ಡೊಂಬಿವಲಿ: ನಾವು ಹಣೆಯ ಮಧ್ಯದಲ್ಲಿ ಅರಸಿನ ಕುಂಕುಮ ಹಚ್ಚುವುದರಿಂದ ಆ ಜಾಗದಲ್ಲಿ ಆಜ್ಞಾಚಕ್ರ ಇರುವುದರಿಂದ ನಮಗೆ ದೈವಿಕತೆಯ ಸ್ಪಂದನ ಉಂಟಾಗುವುದು ಎಂದು ನೃತ್ಯಗುರು ಸವಿತಾ ಚಂದ್ರಶೇಖರ ಸಾಲ್ಯಾನ್ ಹೇಳಿದರು.
ಜ. 17ರಂದು ಸಂಜೆ ಡೊಂಬಿವಲಿಯ ತುಳು ವೆಲ್ಫೆàರ್ ಅಸೋಸಿಯೇಶನ್ನ ಮಹಿಳಾ ವಿಭಾಗ ಡೊಂಬಿವಲಿ ಪೂರ್ವದ ಮಾನ್ಪಾಡಾ ರಸ್ತೆಯ ಮುಖ್ಯಾಲಯದಲ್ಲಿ ಮಕರ ಸಂಕ್ರಾಂತಿ ನಿಮಿತ್ತ ಆಯೋಜಿಸಿದ್ದ ಅರಸಿನ ಕುಂಕುಮ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಸವಿತಾ ಸಾಲ್ಯಾನ್ ಅವರು ಅರಸಿನ ಕುಂಕುಮ ಪರಂಪರೆಯ ಹಿನ್ನೆಲೆ ವಿವರಿಸಿ, ಹಿಂದೆ ಉತ್ತರ ಕರ್ನಾಟಕದ ಶ್ರೀಕ್ಷೇತ್ರ ಗಾಣಗಾಪುರದ ಶ್ರೀದತ್ತಾತ್ರೇಯರ ಅವತಾರ ಎಂದು ಖ್ಯಾತರಾದ ವಲ್ಲಭ ಮಹಾಸ್ವಾಮಿಗಳು ಭೀಮಾ ನದಿಯ ದಡದಲ್ಲಿ ನಾರಾಯಣಿ ಯಾಗವನ್ನು ಮಾಡಿ ಸುಮಂಗಲೆಯರಿಗೆ ಭಸ್ಮ, ಅರಸಿನ ಕುಂಕುಮ ಹಾಗೂ ಸೀರೆ ಕುಪ್ಪಸ ವನ್ನು ನೀಡಿದರಂತೆ. ಅಂದಿನಿಂದ ಸುಮಂಗ ಲೆಯರು ಪರಸ್ಪರರಲ್ಲಿ ಅರಸಿನ ಕುಂಕುಮ ಹಚ್ಚಿ ಶುಭ ಕೋರುವ ಪರಂಪರೆ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಮಹಾರಾಷ್ಟ್ರದಲ್ಲಿ ಪ್ರಾರಂಭವಾಯಿತೆಂಬ ಉಲ್ಲೇಖ ದೊರೆಯುತ್ತದೆ ಎಂದು ತಿಳಿಸಿದರು.
ಅರಸಿನ ಕುಂಕುಮ ನಮ್ಮ ಸನಾತನ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ. ಅಲ್ಲದೆ ಇದೊಂದು ದಿವ್ಯ ಔಷಧಿಯೂ ಹೌದು. ಅರಸಿನ ಕುಂಕುಮ ಪರಸ್ಪರ ಹಚ್ಚಿ ನಮಲ್ಲಿನ ಸ್ನೇಹ ಸೌಹಾರ್ದದ ಕೊಂಡಿ ಯನ್ನು ಗಟ್ಟಿಯಾಗಿಸಿ ನಮ್ಮ ಮುಂದಿನ ಪೀಳಿಗೆಗೆ ಅದನ್ನು ಪರಿಚಯಿಸೋಣ ಎಂದು ಅವರು ಶುಭ ಕೋರಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತುಳು ವೆಲ್ಫೆàರ್ ಅಸೋಸಿಯೇಶನ್ ಡೊಂಬಿವಲಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಿನೋದಾ ಡಿ. ಶೆಟ್ಟಿ ಅವರು ತುಳು ವೆಲ್ಫೆàರ್ ಅಸೋಸಿಯೇಶನ್ ಡೊಂಬಿವಲಿಯ ವಿಶೇಷವಾಗಿ ಮಹಿಳಾ ವಿಭಾಗದ ಕಾರ್ಯವೈಖರಿಯನ್ನು ಹಾಗೂ ತುಳು ವೆಲ್ಫೆàರ್ ಅಸೋಸಿಯೇಶನ್ ಡೊಂಬಿವಲಿ ಮತ್ತು ತುಳು ಶ್ರೀ ಕ್ರೆಡಿಟ್ ಸೊಸೈಟಿ ವತಿಯಿಂದ ಕೋವಿಡ್ ಸಂತ್ರಸ್ತರಿಗೆ ನೆರವು ನೀಡಿದ್ದನ್ನು ವಿವರಿಸಿ, ಮಹಿಳಾ ವಿಭಾಗದ ಸಮಸ್ತ ಚಟುವಟಿಕೆಗಳಿಗೆ ಆಡಳಿತ ಮಂಡಳಿಯ ಅಮೂಲ್ಯ ಸಹಕಾರವೇ ಕಾರಣ. ನಮ್ಮ ಸಂಪ್ರದಾಯದಲ್ಲಿ ಅರಸಿನ ಕುಂಕುಮಕ್ಕೆ ಅತ್ಯಂತ ಮಹತ್ವ ಇದ್ದು, ನಮ್ಮ ಸನಾತನ ಧರ್ಮ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮದಾಗಿದೆ ಎಂದು ಹೇಳಿ ಶುಭ ಕೋರಿದರು.
ಇದನ್ನೂ ಓದಿ:ಜನರ ಆಕ್ರೋಶಕ್ಕೆ ಮಣಿದ ‘ತಾಂಡವ್’ ತಂಡ: ವಿವಾದಿತ ದೃಶ್ಯಕ್ಕೆ ಕತ್ತರಿ ಪ್ರಯೋಗ
ಇದೇ ಸಂದರ್ಭದಲ್ಲಿ ಅತಿಥಿ ನೃತ್ಯಗುರು ಸವಿತಾ ಚಂದ್ರಶೇಖರ ಸಲ್ಯಾನ್ ಅವರನ್ನು ಸಂಸ್ಥೆಯ ವತಿಯಿಂದ ಶಾಲು ಹೊದೆಸಿ, ಫಲವಸ್ತು ಹಾಗೂ ಸ್ಮರಣಿಕೆ ನೀಡಿ ಸಮ್ಮಾನಿಸಲಾಯಿತು. ಅಸೋಸಿಯೇಶ ನ್ನ ಗೌರವ ಅಧ್ಯಕ್ಷ ಲಕ್ಷ್ಮಣ್ ಸುವರ್ಣ ಹಾಗೂ ಗಣ್ಯರು ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ತಾಯಿ ಶ್ರೀ ವರಮಹಾಲಕ್ಷ್ಮೀಯ ವಿಶೇಷ ಪೋಜೆಯನ್ನು ಅರ್ಚಕ ಗಂಗಾಧರ ಶೆಟ್ಟಿಗಾರ್ ವಿದ್ಯುಕ್ತವಾಗಿ ನಡೆಸಿಕೂಟ್ಟರು. ಶ್ರೀಲಕ್ಷ್ಮೀ ಭಜನ ಮಂಡಳದ ಸದಸ್ಯರು ದೇವರ ನಾಮಾಮೃತವನ್ನು ಭಜನೆಗಳ ಮೂಲಕ ಪ್ರಸ್ತುತಪಡಿಸಿದರು.
ಮಹಿಳೆಯರು ಪರಸ್ಪರ ಅರಸಿನ ಕುಂಕುಮ ಹಚ್ಚಿಕೊಂಡು ಶುಭಾಶಯಗಳ ವಿನಿಮಯ ಮಾಡಿಕೊಂಡರು. ಶ್ರೀ ವರಮಹಾಲಕ್ಷ್ಮೀಯ ಮಹಾ ಮಂಗಳಾರತಿಯ ಬಳಿಕ ಮಹಾಪ್ರಸಾದ ವಿತರಿಸಲಾಯಿತು.
ಗಣ್ಯರಾದ ವಿನೋದಾ ಡಿ. ಶೆಟ್ಟಿ, ಸವಿತಾ ಚಂದ್ರಶೇಖರ್ ಸಾಲ್ಯಾನ್, ಲಕ್ಷ್ಮಣ್ ಸಾಲ್ಯಾನ್, ಲಕ್ಷ್ಮಣ್ ಮೂಲ್ಯ, ಪ್ರಕಾಶ್ ಅಮೀನ್ ಮತ್ತಿತರರು ಉಪಸ್ತಿತರಿದ್ದರು.ಸಂಸ್ಥೆಯ ಹಿರಿಯ ಸದಸ್ಯರಾದ ದೇವದಾಸ್ ಕುಲಾಲ್, ವಸಂತ ಸುವರ್ಣ, ಚಂದ್ರಾನಾಯಕ್ ಮೊದಲಾದವರು ಉಪಸ್ಥಿತರಿದ್ದರು. ವಿನೋದಾ ಪಿ. ಪುತ್ರನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ರೇಖಾ ಮೂಲ್ಯ ಗಣ್ಯರನ್ನು ಪರಿಚಯಿಸಿದರು.
ಚಿತ್ರ-ವರದಿ: ಗುರುರಾಜ್ ಪೋತನೀಸ್