ಕೋಲ್ಕತಾ: ನ್ಯಾಯಮೂರ್ತಿಗಳ ನೇಮಕಕ್ಕೆ ಇರುವ ಸಮಿತಿ (ಕೊಲೀಜಿಯಂ) ಮಾದರಿಯಲ್ಲೇ ಚುನಾವಣಾ ಆಯುಕ್ತರ ನೇಮಕಕ್ಕೂ ಪ್ರತ್ಯೇಕ ಸಮಿತಿ ಇರಬೇಕು ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಆಗ್ರಹಿಸಿದ್ದಾರೆ.
ಲೋಕಸಭೆ ಚುನಾವಣೆ ವೇಳೆ ಆಯೋಗ ಪಕ್ಷಪಾತ ಧೋರಣೆ ಅನುಸರಿಸಿತ್ತು ಎಂದು ಹರಿಹಾಯ್ದಿರುವ ಟಿಎಂಸಿ ನಾಯಕಿ, ಇವಿಎಂಗಳ ದುರುಪಯೋಗವಾಗಿದೆ ಎಂಬ ಆರೋಪಗಳ ಬಗ್ಗೆ ಸತ್ಯಶೋಧನಾ ಸಮಿತಿ ನೇಮಕವಾಗಬೇಕು ಎಂದು ಒತ್ತಾಯಿಸಿದ್ದಾರೆ. ಜತೆಗೆ, ಈ ಕುರಿತು ಕಾಂಗ್ರೆಸ್ ಜತೆಗೂ ಮಾತುಕತೆ ನಡೆಸುತ್ತೇನೆ ಎಂದಿದ್ದಾರೆ.
Advertisement
ನೀತಿ ಆಯೋಗದ ಸಭೆ ನಿರುಪಯುಕ್ತ: ಜು.15ರಂದು ನವದೆಹಲಿಯಲ್ಲಿ ನಡೆಯಲಿರುವ ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸದೇ ಇರಲು ಮಮತಾ ಬ್ಯಾನರ್ಜಿ ನಿರ್ಧರಿಸಿದ್ದಾರೆ. ಆಯೋಗದ ಸಭೆ ನಿರುಪಯುಕ್ತ. ರಾಜ್ಯದ ಯೋಜನೆಗಳಿಗೆ ಬೆಂಬಲ ನೀಡಲು ಆಯೋಗಕ್ಕೆ ಅಧಿಕಾರವೇ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಈ ಮೂಲಕ ಚುನಾವಣಾ ಪ್ರಚಾರದ ವೇಳೆ ಶುರುವಾಗಿದ್ದ ಬಿಜೆಪಿ ಮತ್ತು ಟಿಎಂಸಿ ನಡುವಿನ ಕದನ ಮೋದಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕವೂ ಮುಂದುವರಿದಿದೆ.