ಹೊಸದಿಲ್ಲಿ : ಪಾಕಿಸ್ಥಾನದಲ್ಲಿ 2025 ರ ಚಾಂಪಿಯನ್ಸ್ ಟ್ರೋಫಿ ನಡೆಸುವುದಾಗಿ ಐಸಿಸಿ ನಿರ್ಧರಿಸಿದ್ದು,ಸರಣಿಯಲ್ಲಿ ಪಾಲ್ಗೊಳ್ಳುವ ಬಗ್ಗೆ ಭಾರತ ಸರಕಾರ ಮತ್ತು ಗೃಹ ಸಚಿವಾಲಯ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಬುಧವಾರ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಸಮಯ ಬಂದಾಗ ಪಾಕಿಸ್ಥಾನದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಭಾಗವಹಿಸುವ ಬಗ್ಗೆ ಭಾರತ ಸರ್ಕಾರ ಮತ್ತು ಗೃಹ ಸಚಿವಾಲಯ ನಿರ್ಧಾರ ಕೈಗೊಳ್ಳಲಿದೆ. ಅಂತರಾಷ್ಟ್ರೀಯ ಚಾಂಪಿಯನ್ಶಿಪ್ಗಳ ಸಮಯದಲ್ಲಿ, ಎಲ್ಲಾ ಅಂಶಗಳನ್ನು ನೋಡಲಾಗುತ್ತದೆ ಎಂದಿದ್ದಾರೆ.
ನಿಮಗೆಲ್ಲರಿಗೂ ತಿಳಿದಿರುವಂತೆ, ಈ ಹಿಂದೆಯೂ ಹಲವು ದೇಶಗಳು ಭದ್ರತೆಯ ಕಾರಣದಿಂದ ಪಾಕಿಸ್ಥಾನದಲ್ಲಿ ಆಡಲು ನಿರಾಕರಿಸಿದ್ದವು. ಅಲ್ಲಿ ಆಡುತ್ತಿರುವಾಗ ಆಟಗಾರರ ಮೇಲೆ ದಾಳಿ ನಡೆದಿದೆ, ಅದೊಂದು ದೊಡ್ಡ ಸಮಸ್ಯೆಯಾಗಿದೆ ಎಂದು ಅನುರಾಗ್ ಪ್ರತಿಕ್ರಿಯೆ ನೀಡಿದ್ದಾರೆ.
2012ರಿಂದ ದ್ವಿಪಕ್ಷೀಯ ಸರಣಿ ಇಲ್ಲ
ಉಭಯ ದೇಶಗಳ ನಡುವೆ 2012 ರಲ್ಲಿ ಕೊನೆಯ ದ್ವಿಪಕ್ಷೀಯ ಸರಣಿಯನ್ನು ಪಾಕ್ ತಂಡ, ಭಾರತ ಪ್ರವಾಸಕ್ಕೆ ಆಗಮಿಸಿದ್ದಾಗ ಆಡಲಾಗಿತ್ತು. ಆ ಬಳಿಕ ಐಸಿಸಿ ಮಟ್ಟದ, ಏಷ್ಯಾ ಕಪ್ ನಂತಹ ಪಂದ್ಯಾವಳಿಗಳಲ್ಲಿ ಮಾತ್ರ ಭಾರತ ಪಾಕ್ ಪರಸ್ಪರ ಎದುರಾಗಿವೆ.
ಚಾಂಪಿಯನ್ಸ್ ಟ್ರೋಫಿ ವಿಚಾರದಲ್ಲಿ ಭಾರತ ಸೇರಿದಂತೆ ಇತರ ರಾಷ್ಟಗಳು ಯಾವ ನಿರ್ಧಾರ ಕೈಗೊಳ್ಳುತ್ತವೆ ಎನ್ನುವುದನ್ನು ಕಾಡು ನೋಡಬೇಕಾಗಿದೆ. ಭದ್ರತೆಯ ವಿಚಾರದಲ್ಲಿ ಪಾಕ್ ಯಾವ ಕ್ರಮಗಳನ್ನು ಕೈಗೊಳ್ಳುತ್ತದೆ ಎನ್ನುವುದು ದೊಡ್ಡ ಪಶ್ನೆಯಾಗಿದೆ.