Advertisement

‘ಗರೀಬ್ ರಥ’ ಇನ್ನು ಕೇವಲ ನೆನಪು ಮಾತ್ರ?

08:45 AM Jul 19, 2019 | sudhir |

ನವದೆಹಲಿ: ಮಧ್ಯಮ ಮತ್ತು ಕಡಿಮೆ ಆದಾಯದ ರೈಲ್ವೇ ಪ್ರಯಾಣಿಕರನ್ನು ಗಮನದಲ್ಲಿರಿಸಿಕೊಂಡು ಅಂದಿನ ರೈಲ್ವೇ ಸಚಿವ ಲಾಲೂ ಪ್ರಸಾದ್ ಯಾದವ್ ಅವರು ಪ್ರಾರಂಭಿಸಿದ್ದ ‘ಗರೀಬ್ ರಥ’ ರೈಲು ಇನ್ನು ಇತಿಹಾಸದ ಭಾಗವಾಗಲಿದೆಯೇ? ಹೌದೆನ್ನುತ್ತಿದೆ ಈ ವಲಯದಲ್ಲಿ ನಡೆಯುತ್ತಿರುವ ಇತ್ತೀಚಿಗನ ಬೆಳವಣಿಗೆಗಳು. ಕೆಂದ್ರ ಸರಕಾರವು ಗರೀಬ್ ರಥ ರೈಲು ಸೇವೆಯನ್ನು ನಿಧಾನವಾಗಿ ಸ್ಥಗಿತಗೊಳಿಸುವ ಚಿಂತನೆಯಲ್ಲಿದೆ ಎಂದು ತಿಳಿದುಬಂದಿದೆ.

Advertisement

ಇದಕ್ಕೆ ಪೂರಕವಾಗಿ ರೈಲ್ವೇ ಸಚಿವಾಲಯವು ಗರೀಬ್ ರಥ ಎಕ್ಸ್ ಪ್ರೆಸ್ ರೈಲಿನ ಹೊಸ ಬೋಗಿಗಳ ನಿರ್ಮಾಣವನ್ನು ಸ್ಥಗಿತಗೊಳಿಸುವಂತೆ ಈಗಾಗಲೇ ಆದೇಶಿಸಿದೆ ಎಂಬ ಅಂಶವೂ ಇದೀಗ ಬಹಿರಂಗಗೊಂಡಿದೆ. ಇದರ ಅರ್ಥ ಒಂದೋ ಗರೀಬ್ ರಥ ರೈಲು ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುವುದು ಇಲ್ಲವೇ ಇವುಗಳನ್ನು ಮೇಲ್ ಅಥವಾ ಎಕ್ಸ್ ಪ್ರೆಸ್ ರೈಲುಗಳನ್ನಾಗಿ ಪರಿವರ್ತಿಸಲಾಗುವುದಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಇತ್ತ ಭಾರತೀಯ ರೈಲ್ವೇಯು ಈಗಾಗಲೇ ಕಾಥ್ಗೊಡಂ – ಜಮ್ಮು ಮತ್ತು ಕಾಥ್ಗೊಡಂ – ಕಾನ್ಪುರ ಮಾರ್ಗಗಳಲ್ಲಿ ಸಂಚರಿಸುತ್ತಿದ್ದ ಗರೀಬ್ ರಥ ರೈಲು ಸೇವೆಗಳನ್ನು ಮೇಲ್ ಅಥವಾ ಎಕ್ಸ್ ಪ್ರೆಸ್ ರೈಲು ಸೇವೆಗಳಿಗೆ ಬದಲಾಯಿಸಿದೆ ಎಂಬುದು ಗಮನಾರ್ಹ ಅಂಶವಾಗಿದೆ.
ಇದರಿಂದಾಗಿ ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ಇನ್ನು ಹೆಚ್ಚಿನ ದರವನ್ನು ನೀಡಿ ರೈಲು ಪ್ರಯಾಣ ಕೈಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಉದಾಹರಣೆಗೆ ದೆಹಲಿ – ಬಾಂದ್ರಾ ಗರೀಬ್ ರಥ ರೈಲು ಪ್ರಯಾಣದ ದರ 1050 ರೂಪಾಯಿಗಳಾಗಿತ್ತು ಆದರೆ ಇದೀಗ ಇದೇ ಮಾರ್ಗದ ಎಕ್ಸ್ ಪ್ರೆಸ್ ರೈಲಿನ ದರ 1500 ರಿಂದ 1600 ರೂಪಾಯಿಗಳಾಗಲಿವೆ.

ಸದ್ಯಕ್ಕೆ ಕಾರ್ಯಾಚರಿಸುತ್ತಿರುವ ಗರೀಬ್ ರಥ ರೈಲಿನ ಬೋಗಿಗಳು 10-14 ವರ್ಷಗಳಷ್ಟು ಹಳೆಯದಾಗಿರುವುದರಿಂದ ಇವುಗಳ ನಿರ್ವಹಣಾ ವೆಚ್ಚವು ರೈಲ್ವೇ ಇಲಾಖೆಗೆ ಒಂದು ಹೊರೆಯಾಗಿ ಪರಿಣಮಿಸುತ್ತಿದೆ. ಹಾಗಾಗಿ ರೈಲ್ವೇ ಇಲಾಖೆಗೆ ಹೆಚ್ಚು ಆದಾಯವನ್ನು ತಂದುಕೊಡುವ ನಿಟ್ಟಿನಲ್ಲಿ ಗರೀಬ್ ರಥದ ಬದಲಿಗೆ 3-ಎಸಿ ಎಕ್ಸ್ ಪ್ರೆಸ್ ರೈಲುಗಳನ್ನು ಓಡಿಸುವ ಯೋಚನೆ ರೈಲ್ವೇಯದ್ದಾಗಿದೆ.

ಈ ಯು.ಪಿ.ಎ. –I ಸಮ್ಮಿಶ್ರ ಸರಕಾರದಲ್ಲಿ ರೈಲ್ವೇ ಸಚಿವರಾಗಿದ್ದ ಲಾಲೂ ಪ್ರಸಾದ್ ಯಾದವ್ ಅವರು  ಎ.ಸಿ. ತ್ರೀ ಟೈರ್ ಗರೀಬ್ ರಥ್ ರೈಲುಗಳ ಓಡಾಟಕ್ಕೆ ಚಾಲನೆ ನೀಡಿದ್ದರು. ಮಧ್ಯಮ ಮತ್ತು ತಳ ಆದಾಯವನ್ನು ಹೊಂದಿರುವ ರೈಲ್ವೇ ಪ್ರಯಾಣಿಕರನ್ನು ಗಮನದಲ್ಲಿರಿಸಿಕೊಂಡು ಇದನ್ನು ಪ್ರಾರಂಭಿಸಲಾಗಿತ್ತು. ಪ್ರಪ್ರಥಮ ‘ಗರೀಬ್ ರಥ’ ರೈಲುಯಾನ ಬಿಹಾರದ ಸಹರ್ಸಾದಿಂದ ಪಂಜಾಬ್ ನ ಅಮೃತಸರದ ನಡುವೆ ನಡೆದಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next