Advertisement

ರೈತರ ಆದಾಯ ದ್ವಿಗುಣಗೊಳಿಸಲು ಕೇಂದ್ರ ಸರಕಾರದ ನೂರಾರು ಯೋಜನೆ- ಈರಣ್ಣ ಕಡಾಡಿ

06:02 PM Apr 10, 2022 | Team Udayavani |

ಬೆಂಗಳೂರು: ನಮ್ಮ ರೈತರ ಆದಾಯ ದ್ವಿಗುಣ ಆಗಬೇಕೆಂಬ ಕರೆಯನ್ನು ಸ್ವಾತಂತ್ರ್ಯಾನಂತರ ನೀಡಿದ ಮೊದಲ ಪ್ರಧಾನಿ ನರೇಂದ್ರ ಮೋದಿಯವರು. ರೈತರ ಆದಾಯ ದ್ವಿಗುಣಗೊಳಿಸಲು ನೂರಾರು ಯೋಜನೆಗಳನ್ನು ಅವರು ಜಾರಿಗೊಳಿಸಿದ್ದಾರೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಅಧ್ಯಕ್ಷರು ಮತ್ತು ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಅವರು ಮೆಚ್ಚುಗೆ ಸೂಚಿಸಿದರು.

Advertisement

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಸರಕಾರಗಳದ್ದು ಘೋಷಣೆಗಳು ಕೇವಲ ಘೋಷಣೆಯಾಗಿ ಇದ್ದರೆ, ನಮ್ಮ ಸರಕಾರವು ಅದನ್ನು ಸಮರ್ಪಕವಾಗಿ ಜಾರಿಗೊಳಿಸಿದೆ ಎಂದು ತಿಳಿಸಿದರು.

ಹಿಂದಿನ ಸರಕಾರದಲ್ಲಿ ಕೃಷಿ ಕ್ಷೇತ್ರಕ್ಕೆ 21,933 ಕೋಟಿ ರೂಪಾಯಿ ಬಜೆಟ್ ಇತ್ತು. ಈ ಬಾರಿಯ ಬಜೆಟ್‍ನಲ್ಲಿ ಕೃಷಿ ಕ್ಷೇತ್ರಕ್ಕೆ 1,32,523 ಕೋಟಿ ರೂ. ಮೀಸಲಿಡಲಾಗಿದೆ. ಮಾರುಕಟ್ಟೆಯಲ್ಲಿ ಖರೀದಿ ದರ ಕುಸಿದಾಗ ಕನಿಷ್ಠ ಬೆಂಬಲ ಬೆಲೆಯಡಿ ಕೃಷಿ ಉತ್ಪನ್ನ ಖರೀದಿಸುತ್ತಿದ್ದು, 1.63 ಲಕ್ಷ ರೈತರಿಂದ 1,208 ಲಕ್ಷ ಟನ್ ಭತ್ತ ಮತ್ತು ಗೋಧಿ ಖರೀದಿಸಿ ನೇರವಾಗಿ ರೈತರ ಖಾತೆಗಳಿಗೆ 2.37 ಲಕ್ಷ ಕೋಟಿ ಹಣವನ್ನು ಜಮಾ ಮಾಡಿದ್ದು ಒಂದು ದಾಖಲೆ ಎಂದು ವಿವರಿಸಿದರು. 15,500 ಕೋಟಿ ರೂಪಾಯಿಯನ್ನು ಈ ಬಾರಿಯ ಬಜೆಟ್‍ನಲ್ಲಿ ರೈತರ ಬೆಳೆ ವಿಮೆಗಾಗಿ ಮೀಸಲಿಡಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ:ಶಿವಸೇನೆ ನಕಲಿ ಜಾತ್ಯತೀತ: ಉರ್ದು ಕ್ಯಾಲೆಂಡರ್ ಉಲ್ಲೇಖಿಸಿದ ಫಡ್ನವಿಸ್

ಫಸಲ್ ಬಿಮಾ ಯೋಜನೆಯಡಿ ಸುಮಾರು 2.24 ಲಕ್ಷ ರೈತರಿಗೆ 28,129 ಕೋಟಿ ರೂಪಾಯಿ ಪರಿಹಾರ ಲಭಿಸಿದೆ. ಮಣ್ಣಿನ ಫಲವತ್ತತೆ ಕಾಪಾಡುವುದು, ಮಣ್ಣಿನ ಕುರಿತ ವರದಿ ಆಧಾರದಲ್ಲಿ ಬೆಳೆ ಬೆಳೆಯಲು ಮಾರ್ಗದರ್ಶನ ನೀಡಲು 11.98 ಕೋಟಿ ರೈತರಿಗೆ ಸಾಯಿಲ್ ಹೆಲ್ತ್ ಕಾರ್ಡ್ ನೀಡಲಾಗಿದೆ ಎಂದು ವಿವರಿಸಿದರು.

Advertisement

ಕಡಿಮೆ ನೀರಿನಿಂದ ಹೆಚ್ಚು ಬೆಳೆ ತೆಗೆಯುವ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ 12,954 ಕೋಟಿ ರೂಪಾಯಿ ಪ್ರಕಟಿಸಿದ್ದಾರೆ. ಮತ್ತು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಗೆ 10,433 ಕೋಟಿ ರೂಪಾಯಿಯನ್ನು ಘೋಷಿಸಿದ್ದಾರೆ. ರಸಗೊಬ್ಬರ ಸಬ್ಸಿಡಿಗೆ 63,222 ಕೋಟಿ ರೂಪಾಯಿ ಬಿಡುಗಡೆ ಮಾಡಿ ಡಿಎಪಿ ಪ್ರತಿ ಬ್ಯಾಗ್ 2,400 ರೂಪಾಯಿ ಬದಲಾಗಿ 1,200 ರೂಪಾಯಿಗೆ ದೊರಕುವಂತೆ ಮಾಡಿದ್ದಾರೆ ಎಂದು ತಿಳಿಸಿದರು.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯು ಬಹಳ ದೊಡ್ಡ ಪ್ರಮಾಣದ್ದಾಗಿದೆ. ಪ್ರತಿವರ್ಷ 68 ಸಾವಿರ ಕೋಟಿಗಿಂತ ಹೆಚ್ಚು ಹಣವನ್ನು ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ರೈತರ ಖಾತೆಗಳಿಗೆ ಹಾಕಲಾಗುತ್ತಿದೆ. ಕೃಷಿಗೆ ಪೂರಕವಾದ ಚಟುವಟಿಕೆಗೆ ಆದ್ಯತೆ ಕೊಡಲಾಗುತ್ತಿದೆ. ಆಹಾರ ಸಂಸ್ಕರಣೆ ಕ್ಷೇತ್ರಕ್ಕೆ 2,942 ಕೋಟಿ ರೂಪಾಯಿಯನ್ನು ಕೇಂದ್ರ ಸರಕಾರ ಮೀಸಲಿಟ್ಟಿದೆ ಎಂದು ತಿಳಿಸಿದರು.

ಒಂದು ಸಾವಿರ ಎಪಿಎಂಸಿಗಳನ್ನು ಉನ್ನತೀಕರಿಸಿ ಆನ್‍ಲೈನ್ ಟ್ರೇಡಿಂಗ್ ಮಾಡುವ ಇ ನಾಮ್ ವ್ಯವಸ್ಥೆ ಜಾರಿಗೊಳಿಸಿದ್ದು, 1.71 ಕೋಟಿ ರೈತರು ಅದರಡಿ ನೋಂದಾಯಿಸಿಕೊಂಡಿದ್ದಾರೆ. 1.71 ಲಕ್ಷ ವ್ಯಾಪಾರಿಗಳೂ ಇದರಡಿ ಹೆಸರು ನೋಂದಾಯಿಸಿದ್ದಾರೆ. 10 ಸಾವಿರ ರೈತ ಉತ್ಪಾದಕ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು. 2 ಹೆಕ್ಟೇರ್‍ಗಿಂತ ಕಡಿಮೆ ಪ್ರದೇಶ ಇರುವ ರೈತರಿಗೆ ಟ್ರ್ಯಾಕ್ಟರ್, ಡ್ರೋನ್, ಕೃಷಿ ಸಲಕರಣೆಗಳನ್ನು ಈ ರೈತ ಉತ್ಪಾದಕ ಸಂಸ್ಥೆಗಳ ಮೂಲಕ ನೀಡಲು ಯೋಜಿಸಲಾಗಿದೆ ಎಂದರು.

ಹೈನುಗಾರಿಕೆ, ಮೀನು ಸಾಕಾಣಿಕೆ, ಕುರಿ ಸಾಕಾಣಿಕೆ, ಕೋಳಿ ಸಾಕಾಣಿಕೆÉಗೆ ಉತ್ತೇಜನ ಕೊಡಲಾಗುತ್ತಿದೆ. ಈ ಸಲ ಇದಕ್ಕಾಗಿ 6,407 ಕೋಟಿ ರೂಪಾಯಿ ನೀಡಲಾಗಿದೆ. 2021-22 ಅನ್ನು ಆತ್ಮನಿರ್ಭರ ಕೃಷಿ ಮತ್ತು ಸಿರಿಧಾನ್ಯಗಳ ವರ್ಷ ಎಂದು ಘೋಷಿಸಲಾಗಿದೆ. ಹಿಂದೆ ರಸಗೊಬ್ಬರದ ಬಳಕೆಯಿಂದ ವಿಷಯುಕ್ತ ಆಹಾರವನ್ನು ಸೇವಿಸುವಂತಾಗಿತ್ತು. ಈಗ ರಾಸಾಯನಿಕ ಮುಕ್ತ ಸಿರಿಧಾನ್ಯಕ್ಕೆ ಹೆಚ್ಚಿನ ಮಹತ್ವ ಕೊಡಲಾಗುತ್ತಿದೆ ಎಂದು ವಿವರಿಸಿದರು.

ಕೃಷ್ಯುತ್ಪನ್ನಗಳ ಸಾಗಾಟಕ್ಕಾಗಿ 100 ಕಿಸಾನ್ ರೈಲುಗಳನ್ನು ಆರಂಭಿಸಲಾಗಿದೆ. ಶೀತಲೀಕೃತ ವ್ಯವಸ್ಥೆಯಡಿ ಇವುಗಳ ಸಾಗಾಟ ನಡೆಯುತ್ತಿದೆ. ರಸಗೊಬ್ಬರ ಘಟಕಗಳಿಗೆ 48 ಸಾವಿರ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದ್ದು, ರಸಗೊಬ್ಬರ ಕೊರತೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ. ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯನ್ನೂ ಜಾರಿಗೊಳಿಸಿದ್ದೇವೆ. ವಿದ್ಯುತ್ ಕೊರತೆ ಇರುವ ಕಡೆ 20 ಲಕ್ಷ ಪಂಪ್‍ಸೆಟ್‍ಗಳನ್ನು ಸೌರವಿದ್ಯುತ್ ವ್ಯವಸ್ಥೆಯಡಿ ತರಲಾಗಿದೆ ಎಂದರು.

ಕಬ್ಬು ಬೆಳೆಗಾರರಿಗೆ ನೆರವಾಗಲು 35 ಸಾವಿರ ಕೋಟಿ ರೂಪಾಯಿ ನೀಡಿದ್ದೇವೆ. ಇಥೆನಾಲ್ ಉತ್ಪಾದನೆ ಸ್ಥಳೀಯವಾಗಿ ಹೆಚ್ಚಿಸಲಾಗಿದೆ. ಕೃಷಿ, ಕೃಷಿಗೆ ಪೂರಕ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗಿದೆ. ಜಾನುವಾರು, ಮೀನುಗಾರಿಕೆ ಸಾಕಾಣಿಕೆಗೆ ಕಡಿಮೆ ಬಡ್ಡಿ ದರದ ಸಾಲ ಕೊಡುತ್ತಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ: ದೇಶದ ಎಲ್ಲ ಮುಸ್ಲಿಮರು ಕೆಟ್ಟವರು ಎಂಬ ಭಾವನೆ ಸರಿಯಲ್ಲ: ಪ್ರಹ್ಲಾದ್ ಜೋಶಿ

2014ರ ಮೊದಲು ಜಿಡಿಪಿಯಲ್ಲಿ ಕೃಷಿಯ ಪ್ರಮಾಣ ಶೇ 11ರಷ್ಟಿದ್ದುದು ಈಗ ಶೇ 20ಕ್ಕೆ ಏರಿದೆ. 77112 ರೂ. ಇದ್ದ ರೈತರ ತಲಾ ಆದಾಯವು 2019-20ಕ್ಕೆ 1,22,616ಕ್ಕೆ ಹೆಚ್ಚಾಗಿದೆ. ನಾಳೆ ಜಿಲ್ಲಾ, ತಾಲ್ಲೂಕು ಕೇಂದ್ರಗಳಲ್ಲಿ ಕೇಂದ್ರದ ಯೋಜನೆಗಳ ಮಾಹಿತಿ ಕೊಡಲಾಗುವುದು ಎಂದರು. ಕಿಸಾನ್ ಸಮ್ಮಾನ್ ಯೋಜನೆಯಡಿ ರಾಜ್ಯ ಸರಕಾರ ಹೆಚ್ಚುವರಿಯಾಗಿ 4 ಸಾವಿರ ರೂಪಾಯಿ ಕೊಡುತ್ತಿದೆ. ಬೆಳೆಯ ಮೌಲ್ಯವರ್ಧನೆಗೆ ಮತ್ತು ಮಾರುಕಟ್ಟೆ ಮಾಡಲು ಪ್ರತ್ಯೇಕ ಅಧಿಕಾರಿಯನ್ನು ನೇಮಿಸಲಾಗಿದೆ. ಕೃಷಿ ಉದ್ಯಮವಾಗಲು ಬಿಜೆಪಿ ನೇತೃತ್ವದ ರಾಜ್ಯ ಸರಕಾರ ನೆರವಾಗುತ್ತಿದೆ ಎಂದರು.

ಕೃಷಿಕರ ಮಕ್ಕಳಿಗೆ ಸೀಟು ಮೀಸಲು, ಸ್ಕಾಲರ್‍ಶಿಪ್ ಅನ್ನು ರಾಜ್ಯ ಸರಕಾರ ಜಾರಿಗೊಳಿಸಿದೆ. ರೈತ ಮೋರ್ಚಾವು ಇವುಗಳನ್ನು ಅರ್ಹ ಫಲಾನುಭವಿಗೆ ತಲುಪಿಸುತ್ತಿದೆ ಎಂದು ತಿಳಿಸಿದರು.

ನಮ್ಮ ನೆಚ್ಚಿನ ಪ್ರಧಾನಿಗಳಾದ ನರೇಂದ್ರ ಮೋದಿಯವರು ಆತ್ಮನಿರ್ಭರ ಭಾರತದ ಚಿಂತನೆಯನ್ನು ಸಾಕಾರಗೊಳಿಸಲು ಶ್ರಮಿಸುತ್ತಿದ್ದಾರೆ. ದೇಶ ಆತ್ಮನಿರ್ಭರವಾಗಲು ಕೃಷಿ ಕ್ಷೇತ್ರ ಮಹತ್ವದ ಪಾತ್ರ ವಹಿಸುತ್ತದೆ. ಅದು ಸ್ವಾವಲಂಬಿ ಹೆಜ್ಜೆ ಇಡಬೇಕಾಗುತ್ತದೆ. ದೇಶದ ಶೇ 48 ಜನರು ಕೃಷಿ ಮತ್ತು ಕೃಷಿ ಸಂಬಂಧಿ ಚಟುವಟಿಕೆಯ ಮೇಲೆ ಅವಲಂಬಿತವಾಗಿದೆ. 15 ಕೋಟಿ ಕೃಷಿ ಪರಿವಾರಗಳು ದೇಶದಲ್ಲಿದ್ದು, ಅಷ್ಟು ದೊಡ್ಡ ಜನರನ್ನು ಸುಧಾರಣೆ ಮಾಡದ ಹೊರತು ಭಾರತ ದೇಶ ಆತ್ಮನಿರ್ಭರ ಆಗಲು ಸಾಧ್ಯವಿಲ್ಲ ಎಂದು ಕೇಂದ್ರ ಬಿಜೆಪಿ ಸರಕಾರ ಮನಗಂಡಿದೆ. ಅದಕ್ಕಾಗಿ ಅದು ರೈತರಿಗಾಗಿ ವಿಶೇಷ ಯೋಜನೆಗಳನ್ನು 2014ರಿಂದ ಅನುಷ್ಠಾನಕ್ಕೆ ತಂದಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷರಾದ ಲೋಕೇಶ್ ಗೌಡ, ರಾಜ್ಯ ಖಚಾಂಜಿಗಳಾದ ವಿ. ಲಲ್ಲೇಶ ರೆಡ್ಡಿ ಅವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next