Advertisement

Rice ಹೆಚ್ಚುವರಿ ಕಾರ್ಡ್‌ದಾರರಿಗೆ ಅಕ್ಕಿ ನೀಡಲು ಕೇಂದ್ರ ಸರಕಾರ ಅಸ್ತು

12:02 AM Oct 12, 2023 | Team Udayavani |

ಉಡುಪಿ: ರಾಜ್ಯ ಸರಕಾರವು ಬಿಪಿಎಲ್‌ ಕಾರ್ಡ್‌ ಹೊಂದಿರುವ ಕುಟುಂಬಗಳ ಪ್ರತೀ ಸದಸ್ಯನಿಗೆ ಹೆಚ್ಚುವರಿಯಾಗಿ 5 ಕೆ.ಜಿ. ಅಕ್ಕಿ ನೀಡಲು ಅಗತ್ಯವಿರುವ ಅಕ್ಕಿಯನ್ನು ಪೂರೈಸಲು ಕೇಂದ್ರ ಸರಕಾರ ಇನ್ನೂ ಅನುಮತಿ ಕೊಟ್ಟಿಲ್ಲ. ಆದರೆ ರಾಜ್ಯ ಸರಕಾರ ಈಗಾಗಲೇ ವಿತರಿಸಿರುವ ಹೆಚ್ಚುವರಿ ಬಿಪಿಎಲ್‌ ಕಾರ್ಡ್‌ಗಳಿಗೆ ಅಕ್ಟೋಬರ್‌ ಮತ್ತು ನವೆಂಬರ್‌ ತಿಂಗಳ ಅಕ್ಕಿ ನೀಡಲು ಕೇಂದ್ರ ಸಮ್ಮತಿಸಿದೆ.

Advertisement

ಕೇಂದ್ರ ಸರಕಾರ ನೀಡುತ್ತಿರುವ ಪಡಿತರ ಅಕ್ಕಿಯ ಜತೆಗೆ ರಾಜ್ಯ ಸರಕಾರದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯಿಂದ ಹೆಚ್ಚುವರಿಯಾಗಿ ಬಿಪಿಎಲ್‌ ಕಾರ್ಡ್‌ನ ಪ್ರತೀ ಸದಸ್ಯರಿಗೆ 5 ಕೆ.ಜಿ. ಅಕ್ಕಿ ನೀಡುವುದಾಗಿ ಘೋಷಿಸಿತ್ತು. ಆದರೆ ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿಗೆ ಕೇಂದ್ರ ಸರಕಾರ ನಿರ್ಬಂಧ ಹೇರಿದ್ದ ಹಿನ್ನೆಲೆಯಲ್ಲಿ ಅಕ್ಕಿಯ ಕೊರತೆಯಿಂದ ಅದಕ್ಕೆ ಸಮನಾದ ಮೌಲ್ಯದ ಹಣವನ್ನು ನೇರವಾಗಿ ಫ‌ಲಾನುಭವಿಗಳ ಖಾತೆಗೆ ವರ್ಗಾಯಿಸಲಾಗುತ್ತಿದೆ. ತಾಂತ್ರಿಕ ಕಾರಣದಿಂದ ಅರ್ಹ ಫ‌ಲಾನುಭವಿಗಳಲ್ಲಿ ಅನೇಕರಿಗೆ ಹಣವೂ ತಲುಪಿಲ್ಲ.

ರಾಜ್ಯ ಸರಕಾರ ಹಣದ ಬದಲು ಅಕ್ಕಿಯನ್ನೇ ನೀಡಲು ನಿರಂತರ ಪ್ರಯತ್ನಿಸುತ್ತಲೇ ಬಂದಿದೆ. ಈಗ ಕೇಂದ್ರ ಸರಕಾರ ರಾಜ್ಯಕ್ಕೆ ಅಗತ್ಯವಿರುವ ಹೆಚ್ಚುವರಿ ಅಕ್ಕಿ ನೀಡಲು ಹಸುರು ನಿಶಾನೆ ತೋರಿದೆ. ಕೇಂದ್ರ ಸರಕಾರದ ಸಂಸ್ಥೆಗಳಾದ ಎನ್‌ಸಿಸಿಎಫ್, ನಾಫೆಡ್‌, ಕೇಂದ್ರೀಯ ಭಂಡಾರದಿಂದ ಅಕ್ಕಿ ಖರೀದಿಸಲು ಆದೇಶಿಸಲಾಗಿದೆ.

40 ಸಾವಿರ ಮೆಟ್ರಿಕ್‌ ಟನ್‌
ಹೆಚ್ಚುವರಿಯಾಗಿ ವಿತರಿಸಿರುವ ಬಿಪಿಎಲ್‌ ಕಾರ್ಡ್‌ದಾರಿಗೆ ಅಕ್ಟೋಬರ್‌ ಮತ್ತು ನವೆಂಬರ್‌ಗೆ ಅಗತ್ಯವಿರುವ 40 ಸಾವಿರ ಮೆಟ್ರಿಕ್‌ ಟನ್‌ ಅಕ್ಕಿಯನ್ನು ಕೆ.ಜಿ.ಗೆ 34.60 ರೂ. ದರದಲ್ಲಿ ಎನ್‌ಸಿಸಿಎಫ್, ನಾಫೆಡ್‌, ಕೇಂದ್ರೀಯ ಭಂಡಾರದ ಮೂಲಕ ಖರೀದಿಸಲು ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಉಡುಪಿ ಮತ್ತು ದ.ಕ. ಜಿಲ್ಲೆಯಲ್ಲಿ ಹಂಚಿಕೆಯಾಗಿರುವ ಹೆಚ್ಚುವರಿ ಬಿಪಿಎಲ್‌ ಕಾರ್ಡ್‌ದಾರರಿಗೂ ಈ ಅಕ್ಕಿ ಸಿಗಲಿದೆ.

ಎತ್ತುವಳಿ ಸೂಚನೆ ಬಂದಿಲ್ಲ
ಅಕ್ಕಿ ಖರೀದಿ/ ಎತ್ತುವಳಿಗೆ ಅಧಿಕೃತ ಆದೇಶ ಈವರೆಗೆ ಬಂದಿಲ್ಲ. ಪ್ರತೀ ತಿಂಗಳು 10ನೇ ತಾರೀಕಿನೊಳಗೆ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಿತರಣೆ ಪ್ರಕ್ರಿಯೆ ಆರಂಭವಾಗುತ್ತದೆ. ಆದರೆ ರಾಜ್ಯ ಸರಕಾರದ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ವಿತರಣೆಗೆ ಬೇಕಾದಷ್ಟು ಅಕ್ಕಿ ಪೂರೈಕೆಯಾಗಿಲ್ಲ. ಹೀಗಾಗಿ ಪಡಿತರ ಕಾರ್ಡ್‌ ದಾರರಿಗೆ ಯಾವುದೇ ಸೂಚನೆ ನೀಡಿಲ್ಲ. ಅಲ್ಲದೆ ಎರಡನೇ ತಿಂಗಳ ಹಣ ವರ್ಗಾವಣೆಯೂ ಆಗಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next