Advertisement

ಚಾಮುಲ್‌ ನೇಮಕಾತಿ ಪರೀಕ್ಷೆಯಲ್ಲಿ ಅವ್ಯವಹಾರ

09:53 PM Dec 21, 2019 | Lakshmi GovindaRaj |

ಚಾಮರಾಜನಗರ: ಚಾಮರಾಜ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ (ಚಾಮುಲ್‌)ದಲ್ಲಿ ಖಾಲಿಯಿದ್ದ 72 ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆದಿದೆ. ಚಾಮುಲ್‌ ಅಧ್ಯಕ್ಷರ ಮೊಮ್ಮಗನಿಗೆ, ಕಾಂಗ್ರೆಸ್‌ ಪಕ್ಷದ ಮುಖಂಡರ ಮಕ್ಕಳಿಗೆ ಹುದ್ದೆ ನೀಡಲಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಈ ನೇಮಕಾತಿಗಳನ್ನು ರದ್ದು ಮಾಡಿ, ಪ್ರಕರಣದ ತನಿಖೆ ನಡೆಸಬೇಕು ಎಂದು ನಾಗರಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ವೆಂಕಟರಮಣ ಸ್ವಾಮಿ (ಪಾಪು) ಆಗ್ರಹಿಸಿದರು.

Advertisement

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಾಮುಲ್‌ನಲ್ಲಿ ಖಾಲಿ ಇರುವ ವಿವಿಧ ವೃಂದಗಳ ಒಟ್ಟು 72 ಹುದ್ದೆಗಳಿಗೆ ನೇರ ನೇಮಕಾತಿ ಇತ್ತು. ಆನ್‌ಲೈನ್‌ ಮೂಲಕ ಅರ್ಹ ಅಭ್ಯರ್ಥಿಗಳ ಆಯ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಸಹಾಯಕ ವ್ಯವಸ್ಥಾಪಕ, ತಾಂತ್ರಿಕ ಅಧಿಕಾರಿ, ಉಗ್ರಾಣಾಧಿಕಾರಿ, ಕೃಷಿ ಅಧಿಕಾರಿ, ಆಡಳಿತಾಧಿಕಾರಿ ಮತ್ತಿತರ ಹುದ್ದೆಗಳಿಗೆ ಸುಮಾರು 5 ಸಾವಿರ ಮಂದಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಇವರಿಗೆ ಕಳೆದ ಆಗಸ್ಟ್‌ನಲ್ಲಿ ಪರೀಕ್ಷೆ ನಡೆಸಲಾಗಿತ್ತು. ಆದರೆ, ಈ ಪರೀಕ್ಷಾ ವಿಧಾನದಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು.

ನೇರವಾಗಿ ಪರೀಕ್ಷೆ ನಡೆದಿದೆ: ಪರೀಕ್ಷೆ ನಡೆಸುವ ಏಜೆನ್ಸಿಯನ್ನು ಆಯ್ಕೆ ಮಾಡುಕೊಳ್ಳುವಲ್ಲಿ ಪಾರದರ್ಶಕತೆ ಕಾಯ್ದುಕೊಂಡಿಲ್ಲ. ತಮಗೆ ಅನುಕೂಲವಾಗುವ ವಿಶ್ವವಿದ್ಯಾಲಯಕ್ಕೆ ಪರೀಕ್ಷೆ ನಡೆಸುವ ಅಧಿಕಾರ ನೀಡಿದ್ದಾರೆ. ತಮಗೆ ಇಷ್ಟಬಂದವರನ್ನು ಆಯ್ಕೆ ಮಾಡಿಕೊಳ್ಳಲು ಸಹಕರಿಸುವ ವಿವಿಯನ್ನು ಆಯ್ಕೆ ಮಾಡಲಾಗಿದೆ. ರಾಜ್ಯ ಸರ್ಕಾರದ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕಾಗಲೀ, ಕೆಪಿಎಸ್‌ಸಿ ಗಾಗಲೀ ಪರೀಕ್ಷೆ ನಡೆಸುವ ಅಧಿಕಾರ ನೀಡದೇ ನೇರವಾಗಿ ಪರೀಕ್ಷೆ ನಡೆಸಲಾಗಿದೆ ಎಂದರು.

ಅವ್ಯಹಾರಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಚಾಮರಾಜನಗರ ಜಿಲ್ಲೆಯಲ್ಲಿ ಪರೀಕ್ಷೆ ನಡೆಸಿಲ್ಲ. ಮೈಸೂರಿನ ವಿವಿಧ ಖಾಸಗಿ ಕಾಲೇಜುಗಳಲ್ಲಿ ಪರೀಕ್ಷೆ ನಡೆಸಲಾಗಿದೆ. ಯಾವ ಅಭ್ಯರ್ಥಿ ಹೆಚ್ಚು ಹಣ ನೀಡುತ್ತಾನೋ ಅವನು ಉತ್ತರ ಪತ್ರಿಕೆಯಲ್ಲಿ ಬಹು ಮಾದರಿ ಆಯ್ಕೆಗೆ ಉತ್ತರ ಬರೆಯದೇ ಖಾಲಿ ಬಿಟ್ಟಿದ್ದಾನೆ. ಹಣ ನೀಡಿದ ಅಭ್ಯರ್ಥಿಗೆ ಬಳಿಕ ಸರಿ ಉತ್ತರಗಳನ್ನು ತುಂಬುವ ಕೆಲಸ ಮಾಡಲಾಗಿದೆ ಎಂದು ಆರೋಪಿಸಿದರು.

ಉತ್ತರದ ನಕಲು ಪ್ರತಿ ನೀಡಿಲ್ಲ: ಯಾರಿಂದ ಹಣ ಪಡೆದಿದ್ದಾರೋ ಅವರನ್ನು ಮಾತ್ರ ಸಂದರ್ಶನಕ್ಕೆ ಕರೆಯಲಾಗಿದೆ. ನಿಯಮದನ್ವಯ ಪರೀಕ್ಷೆಯ ಉತ್ತರ ಪತ್ರಿಕೆಯನ್ನು ವಿದ್ಯಾರ್ಥಿಗೆ ನೀಡಬೇಕು. ಆದರೆ, ಇಲ್ಲಿ ಉತ್ತರದ ನಕಲು ಪ್ರತಿ ನೀಡಿಲ್ಲ. ಈ ಪ್ರಕರಣದ ಬಗ್ಗೆ ನಾವು ಮಾಹಿತಿ ಹಕ್ಕು ಕಾಯ್ದೆಯಡಿ ವಿವರ ನೀಡುವಂತೆ ಚಾಮುಲ್‌ಗೆ ಅರ್ಜಿ ಸಲ್ಲಿಸಿದ್ದೆವು. ನಮ್ಮದು ಸ್ವಾಯತ್ತ ಸಂಸ್ಥೆಯಾಗಿದ್ದು, ಮಾಹಿತಿ ಹಕ್ಕು ಕಾಯ್ದೆ ಅನ್ವಯವಾಗುವುದಿಲ್ಲ ಎಂಬ ಲಿಖೀತ ಉತ್ತರ ನೀಡಿದ್ದಾರೆ. ಅವ್ಯವಹಾರವನ್ನು ಮುಚ್ಚಿಡುವ ಪ್ರಯತ್ನ ನಡೆಸಿರುವುದು ಇದರಿಂದಲೇ ತಿಳಿಯುತ್ತದೆ. ಸಂಸ್ಥೆಯ ನೇಮಕಾತಿಯಲ್ಲಿ ಮೀಸಲಾತಿ ಪಾಲಿಸಿಲ್ಲ. ಇದು ಸಂವಿಧಾನದ ಆಶಯಕ್ಕೇ ವಿರುದ್ಧವಾಗಿದೆ ಎಂದು ಆಪಾದಿಸಿದರು.

Advertisement

ಅವ್ಯವಹಾರದ ತನಿಖೆಗೆ ಒತ್ತಾಯ: ಈ ಅವ್ಯವಹಾರದಲ್ಲಿ ಹಾಲು ಒಕ್ಕೂಟದ ಅಧ್ಯಕ್ಷ ಸಿ.ಎಸ್‌. ಗುರುಮಲ್ಲಪ್ಪ, ಹಿಂದಿನ ವ್ಯವಸ್ಥಾಪಕ ನಿರ್ದೇಶಕ ವಿಜಯಕುಮಾರ್‌, ಉಪ ವ್ಯವಸ್ಥಾಪಕ ಶ್ರೀಕಾಂತ್‌ ಭಾಗಿಯಾಗಿದ್ದಾರೆ. ಈ ಅವ್ಯವಹಾರದ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಲಾಗುವುದು. ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು. ಸರ್ಕಾರ ನಿವೃತ್ತ ನ್ಯಾಯಾಧೀಶರಿಂದ ಅವ್ಯವಹಾರದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಸ್ಥಳೀಯರಿಗೆ ಉದ್ಯೋಗ ನೀಡಿಲ್ಲ: ಸಮಿತಿಯ ಕಾರ್ಯದರ್ಶಿ ಡಿ.ಎನ್‌. ನಟರಾಜು ಮಾತನಾಡಿ, ಚಾಮುಲ್‌ ಉದ್ಘಾಟನೆಯ ವೇಳೆ ಸ್ಥಳೀಯರಿಗೆ ಉದ್ಯೋಗ ನೀಡುವುದಾಗಿ ಹಿಂದಿನ ಶಾಸಕರು ಭರವಸೆ ನೀಡಿದ್ದರು. ಆದರೆ, ಸ್ಥಳೀಯರಿಗೆ ಉದ್ಯೋಗ ನೀಡಿಲ್ಲ. ನೇಮಕಾತಿಯಲ್ಲಿ ನಡೆದಿರುವ ಭ್ರಷ್ಟಾಚಾರದ ವಿರುದ್ಧ ಹೋರಾಟ ನಿಲ್ಲುವುದಿಲ್ಲ. ನ್ಯಾಯ ಸಿಗುವವರೆಗೂ ಒಕ್ಕೂಟದ ಮುಂದೆ ಧರಣಿ ನಡೆಸುತ್ತೇವೆ ಎಂದು ಎಚ್ಚರಿಸಿದರು.

ಎಲ್ಲರಿಗೂ ಒಂದೇ ಪ್ರಶ್ನೆ ಪತ್ರಿಕೆ: ಸಮಿತಿಯ ಉಪಾಧ್ಯಕ್ಷ ಎಂ.ಎಸ್‌. ಮಹದೇವಸ್ವಾಮಿ ಮಾತನಾಡಿ, ಎಲ್ಲ ವೃಂದದ ಹುದ್ದೆಗಳಿಗೂ ಒಂದೇ ಪ್ರಶ್ನೆ ಪತ್ರಿಕೆ ನೀಡಲಾಗಿದೆ. ಡ್ರೈವರ್‌ ಹುದ್ದೆಗೂ ಅದೇ ಪ್ರಶ್ನೆ ಪತ್ರಿಕೆ, ಉಪ ವ್ಯವಸ್ಥಾಪಕರ ಹುದ್ದೆಗೂ ಅದೇ ಪ್ರಶ್ನೆ ಪತ್ರಿಕೆ. ಅವ್ಯವಹಾರಕ್ಕೆ ಇದಕ್ಕಿಂತ ನಿದರ್ಶನ ಬೇಕಿಲ್ಲ ಎಂದರು. ಈ ವೇಳೆ ಸಮಿತಿಯ ಮಾದಾಪುರ ರವಿಕುಮಾರ್‌ ಹಾಜರಿದ್ದರು.

ಕೋಲಾರ ಹಾಲು ಒಕ್ಕೂಟದ ಎಂಡಿ ಮಗನಿಗೆ ಉನ್ನತ ಹುದ್ದೆ!: ಚಾಮುಲ್‌ ಅಧ್ಯಕ್ಷ ಸಿ.ಎಸ್‌. ಗುರುಮಲ್ಲಪ್ಪ ಅವರ ಮೊಮ್ಮಗನಿಗೆ ಮೊದಲ ರ್‍ಯಾಂಕ್‌ ನೀಡಿ ಆಯ್ಕೆ ಮಾಡಿಕೊಳ್ಳಲಾಗಿದೆ. ಕೋಲಾರ ಹಾಲು ಒಕ್ಕೂಟದ ಎಂ.ಡಿ. ತಿಪ್ಪಾರೆಡ್ಡಿ ಅವರ ಮಗನಿಗೆ ಸಹಾಯಕ ವ್ಯವಸ್ಥಾಪಕ ಹುದ್ದೆ ನೀಡಲಾಗಿದೆ. ಕೊಳ್ಳೇಗಾಲ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ತೋಟೇಶ್‌ ಅವರ ಮಗನಿಗೆ, ಚಾ.ನಗರ ತಾಪಂ ಮಾಜಿ ಅಧ್ಯಕ್ಷ ಎಚ್‌.ವಿ. ಚಂದ್ರು ಅವರ ಪುತ್ರನಿಗೆ ಹುದ್ದೆ ನೀಡಲಾಗಿದೆ ಎಂದು ವೆಂಕಟರಮಣಸ್ವಾಮಿ ಆರೋಪಿಸಿದರು.

ಸಹಾಯಕ ವ್ಯವಸ್ಥಾಪಕ ಹುದ್ದೆಗೆ 97,100 ರೂ. ವೇತನ, ತಾಂತ್ರಿಕ ಅಧಿಕಾರಿಗಳಿಗೆ 83,900 ರೂ. ಚಾಲಕ ಹುದ್ದೆಗೆ 40 ಸಾವಿರ ರೂ. ವೇತನವಿದೆ. ಎಲ್ಲ ಹುದ್ದೆಗಳಿಗೂ ಒಟ್ಟು ಪ್ರತಿ ತಿಂಗಳೂ 2 ಕೋಟಿ ರೂ. ವೇತನಕ್ಕೇ ಖರ್ಚಾಗಲಿದೆ. ಹೀಗಿರುವಾಗ ರೈತರು ಹಾಲು ನೀಡಿ ಬೆಳೆಸಿದ ಚಾಮುಲ್‌ ಲಾಭದಲ್ಲಿ ನಡೆಯಲು ಸಾಧ್ಯವೇ? ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next