Advertisement

ಶತಕ ದಾಟಿದ ಕೋವಿಡ್ 19 ಸೋಂಕಿತರು

09:13 AM Apr 12, 2020 | Sriram |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ಏರಿಕೆ ಹಾದಿಯಲ್ಲಿ ಸಾಗುತ್ತಿದ್ದು, ಶುಕ್ರವಾರ ಮಧ್ಯಾಹ್ನ ವೇಳೆಗೆ ದ್ವಿಶತಕ ದಾಟಿದೆ. ಒಟ್ಟಾರೆ ಶುಕ್ರವಾರ ರಾಜ್ಯದ ವಿವಿಧೆಡೆ 10 ಮಂದಿಯಲ್ಲಿ ಕೋವಿಡ್ 19 ವೈರಸ್‌ ಸೋಂಕು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿಗೊಳಗಾದವರ ಸಂಖ್ಯೆ 207ಕ್ಕೆ ಏರಿಕೆಯಾಗಿದೆ.

Advertisement

ರಾಜ್ಯದಲ್ಲಿ ಮೊದಲ ಕೋವಿಡ್ 19 ಸೋಂಕು ಪ್ರಕರಣ ದೃಢಪಟ್ಟಿದ್ದು ಮಾ. 8ರಂದು. ಅಲ್ಲಿಂದ ಮಾ. 31ರ ವರೆಗೆ 101 ಮಂದಿಯಲ್ಲಿ ಸೋಂಕು ದೃಢವಾಗಿತ್ತು. ಆದರೆ, ಎಪ್ರಿಲ್‌ನಲ್ಲಿ ದುಪ್ಪಟ್ಟು ಏರಿಕೆ ಕಂಡಿದ್ದು, ಕಳೆದ 10 ದಿನಗಳಲ್ಲಿ 106 ಮಂದಿಗೆ ಸೋಂಕು ತಗಲಿದೆ. ಈ ಪೈಕಿ ಶೇ. 90ರಷ್ಟು ಮಂದಿ ಸೋಂಕಿತರ ಸಂಪರ್ಕ ಹೊಂದಿದವರೇ ಆಗಿದ್ದಾರೆ. ಒಟ್ಟಾರೆ ಸೋಂಕಿತರಲ್ಲಿ ಈವರೆಗೆ 6 ಮಂದಿ ಮೃತಪಟ್ಟಿದ್ದಾರೆ. 34 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದು, 171 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶುಕ್ರವಾರ ಸೋಂಕು ದೃಢಪಟ್ಟವರ ಪೈಕಿ ಎಲ್ಲರೂ ಸೋಂಕಿತರ ಸಂಪರ್ಕ ಹೊಂದಿದ್ದವರು. ಮೈಸೂರಿನಲ್ಲಿ 5, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ತಲಾ ಇಬ್ಬರಿಗೆ ಹಾಗೂ ಕಲಬುರಗಿಯಲ್ಲಿ ಒಬ್ಬರಿಗೆ ಸೋಂಕು ತಗಲಿರುವುದು ಖಚಿತವಾಗಿದೆ. ಸೋಂಕಿತ ರಲ್ಲಿ ಇಬ್ಬರು ಮಕ್ಕಳು ಸೇರಿದ್ದಾರೆ. ಸೋಂಕಿತ ರನ್ನು ಆಯಾ ಜಿಲ್ಲಾ ಕೋವಿಡ್ 19 ಚಿಕಿತ್ಸಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಂಕು ದೃಢಪಟ್ಟವ ರೊಂದಿಗೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿದ್ದವರ ಪತ್ತೆಗೆ ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ. ಎಲ್ಲರನ್ನೂ ಶಂಕಿತರು ಎಂದು ಗುರುತಿಸಿ ಕ್ವಾರಂಟೈನ್‌ ಮಾಡಿ ಕಡ್ಡಾಯವಾಗಿ ಎಲ್ಲರಿಗೂ ಸೋಂಕು ಪರೀಕ್ಷೆ ಮಾಡಲಿದೆ.

ಮಕ್ಕಳ ಸಂಖ್ಯೆ ಹೆಚ್ಚಳ
ಮಕ್ಕಳಲ್ಲಿ ಸೋಂಕು ಹೆಚ್ಚಳವಾಗಿದ್ದು, ಗುರುವಾರ 3, ಶುಕ್ರವಾರ ಇಬ್ಬರು ಮಕ್ಕಳಿಗೆ ಸೋಂಕು ತಗಲಿದೆ. ರಾಜ್ಯದಲ್ಲಿ ಈವರೆಗೆ 10 ಮಕ್ಕಳು ಸೋಂಕಿತರಾಗಿದ್ದಾರೆ. ದ.ಕ.ದಲ್ಲಿ 10 ತಿಂಗಳ ಮಗು, ಬೆಂಗಳೂರು, ಬಾಗಲಕೋಟೆಯಲ್ಲಿ ತಲಾ 3, ತುಮಕೂರು, ಬಳ್ಳಾರಿ, ಮೈಸೂರಿನಲ್ಲಿ ತಲಾ ಒಂದು ಮಗುವಿಗೆ ಸೋಂಕು ದೃಢಪಟ್ಟಿದೆ.
– ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಪರ್ಕದಿಂದ ಅವಲೋಕನದಲ್ಲಿರುವವರು -23,089. ಈ ಪೈಕಿ ಸೋಂಕಿತನ ಪ್ರಾಥಮಿಕ ಸಂಪರ್ಕಿತರು -2,310, ದ್ವಿತೀಯ ಸಂಪರ್ಕಿತರು – 6,510
– ಆಸ್ಪತ್ರೆಗೆ ಶುಕ್ರವಾರ ದಾಖಲಾದ ಶಂಕಿತರು -132, ಬಿಡುಗಡೆಯಾದವರು – 61, ಈವರೆಗೆ ಆಸ್ಪತ್ರೆಯಲ್ಲಿ ದಾಖಲಾಗಿರುವ ಶಂಕಿತರು – 492.
-ಶುಕ್ರವಾರ ನೆಗೆಟಿವ್‌ ಬಂದ ವರದಿ – 497, ಪಾಸಿಟಿವ್‌ ಬಂದ ವರದಿ- 10 ( ಈವರೆಗೆ ಒಟ್ಟಾರೆ ನೆಗೆಟಿವ್‌ – 7,673, ಪಾಸಿಟಿವ್‌ – 207)
-ಶಂಕಿತರ ಪೈಕಿ ಶುಕ್ರವಾರ ಸೋಂಕು ಪರೀಕ್ಷೆಗೆ ಸಂಗ್ರಹಿಸಿದ ಗಂಟಲು ದ್ರವ ಮಾದರಿ – 574
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರು – 171, ಗುಣಮುಖರಾಗಿ ಮನೆಗೆ ತೆರಳಿದವರು – 30.

ನಂಜನಗೂಡಿನ ಜ್ಯೂಬ್ಲಿಯಂಟ್‌ ಕಾರ್ಖಾನೆಗೆ ಕೆಲವು ದಿನಗಳ ಹಿಂದೆ ಚೀನದಿಂದ ಸೆಮಿಲಿಕ್ವಿಡ್‌ ಇದ್ದ ಕಂಟೇನರ್‌ ಬಂದಿತ್ತು. ಬಳಿಕ ಜಪಾನ್‌ನಿಂದ ಮೂವರು, ದಿಲ್ಲಿಯಿಂದ ಒಬ್ಬರು ತಾಂತ್ರಿಕ ಸಿಬಂದಿ ಬಂದಿದ್ದರು. ಈ ಕುರಿತು ಜಪಾನ್‌, ಚೀನ, ದಿಲ್ಲಿಗೆ ಪತ್ರ ಬರೆದಿದ್ದರೂ ಅಲ್ಲಿಂದ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಅವರ ಮೊಬೈಲ್‌ ಕರೆಗಳನ್ನು ಟ್ರೇಸ್‌ ಮಾಡಲಾಗುತ್ತಿದೆ.
– ಬಿ. ಶ್ರೀರಾಮುಲು,
ಆರೋಗ್ಯ ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next