಕಾರದ ಪಾಲು ಶೇ. 12ರಷ್ಟಿರಲಿದೆ.
ಇನ್ನು ಮುಂದೆ ಈ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ, ಆಡಳಿತ ನಿರ್ವಹಣೆ ಹಾಗೂ ಸಿಬಂದಿ ನೇಮಕ ಎಲ್ಲವೂ ಖಾಸಗಿ ಕಂಪೆನಿಯ ವ್ಯಾಪ್ತಿಗೆ ಒಳಪಡಲಿದ್ದು, ಸರಕಾರ ಆರಂಭದಲ್ಲಿ ಅಗತ್ಯ ಮೂಲ ಸೌಕರ್ಯ ಒದಗಿಸಿ ಕೊಡುವ ಜವಾಬ್ದಾರಿ ಮಾತ್ರ ನೋಡಿಕೊಳ್ಳಲಿದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next