Advertisement

ಜಲಮಂಡಳಿಗೆ ಬೇಸಿಗೆ ಎದುರಿಸುವುದೇ ಸವಾಲು

06:46 AM Mar 03, 2019 | |

ಬೆಂಗಳೂರು: ಅವಧಿಗೂ ಮುನ್ನವೇ ಬೇಸಿಗೆ ಕಾಲ ಆರಂಭವಾಗಿರುವ ಹಿನ್ನೆಲೆ ಬೆಂಗಳೂರಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸುವುದು ಜಲಮಂಡಳಿ ಪಾಲಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಸಾಮಾನ್ಯವಾಗಿ ಪ್ರತಿ ವರ್ಷ ಮಾರ್ಚ್‌ ಮಧ್ಯಭಾಗದಿಂದ ಆರಂಭವಾಗುತ್ತಿದ್ದ ಬೇಸಿಗೆ ಈ ಬಾರಿ ಫೆಬ್ರವರಿ ಮೂರನೇ ವಾರವೇ ಶುರುವಾಗಿದೆ.

Advertisement

ಅಂದರೆ ಸಾಮಾನ್ಯ ಕಾಲಕ್ಕಿಂತ 20 ದಿನ ಮೊದಲೇ ಬೇಸಿಗೆ ಆರಂಭವಾಗಿದೆ. ಒಂದೊಮ್ಮೆ ಜೂನ್‌ನಲ್ಲಿ ಆರಂಭವಾಗಬೇಕಾದ ಮುಂಗಾರು ಕಳೆದ ವರ್ಷದಂತೆ ಎರಡು ವಾರಗಳ ಕಾಲ ಮುಂದೆ ಹೋದರೆ ಈ ಬಾರಿ ಬೇಸಿಗೆ ಕಾಲದ ಅವಧಿ ನಾಲ್ಕು ತಿಂಗಳಿಗಿಂತ ಹೆಚ್ಚಾಗಲಿದೆ. ಈಗಾಗಲೇ ಬಿಸಿಲಿನ ತೀವ್ರತೆ ಏರಿಕೆಯಾಗಿದ್ದು, ನೀರಿನ ಅಭಾವವೂ ಅಲ್ಲಲ್ಲಿ ಕಾಣಿಸಿಕೊಳ್ಳಲಾರಂಭಿಸಿದ್ದು, ಪರಿಸ್ಥಿತಿಯನ್ನು ಜಲಮಂಡಳಿ ಹೇಗೆ ನಿರ್ವಹಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಬೇಸಿಗೆಯಲ್ಲಿ ನೀರಿನ ಬಳಕೆ ಹೆಚ್ಚಾಗಿರುತ್ತದೆ ಎಂಬುದು ತಜ್ಞರ ಅಭಿಪ್ರಾಯ. ಹೀಗಾಗಲೇ ರಾಜ್ಯದಲ್ಲಿ ಬೇಸಿಗೆ ಆರಂಭಕ್ಕೂ ಮೊದಲೇ 388 ಗ್ರಾಮಗಳಿಗೆ 672 ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. ಮುಂದಿನ ದಿನಗಳಲ್ಲೂ ನೀರಿನ ಅಭಾವ ತಡೆಗೆ ಜಲಮಂಡಳಿ ಈಗನಿಂದಲೇ ಕಸರತ್ತು ಆರಂಭಿಸಿದೆ.

ವಿದ್ಯುತ್‌ ಅಭಾವ: ಹವಾಮಾನ ಇಲಾಖೆ ತಜ್ಞರ ಅಂದಾಜಿನಂತೆ ಜಲಮಂಡಳಿಯು ಸುಮಾರು 20 ರಿಂದ 25 ದಿನ ಹೆಚ್ಚುವರಿಯಾಗಿ ಬೇಸಿಗೆಯನ್ನು ನಿಭಾಯಿಸಬೇಕಿದೆ. ಬೆಂಗಳೂರಿಗೆ ಒಂದು ತಿಂಗಳಿಗೆ 1.5 ಟಿಎಂಸಿ ನೀರು ಅವಶ್ಯಕವಿದ್ದು, ಮುಂದಿನ ನಾಲ್ಕು ತಿಂಗಳಿಗೆ ಒಟ್ಟು 6 ಟಿಎಂಸಿ ನೀರು ಬೇಕಿದೆ.

ಬೇಸಿಗೆಯಲ್ಲಿ ನೀರಿನ ಬಳಕೆ ಹೆಚ್ಚಿರುವುದರಿಂದ ನಿತ್ಯ ಪೂರೈಸುವ ನೀರಿಗಿಂತ 50ರಿಂದ 60 ದಶಲಕ್ಷ ಲೀಟರ್‌ ನೀರು ಹೆಚ್ಚುವರಿಯಾಗಿ ಬೇಕಾಗುತ್ತದೆ. ಜತೆಗೆ ನೀರನ್ನು ಶುದ್ದೀಕರಣ ಘಟಕಗಳಿಂದ ಪಂಪ್‌ ಮಾಡಲು ವಿದ್ಯುತ್‌ ಅಭಾವ ಕಾಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. 

Advertisement

ಬಿಬಿಎಂಪಿಯ 110 ಹಳ್ಳಿಗಳಲ್ಲಿ ಅಂತರ್ಜಲ ಕುಸಿದಿದ್ದು, ಬಹಳಷ್ಟು ಕೊಳವೆಬಾವಿಗಳು ಬತ್ತಿ ಹೋಗುವ ಸಾಧ್ಯತೆ ಇರುತ್ತದೆ. ಜತೆಗೆ ಕುಡಿಯುವ ನೀರು ಯೋಜನೆಯಡಿ ಕೊಳವೆ ಮೂಲಕ ನೀರು ಪೂರೈಕೆಯಾಗುವ 29 ಹಳ್ಳಿಗಳಿಗೂ ವಿತರಣೆಯಲ್ಲಿ ವ್ಯತ್ಯಯವಾಗುವ ಆತಂಕ ಮೂಡಿದೆ. 

ಸವಾಲಾಗಿ ಸ್ವೀಕರಿಸಿ, ಅಗತ್ಯ ಸಿದ್ಧತೆ: ಪ್ರತಿ ವರ್ಷದಂತೆಯೇ ಈ ಬಾರಿಯೂ ಬೇಸಿಗೆ ಎದುರಿಸಲು ಜಲಮಂಡಳಿ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಜಲಮಂಡಳಿ ಅಧ್ಯಕ್ಷ ತುಷಾರ್‌ ಗಿರಿನಾಥ್‌ ತಿಳಿಸಿದ್ದಾರೆ.

ಈ ಕುರಿತು “ಉದಯವಾಣಿ’ಗೆ ಮಾಹಿತಿ ನೀಡಿದ ಅವರು, ಮುಂದಿನ ಜೂನ್‌ವರೆಗೂ ಪರಿಸ್ಥಿತಿ ನಿರ್ವಹಣೆಗೆ ಅಗತ್ಯವಿರುವಷ್ಟು 6 ಟಿಎಂಸಿ ನೀರು ಈಗಾಗಲೇ ಕಾವೇರಿ ಹಾಗೂ ಕಬಿನಿ ಜಲಾಶಯದಲ್ಲಿ ಲಭ್ಯವಿದೆ. ನಿತ್ಯ ನಗರಕ್ಕೆ 1,350 ದಶಲಕ್ಷ ಲೀ. ನೀರು ಪೂರೈಕೆ ಮಾಡುತ್ತಿದ್ದು, ಬೇಸಿಗೆ ಹಿನ್ನೆಲೆ ಬೇಡಿಕೆ ಹೆಚ್ಚಾದರೆ 1,450 ದಶಲಕ್ಷ ಲೀ.ವರೆಗೂ ಪೂರೈಸಬಹುದಾಗಿದೆ.

ಜತೆಗೆ ಜಲಮಂಡಳಿಯ 63 ಟ್ಯಾಂಕರ್‌ಗಳಿದ್ದು, ಅವುಗಳು ಬೇಸಿಗೆ ಅವಧಿಯಲ್ಲಿ ನಿರಂತರ ಸೇವೆ ಸಲ್ಲಿಸಲಿವೆ. ಮುಖ್ಯವಾಗಿ ವಾಣಿಜ್ಯ ಬಳಕೆಗಳಿಗಿಂತ ಸಾರ್ವಜನಿಕ ವಲಯದ ಬಳಕೆಗೆ ಆದ್ಯತೆ ನೀಡಲಾಗುತ್ತದೆ ಎಂದು ತಿಳಿಸಿದರು.

ವಿಶೇಷ ಅಧಿಕಾರಿಗಳು: ಈ ಬಾರಿ ವಲಯವಾರು ವಿಶೇಷ ಅಧಿಕಾರಿಗಳು ಸ್ಥಳದಲ್ಲಿದ್ದುಕೊಂಡು ನೀರಿನ ನಿರ್ವಹಣೆ ಹಾಗೂ ವಿತರಣೆಯಲ್ಲಿ ಯಾವುದೇ ಸಮಸ್ಯೆಯಾಗದಂತೆ ನಿಗಾ ವಹಿಸಬೇಕು ಎಂದು ಸೂಚಿಸಲಾಗಿದೆ. 110 ಹಳ್ಳಿಗಳಲ್ಲಿ ಯಾವುದೇ ಹಳ್ಳಿಗಳಲ್ಲಿ ಕೊಳವೆಬಾವಿಗಳು ಬತ್ತಿ ಹೋಗಿ ನೀರಿನ ಅಭಾವ ಉಂಟಾದರೆ ಟ್ಯಾಂಕರ್‌ನಿಂದ ಪೂರೈಸುವಂತೆ ಸೂಚಿಸಲಾಗಿದೆ.

ಉಳಿದಂತೆ ನೀರನ್ನು ಪಂಪ್‌ ಮಾಡುವ ಸಂದರ್ಭದಲ್ಲಿ ವಿದ್ಯುತ್‌ ವ್ಯತ್ಯಯವಾದರೆ ನೀರು ನಷ್ಟವಾಗುವ ಸಾಧ್ಯತೆ ಹೆಚ್ಚಿದ್ದು, ಸಮಯಕ್ಕೆ ಸರಿಯಾಗಿ ಪೂರೈಕೆಯಲ್ಲಿ ತುಸು ವ್ಯತ್ಯಯವಾಗಬಹುದು. ಈ ಹಿಂದೆ ಸತತ ಬರಗಾಲದ ದಿನವನ್ನು ನಿಭಾಯಿಸಿರುವ ಅನುಭದ ಆಧಾರದ ಮೇಲೆ ಮುಂದಿನ ಪರಿಸ್ಥಿತಿ ನಿಭಾಯಿಸಲಾಗುವುದು ಎಂದು ಜಲಮಂಡಳಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಜಲಮಂಡಳಿ ಪಾಲಿಗೆ ವರದಾನ: 110 ಹಳ್ಳಿಗಳಿಗೆ ನೀರು ಪೂರೈಸುವ ಯೋಜನೆಯಡಿ ಸದ್ಯ 29 ಹಳ್ಳಿಗಳಲ್ಲಿ ನೀರಿನ ಸಂಪರ್ಕಕ್ಕೆ ಜಲಮಂಡಳಿ ಅರ್ಜಿ ಆಹ್ವಾನಿಸಿದೆ. ಆದರೆ, ಹೊಸ ಸಂಪರ್ಕಕ್ಕೆ ಶುಲ್ಕ- ವೆಚ್ಚ ದುಬಾರಿ, ಪ್ರತಿ ತಿಂಗಳು ಬಿಲ್‌ ಪಾವತಿಸಬೇಕು ಎಂಬ ಕಾರಣಗಳಿಂದ ಆ ಹಳ್ಳಿಗಳ ಜನ ಜಲಮಂಡಳಿ ನೀರು ಪಡೆಯಲು ಹಿಂದೇಟು ಹಾಕುತ್ತಿದ್ದರು. ಈವರೆಗೂ ಸುಮಾರು ನಾಲ್ಕೈದು ಸಾವಿರ ಮಂದಿಯಷ್ಟೇ ಸಂಪರ್ಕ ಪಡೆದಿದ್ದಾರೆ. ಇದೀಗ ಕುಡಿಯುವ ನೀರಿನ ಅಗತ್ಯತೆ ಹಿನ್ನೆಲೆಯಲ್ಲಿ ಹೆಚ್ಚು ಮಂದಿ ಸಂಪರ್ಕ ಪಡೆಯುವ ಲೆಕ್ಕಾಚಾರದಲ್ಲಿ ಜಲಮಂಡಳಿ ಇದೆ.

ಮುಂದಿನ ಮೂರ್‍ನಾಲ್ಕು ತಿಂಗಳಿಗೆ ಅಗತ್ಯವಿರುವ 6 ಟಿಎಂಸಿ ನೀರು ಕೆಆರ್‌ಎಸ್‌ ಹಾಗೂ ಕಬಿನಿ ಜಲಾಶಯದಲ್ಲಿ ಸಂಗ್ರಹವಿದೆ. ನಗರದಲ್ಲಿ ಅಗತ್ಯವಿರುವ ಕಡೆ ಟ್ಯಾಂಕರ್‌ ಸೇವೆ ಹೆಚ್ಚಿಸಲಾಗುವುದು. ಸಾರ್ವಜನಿಕರ ಸಮಸ್ಯೆಗಳಿಗೆ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸುವಂತೆ ಸೂಚಿಸಲಾಗಿದ್ದು, ಬೆಂಗಳೂರಿನ ಜನತೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ.
-ತುಷಾರ್‌ ಗಿರಿನಾಥ್‌, ಜಲಮಂಡಳಿ ಅಧ್ಯಕ್ಷ 

* ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next