Advertisement

ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ಸಿರಿಧಾನ್ಯ ಘಟಕ: ಸಿಎಂ

10:35 PM Aug 27, 2022 | Team Udayavani |

ರಾಯಚೂರು: ಸಿರಿಧಾನ್ಯಗಳ ಉತ್ಪಾದನೆಗೆ ರಾಜ್ಯ ಸರಕಾರ ಅಗತ್ಯ ನೆರವು ನೀಡಲು ಸಿದ್ಧವಿದ್ದು, ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಜಿಲ್ಲೆಗಳಲ್ಲೂ ಸಿರಿಧಾನ್ಯ ಸಂಸ್ಕರಣ ಘಟಕಗಳನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Advertisement

ನಗರದಲ್ಲಿ ಶನಿವಾರ ರಾಷ್ಟ್ರೀಯ ಬ್ಯಾಂಕ್‌ ಮತ್ತು ಕೃಷಿ ಅಭಿವೃದ್ಧಿ ಬ್ಯಾಂಕ್‌ (ನಬಾರ್ಡ್‌)ನಿಂದ ಏರ್ಪಡಿಸಿದ್ದ “ಸಿರಿಧಾನ್ಯ ಸಮಾವೇಶ-2022′ ಮತ್ತು ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಯಚೂರು ಕೃಷಿ ವಿವಿ ಈ ಕಾರ್ಯಕ್ರಮದ ಘೋಷಣೆಗಳನ್ನು ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಿದರೆ ಅವುಗಳ ಅನುಷ್ಠಾನಕ್ಕೆ ಅಗತ್ಯ ಅನುದಾನ ನೀಡಲು ರಾಜ್ಯ ಮತ್ತು ಕೇಂದ್ರ ಸರಕಾರಗಳು ಒತ್ತು ನೀಡಲಿವೆ. ಸಿರಿಧಾನ್ಯಗಳ ಮಹತ್ವ ಎಲ್ಲರಿಗೂ ಗೊತ್ತಿದೆ. ಆದರೆ ಅವುಗಳನ್ನು ಬೆಳೆಯುವ ದಾರಿ ತಿಳಿಯಬೇಕಿದೆ. ಸಿರಿಧಾನ್ಯ ಬೆಳೆದರೆ ಸಾಲದು, ಅದಕ್ಕೆ ಮಾರುಕಟ್ಟೆ ಬಹಳ ಮುಖ್ಯವಾಗಿದೆ. ಈ ಎಲ್ಲ ಅಂಶಗಳ ಆಧಾರದ ಮೇಲೆ ಸಂಶೋಧನೆಗಳು ನಡೆಯಲಿ ಎಂದರು.

ಕೃಷಿ ವಿವಿಗಳ ವಿಜ್ಞಾನಿಗಳು ನೈಜಸ್ಥಿತಿ ಆಧರಿಸಿ ಸಂಶೋಧನೆ ನಡೆಸಬೇಕು. ಪ್ರಯೋಗಾಲಯಗಳಿಂದ ಹೊರಬರಬೇಕು. ರೈತರ ಜಮೀನುಗಳೇ ಸಂಶೋಧನ ಕೇಂದ್ರಗಳಾಗಬೇಕು. ಕೇಂದ್ರದಲ್ಲಿ ಕುಳಿತು ಪ್ರಯೋಗ ಮಾಡುವುದಕ್ಕಿಂತ ರೈತರ ಜಮೀನುಗಳಿಗೆ ಹೋಗಿ ಸಮಸ್ಯೆ ಅರಿತು ಪರಿಹಾರ ಕಲ್ಪಿಸುವ ಕೆಲಸವಾಗಬೇಕು. ಕಾರ್ಯಕ್ರಮ ಆಧಾರಿತ, ಹಣ ಆಧಾರಿತ ಸಂಶೋಧನೆಗಿಂತ ರೈತ ಆಧಾರಿತ ಸಂಶೋಧನೆಗಳು ನಡೆಯಬೇಕು. ವಿಜ್ಞಾನಿಗಳು ಮನಸ್ಥಿತಿ ಬದಲಾಯಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕನಕದಾಸರು ತಮ್ಮ ಕಾವ್ಯದಲ್ಲಿ ಅಕ್ಕಿಗಿಂತ ರಾಗಿಯೇ ಶೇಷ್ಠ ಎಂದು ಸಿರಿಧಾನ್ಯಗಳ ಮಹತ್ವ ವಿವರಿಸಿದ್ದಾರೆ. ನಾನು 30 ವರ್ಷಗಳಿಂದ ಸಿರಿಧಾನ್ಯವನ್ನೇ ಸೇವಿಸುತ್ತಿದ್ದೇನೆ. ಈ ವಿಚಾರದಲ್ಲಿ ನನಗೆ ಹೆಚ್ಚು ಆಸಕ್ತಿ ಇದೆ. ಈ ಭಾಗಕ್ಕೆ ಸಮೀಪವಿರುವ ಜಹಿರಾಬಾದ್‌ ಒಣಹವೆ ಪ್ರದೇಶವಾಗಿದ್ದು, ಅಲ್ಲಿ 100 ವರ್ಷಗಳ ಜೋಳ, 200 ವರ್ಷಗಳ ಹಿಂದಿನ ರಾಗಿ ಸಂಗ್ರಹವಿದೆ. ಈ ಬಗ್ಗೆ ರೈತರು ತಿಳಿದುಕೊಳ್ಳುವುದು ಅಗತ್ಯವಿದೆ ಎಂದರು.

Advertisement

ಬೆಂಗಳೂರಿನಲ್ಲಿ ವ್ಯಾಪಾರ ಮೇಳ
ರಾಯಚೂರು ಜಿಲ್ಲೆಯಲ್ಲಿ ರಾಜ್ಯ ಸರ್ಕಾರದಿಂದ ಜವಳಿ ಪಾರ್ಕ್‌ ನಿರ್ಮಿಸಲಾಗುವುದು. ಶೀಘ್ರದಲ್ಲೇ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಸಿರಿಧಾನ್ಯ ವ್ಯಾಪಾರ ಮೇಳ ನಡೆಸಲಾಗುವುದು ಎಂದು ತಿಳಿಸಿದರು.

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ನರೇಂದ್ರ ಸಿಂಗ್‌ ಥೋಮರ್‌, ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಸಚಿವರಾದ ಬಿ.ಸಿ. ಪಾಟೀಲ್‌, ಶಂಕರ ಪಾಟೀಲ್‌ ಮುನೇನಕೊಪ್ಪ, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆದ ಶಾಸಕ ಕೆ.ಶಿವನಗೌಡ ನಾಯಕ, ಕೃಷಿ ವಿವಿಯ ಕುಲಪತಿ ಡಾ| ಕೆ.ಎನ್‌ ಕಟ್ಟಿಮನಿ ಇನ್ನಿತರರಿದ್ದರು.

ಒಂದು ಕಾಲಕ್ಕೆ ನಮ್ಮ ತಟ್ಟೆಯಲ್ಲಿದ್ದ ಸಿರಿಧಾನ್ಯಗಳು ಮಾಯವಾಗಿದ್ದು, ಈಗ ಮತ್ತೆ ಎಲ್ಲರ ತಟ್ಟೆಗೆ ಸಿರಿಧಾನ್ಯ ತರುವ ಕೆಲಸ ರಾಯಚೂರು ಕೃಷಿ ವಿವಿಯಿಂದಲೇ ಆರಂಭಗೊಳ್ಳಲಿ.
  – ಶೋಭಾ ಕರಂದ್ಲಾಜೆ,
ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ

Advertisement

Udayavani is now on Telegram. Click here to join our channel and stay updated with the latest news.

Next