Advertisement

ಇಂದು ಚಾಂದ್ರಮಾನ ಯುಗಾದಿ; ದೇವಸ್ಥಾನಗಳಲ್ಲಿ ವಿಶೇಷ ಪೂಜೆ

02:44 AM Apr 13, 2021 | Team Udayavani |

ಮಹಾನಗರ: ಹಿಂದೂಗಳ ಹೊಸ ವರ್ಷವೆಂದೇ ಆಚರಿಸಲ್ಪಡುವ ಯುಗಾದಿ ಹಬ್ಬ ಮತ್ತೆ ಬಂದಿದ್ದು ಮಂಗಳವಾರ ಆಚರಿಸಲು ಎಲ್ಲೆಡೆ ಸರ್ವ ಸಿದ್ಧತೆ ನಡೆಸಲಾಗಿದೆ. ಮಂಗಳವಾರ ಚಾಂದ್ರಮಾನ ಯುಗಾದಿ ಹಾಗೂ ಬುಧವಾರ ಸೌರಮಾನ ಯುಗಾದಿ ಆಚರಣೆಗೆಂದು ನಗರದ ವಿವಿಧ ದೇವಾಲಯಗಳಲ್ಲಿ ಪೂಜಾ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

Advertisement

ಸದ್ಯ ಕೊರೊನಾ ಎರಡನೇ ಅಲೆಯ ಆತಂಕ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸೀಮಿತ ಭಕ್ತರ ಉಪಸ್ಥಿತಿಯಲ್ಲಿ, ಕೊರೊನಾ ಮುನ್ನೆಚ್ಚರಿಕೆ ವಹಿಸಿಕೊಂಡು ಹಬ್ಬ ಆಚರಣೆಗೆ ನಿರ್ಧರಿಸಲಾಗಿದೆ. ಭಕ್ತರು ಮಾಸ್ಕ್ ಧರಿಸಿಕೊಂಡು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮವನ್ನು ಪಾಲಿಸುವ ನಿಟ್ಟಿನಲ್ಲಿ ವಿವಿಧ ದೇವಸ್ಥಾನದಲ್ಲಿ ಸೂಚನೆ ನೀಡಲಾಗಿದೆ.

ಖರೀದಿ ಸಂಭ್ರಮ
ಎರಡು ಯುಗಾದಿ ಹಬ್ಬಗಳನ್ನು ಒಂದು ದಿನದ ಅಂತರದಲ್ಲಿ ಎ. 13 (ಚಾಂದ್ರಮಾನ ಯುಗಾದಿ) ಮತ್ತು 14 ರಂದು (ಸೌರಮಾನ ಯುಗಾದಿ) ಆಚರಿಸಲು ಸಿದ್ಧತೆಗಳು ನಡೆದಿದ್ದು, ಮಂಗಳೂರಿನ ಮಾರುಕಟ್ಟೆಯಲ್ಲಿ ಹಬ್ಬ ಆಚರಣೆಗೆ ಬೇಕಾದ ವಸ್ತುಗಳ ಮಾರಾಟ ಮತ್ತು ಖರೀದಿ ಭರದಿಂದ ಸಾಗಿದೆ.

ಯುಗಾದಿ ಆಚರಣೆಯ ಪ್ರಮುಖ ಆಕರ್ಷಣೆಗಳಾದ ಎಳ್ಳು, ಬೆಲ್ಲ, ಹೂವು ಮಾತ್ರವಲ್ಲದೆ ಅತ್ಯಾವಶ್ಯಕ ಸ್ಥಳೀಯ ತರಕಾರಿಗಳಾದ ತೊಂಡೆಕಾಯಿ, ಅಲಸಂಡೆ, ದೀವಿಗುಜ್ಜೆ, ಹಸಿ ಗೇರು ಬೀಜ ಮಾರುಕಟ್ಟೆಗೆ ಧಾರಾಳವಾಗಿ ಆವಕವಾಗಿವೆ. ದೀವಿಗುಜ್ಜೆ ಬೆಲೆ 80 – 100 ರೂ., ಸ್ಥಳೀಯ ತೊಂಡೆಕಾಯಿ ದರ 80 ರೂ., ಸ್ಥಳೀಯ ಅಲಸಂಡೆ 80 ರೂ. ಹಾಗೂ ಹಸಿ ಗೇರು ಬೀಜ (100ಕ್ಕೆ) ಬೆಲೆ 300 ರೂ. ಇದೆ.

ಮೂಡುಬಿದಿರೆ ತಾ|ನಲ್ಲಿ ಸಿದ್ಧತೆ
ಮೂಡುಬಿದಿರೆ: ಮಂಗಳವಾರ ಒದಗಿ ಬಂದಿರುವ ಚಾಂದ್ರಮಾನ ಯುಗಾದಿ ಹಾಗೂ ಬುಧವಾರ ನಡೆಯಲಿರುವ ಸೌರಮಾನ ಯುಗಾದಿಗೆ ಮೂಡುಬಿದಿರೆ ತಾಲೂಕಿನಾದ್ಯಂತ ಆರಾಧನ ಕೇಂದ್ರಗಳು, ಮನೆತನಗಳು ಹಾಗೂ ವೈಯಕ್ತಿಕ ಮನೆಗಳಲ್ಲಿ ಸಿದ್ಧತೆ ನಡೆದಿದೆ. ಮೂಡುಬಿದಿರೆ ಶ್ರೀಗುರುಮಠ ಕಾಳಿ ಕಾಂಬಾ ದೇವಸ್ಥಾನ, ಮೂಡು ವೇಣುಪುರ ಶ್ರೀ ವೆಂಕಟರಮಣ ದೇವಸ್ಥಾನ, ಪೊನ್ನೆಚಾರಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ, ಪುತ್ತಿಗೆ ಸೋಮನಾಥೇಶ್ವರ ದೇವಸ್ಥಾನ ಸಹಿತ ವಿವಿಧ ದೇವಸ್ಥಾನಗಳಲ್ಲಿ ಮಂಗಳವಾರ ಚಾಂದ್ರಮಾನ ಯುಗಾದಿಯನ್ನು, ಅಲಂಗಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬುಧವಾರ ಸೌರಮಾನ ಯುಗಾದಿಯನ್ನು ವಿಶೇಷ ಆರಾಧನೆ, ಬೇವುಬೆಲ್ಲ ವಿತರಣೆ, ಪಂಚಾಂಗ ಶ್ರವಣ ಸಹಿತ ಆಚರಿಸಲಾಗುವುದು.

Advertisement

108 ದಿವ್ಯಸಾಗರ ಮುನಿಮಹಾರಾಜರ ಉಪಸ್ಥಿತಿಯಲ್ಲಿ ಮೂಡುಬಿದಿರೆಯ ಜೈನಮಠ, ಬಸದಿಗಳಲ್ಲಿ , ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಯುಗಾದಿ ಹಬ್ಟಾಚರಣೆಯಂಗವಾಗಿ ಮಂಗಳವಾರ ವಿಶೇಷ ಪೂಜೆ,ಅಭಿಷೇಕ, ಸಾವಿರ ಕಂಬದ ಬಸದಿಯಲ್ಲಿ ಪಟ್ಟದ ಪುರೋಹಿತರಿಂದ ಪಂಚಾಂಗ ಶ್ರವಣ, ಅಸಿ, ಮಸಿ, ವಾಣಿಜ್ಯ, ಕೃಷಿ, ವಿದ್ಯೆ, ಶಿಲ್ಪಕಲೆ ಈ ಆರು ಕ್ರಿಯೆಗಳ ಮೂಲಕ ನಡೆಯುವ ಜೀವನಯಾಪನ ಕ್ರಮವನ್ನು ಬೋಧಿಸಿದ ಭ| ಆದಿನಾಥ ಸ್ವಾಮಿಯ ಚರಣಪೂಜೆ ನಡೆಯಲಿದ್ದು ಭಟ್ಟಾರಕ ಸ್ವಾಮೀಜಿಯವರು ಆಶೀರ್ವಚನ ನೀಡಲಿರುವರು. ಉಳ್ಳಾಲ ವ್ಯಾಪ್ತಿಯಲ್ಲಿ ಯುಗಾದಿ ಪ್ರಯುಕ್ತ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಜರಗಲಿವೆ.

ಮೂಲ್ಕಿ: ವಿಶೇಷ ಪೂಜೆ
ಮೂಲ್ಕಿ: ಯುಗಾದಿ ಮತ್ತು ವಿಷು ಆಚರಣೆಯ ಅಂಗವಾಗಿ ಮೂಲ್ಕಿ ತಾಲೂಕಿನ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಜರಗಲಿದೆ. ಚಾಂದ್ರಮಾನ ಯುಗಾದಿಯ ಪ್ರಯುಕ್ತ ಮೂಲ್ಕಿ ಶ್ರೀ ವೆಂಕಟರಣ ದೇವಸ್ಥಾನದಲ್ಲಿ ವಿಶೇಷ ಪೂಜೆ, ನೂತನ ಪಂಚಾಂಗ ವಾಚನ, ರಾತ್ರಿ ಉತ್ಸವ ಜರಗಲಿದೆ. ಸೌರಮಾನ ಯುಗಾದಿ(ವಿಷು) ಆಚರಣೆ ಪ್ರಯುಕ್ತ ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ದೇವಿಗೆ ವಿಶೇಷ ಹೂವಿನ ಅಲಂಕಾರ ನಡೆಯಲಿದೆ. ಮಾಗಣೆಯ ಬೈಲ ಉಡುಪರು ದೇಗುಲದ ಹೊರಗಿನಕಟ್ಟೆಯಲ್ಲಿ ಕುಳಿತು ನೂತನ ಪಂಚಾಂಗವನ್ನು ವಾಚಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next