Advertisement

ಧಾರವಾಡಕ್ಕೆ ಕೇಂದ್ರ ಸಂಗೀತ-ನಾಟಕ ಅಕಾಡೆಮಿ ಕಚೇರಿ

04:31 PM Jan 10, 2024 | Team Udayavani |

ಉದಯವಾಣಿ ಸಮಾಚಾರ
ಧಾರವಾಡ: ಸಂಗೀತದ ತವರು ಧಾರವಾಡಕ್ಕೆ ಕೇಂದ್ರ ಸಂಗೀತ-ನಾಟಕ ಅಕಾಡೆಮಿ ಪ್ರಾದೇಶಿಕ ಕಚೇರಿ ಕೂಡ ತರಲಾಗುವುದು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭರವಸೆ ನೀಡಿದರು.

Advertisement

ಸೃಜನಾ ರಂಗಮಂದಿರದಲ್ಲಿ ಪಂ| ಕುಮಾರ ಗಂಧರ್ವರ ಜನ್ಮಶತಾಬ್ದಿ ಅಂಗವಾಗಿ ಜಿ.ಬಿ. ಜೋಶಿ ಮೆಮೋರಿಯಲ್‌ ಟ್ರಸ್ಟ್‌, ಕ್ಷಮತಾ ಸೇವಾ ಸಂಸ್ಥೆ ಹಾಗೂ ಕೇಂದ್ರ ಸಂಸ್ಕೃತಿ ಇಲಾಖೆ, ಎಲ್‌ ಐಸಿ ಸಹಯೋಗದಲ್ಲಿ ಮಂಗಳವಾರದಿಂದ ಆಯೋಜಿಸಿರುವ ಐದು ದಿನಗಳ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಈಗಾಗಲೇ ಧಾರವಾಡಕ್ಕೆ ಬಂದಿರುವ ಲಲಿತಕಲಾ ಅಕಾಡೆಮಿಯಂತೆಯೇ ಕೇಂದ್ರ ಸಂಗೀತ-ನಾಟಕ ಅಕಾಡೆಮಿಯನ್ನೂ ಸ್ಥಾಪಿಸಲಾಗುವುದು. ಫೆಬ್ರವರಿ ಒಳಗಾಗಿ ಅಂತಾರಾಷ್ಟ್ರೀಯ ಮಟ್ಟದ ಕಲಾವಿದರನ್ನು ಆಹ್ವಾನಿಸಿ ಅವಳಿನಗರದಲ್ಲಿ ತಲಾ ಒಂದೊಂದು ಕಾರ್ಯಕ್ರಮ ಆಯೋಜಿಸಿದರೆ ಅದಕ್ಕೆ ಸಂಪೂರ್ಣ ವ್ಯವಸ್ಥೆ ಮಾಡಿಕೊಡುವುದಾಗಿ ತಿಳಿಸಿದರು.

ಸಂಗೀತವೆಂದರೆ ಹಾಡಿ ಕುಣಿಯುವುದಲ್ಲ. ಹಾಗಾದರೆ ಅದು ವಿದೇಶಿ ಸಂಗೀತ. ನಮ್ಮ ಸಂಗೀತ ಕೇಳಿದರೆ ಆರೋಗ್ಯ ಸುಧಾರಿಸಲಿದೆ. ತಲೆನೋವು ಇರುವ ರೋಗಿಗಳಿಗೆ ಹಿಂದೂಸ್ತಾನಿ ಸಂಗೀತ ಕೇಳಲು ವೈದ್ಯರು ಸೂಚಿಸುತ್ತಿದ್ದು, ಅಂತಹ ಶಕ್ತಿ ನಮ್ಮ ಸಂಗೀತಕ್ಕಿದೆ. ನಮ್ಮತನ ಹಾಗೂ ಭಾರತೀಯತೆಯನ್ನು ಕೀಳರಿಮೆಯಿಂದ ನೋಡುವ ಮನಸ್ಥಿತಿ ದೂರ ಮಾಡಿದ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಆರ್ಥಿಕವಾಗಿ ಸಬಲತೆ ಕಡೆಗೆ ಒಯ್ಯುತ್ತಿದ್ದಾರೆ ಎಂದರು.

ವಿಶ್ವಮಟ್ಟದಲ್ಲಿ ಭಾರತ ತಾಕತ್ವಾನ್‌ ದೇಶ ಆಗುತ್ತಿರುವುದರಿಂದ ಇಲ್ಲಿನ ಕುಟುಂಬ ಪದ್ಧತಿ, ಆಹಾರ ಪದ್ಧತಿ, ಔಷಧಿ ಪದ್ಧತಿ, ಯೋಗ ಪದ್ಧತಿ ಉಳಿದ ದೇಶದವರಿಗೆ ಮಾದರಿ ಆಗುತ್ತಿದೆ. ಇದು  ವ್ಯವಸ್ಥಿತ ಜೀವನಕ್ಕೆ ಪೂರಕ ಕೂಡ ಆಗಿದೆ. ಹೀಗಾಗಿ ನಾವು ನಮ್ಮತನದ ಬಗ್ಗೆ ಅಪಾರ ಗೌರವ, ನಂಬಿಕೆ ಇಟ್ಟುಕೊಳ್ಳಬೇಕು ಎಂದು ಹೇಳಿದರು.

Advertisement

ವಿಧಾನಸಭೆ ಪ್ರತಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಮಾತನಾಡಿ, ಧಾರವಾಡ ಸಂಸ್ಕೃತಿ ಇನ್ನೂ ಬಲವಾಗಿ ಬೆಳೆಯಬೇಕೆಂದರೆ ಬೇರೆ ಬೇರೆ ಕಲೆಗಳು ಇಲ್ಲಿ ನೆಲೆಯೂರಬೇಕು. ಅದಕ್ಕಾಗಿ ಲಲಿತಕಲಾ ಅಕಾಡೆಮಿಯಂತೆಯೇ ಸಂಗೀತ-ನಾಟಕ ಅಕಾಡೆಮಿಯನ್ನೂ ತರಬೇಕು ಎಂದು ಮನವಿ ಮಾಡಿದರು.

ಮೇಯರ್‌ ವೀಣಾ ಬರದ್ವಾಡ, ಎಲ್‌ಐಸಿಯ ದೊರೆಸ್ವಾಮಿ ನಾಯ್ಕ, ರಮಾಕಾಂತ ಜೋಶಿ, ಆನಂದ ಜುಂಜುರವಾಡ ಇನ್ನಿತರರಿದ್ದರು. ಗೋವಿಂದ ಜೋಶಿ ಸ್ವಾಗತಿಸಿದರು. ರವಿ ಕುಲಕರ್ಣಿ ನಿರೂಪಿಸಿದರು. ನಂತರ ಪುಣೆಯ ಪಂ| ವಿಜಯ ಕೋಪರಕರ ಅವರ ಗಾಯನ ನಡೆಯಿತು. ಡಾ|ಎನ್‌. ರಾಜಮ್‌ ಹಾಗೂ ಅವರ ಮೊಮ್ಮಗಳು ನಂದಿನಿ ಶಂಕರ ಅವರಿಂದ ವಯೋಲಿನ್‌ ಜುಗಲಬಂಧಿ ಜರುಗಿತು.

Advertisement

Udayavani is now on Telegram. Click here to join our channel and stay updated with the latest news.

Next