Advertisement

ಉತ್ತರಪ್ರದೇಶದ 23 ಕಾರ್ಮಿಕರ ಬಿಡುಗಡೆ

06:56 PM Jun 12, 2020 | Naveen |

ಚಳ್ಳಕೆರೆ: ಕೋವಿಡ್ ಸೋಂಕು ಹೊಂದಿದ್ದ 12 ಜನರು ಹಾಗೂ ಕ್ವಾರಂಟೈನ್ ನಲ್ಲಿದ್ದವರು ಸೇರಿದಂತೆ ಉತ್ತರಪ್ರದೇಶದ 23 ಕಾರ್ಮಿಕರನ್ನು ನಗರದ ಬಿಸಿಎಂ ಹಾಸ್ಟೆಲ್‌ನಿಂದ ಬುಧವಾರ ಬಿಡುಗಡೆ ಮಾಡಲಾಯಿತು.

Advertisement

ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ. ರಾಧಿಕಾ, ಪುಷ್ಪವೃಷ್ಟಿ ಮಾಡಿ ಬೀಳ್ಕೊಟ್ಟರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ, ಕೋವಿಡ್ ಪಾಸಿಟಿವ್‌ ಇರುವವರಿಗೆ ಜಿಲ್ಲಾ ಕೇಂದ್ರದಲ್ಲಿರುವ ಕೋವಿಡ್‌ ಆಸ್ಪತ್ರೆಯಲ್ಲಿ ಮಾತ್ರ ಚಿಕಿತ್ಸೆ ನೀಡಲಾಗುತ್ತಿತ್ತು. ವಿರೋಧದ ನಡುವೆಯೂ ನಾವು ಚಳ್ಳಕೆರೆ ನಗರದ ಹೊರವಲಯದ ಬಿಸಿಎಂ ಹಾಸ್ಟೆಲ್‌ನಲ್ಲಿ ಉತ್ತರಪ್ರದೇಶದ ಕಾರ್ಮಿಕರಿಗೆ ಚಿಕಿತ್ಸೆ ಕೊಡಿಸಿದ್ದೇವೆ. ವೈದ್ಯಕೀಯ ವರದಿ ಪ್ರಕಾರ ಎಲ್ಲರೂ ಗುಣಮುಖರಾಗಿದ್ದು, ಅವರನ್ನು ಅವರ ಊರುಗಳಿಗೆ ಕಳುಹಿಸಿಕೊಡಲಾಗುತ್ತಿದೆ. ಯಾವುದೇ ರೀತಿಯ ಆತಂಕವಿಲ್ಲದೆ ಇಲ್ಲಿನ ವೈದ್ಯರು, ಸಿಬ್ಬಂದಿ ವರ್ಗ ಕಾರ್ಯನಿರ್ವಹಿಸಿದ್ದಾರೆ . ಅವರನ್ನು ಜಿಲ್ಲಾಡಳಿತದ ಪರವಾಗಿ ಅಭಿನಂದಿಸುವುದಾಗಿ ತಿಳಿಸಿದರು.

23 ಜನ ಕಾರ್ಮಿಕರನ್ನು ಸರತಿ ಸಾಲಿನಲ್ಲಿ ನಿಲ್ಲಿಸಿ ಅವರ ಮೇಲೆ ವೈದ್ಯರು ಮತ್ತು ಜಿಲ್ಲಾಧಿಕಾರಿಗಳು ಪುಪ್ಪಾರ್ಚನೆ ಮಾಡಿದರು. ಉತ್ತರಪ್ರದೇಶದ ಶಿವನಾಥ ಪಾಲ್‌, ಸುರೇಶ್‌, ಶಿವಕುಮಾರ್‌ ಮತ್ತಿತರರು ಮಾತನಾಡಿ, ನಮ್ಮನ್ನು ಇಲ್ಲಿನ ಪೊಲೀಸರು ತಡೆದು ಕ್ವಾರಂಟೈನ್‌ ಮಾಡಿದಾಗ ಎಲ್ಲರಲ್ಲೂ ಭಯ ಉಂಟಾಗಿತ್ತು. ಕೋವಿಡ್ ಪಾಸಿಟಿವ್‌ ಎಂದು ದೃಢಪಟ್ಟಾಗ ದಿಕ್ಕೇ ತೋಚದಂತಾಯಿತು. ಆಗ ಇಲ್ಲಿನ ವೈದ್ಯರು ಮತ್ತು ಸಿಬ್ಬಂದಿ ನಮ್ಮಲ್ಲಿ ಧೈರ್ಯ ತುಂಬಿ ಚಿಕಿತ್ಸೆ ನೀಡಿದರು.

ದೇವರ ರೂಪದಲ್ಲಿ ಬಂದ ವೈದ್ಯರು ನಮ್ಮೆಲ್ಲರಿಗೂ ಹೊಸ ಬದುಕು ನೀಡಿದ್ದಾರೆ ಎಂದರು. ಅಪರ ಜಿಲ್ಲಾಧಿಕಾರಿ ಸಂಗಪ್ಪ, ಕಾಡಾ ವ್ಯವಸ್ಥಾಪಕ ನಿರ್ದೇಶಕ ಸೋಮಶೇಖರ್‌, ಉಪವಿಭಾಗಾಧಿಕಾರಿ ಪ್ರಸನ್ನ, ತಹಶೀಲ್ದಾರ್‌ ಎಂ. ಮಲ್ಲಿಕಾರ್ಜುನ್‌, ಡಿವೈಎಸ್ಪಿ ಕೆ.ವಿ. ಶ್ರೀಧರ್‌, ವರ್ಗಾವಣೆಗೊಂಡ ಸಿಎಂಒ ಡಾ| ಬಸವರಾಜು, ತಾಲೂಕು ಆರೋಗ್ಯಾಧಿಕಾರಿ ಡಾ| ಪ್ರೇಮಸುಧಾ, ಡಾ| ಅಮಿತ್‌ ಗುಪ್ತ, ಡಾ| ನಾಗರಾಜು, ವೃತ್ತ ನಿರೀಕ್ಷ ಈ. ಆನಂದ, ಪಿಎಸ್‌ ಐಗಳಾದ ರಾಘವೇಂದ್ರ, ಮಹೇಶ್‌ ಹೊಸಪೇಟೆ, ಆರ್‌ ಆರ್‌ಟಿ ತಂಡದ ಮುಖ್ಯಸ್ಥರಾದ ಪ್ರಸನ್ನಕುಮಾರ್‌, ಗಂಗಾಧರ, ಚಂದ್ರಪ್ಪ, ಎಸ್‌.ಬಿ. ತಿಪ್ಪೇಸ್ವಾಮಿ, ಎನ್‌.ಪ್ರೇಮಕುಮಾರ್‌, ಎಚ್‌. ತಿಪ್ಪೇಸ್ವಾಮಿ, ಶುಶ್ರೂಷಕಿ ನಾಗರತ್ನ, ಮಮತಾ, ಚಾಲಕ ರಾಮಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next