Advertisement

ಅಂದು ವಿಧಾನಸೌಧದಲ್ಲಿ 25ಲಕ್ಷ ACB ವಶ ಪ್ರಕರಣ: ಪುಟ್ಟರಂಗ ಶೆಟ್ಟಿ ರಾಜೀನಾಮೆ ನೀಡಲಿಲ್ಲವೇಕೆ?

09:31 PM Jul 22, 2020 | Hari Prasad |

ಚಾಮರಾಜನಗರ: ಶಾಸಕ ಪುಟ್ಟರಂಗ ಶೆಟ್ಟಿಯವರು ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದಾಗ ವಿಧಾನಸೌಧದ ಇವರ ಕಚೇರಿಯ ಸಹಾಯಕನ ಬಳಿ 25 ಲಕ್ಷ ರೂ. ಹಣವನ್ನು ಎಸಿಬಿ ಅಧಿಕಾರಿಗಳು ವಶಪಡಿಸಿಕೊಂಡಿದ್ದರು.

Advertisement

ಆ ಸಂದರ್ಭದಲ್ಲಿ ಸಚಿವರಾಗಿದ್ದ ಪುಟ್ಟರಂಗ ಶೆಟ್ಟಿ ಅವರ ರಾಜೀನಾಮೆಗೆ ತೀವ್ರ ಒತ್ತಾಯ ಕೇಳಿಬಂದಿದ್ರೂ ಅವರು ರಾಜೀನಾಮೆ ನೀಡಿರಲಿಲ್ಲ.

ಇಂಥವರಿಗೆ ಪ್ರಾಮಾಣಿಕ ರಾಜಕಾರಣಿ, ಉಸ್ತುವಾರಿ ಸಚಿವ ಸುರೇಶ್‌ಕುಮಾರ್ ಅವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಬಿಜೆಪಿ ಮುಖಂಡ ನಿಜಗುಣರಾಜು ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, 34 ಕೋಟಿ ರೂ. ವೆಚ್ಚದಲ್ಲಿ ಬಿಎಸ್‌ವೈ ಸರ್ಕಾರ ಒಳ ಚರಂಡಿಗೆ ಮ್ಯಾಚಿಂಗ್ ಗ್ರ್ಯಾಂಟ್ ನೀಡಿದೆ. ಆದರೆ ಆರು ವರ್ಷಗಳ ಕಾಲ ಇವರ ಸರ್ಕಾರ ಇತ್ತು, ಯುಜಿಡಿ ಕಾಮಗಾರಿಯ ಗತಿ ಏನಾಗಿದೆ ಎಂದು ಎಲ್ಲರಿಗೂ ಗೊತ್ತಿದೆ, ಮತ್ತಿದು ಅವ್ಯವಸ್ಥೆಯ ಆಗರವಾಗಿದೆ. ಶಾಸಕರಾಗಿ ಇವರು ಇದರ ನಿರ್ವಹಣೆಯಲ್ಲಿ ಸೋತಿದ್ದಾರೆ ಎಂದು ನಿಜಗುಣ ರಾಜು ಅವರು ವಾಗ್ದಾಳಿ ನಡೆಸಿದರು..

ಸಿಆರ್‌ಎಫ್ 32 ಕೋಟಿ ಅನುದಾನದಲ್ಲಿ ನಗರದಲ್ಲಿ ಬಿ. ರಾಚಯ್ಯ ಜೋಡಿ ರಸ್ತೆ ಅಗಲೀಕರಣ ಮಾಡಲಾಯಿತು. ಜನರಿಗೆ ನೋಟೀಸ್ ನೀಡದೇ, ಅಂಗಡಿ, ಕಟ್ಟಡಗಳ ಮಾಲೀಕರಿಗೆ ಪರಿಹಾರ ನೀಡದೇ, ಕಮಿಷನ್ ಆಸೆಗೆ ತರಾತುರಿಯಲ್ಲಿ ಕಾಮಗಾರಿ ಮಾಡಲಾಯಿತು.

Advertisement

ಮಳೆ ಬಂದರೆ ರಸ್ತೆಯಲ್ಲಿ ನೀರು ನಿಲ್ಲುತ್ತದೆ, ಬೀದಿ ದೀಪ ಇನ್ನೂ ಅಳವಡಿಸಿಲ್ಲ. ಡೀವಿಯೇಷನ್ ರಸ್ತೆ, ನ್ಯಾಯಾಲಯ ರಸ್ತೆಗಳ ಕಾಮಗಾರಿಗಳು ಅರ್ಧಂಬರ್ಧವಾಗಿವೆ. ನ್ಯಾಯಾಲಯ ರಸ್ತೆ ಒಂದು ಕಡೆ, 53 ಅಡಿ, ಇನ್ನೊಂದು ಕಡೆ 60 ಅಡಿ, ಇನ್ನೊಂದೆಡೆ 80 ಅಡಿ ರಸ್ತೆ ಮಾಡಲಾಗಿದೆ. ಜನರಿಗೆ ಪರಿಹಾರ ನೀಡಲಾಗದ ಮೇಲೆ ಇವರು ಯಾವ ಆಡಳಿತ ನಡೆಸಿದ್ದಾರೆ? ಈ ಎಲ್ಲ ರಸ್ತೆಗಳ ಕಾಮಗಾರಿಯಲ್ಲಿ ಕೋಟಿಗಟ್ಟಲೆ ಅವ್ಯವಹಾರ ನಡೆದಿದೆ ಮಾತ್ರವಲ್ಲದೇ ಭಾರೀ ಲೋಪ ಎಸಗಿದ್ದಾರೆ ಎಂದು ಆರೋಪಿಸಿದರು.

ಇವರು ಸಚಿವರಾಗಿದ್ದಾಗ ಉಮ್ಮತ್ತೂರು ಕೆರೆಯಿಂದ ದೊಡ್ಡ ಕೆರೆ, ಚಿಕ್ಕಕೆರೆ, ಶಿಂಡಕೆರೆಗೆ ನೀರು ತರಲಾಗಿಲ್ಲ. ಕೆರೆಗೆ ನೀರು ತುಂಬಿಸುವ ಯೋಜನೆಯ 25 ಕೋಟಿ ವಿದ್ಯುತ್ ಬಿಲ್ ಕಟ್ಟಿಲ್ಲ. ಈಗ ಸಚಿವರು ಕ್ರಮ ಕೈಗೊಂಡಿದ್ದಾರೆ. ಹಂತಹಂತವಾಗಿ ಕಟ್ಟಿಕೊಡುವುದಾಗಿ ತಿಳಿಸಿದ ನಂತರ ನೀರು ಬಿಡಲಾಗುತ್ತಿದೆ. ಬಿಜೆಪಿ ಸರ್ಕಾರ ಬಂದ ನಂತರ 149 ಕೋಟಿ ಮಹದೇಶ್ವರ ಬೆಟ್ಟದ ಅಭಿವೃದ್ಧಿ ಕೆಲಸ ನಡೆದಿದೆ. ಉಸ್ತುವಾರಿ ಸಚಿವರು ಮಹದೇಶ್ವರ ಬೆಟ್ಟದ ಸಮೀಪದ ಕುಗ್ರಾಮದ ಶಾಲೆಗಳಲ್ಲಿ ವಾಸ್ತವ್ಯ ಮಾಡಿದ್ದಾರೆ ಎಂದರು.

ಶಾಸಕರನ್ನು ಸಭೆಗೆ ಆಹ್ವಾನಿಸದಿರುವುದರಲ್ಲಿ ಜಿಲ್ಲಾ ಉಸ್ತುವಾರಿ ಪಾತ್ರವಿಲ್ಲ. ಸಭೆಗೆ ಆಹ್ವಾನ ನೀಡುವವರು ಜಿಲ್ಲಾಧಿಕಾರಿಯವರು. ಆದರೂ ಸುರೇಶ್‌ಕುಮಾರ್ ಅವರು ಕ್ಷಮೆ ಯಾಚಿಸಿ ದೊಡ್ಡತನ ಮೆರೆದಿದ್ದಾರೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಯಾರನ್ನು ನೇಮಕ ಮಾಡಬೇಕೆಂಬುದು ಮುಖ್ಯಮಂತ್ರಿಯವರಿಗೆ ಬಿಟ್ಟ ವಿಚಾರ. ಅದರಲ್ಲಿ ಕಾಂಗ್ರೆಸ್‌ನವರನ್ನು ಕೇಳಿಕೊಂಡು ಮಾಡಬೇಕಿಲ್ಲ. ನಮ್ಮಲ್ಲಿರುವ ಎಲ್ಲ ಸಚಿವರೂ 24 ಕ್ಯಾರೆಟ್ ಗೋಲ್ಡ್. ಮುಖ್ಯಮಂತ್ರಿಯವರು ಸೋಮಣ್ಣ ಬೇಕೆಂದರೆ ಸೋಮಣ್ಣನವರನ್ನು ಹಾಕುತ್ತಾರೆ. ಸುರೇಶ್‌ಕುಮಾರ್ ಬೇಕಾದರೆ ಅವರನ್ನು ಹಾಕುತ್ತಾರೆ ಎಂದು ನಿಜಗುಣರಾಜು ಸಮರ್ಥಿಸಿಕೊಂಡರು.

ನಂಜುಂಡಸ್ವಾಮಿಯವರು ನಗರಸಭೆ ಬಿಟ್ಟು ಮೇಲೇರಲಿಲ್ಲ:
ಚುಡಾ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ಬಾಲಸುಬ್ರಹ್ಮಣ್ಯ ಮಾತನಾಡಿ, ತನಗೆ ಕೊಟ್ಟ ಕೆಲಸವನ್ನು ಪ್ರಾಮಾಣಿಕವಾಗಿ, ರಾಜ್ಯದ ಜನತೆ ಮೆಚ್ಚುವಂತೆ ಹಗಲಿರುಳು ಕೆಲಸ ಮಾಡುವ, ಸರಳ ಸಜ್ಜನಿಕಯೆ ರಾಜಕಾರಣಿ ಸುರೇಶ್‌ ಕುಮಾರ್ ಅವರ ಬಗ್ಗೆ ನಗರಸಭೆ ಮಾಜಿ ಅಧ್ಯಕ್ಷ ನಂಜುಂಡಸ್ವಾಮಿ ಅವರು ಏಕವಚನದಲ್ಲಿ ಮಾತನಾಡುವ ಮೂಲಕ ರಾಜಕೀಯದ ಹಿರಿತನಕ್ಕೆ ಮಸಿ ಬಳಿದುಕೊಂಡಿದ್ದಾರೆ ಅವರು ಬೇಷರತ್ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.

ಉಸ್ತುವಾರಿ ಸಚಿವರು ಅಭಿವೃದ್ಧಿ ಮಾಡುತ್ತಿಲ್ಲ. ನಾಲಾಯಕ್ ಎಂದಿರುವ ನಂಜುಂಡಸ್ವಾಮಿಯವರು ಚಾಮರಾಜನಗರದಲ್ಲಿ ಅಭಿವೃದ್ದಿ ಮಾಡಿರುವುದನ್ನು ನೋಡಿದ್ದೇವೆ. ಕಳೆದ 40 ವರ್ಷಗಳಿಂದ 2 ವಾರ್ಡ್‌ನಿಂದ ಮೇಲಕ್ಕೇರದ, ತನ್ನ ಆಸ್ತಿಯನ್ನು ಭದ್ರಪಡಿಸಿಕೊಳ್ಳುವುದಕ್ಕೇ ನಗರಸಭೆ ಸದಸ್ಯರಾಗಿದ್ದ ಇವರು, ಶ್ರೇಷ್ಠ ಸಜ್ಜನ ರಾಜಕಾರಣಿಗೆ ಏಕವಚನದಲ್ಲಿ ಮಾತನಾಡುತ್ತಾರೆ ಎಂದು ಟೀಕಿಸಿದರು.

ನಂಜುಂಡಸ್ವಾಮಿಯವರು ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಾರೆ. ಇಡೀ ಊರವರ ಆಸ್ತಿ ಒಡೆಸಲು ನಿಲ್ಲುತ್ತಾರೆ. ಸರ್ಕಾರಿ ಜಾಗದಲ್ಲಿ ಕಟ್ಟಡವನ್ನು ಕಟ್ಟಿರುವವರು. ಜೋಡಿ ರಸ್ತೆ ಅಗಲ ಮಾಡಲು ಬೇರೆಯವರ ಕಟ್ಟಡ ಒಡೆಸಿ, ಅವರ ಬಿಲ್ಡಿಂಗ್ ಬಂದಾಗ ಜಾಗ ಒಡೆಯದೇ ಚರಂಡಿಯನ್ನೇ ಕ್ರಾಸ್ ಮಾಡಿಸಿಕೊಂಡಿರುವ ಇವರು ಅಭಿವೃದ್ಧಿ ಬಗ್ಗೆ ಮಾತನಾಡುತ್ತಾರೆ ಎಂದು ಬಾಲಸುಬ್ರಹ್ಮಣ್ಯ ಆರೋಪಿಸಿದರು.

ಶಾಸಕ ಪುಟ್ಟರಂಗ ಶೆಟ್ಟಿಯವರು, ಮಹದೇವಪ್ರಸಾದ್, ಗೀತಾ ಮಹದೇವಪ್ರಸಾದ್ ಅವರು ಉಸ್ತುವಾರಿ ಸಚಿವರಾಗಿದ್ದಾಗ ಎಷ್ಟು ಸಹಕಾರ ನೀಡಿದಾರೆ ಎಂಬುದು ಜನಜನಿತವಾಗಿದೆ. ಪ್ರತಿ ಸಚಿವರು ಬಂದಾಗಲೂ ತಮ್ಮ ಕೊಂಕು ಮಾತನಾಡಿ ದುರಂತ ನಾಯಕರಾಗಿದ್ದೀರಿ ಎಂದು ಟೀಕಿಸಿದರು.

34 ಬಾರಿ ಸುರೇಶ್‌ ಕುಮಾರ್ ಜಿಲ್ಲೆಯಲ್ಲಿ ಪ್ರವಾಸ ಮಾಡಿದ್ದಾರೆ. 3 ತಿಂಗಳು ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಹೊಣೆ ಅವರ ಹೆಗಲ ಮೇಲಿತ್ತು. ಕೋವಿಡ್ 19 ಸಂದರ್ಭದಲ್ಲೂ ಪ್ರವಾಸ ಮಾಡಿದ್ದಾರೆ. ಇಷ್ಟಿದ್ದರೂ ಅವರು ಜಿಲ್ಲೆಗೆ 34 ಬಾರಿ ಭೇಟಿ ನೀಡಿದ್ದಾರೆ. ಅಂಥವರ ಜೊತೆ ಅಭಿವೃದ್ಧಿಗಾಗಿ ಕೈಜೋಡಿಸಬೇಕಾಗಿತ್ತು. ಇಂಥ ಸಂದರ್ಭದಲ್ಲ ಕೊಳಕು ರಾಜಕಾರಣ ಮಾಡುವುದು ಶೋಭೆ ತರುವಂಥದ್ದಲ್ಲ.

ಪುರಸಭೆ ನಗರಸಭೆಗೆ ಸೀಮಿತವಾಗಿರುವ ನಂಜುಂಡಸ್ವಾಮಿಯವರು ಮತ್ತು ಶಾಸಕರು ಬೇಷರತ್ ಕ್ಷಮೆ ಯಾಚಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಪ್ರತಿಭಟಿಸಲು ಚಿಂತನೆ ನಡೆಸುತ್ತೇವೆ ಎಂದು ಬಾಲು ಎಚ್ಚರಿಕೆ ನೀಡಿದರು.

ಜಿ.ಪಂ. ಸದಸ್ಯ ನಾಗರಾಜು (ಕಮಲ್), ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ್, ಚಾಮುಲ್ ಸದಸ್ಯ ಕಿಲಗೆರೆ ಶಶಿಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next