Advertisement

ಅಭಿವೃದ್ಧಿ ಭಾರಕ್ಕೆ ಕುಸಿಯುತ್ತಿದೆ ಚಾಮುಂಡಿ ಬೆಟ್ಟ

03:00 PM Jul 13, 2023 | Team Udayavani |

ಮೈಸೂರು: ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರ ಹಾಗೂ ಪರಿಸರ ಕೇಂದ್ರವೂ ಆಗಿರುವ ಚಾಮುಂಡಿ ಬೆಟ್ಟಕ್ಕೆ ವಿವಿಧ ಅಭಿವೃದ್ಧಿ ಯೋಜನೆ ಹಾಗೂ ಏರುತ್ತಿರುವ ಜನಸಂಖ್ಯೆ ಮಾರಕವಾಗಿ ಪರಿಣಮಿಸಿದೆ.

Advertisement

ಮೈಸೂರಿನ ಅಸ್ಮಿತೆ ಚಾಮುಂಡಿಬೆಟ್ಟ ನಿಸರ್ಗ ಸೊಬಗಿನ ತಾಣವಾಗಿರುವ ಜತೆಗೆ ನಾಡಿನ ಅದಿ ದೇವತೆ ಚಾಮುಂಡೇಶ್ವರಿ ದೇವಿ ಇರುವ ಧಾರ್ಮಿಕ ಸ್ಥಳವಾಗಿದೆ. ಲಕ್ಷಾಂತರ ಮಂದಿ ಪ್ರವಾಸಿಗರನ್ನು ಆಕರ್ಷಿಸುವ ಹಾಗೂ ಪ್ರಕೃತಿಕ ಸೌಂದರ್ಯವನ್ನು ಹೊದ್ದು ನಿಂತಿರುವ ಚಾಮುಂಡಿಬೆಟ್ಟಕ್ಕೆ ಅಭಿವೃದ್ಧಿ ಹೆಸರಲ್ಲಿ ನಡೆದಿರುವ ಕಟ್ಟಡಗಳ ನಿರ್ಮಾಣ, ವ್ಯಾಪಾರ ವಹಿವಾಟು ಸಂಚಕಾರ ತಂದಿದೆ.

ಮೂಲಭೂತ ಸೌಲಭ್ಯಗಳಿಂದ ಬೆಟ್ಟಕ್ಕೆ ಧಕ್ಕೆ: ಕೇಂದ್ರ ಸರ್ಕಾರದ ಪ್ರಸಾದ್‌ ಯೋಜನೆ ಮೂಲಕ ಬೆಟ್ಟ ದಲ್ಲಿ ವಾಹನ ಪಾರ್ಕಿಂಗ್‌ ಕಟ್ಟಡ, ಹೊಸ ಶೌಚಾಗೃಹ, ವಾಕಿಂಗ್‌ ಪಾತ್‌, ವ್ಯಾಪಾರ ಮಳಿಗೆಗಳ ಕಟ್ಟಡ ನಿರ್ಮಾಣ ಒಂದೆಡೆಯಾ ದರೆ ಬೆಟ್ಟದಲ್ಲಿ ವಾಸಿಸುವವರ 450ಕ್ಕೂ ಹೆಚ್ಚು ಮನೆಗಳು, ವಾಣಿಜ್ಯ ಕಟ್ಟಡಗಳು ಮತ್ತು ಮೂಲಭೂತ ಸೌಲಭ್ಯಗಳು ಬೆಟ್ಟಕ್ಕೆ ಧಕ್ಕೆ ತಂದಿದೆ.

ಅಧಿಕಾರಿಗಳ ನಿರ್ಲಕ್ಷ್ಯ: ಆರಂಭದಲ್ಲಿ ಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲು ಮಾರ್ಗ ಮಾಡಿದ ಕೆಲಸಗಾರರಿಗೆ ಬೆಟ್ಟದಲ್ಲಿ ಉಳಿ ಯಲು ಅಂದಿನ ಮಹಾರಾಜರು ಅವಕಾಶ ಕಲ್ಪಿಸಿದ್ದರು. ಗ್ರಾಮ ಪಂಚಾಯಿತಿ, ಅರಣ್ಯ ಇಲಾಖೆ ಹಾಗೂ ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ 30 ವರ್ಷಗಳ ಹಿಂದೆ ಹತ್ತಿಪ್ಪತ್ತು ಮನೆಗಳಿಗೆ ಸೀಮಿತವಾಗಿದ್ದ ಬೆಟ್ಟದಲ್ಲೀಗ 450 ಮನೆಗಳು ನಿರ್ಮಾಣವಾಗಿವೆ. ಹೊರಗಿನವರು ಬೆಟ್ಟಕ್ಕೆ ವಲಸೆ ಬರುವುದು, ಕುಟುಂಬ ವಿಭಜನೆಯಿಂದ ಮನೆಕಟ್ಟುವವರ ಸಂಖ್ಯೆ ಹೆಚ್ಚಾಗಿದ್ದು, ಅಧಿಕಾರಿಗಳು ಮನೆ ನಿರ್ಮಿಸಲು ಅನುಮತಿ ನೀಡಿರುವುದು ಇಷ್ಟೆಲ್ಲ ಅವಾಂತರಕ್ಕೆ ಕಾರಣ ಎಂಬುದು ಪರಿಸರವಾದಿಗಳ ಆರೋಪ.

ಖಾಸಗಿ ವಾಹನಗಳಿಗೆ ಬೇಕಿದೆ ಕಡಿವಾಣ: ಬೆಟ್ಟಕ್ಕೆ ನಿತ್ಯ ನೂರಾರು ಪ್ರವಾಸಿಗರು ಖಾಸಗಿ ವಾಹನಗಳ ಮೂಲಕ ಆಗಮಿಸುತ್ತಿದ್ದು, ಇದು ಮತ್ತಷ್ಟು ಒತ್ತಡ ಹೆಚ್ಚಿಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಚಾಮುಂಡಿ ಬೆಟ್ಟದ ನಂದಿ ಮಾರ್ಗದ ರಸ್ತೆ ನಾಲ್ಕು ಬಾರಿ ಕುಸಿದಿದೆ. ಮುಂದೆ ಈ ರೀತಿಯ ದುರ್ಘ‌ಟನೆ ನಡೆಯದಂತೆ, ಗುಂಡ್ಲುಪೇಟೆ ತಾಲೂಕಿನ ಗೋಪಾಲಸ್ವಾಮಿ ಬೆಟ್ಟ ಮಾದರಿಯಲ್ಲಿ ಚಾಮುಂಡಿ ಬೆಟ್ಟಕ್ಕೆ ಖಾಸಗಿ ವಾಹನಗಳನ್ನು ಹೋಗದಂತೆ ತಡೆದು ಸಾರಿಗೆ ಬಸ್‌ನಲ್ಲಿ ಪ್ರವಾಸಿಗರು ಹೋಗುವಂತೆ ಮಾಡಬೇಕಿದೆ.

Advertisement

ಕಾಡಿಗೆ ಕೊಳಚೆ ನೀರು: ಬೆಟ್ಟದಲ್ಲಿರುವ ಸಾರ್ವಜನಿಕ ಶೌಚಗೃಹ ಹಾಗೂ ಯುಜಿಡಿ ಮತ್ತು ಚರಂಡಿಯ ಕೊಳಚೆ ನೀರನ್ನು ಸಂಸ್ಕರಿಸದೇ ನೇರವಾಗಿ ಕಾಡಿಗೆ ಬಿಡಲಾಗುತ್ತಿದೆ. ಪರಿಣಾಮ ಪರಿಸರ ಸೂಕ್ಷ್ಮವಲಯವಾಗಿರುವ ಬೆಟ್ಟದ ಪರಿಸರ ನಿಧಾನವಾಗಿ ಅಶುಚಿತ್ವದ ತಾಣ ವಾಗಿ ಮಾರ್ಪಡುತ್ತಿದೆ. ಜತೆಗೆ ಬಹುಪಾಲು ಮನೆಗಳಲ್ಲಿ ಫಿಟ್‌ಗುಂಡಿ ತೆಗೆದು ಶೌಚಾಗೃಹ ನಿರ್ಮಾಣ ಮಾಡಿರುವುದು ಬೆಟ್ಟ ಕುಸಿಯಲು ಪೂರಕ ವಾತಾವರಣ ನಿರ್ಮಾಣ ಮಾಡಿದಂತಾಗಿದ್ದು, ಪರಿಸರ ಪ್ರೇಮಿಗಳಲ್ಲಿ ಆತಂಕ ಮೂಡಿಸಿದೆ. ಚಾಮುಂಡಿ ಬೆಟ್ಟದಲ್ಲಿರುವ ಜೀವ ವೈವಿಧ್ಯಗಳಿಗೂ ಈ ಯೋಜನೆ ಮಾರಕವಾಗಿದೆ. ಬೆಟ್ಟದಲ್ಲಿ ಪ್ಲಾಸ್ಟಿಕ್‌ ನಿಷೇಧವಿದ್ದರೂ ಸಹ ಪ್ಲಾಸ್ಟಿಕ್‌ ಬಳಸುತ್ತಿದ್ದು, ಪರಿಸರವನ್ನು ಕಲುಷಿತಗೊಳಿಸುತ್ತಿದೆ.

ಯಾವುದೂ ವೈಜ್ಞಾನಿಕವಾಗಿ ಇಲ್ಲ : ಚಾಮುಂಡಿ ಬೆಟ್ಟಕ್ಕೆ ನೀರಿನ ಮೂಲವೆಂದರೆ ವಾಣಿವಿಲಾಸ ನೀರು ಸರಬರಾಜು ಕೇಂದ್ರದಿಂದ ಮಹಾರಾಜ ಕಾಲದಲ್ಲೇ ಪೈಪ್‌ಲೈನ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದ್ದು ಈಗಲೂ ಅದೇ ವ್ಯವಸ್ಥೆ ಜಾರಿಯಲ್ಲಿದೆ. ಪ್ರಸ್ತುತ ಚಾಮುಂಡಿ ಬೆಟ್ಟದಲ್ಲಿ 2,440 ಜನರು ವಾಸಿಸುತ್ತಿದ್ದು ಅನಧಿಕೃತವಾಗಿ ವಾಸ ಮಾಡುವವರನ್ನು ಶೀಘ್ರ ಜಿಲ್ಲಾಡಳಿತ ಅಲ್ಲಿಂದ ಎತ್ತಂಗಡಿ ಮಾಡಿಸಬೇಕು ಹಾಗೂ ಹೊಸಬರು ಬೆಟ್ಟದಲ್ಲಿ ಅನಧಿಕೃತವಾಗಿ ವಾಸ ಮಾಡದಂತೆ ನಿಗಾವಹಿಸಬೇಕಾಗಿದೆ. ಪ್ರವಾಸಿಗರು ಉಳಿದುಕೊಳ್ಳಲು ವಸತಿ ನಿಲಯ ಹಾಗೂ ಬೆಟ್ಟದಲ್ಲಿರುವ ಹೋಟೆಲ್‌ ಅವುಗಳಿಂದಲೂ ಸಹ ಬೆಟ್ಟಕ್ಕೆ ಒತ್ತಡ ಹೆಚ್ಚಿದೆ. ಒಟ್ಟಾರೆ ಬೆಟ್ಟದ ಮೇಲೆ ಯಾವ ವ್ಯವಸ್ಥೆಯೂ ವೈಜ್ಞಾನಿಕವಾಗಿ ಇಲ್ಲ ಎನ್ನುವುದು ಪರಿಸರ ಪ್ರೇಮಿಗಳ ವಾದ.

2 ಸಾವಿರಕ್ಕೂ ಹೆಚ್ಚು ಜನಸಂಖ್ಯೆ : ಪರಿಸರ ಸೂಕ್ಷ್ಮ ವಲಯವೂ ಆದ ಚಾಮುಂಡಿಬೆಟ್ಟದಲ್ಲಿ ಮಿತಿಮೀರಿದ ಜನಸಂಖ್ಯೆಯೂ ಅಪಾಯ ತಂದೊಡ್ಡುತ್ತಿದೆ. ಇಪ್ಪತ್ತು ವರ್ಷಗಳ ಹಿಂದೆ ನೂರು ಮನೆಗಳಿಗೆ ಸೀಮಿತವಾಗಿದ್ದ ಬೆಟ್ಟದಲ್ಲೀಗ ಬರೋಬ್ಬರಿ 450ಕ್ಕೂ ಹೆಚ್ಚು ಮನೆಗಳು ನಿರ್ಮಾಣವಾಗಿದ್ದು, 386 ಕುಟುಂಬಗಳು ವಾಸ ಮಾಡು ತ್ತಿವೆ. ಒಟ್ಟಾರೆ 2440 ಜನಸಂಖ್ಯೆ ಇರುವ ಬೆಟ್ಟದಲ್ಲಿ ಚರಂಡಿ, ಕುಡಿಯುವ ನೀರು, ಯುಜಿಡಿ ಸೌಲಭ್ಯ ಒದಗಿಸಲು ಬೆಟ್ಟವನ್ನು ನಿರಂತರವಾಗಿ ಅಗೆಯುವಂತಾಗಿದೆ.

ಅವೈಜ್ಞಾನಿಕ ಕಾಮಗಾರಿ ನಿಲ್ಲಲಿ : ಬೆಟ್ಟದಲ್ಲಿ ಪ್ರತಿವರ್ಷ ಒಂದಿಲ್ಲೊಂದು ಅಭಿ ವೃದ್ಧಿ ಕಾಮಗಾರಿ ಹಾಗೂ ಮೂಲಭೂತ ಸೌಲಭ್ಯಗಳ ಪೂರೈಕೆ ಬೆಟ್ಟಕ್ಕೆ ಸಂಚಕಾರವಾಗಿದೆ. ಚಾಮುಂಡಿ ಬೆಟ್ಟ ಧಾರ್ಮಿಕ ಮತ್ತು ಪ್ರವಾಸಿ ಕೇಂದ್ರವಾಗಿರುವುದರ ಜತೆಗೆ ಪರಿಸರ ಸೂಕ್ಷ್ಮ ವಯಲವೂ ಆಗಿದೆ. ಈ ಹಿನ್ನೆಲೆ ಇಲ್ಲಿ ಯಾವುದೇ ಯೋಜನೆ ಆರಂಭಿಸುವುದಕ್ಕೂ ಮುನ್ನ ಎಲ್ಲಾ ಆಯಾಮಗಳನ್ನು ಪರಿಶೀಲಿಸಿ ತೀರ ಅಗತ್ಯವಿರುವ ಕಾಮಗಾರಿಗಳನ್ನು ವೈಜ್ಞಾನಿಕವಾಗಿ ಮಾಡಲು ಅಧಿಕಾರಿಗಳು ಚಿಂತನೆ ನಡೆಸಬೇಕಿದೆ.

ಬೆಟ್ಟಕ್ಕೆ ಪ್ರಾಧಿಕಾರ ಮಾರಕ ಆಗದಿರಲಿ :

ಮೈಸೂರು: ರಾಜ್ಯ ಸರ್ಕಾರ ಇತ್ತೀಚೆಗೆ ಮಂಡಿಸಿದ ಬಜೆಟ್‌ನಲ್ಲಿ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವ ಬಗ್ಗೆ ಘೋಷಣೆ ಮಾಡಿದ್ದು, ಇದು ಚಾಮುಂಡಿ ಬೆಟ್ಟದ ಪರಿಸರಕ್ಕೆ ಮಾರಕವಾಗದಿರಲಿ ಎಂಬುದು ಪರಿಸರವಾದಿಗಳ ಒತ್ತಾಸೆಯಾಗಿದೆ.

ಬೆಟ್ಟದಲ್ಲಿ ಈಗಾಗಲೇ ಮೂಲ ಸೌಕರ್ಯ ಸೇರಿದಂತೆ ವಾಹನಿಗಳಿಗೆ ಮಲ್ಟಿಲೆವೆಲ್‌ ಪಾರ್ಕಿಂಗ್‌, ಬಸ್‌ ನಿಲ್ದಾಣ, ವಾಣಿಜ್ಯ ಸಂಕೀರ್ಣ ಸ್ಥಾಪನೆ ಮಾಡಲಾಗಿದೆ. ಸರ್ಕಾರ ಹೊಸದಾಗಿ ಪ್ರಾಧಿ ಕಾರ ರಚನೆ ಮಾಡಿರುವುದರಿಂದ ಬೆಟ್ಟದಲ್ಲಿ ಮತ್ತಷ್ಟು ಹೊಸ ಅಭಿವೃದ್ಧಿ ಕಾರ್ಯಗಳು ಮತ್ತು ಯೋಜನೆಗಳು ನಡೆಯುವ ಸಾಧ್ಯತೆಗಳಿವೆ. ಇದರಿಂದ ಚಾಮುಂಡಿ ಬೆಟ್ಟದ ಪರಿಸರಕ್ಕೆ ಮಾರಕವಾಗುವ ಅಪಾಯಗಳಿವೆ. ಈ ಹಿನ್ನೆಲೆ ಬೆಟ್ಟದಲ್ಲಿ ಅಲ್ಲಿನ ಪರಿಸರಕ್ಕೆ ಯಾವುದೇ ಧಕ್ಕೆ ಯಾಗದಂತೆ ಯೋಜನೆಗಳನ್ನು ರೂಪಿಸುವ ಬಗ್ಗೆ ಮಿತಿ ಹೇರಿಕೊಳ್ಳುವ ಅಗತ್ಯವಿದೆ.

ಸದ್ಯಕ್ಕೆ ಬೆಟ್ಟದಲ್ಲಿ 450 ಮನೆಗಳಿದ್ದು 2440 ಜನಸಂಖ್ಯೆಯಿದೆ. ಹೊಸ ಮನೆಗಳ ನಿರ್ಮಾಣಕ್ಕೆ ಅನುಮತಿ ನೀಡದಂತೆ 2018ರಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಒಂದು ವೇಳೆ ಅನಧಿಕೃತವಾಗಿ ಮನೆ ನಿರ್ಮಾಣ ಮಾಡಿದ್ದರೆ ಕಾನೂನು ಕ್ರಮ ಜರುಗಿಸಲಾಗುವುದು. ●ರೂಪೇಶ್‌, ಪಿಡಿಒ ಚಾಮುಂಡಿಬೆಟ್ಟ ಗ್ರಾಪಂ

ಧಾರ್ಮಿಕ ಸ್ಥಳದ ಜತೆಗೆ ಪರಿಸರ ಸೂಕ್ಷ್ಮ ತಾಣವಾಗಿರುವ ಚಾಮುಂಡಿ ಬೆಟ್ಟದ ಮೇಲೆ ನಾಯಿಕೊಡೆಗಳಂತೆ ಕಟ್ಟಡಗಳು ಬೆಳೆಯುತ್ತಿವೆ. ಯಾವುದೇ ಕಾಮಗಾರಿ ನಡೆಯದಂತೆ ನೋಡಿಕೊಳ್ಳ ಬೇಕು. ಬೆಟ್ಟದಲ್ಲಿ ಅನಧಿಕೃತವಾಗಿ ವಾಸಿಸುವವರನ್ನು ತೆರವುಗೊಳಿಸಬೇಕಿದೆ. ●ಬಿ.ಎಲ್‌.ಭೈರಪ್ಪ, ಮಾಜಿ ಮೇಯರ್‌, ಮೈಸೂರು ನಗರಪಾಲಿಕೆ

ಪ್ರಕೃತಿಯ ಸೌಂದರ್ಯವನ್ನಾಗಲಿ, ಪ್ರಾಮುಖ್ಯತೆಯನ್ನಾಗಲಿ ಅರಿಯಲು ಸೋತಾಗ ಬೆಟ್ಟಗಳು ಕರಗುತ್ತವೆ. ಕಾಡುಗಳು ಕಣ್ಮರೆಯಾಗುತ್ತವೆ. ನದಿಗಳು ಸೊರಗುತ್ತವೆ. ಬಹುಶಃ ಇವುಗಳನ್ನು ಉಳಿಸಿಕೊಳ್ಳಲು ಸಮಾಜಕ್ಕೆ ಬೇರೆಯ ಅರ್ಹತೆಯೇ ಬೇಕಿರಬಹುದು. ● ಕೃಪಾಕರ ಸೇನಾನಿ, ವನ್ಯಜೀವಿ ತಜ್ಞರು

-ಸತೀಶ್‌ ದೇಪುರ

Advertisement

Udayavani is now on Telegram. Click here to join our channel and stay updated with the latest news.

Next