ಹೊಸದಿಲ್ಲಿ: ಪ್ರತಿಕೂಲ ಹವಾಮಾನದಲ್ಲೂ ವಿವಿಪ್ಯಾಟ್ಗಳು ಸರಿಯಾಗಿ ಕೆಲಸ ಮಾಡುವಂತಾಗಲು ಯಂತ್ರದಲ್ಲಿ ಕೆಲವು ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಲಾಗುತ್ತಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಒ.ಪಿ.ರಾವತ್ ಹೇಳಿದ್ದಾರೆ. ಇತ್ತೀಚೆಗೆ ನಡೆದ ಕೆಲವು ಕ್ಷೇತ್ರಗಳ ಮತದಾ ನದ ವೇಳೆ ವಿವಿಪ್ಯಾಟ್ನಲ್ಲಿ ಸಮಸ್ಯೆ ಕಂಡುಬಂದಿತ್ತು. ನೇರವಾಗಿ ಸೂರ್ಯನ ಬೆಳಕು ಕಾಂಟ್ರಾಸ್ಟ್ ಸೆನ್ಸರ್ನ ಮೇಲೆ ಬೀಳುವುದರಿಂದ ಸಮಸ್ಯೆ ಉಂಟಾಗುತ್ತಿತ್ತು. ಅಲ್ಲದೆ, ಪೇಪರ್ ರೋಲ್ ತೇವಾಂಶವನ್ನು ಹೀರಿಕೊಳ್ಳು ವುದರಿಂದ ಸರಿಯಾಗಿ ತಿರುಗುತ್ತಿರಲಿಲ್ಲ. ಹೀಗಾಗಿ ಸರಳ ಬದಲಾವಣೆಗಳನ್ನು ಮಾಡಲಾಗಿದೆ. ಕಾಂಟ್ರಾಸ್ಟ್ ಸೆನ್ಸರ್ನ ಮೇಲ್ಭಾಗದಲ್ಲಿ ಒಂದು ಪಟ್ಟಿ ಅಳವಡಿಸಲಾಗಿದ್ದು, ಇದರಿಂದಾಗಿ ನೇರವಾಗಿ ಸೂರ್ಯನ ಬೆಳಕು ಬಿದ್ದರೂ ಸಮಸ್ಯೆ ಉಂಟಾಗುವುದಿಲ್ಲ. ಅಷ್ಟೇ ಅಲ್ಲ, ತೇವಾಂಶವನ್ನು ಹೀರಿಕೊಳ್ಳದಂತಹ ಕಾಗದವನ್ನೇ ಈ ಬಾರಿ ಖರೀದಿ ಮಾಡಲಾಗಿದೆ ಎಂದು ರಾವತ್ ಹೇಳಿದ್ದಾರೆ.