Advertisement

ಬದಲಾಗುತ್ತಿದೆ ಬೈಂದೂರು ತಾ|ಕೇಂದ್ರದ ನಗರ ವಿನ್ಯಾಸ

09:12 AM Sep 12, 2019 | sudhir |

ಬೈಂದೂರು: ಉಡುಪಿ ಜಿಲ್ಲೆಯ ಉತ್ತರದ ಗಡಿಭಾಗದ ತಾಲೂಕು ಕೇಂದ್ರವಾದ ಬೈಂದೂರು ಪ್ರಗತಿಯ ಇಂದಿನ ನೋಟ ನಗರದ ಚಿತ್ರಣವನ್ನು ಬದಲಿಸಲಿದೆ. ಹಲವು ವರ್ಷಗಳ ಪ್ರಯತ್ನಗಳಿಗೆ ದೊರೆಯುತ್ತಿರುವ ಒಂದೊಂದೇ ಯಶಸ್ಸುಗಳು ಅಭಿವೃದ್ಧಿಯ ವೇಗವನ್ನು ಹೆಚ್ಚಿಸಿವೆ. ಆದರೆ ಈ ಹಂತದಲ್ಲಿ ಮಾದರಿ ತಾಲೂಕು ರಚನೆಯ ನಿರ್ಮಾಣದಲ್ಲಿ ತೆಗೆದುಕೊಳ್ಳಬೇಕಾದ ನಿರ್ಣಯಗಳು ಮಾತ್ರ ಊರಿನ ಭವಿಷ್ಯವನ್ನು ನಿರ್ಧರಿಸಲಿವೆ. ಹೀಗಾಗಿ ಜನಪ್ರತಿನಿಧಿಗಳು, ಅಧಿಕಾರಿಗಳು ಅಭಿವೃದ್ಧಿ ಚಿಂತಕರು ಮುಂದಿನ ದಿನದ ಬದಲಾವಣೆಗಳನ್ನು ಮನಗಂಡು ಬೈಂದೂರಿನ ಬೆಳವಣಿಗೆಯ ವಿನ್ಯಾಸ ರೂಪಿಸಬೇಕಿದೆ.

Advertisement

ಹಂತ ಹಂತವಾಗಿ ಯಶಸ್ಸು

ಬೈಂದೂರು ಅಭಿವೃದ್ಧಿಯಲ್ಲಿ ನಿರಂತರವಾಗಿ ಇಲ್ಲಿನ ಜನಪ್ರತಿನಿಧಿಗಳು ಹಾಗೂ ಸರಕಾರದ ಕೊಡುಗೆಯಿದೆ. ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿಯವರ ಅವಧಿಯಲ್ಲಿ ತಾಲೂಕು ಕೇಂದ್ರದ ಕಲ್ಪನೆಯಲ್ಲಿ ಅವಶ್ಯವಿರುವ ಕಚೆೇರಿಗಳನ್ನು ರೂಪಿಸುವ ಮೂಲಕ ಉತ್ತಮ ಅಡಿಪಾಯ ದೊರಕಿದೆ. ಹಿಂದಿನ ಅವಧಿಯಲ್ಲಿ ಹಲವು ಗೊಂದಲಗಳ ಬಳಿಕ ತಾಲೂಕು ಕೇಂದ್ರ ಅಧಿಕೃತ ಘೋಷಣೆ ಮಾಡುವುದರ ಮೂಲಕ ಪೂರ್ಣತೆ ಕಾಣಲಾಯಿತು. ಬಳಿಕ ಶಾಸಕರಾಗಿ ಆಯ್ಕೆಯಾದ ಬಿ.ಎಂ. ಸುಕುಮಾರ ಶೆಟ್ಟಿ ತಾಲೂಕು ಕೇಂದ್ರದ ಮೂಲ ಸಮಸ್ಯೆಗಳಾದ ನದಿ ಜೋಡಣೆ, ಉನ್ನತ ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಜತೆಗೆ ತಾಲೂಕು ಕೇಂದ್ರ ಪ್ರಮುಖ ಆವಶ್ಯಕತೆಗಳನ್ನು ಸರಕಾರದ ಗಮನಸೆಳೆಯುವ ಪ್ರಯತ್ನ ಸಾಕಷ್ಟು ವೇಗ ದೊರಕಿಸಿಕೊಟ್ಟಿದೆ. ಈ ನಡುವೆ ಸಂಸದರಾದ ಬಿ.ವೈ. ರಾಘವೇಂದ್ರ ಬೈಂದೂರು ಕ್ಷೇತ್ರದ ಅಭಿವೃದ್ಧಿ ಬಗ್ಗೆ ತೆಗೆದುಕೊಳ್ಳುತ್ತಿರುವ ವಿಶೇಷ ಆಸಕ್ತಿ ಬಹುದಿನ ಗಳ ಕನಸುಗಳು ಸಾಕಾರಗೊಳ್ಳಲು ಕ್ಷಣಗಣನೆ ನಡೆಯುತ್ತಿದೆ.

ಟ್ರಾಫಿಕ್‌ ಸಮಸ್ಯೆ ದೂರವಾಗಬೇಕು, ಒಂದೇ ಕಡೆ ಕಚೇರಿ ದೊರೆಯಬೇಕಿದೆ

ಬೈಂದೂರು ನಗರ ಪ್ರದೇಶಗಳಲ್ಲಿ ಟ್ರಾಫಿಕ್‌ ಗೊಂದಲ ಅತ್ಯಂತ ಕಿರಿಕಿರಿಯಾಗಿದೆ. ಹಲವು ಬಾರಿ ಮನವಿ ನೀಡಿದರೂ ಯಾವ ಇಲಾಖೆಯು ಕೂಡ ಈ ಬಗ್ಗೆ ಗಮನಹರಿಸಿಲ್ಲ. ರಥಬೀದಿಯಲ್ಲಿ ವಾಹನ ದಟ್ಟಣೆಯಿಂದ ನಡೆದಾಡಲು ಸಾಧ್ಯವಾಗುತ್ತಿಲ್ಲ.ಅಂಡರ್‌ಪಾಸ್‌ ವಾಹನ ಪಾರ್ಕಿಂಗ್‌ ಆಗಿ ಮಾರ್ಪಟ್ಟಿದೆ. ಹೆದ್ದಾರಿ ಎಂಬ್ಯಾಕ್‌ವೆುಂಟ್ ನಗರ ಸೌಂದರ್ಯವನ್ನು ಕೆಡಿಸಿದೆ.

Advertisement

ಬೈಂದೂರಿನ ವಿಶೇಷತೆಯಿಂದ ಬಹುತೇಕ ಜನರು ಸುತ್ತಲಿನ ಹತ್ತಿಪ್ಪತ್ತು ಕಿ.ಮೀ. ದೂರದ ಊರುಗಳಿಂದ ಬರುತ್ತಾರೆ. ಇಲ್ಲಿನ ಟ್ರಾಫಿಕ್‌ ವ್ಯವಸ್ಥೆ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡರೆ ಮತ್ತು ಸೂಕ್ತ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಿದರೆ ಜನಜಂಗುಳಿ ನಿಯಂತ್ರಿಸಬಹುದಾಗಿದೆ. ದೂರದಿಂದ ತಾಲೂಕು ಕೇಂದ್ರಕ್ಕೆ ಬರುವ ಜನರಿಗೆ ಬಹುತೇಕ ಸೀಮಿತ ಅಂತರದಲ್ಲಿ ಕಚೇರಿ ಸೇವೆಗಳು ದೊರೆಯಬೇಕಿದೆ.

ಸರಕಾರದ ಒತ್ತಡ ಹೆಚ್ಚಿದಂತೆ ವಿವಿಧ ಇಲಾಖೆಯ ಮೇಲಧಿಕಾರಿಗಳು ಬೈಂದೂರಿನಲ್ಲಿ ಕಚೇರಿ ಸ್ಥಾಪನೆಯ ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ ಈ ಹಂತದಲ್ಲಿ ಮುಂದಿನ ಬೈಂದೂರು ಕಲ್ಪನೆಯನ್ನು ಮನಗಂಡು ಸ್ಥಳ ಮಂಜೂರು ಮಾಡಬೇಕಾಗಿದೆ. ಈಗಿರುವ ವ್ಯವಸ್ಥೆಯಲ್ಲಿ ಕ್ರೀಡಾಂಗಣ, ಪಾರ್ಕ್‌ಗಳು, ಬೈಂದೂರಿನ ಸುತ್ತಮುತ್ತ ಇಲ್ಲವಾಗಿದೆ.ವಿವಿಧ ಮೆಟ್ರಿಕ್‌ ಹಾಸ್ಟೆಲ್ಗಳು ಖಾಸಗಿ ಕಟ್ಟಡದಲ್ಲಿದೆ. ಕೃಷಿಕರು ಹೆಚ್ಚಿರುವ ಈ ಭಾಗದಲ್ಲಿ ಕೃಷಿಗೆ ಅನುಕೂಲವಾಗುವ ದೊಡ್ಡಮಟ್ಟದ ಅದ್ಯಯನ ಕೇಂದ್ರ ಬೇಕಿದೆ. ಜತೆಗೆ ಪ್ರವಾಸಿ ಸ್ಥಳಗಳ ಪ್ರಗತಿ, ಕೊಲ್ಲೂರನ್ನು ಕೇಂದ್ರೀಕರಿಸಿಕೊಂಡು ವಿವಿಧ ಧಾರ್ಮಿಕ ಸ್ಥಳಗಳ ಅಬಿವೃದ್ದಿ, ಮಲ್ಟಿ ಟೂರಿಸಂ ಯೋಜನೆ ಕಾರ್ಯರೂಪಕ್ಕೆ ಬರಬೇಕಿದೆ. ಹೀಗಾಗಿ ತಾಲೂಕು ಕೇಂದ್ರವಾದ ಪ್ರಗತಿಯಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಡವದೆ ಸೂಕ್ತ ನಗರ ವಿನ್ಯಾಸ ರೂಪಿಸುವ ಮೂಲಕ ಬೈಂದೂರಿನ ಭವಿಷ್ಯ ರೂಪಿಸಬೇಕು ಎನ್ನುವುದು ಸಾರ್ವತ್ರಿಕ ಅಭಿಪ್ರಾಯವಾಗಿದೆ.

– ಅರುಣ್ ಕುಮಾರ್ ಶಿರೂರು

Advertisement

Udayavani is now on Telegram. Click here to join our channel and stay updated with the latest news.

Next