Advertisement

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ: ಈ ಬಾರಿ ಯಾರೇ ಗೆದ್ದರೂ ಕೂದಲೆಳೆ ಅಂತರ! 

02:26 PM May 08, 2023 | Team Udayavani |

ಚನ್ನಪಟ್ಟಣ: ಬೊಂಬೆನಾಡು ಚನ್ನಪಟ್ಟಣ ತಾಲೂಕಿನ ಜೀವನದಿ ಕಣ್ವಾದಲ್ಲಿ ಈ ಐದು ವರ್ಷದಲ್ಲಿ ಸಾಕಷ್ಟು ನೀರು ಹರಿದಿದೆ. ಹೈನುಗಾರಿಕೆಯಲ್ಲಿ ಇಡೀ ಕರ್ನಾಟಕದಲ್ಲೇ ಪ್ರಥಮ ಸ್ಥಾನ ಪಡೆದಿರುವ ತಾಲೂಕು ರಾಜಕೀಯ ರಂಗದಲ್ಲೂ ತನ್ನದೇ ಆದ ವಿಶಿಷ್ಟವಾದ ಹೆಜ್ಜೆಗುರುತು ಮೂಡಿಸಿದೆ.

Advertisement

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಜೆಡಿ ಎಸ್‌ ಅಭ್ಯರ್ಥಿ, ದೈವಭಕ್ತರಾದ ಎಚ್‌.ಡಿ. ಕುಮಾರಸ್ವಾಮಿ ಅವರು ತಮ್ಮ ಸ್ವಕ್ಷೇತ್ರದಲ್ಲಿ ಗೆದ್ದು, ಅದೃಷ್ಟದಾಟದಲ್ಲಿ ಮತ್ತೂಮ್ಮೆ ಮುಖ್ಯಮಂತ್ರಿ ಗದ್ದುಗೆ ನಿರೀಕ್ಷೆಯಲ್ಲಿದ್ದಾರೆ. 2018ರ ವಿಧಾನಸಭಾ ಚುನಾವಣೆಯ ಸೋಲಿನ ಸೇಡು ತೀರಿಸಿಕೊಳ್ಳಲು “ಸ್ವಾಭಿಮಾನಿ ಸಂಕಲ್ಪ ನಡಿಗೆ’ ಮೂಲಕ ಕ್ಷೇತ್ರ ಸುತ್ತಿರುವ ಮಾಜಿ ಸಚಿವ, ಹಾಲಿ ವಿಧಾನ ಪರಿಷತ್‌ ಸದಸ್ಯ ಬಿಜೆಪಿ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್‌ ಈ ಬಾರಿ ಶತಾಯ ಗತಾಯ ಗೆಲ್ಲಲೇಬೇಕು ಎಂದು ಎಲ್ಲಾ ತಂತ್ರಗಾರಿಕೆಯನ್ನು ಪ್ರಯೋಗಿಸುತ್ತಿದ್ದಾರೆ. ಈ ಇಬ್ಬರು ಛಲದಂಕಮಲ್ಲರ ನೇರಾನೇರ ಹಣಾಹಣಿಯಿಂದ ಚನ್ನಪಟ್ಟಣ ಕ್ಷೇತ್ರ ಕುತೂಹಲದ ಕೇಂದ್ರ ಬಿಂದುವಾಗಿ ರಾಜ್ಯ ದ ಗಮನ ಸೆಳೆದಿದೆ.

ಹಳೇ ಮೈಸೂರು ಭಾಗದಲ್ಲಿ ಸಾಂಪ್ರದಾಯಿಕವಾಗಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮಧ್ಯೆ ಹಣಾಹಣಿ ಏರ್ಪಟ್ಟಿದ್ದರೆ, ಚನ್ನಪಟ್ಟಣದಲ್ಲಿ ಮಾತ್ರ ಬಿಜೆಪಿ ಮತ್ತು ಜೆಡಿಎಸ್‌ ನಡುವೆ ನಿಕಟ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿ ನೆಪ ಮಾತ್ರ ವಾಗಿದ್ದು, ಯೋಗೇಶ್ವರ್‌ ತಮ್ಮ ವೈಯಕ್ತಿಕ ಸಾಮರ್ಥ್ಯದ ಮೇಲೆ ಕುಮಾರ ಸ್ವಾಮಿ ಅವರನ್ನು ಎದುರು ಗೊಂಡಿದ್ದಾರೆ ಎಂದರೂ ತಪ್ಪಿಲ್ಲ. ಕ್ಷೇತ್ರದಲ್ಲಿ 7 ಬಾರಿ ಸ್ಪರ್ಧಿಸಿ, 5 ಬಾರಿ ಗೆದ್ದಿರುವ ಯೋಗೇಶ್ವರ್‌ ಕೆರೆಗಳ ನ್ನು ತುಂಬಿಸಿದ್ದು ಹಾಗೂ ಅಭಿವೃದ್ಧಿ ವಿಚಾರ ಮುಂದಿಟ್ಟುಕೊಂಡು ತಮ್ಮ ಎಂದಿನ “ಸೈನಿಕ’ ಗೆಟಪ್‌ನಲ್ಲಿ ಪ್ರಚಾರದದಲ್ಲಿದ್ದಾರೆ.

ಅನಿತಾಗೆ ಚನ್ನಪಟ್ಟಣ ಜವಾಬ್ದಾರಿ: ಪಕ್ಷವನ್ನು ಅಧಿಕಾರಕ್ಕೆ ತರುವ ಗುರಿಗಾಗಿ ಇಡೀ ರಾಜ್ಯ ಸುತ್ತುತ್ತಿರುವ ಕುಮಾರಸ್ವಾಮಿ ಅವರು ಕ್ಷೇತ್ರದ ಪ್ರಚಾರ ಹೊಣೆಯನ್ನು ಪತ್ನಿ ಅನಿತಾ ಕುಮಾರಸ್ವಾಮಿ ಅವರಿಗೆ ಒಪ್ಪಿಸಿದ್ದಾರೆ. ದೇವೇಗೌಡ ಹಾಗೂ ಕುಮಾರಸ್ವಾಮಿ ತಲಾ ಒಂದೊಂದು ದಿನ ಕ್ಷೇತ್ರದಲ್ಲಿ ಪ್ರಚಾರಕ್ಕೆ ಸಮಯ ನೀಡಿದ್ದು, ಉಳಿದಂತೆ ಅನಿತಾ ಅವರೇ ಸತತವಾಗಿ ಊರೂರು ಸುತ್ತುತ್ತಿದ್ದಾರೆ. 2018ರಲ್ಲಿ ಸಿಎಂ ಆಗಿ ಎಚ್‌ಡಿಕೆ ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ 1,500 ಕೋಟಿ ರೂ. ವಿಶೇಷ ಅನುದಾನ ನೀಡಿದ್ದರು. ಮತ್ತೂಮ್ಮೆ ಸಿಎಂ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸದಾವಕಾಶ ಒದಗಿ ಬಂದಿರುವ ವಿಚಾರವನ್ನು ಕ್ಷೇತ್ರದ ಮತದಾರರ ಎದುರು ಅನಿತಾ ಪ್ರಸ್ತಾಪಿಸುತ್ತಿದ್ದಾರೆ.

ಎಚ್‌ಡಿಕೆ-ಸಿಪಿವೈ ನೇರ ಸಮರ: ಕಾಂಗ್ರೆಸ್‌ ಅಭ್ಯರ್ಥಿ ನಿರೀಕ್ಷೆಯಲ್ಲಿದ್ದ ಪ್ರಸನ್ನ ಪಿ.ಗೌಡ ಜೆಡಿಎಸ್‌ ಸೇರಿದ್ದು, ಕುಮಾರ ಸ್ವಾಮಿ ಅವರನ್ನು ಗೆಲ್ಲಿಸಲು ಪ್ರಸನ್ನ ಗೌಡ, ಹಿರಿಯ ಮುಖಂಡ ಹಾಪ್‌ಕಾಮ್ಸ್‌ ಸಿ. ದೇವರಾಜು, ಜಯಮುತ್ತು, ಗೋವಿಂದ ಹಳ್ಳಿ ನಾಗರಾಜು, ಕುಕ್ಕೂರುದೊಡ್ಡಿ ಜಯ ರಾಮು, ಹಲವು ಮುಖಂಡರು ಕುಮಾರ ಸ್ವಾಮಿ ಅವರ ಗೆಲುವಿಗೆ ಟೊಂಕ ಕಟ್ಟಿ ಕೊಂಡು ಕ್ಷೇತ್ರಾದ್ಯಂತ ಪ್ರಚಾರದಲ್ಲಿ ತೊಡ ಗಿರುವುದು ಒಂದೆಡೆಯಾದರೆ, ಕ್ಷೇತ್ರದ ಶಾಸಕರಾಗಿ ಕುಮಾರಸ್ವಾಮಿ ಅವರು ನಮ್ಮನ್ನು ನಿರ್ಲಕ್ಷ್ಯ ಮಾಡಿದ್ದರು ಎಂದು ಮುನಿಸಿಕೊಂಡು ತಟಸ್ಥವಾಗಿದ್ದ ಮುಖಂಡರೆಲ್ಲಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮುನಿಸು ಮರೆತು ಎಚ್‌ಡಿಕೆ ಪರ ಮತ ಯಾ ಚನೆಗಾಗಿ ಮನೆ, ಮನೆಗೆ ಭೇಟಿ ಮಾಡು ತ್ತಿರುವುದು ಜೆಡಿಎಸ್‌ ಗೆ ಸಕಾರಾತ್ಮಕ ವಾತಾವರಣ ಸೃಷ್ಟಿಸಿದೆ.

Advertisement

ಕಾಂಗ್ರೆಸ್‌ ಆತ್ಮವಿಶ್ವಾಸ: ಕಾಂಗ್ರೆಸ್‌ ಅಭ್ಯ ರ್ಥಿ, ರಾಮನಗರ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ, ಗಂಗಾಮತಸ್ಥ ಸಮಾಜದ ಎಸ್‌. ಗಂಗಾಧರ್‌ ಕ್ಷೇತ್ರಾದ್ಯಂತ ಮತಯಾ ಚನೆ ಯಲ್ಲಿ ತೊಡಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಬೆಂ.ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್‌ ಒಂದು ಸುತ್ತು ಕ್ಷೇತ್ರದಲ್ಲಿ ಪ್ರಚಾರ ಮಾಡಿರುವುದು ಕಾಂಗ್ರೆಸ್‌ ಅಭ್ಯರ್ಥಿಯಲ್ಲಿ ಆತ್ಮವಿಶ್ವಾಸ ಮೂಡಿಸಿದೆ.

ಕಡಿಮೆ ಅಂತರದಲ್ಲಿ ಗೆಲುವು: ಡಿಕೆಎಸ್‌ ಸಹೋದರರ ಬಾವ ಸಿ.ಪಿ.ಶರತ್‌ಚಂದ್ರ ಅವರು ಆಪ್‌ ಅಭ್ಯರ್ಥಿಯಾಗಿದ್ದು, ಅವರು ಕೂಡ ತಮ್ಮದೇ ಆದ ಪಡೆಯೊಂದನ್ನು ಕಟ್ಟಿಕೊಂಡು ಕ್ಷೇತ್ರದಲ್ಲಿ ಅಬ್ಬರ ಹಾಗೂ ಆಡಂಬರಕ್ಕೆ ಆಸ್ಪದ ನೀಡದೆ, ಮನೆ, ಮನೆಗೆ ತೆರಳಿ ಸರಳವಾಗಿ ಮತ ಕೇಳುವ ಕಾಯಕದಲ್ಲಿ ಮುಂದಿದ್ದಾರೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಬರೋಬ್ಬರಿ 15 ಅಭ್ಯರ್ಥಿಗಳು ಕಣದಲ್ಲಿದ್ದರೂ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಯೋಗೇಶ್ವರ್‌ ನಡುವೆ ನೇರಾನೇರ ಹಣಾಹಣಿ ಇದೆ ಎಂದು ನಿಸ್ಸಂದೇಹವಾಗಿ ಹೇಳಬಹುದು. ಕಳೆದ ಬಾರಿ ಜೆಡಿಎಸ್‌ನ ಕುಮಾರಸ್ವಾಮಿ ಅವರು ಸುಮಾರು 21 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದಿದ್ದರು. ಆದರೆ, ಈ ಸಲ ಯಾರೇ ಗೆದ್ದರೂ ಗೆಲುವಿನ ಅಂತರ ಹೆಚ್ಚಿರುವುದಿಲ್ಲ ಎಂಬ ವಾತಾವರಣವಿದೆ.

ಮಾಜಿ, ಹಾಲಿ ಪ್ರಧಾನಿಗಳ ಪ್ರಚಾರ: ಪ್ರಧಾನಿ ನರೇಂದ್ರ ಮೋದಿ ಅವರು ಚನ್ನಪಟ್ಟಣದಲ್ಲಿ ಬಹಿರಂಗ ಪ್ರಚಾರ ಸಭೆಯನ್ನು ನಡೆಸಿದ್ದು, ಸ್ವಲ್ಪ ಮಟ್ಟಿಗೆ ನೆರವಿಗೆ ಬಂದಿದೆ ಎಂದು ಕೆಲವರು ವಾದಿಸಿದರೆ, ಪ್ರಧಾನಿ ಭೇಟಿ ಸಂದರ್ಭದಲ್ಲಿ ಮೂಲ ಬಿಜೆಪಿಗರು ಹಾಗೂ ವಲಸಿಗರ ನಡುವೆ ತಿಕ್ಕಾಟ ಆರಂಭವಾಗಿದ್ದು, ಇದು ಸೈನಿಕನಿಗೆ ಮೈನಸ್‌ ಆದರೂ ಅಚ್ಚರಿ ಇಲ್ಲ ಎಂಬ ವಿಶ್ಲೇಷಣೆಯೂ ಕ್ಷೇತ್ರದ ರಾಜಕೀಯ ಚಿಂತಕರಿಂದ ಕೇಳಿ ಬಂದಿದೆ. ಅದೇ ದಿನ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಚನ್ನಪಟ್ಟಣ ಕ್ಷೇತ್ರಕ್ಕೆ ಭೇಟಿ ನೀಡಿ, ಮತ ದಾರರಿಗೆ ತಮ್ಮ ಅವಧಿ ಹಾಗೂ ಕುಮಾರಸ್ವಾಮಿ ಸ್ವಾಮಿ ಅವಧಿಯಲ್ಲಿ ಚನ್ನಪಟ್ಟಣ ಕ್ಷೇತ್ರ ಹಾಗೂ ರಾಮನಗರ ಜಿಲ್ಲೆಗೆ ನೀಡಿರುವ ಕೊಡುಗೆಗಳನ್ನು ನೆನಪಿಸಿದ್ದಾರೆ.

ನೀರಾವರಿಯ ಜಟಾಪಟಿ!: ಒಣಭೂಮಿ ನಂಬಿ ಪ್ರಯೋಜನವಿಲ್ಲ ಎಂದು ಬೆಂಗಳೂರಿನ ಬಾರ್‌ಗಳು ಹಾಗೂ ಮತ್ತಿತರೆ ಕಡೆಗೆ ಉದ್ಯೋಗ ಅರಸಿ ಹೊರಟಿದ್ದ ಕ್ಷೇತ್ರದ ಯುವಜನರಿಗೆ ಏತ ನೀರಾವರಿ ಯೋಜನೆ ಮೂಲಕ ಕೆರೆಗಳನ್ನು ತುಂಬಿಸಿ ಬದುಕಿಗೆ ಭರವಸೆ ತುಂಬಿದ್ದನ್ನು ಸಿಪಿವೈ ಅವರು ತಮ್ಮ ಕ್ಷೇತ್ರದಲ್ಲಿ ಸಾಧನೆಯಾಗಿ ಹೇಳಿಕೊಳ್ಳುತ್ತಿದ್ದಾರೆ. ಆದರೆ, ಈ ನೀರಾವರಿ ಯೋಜನೆಗಳಿಗೆ ಆಸರೆಯಾಗಿರುವ ಇಗ್ಗಲೂರು ಬ್ಯಾರೇಜ್‌(ಎಚ್‌.ಡಿ.ದೇವೇಗೌಡ ಬ್ಯಾರೇಜ್‌)ಅನ್ನು ರೈತರಿಂದ ದೇಣಿಗೆ ಸಂಗ್ರಹಿಸಿ ನಿರ್ಮಿಸಿದ್ದ ಆ ದಿನಗಳನ್ನು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಕ್ಷೇತ್ರದ ಜನರಿಗೆ ನೆನಪಿಸಿದ್ದಾರೆ. ತಮ್ಮದೇ ಹೆಸರಿನ ಅಣೆಕಟ್ಟೆಗೆ ಭೇಟಿ ನೀಡಿದ್ದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು, ತಮ್ಮ ಅಧಿಕಾರಾವಧಿಯ ಈ ಕೆಲಸವನ್ನು ನೆನಪಿಸುವ ಮೂಲಕ ಸಿ.ಪಿ. ಯೋಗೇ ಶ್ವರ್‌ರಿಗೆ ಅವರ ಕೆರೆ ತುಂಬಿಸಿದ ಸಾಧನೆ ಟ್ರಂಪ್‌ ಕಾರ್ಡ್‌ ಗೆ ಠಕ್ಕರ್‌ ಕೊಟ್ಟಿದ್ದಾರೆ.

-ಎಂ.ಶಿವಮಾದು

Advertisement

Udayavani is now on Telegram. Click here to join our channel and stay updated with the latest news.

Next