Advertisement

ನೂತನ ಸೆಂಟ್ರಲ್‌ ಮಾರುಕಟ್ಟೆ; ಶೀಘ್ರ ಕಾಮಗಾರಿ ಆರಂಭ ನಿರೀಕ್ಷೆ

12:22 PM Oct 16, 2022 | Team Udayavani |

ಸ್ಟೇಟ್‌ಬ್ಯಾಂಕ್‌: ಕೆಲವು ತಿಂಗಳಿನಿಂದ ಬಾಕಿಯಾಗಿರುವ ಹೊಸ ಸೆಂಟ್ರಲ್‌ ಮಾರುಕಟ್ಟೆ ನಿರ್ಮಾಣ ಕಾಮಗಾರಿಗೆ ಕೆಲವೇ ದಿನಗಳಲ್ಲಿ ಚಾಲನೆ ದೊರೆಯುವ ನಿರೀಕ್ಷೆಯಿದೆ.

Advertisement

ಒಟ್ಟು 3.61 ಎಕರೆ ಸ್ಥಳದಲ್ಲಿ ಸರಕಾರಿ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಒಟ್ಟು 114 ಕೋ. ರೂ. ವೆಚ್ಚದಲ್ಲಿ ಹೊಸ ಮಾರುಕಟ್ಟೆ ನಿರ್ಮಿಸಲು ಸ್ಮಾರ್ಟ್‌ ಸಿಟಿ ಉದ್ದೇಶಿಸಿದೆ. ಹೊಸ ಮಾರುಕಟ್ಟೆಯಲ್ಲಿ ನೆಲ ಅಂತಸ್ತು ಮತ್ತು ಅದರ ಮೇಲ್ಗಡೆ 5 ಮಹಡಿ ಗಳಿರುತ್ತವೆ. ತಳ ಭಾಗದ ಎರಡು ಅಂತಸ್ತುಗಳು ವಾಹನ ಪಾರ್ಕಿಂಗ್‌ಗೆ ಮೀಸಲಾಗಿರುತ್ತದೆ. ಮೂರು ವರ್ಷ ಗಳ ಒಳಗೆ ಈ ಕಾಮಗಾರಿಯನ್ನು ಪೂರ್ಣಗೊಳಿಸಬೇಕಾಗಿದೆ.

ಸೆಂಟ್ರಲ್‌ ಮಾರುಕಟ್ಟೆ ನಿರ್ಮಾಣ ವಾಗುವ ಸ್ಥಳದಲ್ಲಿ ಕಾಮಗಾರಿ ಸಂದರ್ಭ ಬೇಸ್‌ಮೆಂಟ್‌ಗಾಗಿ ಅಗೆಯಲಾ ಗುತ್ತದೆ. ಈ ವ್ಯಾಪ್ತಿ ಹಾಗೂ ಇದರ ಸುತ್ತಲೂ ಶೀಟ್‌ ಅಳವಡಿಸಿ ಬಂದ್‌ ಮಾಡಲಾಗುತ್ತದೆ. ಇದರಿಂದಾಗಿ ಸದ್ಯ ರಸ್ತೆ ಬದಿ ವ್ಯಾಪಾರ ಮಾಡುವವರಿಗೆ ಮುಂದೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ. ಈ ಮಧ್ಯೆ ಕಾಮಗಾರಿ ವೇಳೆ ವಾಹನ ಸಂಚಾರಕ್ಕೂ ಇಲ್ಲಿ ಸಮಸ್ಯೆ ಆಗಲಿದೆ.

ತಡ ಯಾಕೆ?

ಲಾಕ್‌ಡೌನ್‌ಗೂ ಮುನ್ನವೇ ನೂತನ ಸೆಂಟ್ರಲ್‌ ಮಾರುಕಟ್ಟೆ ಕಾಮಗಾರಿಯ ಟೆಂಡರ್‌ ಅಂತಿಮವಾಗಿ ಗುತ್ತಿಗೆದಾರರ ನೇಮಕವಾಗಿತ್ತು. ಆದರೆ ಆಗ ನಿಗದಿ ಮಾಡಿದ ಮೊತ್ತ, ಲಾಕ್‌ಡೌನ್‌ ಬಳಿಕದ ಮೊತ್ತದಲ್ಲಿ ವ್ಯತ್ಯಾಸವಾದ ಕಾರಣದಿಂದ ಟೆಂಡರ್‌ ವಹಿಸಿದವರು ಕೊಂಚ ಸಮಯ ನಿರಾಸಕ್ತಿ ತೋರಿದ್ದರು ಎನ್ನಲಾಗಿದೆ. ಬಳಿಕ ಮಾತುಕತೆ ನಡೆಸಿ ಸರಿಪಡಿಸಲಾಗಿತ್ತು. ಜತೆಗೆ ಕಾಮಗಾರಿಯ ಪ್ರಾರಂಭದಲ್ಲಿ ಬೇಸ್‌ ಮೆಂಟ್‌ ಮಾಡಲು ಬೃಹತ್‌ ಹೊಂಡ ಮಾಡಬೇಕಾಗುತ್ತದೆ. ಮಳೆ ಕೂಡ ಜೋರಾಗಿದ್ದರಿಂದ ಕೆಲಸ ನಡೆಸುವುದು ಕಷ್ಟ ಎಂಬ ಕಾರಣದಿಂದ ಕಾಮಗಾರಿ ತಡವಾಗಿದೆ ಎನ್ನಲಾಗಿದೆ.

Advertisement

ಹಳೆಯ ಮಾರ್ಕೆಟ್‌ ನೆನಪು ಮಾತ್ರ!

ಸೆಂಟ್ರಲ್‌ ಮಾರ್ಕೆಟ್‌ ಕಟ್ಟಡಕ್ಕೆ (ತರಕಾರಿ/ ಹಣ್ಣು ಹಂಪಲು ಮತ್ತು ಮೀನು/ ಮಾಂಸದ ಮಾರ್ಕೆಟ್‌ನ 2 ಕಟ್ಟಡಗಳು) ಸುಮಾರು 62 ವರ್ಷಗಳ ಇತಿಹಾಸವಿದೆ. ಹಳೆಯದಾದ ಈ ಕಟ್ಟಡ ಶಿಥಿಲವಾಗಿತ್ತು.

ಇಲ್ಲಿರುವ ಮೀನು/ ಮಾಂಸದ ಮಾರ್ಕೆಟ್‌ ಕಟ್ಟಡದ ಕೆಲವು ಭಾಗಗಳು ಕೆಲವು ವರ್ಷಗಳ ಹಿಂದೆಯೇ ಕುಸಿದಿದ್ದು, ಬಳಿಕ ಅದಕ್ಕೆ ತೇಪೆ ಹಚ್ಚಲಾಗಿತ್ತು. ಬಳಿಕ ಮಾರುಕಟ್ಟೆಯನ್ನು ಆಧುನೀಕರಿಸಬೇಕಾದ ಕಾರಣ ಸ್ಮಾರ್ಟ್‌ ಸಿಟಿ ಯೋಜನೆಯಡಿ ನೂತನ ಮಾರ್ಕೆಟ್‌ ಕಟ್ಟಡ ಕಟ್ಟಲು 2016 ಜೂ. 29ರಂದು ನಡೆದ ಮಹಾನಗರ ಪಾಲಿಕೆ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಬಳಿಕ ಸ್ಮಾರ್ಟ್‌ ಸಿಟಿ ಮಂಡಳಿ ಸಭೆಯಲ್ಲಿ ಅನುಮೋದನೆ ಪಡೆಯಲಾಗಿತ್ತು. 2018 ಸೆ. 22ರಂದು ನಡೆದ ಉನ್ನತಾಧಿಕಾರ ಕಮಿಟಿ ಸಭೆಯಲ್ಲಿ ಮಂಜೂರಾತಿ ನೀಡಲಾಗಿತ್ತು.

ಬಳಿಕ ಟೆಂಡರ್‌ ಪ್ರಕ್ರಿಯೆಯೂ ಮುಗಿದು, ಪಿಪಿಪಿ ಪಾಲುದಾರಿಕೆಯನ್ನೂ ಅಂತಿಮಗೊಳಿಸಲಾಗಿತ್ತು. ಈ ಮಧ್ಯೆ ಕೊರೊನಾ ತೀವ್ರವಾದಾಗ 2020 ಎ. 2ರಂದು ಕಟ್ಟಡ ಪುನಃ ನಿರ್ಮಾಣಕ್ಕೆ ಇದು ಸೂಕ್ತ ಸಮಯ ಎಂದು ತೀರ್ಮಾನಿಸಿ ಮಾರ್ಕೆಟ್‌ನಲ್ಲಿ ವ್ಯಾಪಾರ ಚಟುವಟಿಕೆಗಳನ್ನು ನಿಷೇಧಿಸಿ, ಶಿಥಿಲವಾದ ಹಳೆಯ ಕಟ್ಟಡವನ್ನು ಕೆಡಹಲು ನಿರ್ಧರಿಸಿ ಎ. 4ರಂದು ಸಾರ್ವಜನಿಕ ಪ್ರಕಟನೆ ಹೊರಡಿಸಿತ್ತು. ಕೆಡಹುವ ಕಾಮಗಾರಿಯನ್ನೂ ಆರಂಭಿಸಲಾಗಿತ್ತು.

ಇದನ್ನು ಆಕ್ಷೇಪಿಸಿ ಕೆಲವು ಮಂದಿ ವ್ಯಾಪಾರಿಗಳು ಹೈಕೋರ್ಟ್‌ ನಿಂದ ತಡೆಯಾಜ್ಞೆ ತಂದ ಹಿನ್ನೆಲೆಯಲ್ಲಿ 2021ರ ಮೇ 29ರಂದು ಕಾಮಗಾರಿ ನಿಲ್ಲಿಸಲಾಗಿತ್ತು. ಈ ವರ್ಷದ ಎಪ್ರಿಲ್‌ ನಲ್ಲಿ ನ್ಯಾಯಾಲಯ ತಡೆಯಾಜ್ಞೆ ತೆರವು ಮಾಡಿದ ಹಿನ್ನೆಲೆಯಲ್ಲಿ ಪಾಲಿಕೆಯಿಂದ ಮತ್ತೆ ಕಾರ್ಯಾಚರಣೆ ನಡೆಸಿ ಹಳೆಯ ಕಟ್ಟಡ ಸಂಪೂರ್ಣ ತೆರವು ಮಾಡಲಾಗಿದೆ. ಶೀಘ್ರ ಕಾಮಗಾರಿ ಆರಂಭ ಹೊಸದಾಗಿ ಸೆಂಟ್ರಲ್‌ ಮಾರುಕಟ್ಟೆ ನಿರ್ಮಾಣ ಮಾಡಲು ಕೆಳ ಅಂತಸ್ತಿಗಾಗಿ ಬೃಹತ್‌ ಹೊಂಡ ಮಾಡಬೇಕಾಗುತ್ತದೆ. ಆದರೆ ಮಳೆಯ ಕಾರಣದಿಂದ ಅದರ ಕಾಮಗಾರಿ ನಡೆಸಲು ಸಾಧ್ಯವಾಗಿರಲಿಲ್ಲ. ಟೆಂಡರ್‌ ದಾರರ ಜತೆಗೆ ಇದೀಗ ಎಲ್ಲ ಹಂತದ ಮಾತುಕತೆ ನಡೆಸಲಾಗಿದ್ದು, ಕೆಲವೇ ದಿನದಲ್ಲಿ ಕಾಮಗಾರಿ ಆರಂಭ ಮಾಡಲಾಗುವುದು. – ಅಕ್ಷಯ್‌ ಶ್ರೀಧರ್‌, ಆಯುಕ್ತರು, ಮಂಗಳೂರು ಪಾಲಿಕೆ

Advertisement

Udayavani is now on Telegram. Click here to join our channel and stay updated with the latest news.

Next