Advertisement

ಸಣ್ಣ ಉದ್ಯಮಕ್ಕೆ ಕೊಂಚ ಉತ್ತೇಜನ; ದೀರ್ಘಾವಧಿ ಫ‌ಲದತ್ತ ಗಮನ

10:55 PM Feb 01, 2020 | Sriram |

ಕೇಂದ್ರ ಸರಕಾರದ 2020ರ ಬಜೆಟ್‌ ಹಿನ್ನೆಲೆಯಲ್ಲಿ “ಉದಯವಾಣಿ’ಯು ಶನಿವಾರ ಮಂಗಳೂರು ಕಚೇರಿಯಲ್ಲಿ ಕ್ಷೇತ್ರ ಪರಿಣತರೊಂದಿಗೆ “ಸಂವಾದ’ ಆಯೋಜಿಸಿತ್ತು. ಕೆನರಾ ಚೇಂಬರ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟಿಸ್‌ನ ಅಧ್ಯಕ್ಷ ಐಸಾಕ್‌ ವಾಜ್‌, ಕೆನರಾ ಸಣ್ಣ ಕೈಗಾರಿಕಾ ಅಸೋಸಿಯೇಶನ್‌ ಅಧ್ಯಕ್ಷ ಅಜಿತ್‌ ಕಾಮತ್‌, ಹಿರಿಯ ಲೆಕ್ಕ ಪರಿಶೋಧಕ ಎಸ್‌.ಎಸ್‌. ನಾಯಕ್‌, ಹಿರಿಯ ಬ್ಯಾಂಕರ್‌ ಬಿ.ಆರ್‌. ಭಟ್‌ ಹಾಗೂ ನವೋದ್ಯಮಿ ಯಶಸ್ವಿನಿ ಅಮೀನ್‌ ಪಾಲ್ಗೊಂಡಿದ್ದರು. ಸುಮಾರು ಒಂದು ತಾಸು ನಡೆದ ವಿಶ್ಲೇಷಣೆಯಲ್ಲಿ ಸಮಗ್ರ ಆರ್ಥಿಕ ಪ್ರಗತಿಗೆ ಈ ಬಜೆಟ್‌ ಎಷ್ಟು ಪೂರಕ ಎಂಬ ಬಗ್ಗೆ ಪರಿಣತರು ವಿಶ್ಲೇಷಿಸಿದರು.

Advertisement

ಉದ್ಯಮಿಗಳಿಗೆ ಉತ್ತೇಜನ ಬಜೆಟ್‌
ಕೇಂದ್ರ ಬಜೆಟ್‌ ಕೈಗಾರಿಕೆ ಕ್ಷೇತ್ರಕ್ಕೆ ಸಮತೋಲನವಾಗಿದೆ.ಸಣ್ಣ ಮತ್ತು ದೊಡ್ಡ ಪ್ರಮಾಣದ ಹೂಡಿಕೆದಾರರಿಗೆ ಬ್ಯಾಂಕ್‌ ಸಾಲ ಸೇರಿದಂತೆ ಇನ್ನಿತರ ಪೂರಕ ಮಾಹಿತಿ ನೀಡಲು “ಇನ್ವೆಸ್ಟ್‌ಮೆಂಟ್‌ ಕ್ಲಿಯರ್‌ ಸೆಲ್‌’ ಅನ್ನು ತೆರೆಯುವ ಪ್ರಸ್ತಾವ ಬಹಳ ಉತ್ತೇಜನಕಾರಿಯಾದುದು. ಉದ್ದಿಮೆದಾರರಿಗೆ ಮತ್ತು ನವೋದ್ಯಮಿಗಳಿಗೆ ಇದರ ಪ್ರಯೋಜನ ಹೆಚ್ಚು.

ಸಣ್ಣ ಮತ್ತು ಮಧ್ಯಮ ಉದ್ಯಮಗಳು ಎರಡು ಕೋಟಿ ರೂ. ವರೆಗೆ ವಹಿವಾಟು ಹೊಂದಿದ್ದರೆ ಆ ಖಾತೆಯನ್ನು ಲೆಕ್ಕಪರಿಶೋಧನೆಗೆ ಒಳಪಡಿಸಬೇಕಿತ್ತು.ಆದರೆ, ಈಗ ವಹಿವಾಟು ಮಿತಿಯನ್ನು 5 ಕೋಟಿ ರೂ.ಗೆ ಏರಿಸಿರುವುದು ಒಳ್ಳೆಯದು. ಉದ್ಯಮ ಕ್ಷೇತ್ರಕ್ಕೆ ಮಹತ್ವ ನೀಡಿ 6500 ಹೊಸ ಯೋಜನೆಗಳನ್ನು ಪರಿಚಯಿಸುತ್ತಿದೆ. ಗೃಹ ಸಾಲದ ಬಡ್ಡಿಯ ಮೇಲಿನ‌ ತೆರಿಗೆ ವಿನಾಯಿತಿ ಯನ್ನು ಒಂದು ವರ್ಷಕ್ಕೆ ವಿಸ್ತರಿಸಿರುವುದರಿಂದ ಮಧ್ಯಮ ವರ್ಗದವರಿಗೆ ಲಾಭವಾಗಬಹುದು.

ಉದ್ದಿಮೆದಾರರು ಈಗಾಗಲೇ ಜಿಎಸ್‌ಟಿಯ ಭೀತಿಯಲ್ಲಿದ್ದಾರೆ. ಅವರಿಗೆ ಬ್ಯಾಂಕ್‌ಗಳಲ್ಲಿ ಸಾಲ ಪಡೆಯುವ ಸಂದರ್ಭದಲ್ಲಿ ಆಡಳಿತಾತ್ಮಕ ವಿಷಯಗಳಲ್ಲಿ ಕೆಲವು ನಿಬಂಧನೆಗಳನ್ನು ಸಡಿಲಿಕೆ ಮಾಡಿದರೆ ಉತ್ತಮವಿತ್ತು. ರಾಜ್ಯದಲ್ಲಿ ಹಾಗೂ ಸ್ಥಳೀಯವಾಗಿ ಕೈಗಾರಿಕೆಗಳ ಅಭಿವೃದ್ಧಿಗೆ ಮೂಲಸೌಕರ್ಯ ಹೆಚ್ಚಿಸಲು ಬಜೆಟ್‌ನಲ್ಲಿ ಒತ್ತು ನೀಡಿಲ್ಲ. ಕರ್ನಾಟಕ ಕೈಗಾರಿಕಾ ನೀತಿ ಹಾಗೂ ಮುಂಬರುವ ರಾಜ್ಯ ಬಜೆಟ್‌ನಲ್ಲಿ ಕೈಗಾರಿಕಾ ಕ್ಷೇತ್ರಕ್ಕೆ ಮತ್ತಷ್ಟು ಉತ್ತೇಜನ ಸಿಗಬಹುದೆಂಬ ನಿರೀಕ್ಷೆಯಿದೆ.

ಅಜಿತ್‌ ಕಾಮತ್‌ ಅವರು ಕಳೆದ 25 ವರ್ಷಗಳಿಂದ ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು, ಬೈಕಂಪಾಡಿಯಲ್ಲಿ ಇಂಜಿನಿಯರಿಂಗ್‌ ಕೈಗಾರಿಕೆ ನಡೆಸುತ್ತಿದ್ದಾರೆ. ನಿಟ್ಟೆ ಕಾಲೇಜಿನಿಂದ ಬಿಇ ಮೆಕ್ಯಾನಿಕಲ್‌ ಪದವಿ ಪಡೆದುಕೊಂಡಿರುವ ಅಜಿತ್‌ ಈಗ ಅಸೋಸಿಯೇಷನ್‌ ಅಧ್ಯಕ್ಷರಾಗಿದ್ದಾರೆ.

Advertisement

ಆಯವ್ಯಯ ಸಮತೋಲಿತವಾಗಿದೆ. ತುಂಬಾ ಉತ್ತಮವಲ್ಲದ; ತೀರಾ ಕೆಟ್ಟದಲ್ಲದ ಸಮಾಧಾನಕರ ಬಜೆಟ್‌.
– ಅಜಿತ್‌ ಕಾಮತ್‌
ಕೆನರಾ ಸಣ್ಣ ಕೈಗಾರಿಕಾ ಅಸೋಸಿಯೇಶನ್‌ ಅಧ್ಯಕ್ಷ

ಉದ್ಯಮಿಗಳಿಗೆ ಇನ್ನಷ್ಟು ಆತ್ಮಸ್ಥೈರ್ಯ ತುಂಬಬೇಕಿತ್ತು
ಸಣ್ಣ ಮತ್ತು ಮಧ್ಯಮ ಉದ್ಯಮವು ಉದ್ಯೋಗ ಸೃಷ್ಟಿ ಸಹಿತ ದೇಶದ ಆರ್ಥಿಕತೆ ಯಲ್ಲಿ ದೊಡ್ಡ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ಉದ್ಯಮಿಗಳಿಗೆ ಆತ್ಮಸ್ಥೆ „ರ್ಯ ತುಂಬುವತ್ತ ಗಮನಹರಿಸಿರುವುದು ಸ್ವಾಗತಾರ್ಹ.

ತೆರಿಗೆ ಬಾಕಿಯಾದರೆ ಅಥವಾ ಸಾಲ ಪಾವತಿಯಲ್ಲಿ ವಿಳಂಬವಾಗುವ ಸಂದರ್ಭಗಳಲ್ಲಿನ ಕಿರುಕುಳಗಳಿಂದಾಗಿ ಹೂಡಿಕೆಗೆ ಆಸಕ್ತಿ ವಹಿಸುತ್ತಿರಲಿಲ್ಲ. ಈ ಬಾರಿಯ ಬಜೆಟ್‌ನಲ್ಲಿ ಬಂಡವಾಳ ಹೂಡಿಕೆಗೆ ಉತ್ತೇಜನ ದೊರಕಿದೆ.

ವಿತ್ತೀಯ ಕೊರತೆ ಮುಂದುವರಿದಿದೆ. ಕಪ್ಪು ಹಣವನ್ನು ನಿಯಂತ್ರಿಸಿ “ವೈಟ್‌ ಎಕಾನಮಿ’ಗೆ ಮಾತ್ರ ಅವಕಾಶ ದೊರೆಯುತ್ತಿದೆ. ಆರ್ಥಿಕ ವ್ಯವಸ್ಥೆ ದೃಢವಾಗಿದ್ದು, ಬೆಳ ವಣಿಗೆ ಗತಿ ಸ್ವಲ್ಪ ನಿಧಾನ ವಾಗಿದೆ. ಆದರೆ ದೀರ್ಘ‌ ಕಾಲಕ್ಕೆ ಅನು ಕೂಲ ಕರವಾಗಬಹುದು. ತತ್‌ಕ್ಷಣದ ಆರ್ಥಿಕ ಸಮಸ್ಯೆಗಳಿಗೆ ಈ ಬಜೆಟ್‌ನಲ್ಲಿ ಪರಿಹಾರ ದೊರಕಿಲ್ಲ.

ಕರಾವಳಿಯಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಆದ್ಯತೆ ದೊರೆಯಬೇಕು. ರಾಜ್ಯದ ಬಜೆಟ್‌ ಮೇಲೆ ಈ ಬಗ್ಗೆ ನಿರೀಕ್ಷೆ ಇದೆ. ಮಂಗಳೂರು-ಬೆಂಗಳೂರು ನಡುವೆ ಸಂಪರ್ಕ ಸೌಕರ್ಯ ಅಭಿವೃದ್ದಿಯಾಗಬೇಕಿದೆ. ಜನರ ಕೈಯಲ್ಲಿ ದುಡ್ಡು ಇದ್ದರೆ ಬೇಡಿಕೆ ಉಂಟಾಗುತ್ತದೆ. ಆಗ ವ್ಯವಹಾರ ವೃದ್ಧಿಯಾಗುತ್ತದೆ. ಮಂಗಳೂರು ಭಾಗದಲ್ಲಿಯೂ ಉದ್ಯಮಿಗಳು ಸಂಕಷ್ಟದಲ್ಲಿದ್ದಾರೆ. 2020ರಲ್ಲಿ ಕೆಲವು ಉದ್ಯಮಿಗಳ ಬ್ಯಾಲೆನ್ಸ್‌ ಶೀಟ್‌ 2014ರಷ್ಟೇ ಇದೆ. ಸಣ್ಣ ಮತು ಮಧ್ಯಮ ಉದ್ಯಮ 1 ಲಕ್ಷ ಜನರಿಗೆ ಉದ್ಯೋಗ ನೀಡುತ್ತಿದೆ. ಉದ್ಯಮದ ಪ್ರಗತಿಗೆ ಬಜೆಟ್‌ನಲ್ಲಿ ಉತ್ತಮ ಪ್ರಯತ್ನ ಮಾಡಲಾಗಿದೆ.

ಕೆನರಾ ಚೇಂಬರ್‌ ಆಫ್ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರೀಯ ಅಧ್ಯಕ್ಷರಾಗಿರುವ ಐಸಾಕ್‌ ವಾಜ್‌ ಅವರು, ಮಂಗಳೂರು ಕ್ಲಬ್‌ನ ಮಾಜಿ ಕಾರ್ಯದರ್ಶಿ. ಪ್ರಸ್ತುತ ಕೆಎಸ್‌ಐನ ಉಪಾಧ್ಯಕ್ಷರೂ ಆಗಿದ್ದಾರೆ. ಮರ್ಜರ್‌ ಬೆವರೇಜಸ್‌ ಪ್ರೈಲಿ.ನ ಎಂ.ಡಿ ಆಗಿದ್ದಾರೆ.

ಇದೊಂದು ಉತ್ತಮ ಬಜೆಟ್‌. ಆದರೆ, ದೇಶದ ಆರ್ಥಿಕ ಬೆಳವಣಿಗೆಗೆ ಮತ್ತಷ್ಟು ಉತ್ತೇಜನ ಬೇಕಿತ್ತು. ಮೂಲ ಸೌಕರ್ಯಕ್ಕೂ ಆದ್ಯತೆ ಕೊಡಬೇಕಿತ್ತು.
– ಐಸಾಕ್‌ ವಾಜ್‌
ಅಧ್ಯಕ್ಷರು, ಕೆನರಾ ಚೇಂಬರ್‌ ಆಫ್ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರೀ

ಕೌಶಲಾಧಾರಿತ ಶಿಕ್ಷಣಕ್ಕೆ ಒತ್ತು: ಸ್ವಾಗತಾರ್ಹ
ಮಹಿಳೆಯರು ಮತ್ತು ಮಕ್ಕಳ ಆರೋಗ್ಯಕ್ಕೆ ಆದ್ಯತೆ ನೀಡಲು ಗಮನ ಹರಿಸಿದಂತೆ ಕಾಣಿಸು ತ್ತಿದೆ. ಜನೌಷಧಿ ಕೇಂದ್ರ ಗಳನ್ನು ಹೆಚ್ಚಿಸಿರುವುದು ಜನಸಾಮಾನ್ಯರ ಬದುಕಿಗೆ ಪೂರಕ ಕ್ರಮ.

ಶಿಕ್ಷಣ ವ್ಯವಸ್ಥೆಯ ಸುಧಾರಣೆಗೆ ಹಲವು ಕ್ರಮಗಳ ಪ್ರಸ್ತಾಪವಾಗಿರುವುದನ್ನು ಗಮನಿಸಬಹುದು. ಅದರಲ್ಲಿಯೂ ಹೊಸ ಶಿಕ್ಷಣ ನೀತಿಯ ಜಾರಿ ವಿಚಾರವೂ ಉಲ್ಲೇಖವಾಗಿದೆ.

ಪ್ರಸ್ತುತ ಎಂಜಿನಿಯರಿಂಗ್‌ ಸೇರಿದಂತೆ ನಾನಾ ರೀತಿಯ ವೃತ್ತಿ ಶಿಕ್ಷಣ ಪಡೆದು ಹೊರಬರುವವರು ಕೌಶಲದ ಕೊರತೆಯಿಂದ ಉದ್ಯೋಗ ಪಡೆಯಲು ವಿಫ‌ಲರಾಗುತ್ತಿದ್ದಾರೆ. ಕೌಶಲ ತರಬೇತಿ ನೀಡುವುದರಿಂದ ಯುವಜನತೆಯನ್ನು ಉದ್ಯೋಗಕ್ಕೆ ಸಿದ್ಧಪಡಿಸಲು ಸಾಧ್ಯ. ಇದು ನಿರುದ್ಯೋಗ ಸಮಸ್ಯೆ ನಿವಾರಣೆಗೂ ಸಹಕಾರಿ. ಆನ್‌ಲೈನ್‌ನಲ್ಲಿಯೇ ಪದವಿ ಪಡೆಯುವ ಅವಕಾಶ ಒಳ್ಳೆಯದು. ಇವೆಲ್ಲವೂ ಮುಂದೆ ದೇಶ ಸೂಪರ್‌ ಪವರ್‌ ಆಗಿ ಹೊರಹೊಮ್ಮಲು ಪೂರಕವಾಗಲಿವೆ.
ಆದಾಯ ತೆರಿಗೆ ಕುರಿತಾದ ಭಯ ದೂರವಾಗಿದೆ. ಆನ್‌ಲೈನ್‌ನಲ್ಲಿಯೇ ದಾಖಲೆಗಳನ್ನು ಸಲ್ಲಿಸಲು ಅವಕಾಶವಿದೆ. ತೆರಿಗೆ ಪಾವತಿಯಲ್ಲಿಯೂ ಬದಲಾವಣೆ ಮಾಡಲಾಗಿದೆ. ಅಲ್ಲದೆ ಹೊಸ ತೆರಿಗೆ ವ್ಯವಸ್ಥೆ ಅಥವಾ ಹಳೆ ತೆರಿಗೆ ವ್ಯವಸ್ಥೆಯಲ್ಲಿ ಯಾವುದು ಅನುಕೂಲವಾಗುತ್ತದೆಯೋ ಅದನ್ನೇ ಆಯ್ಕೆ ಮಾಡುವ ಅವಕಾಶ ನೀಡಲಾಗಿದೆ. ಈ ಬಜೆಟ್‌ ಆಶಾದಾಯಕವಾಗಿದೆ. ಸರಳವಾಗಿದ್ದರೂ ಕ್ಲಿಷ್ಟವಾಗಿದೆ.

ಯಶಸ್ವಿನಿ ಅಮೀನ್‌ ಅವರು ಬಿ.ಕಾಂ.ನಲ್ಲಿ ಚಿನ್ನದ ಪದಕ ಪಡೆದವರು. ಮೊದಲ ಪ್ರಯತ್ನದಲ್ಲೇ ಸಿಎ ತೇರ್ಗಡೆ ಯಾಗಿ ಈಗ ಸಿಎ ವಿದ್ಯಾರ್ಥಿಗಳಿಗೆ ತರಬೇತಿ ನೀಡು ತ್ತಿದ್ದಾರೆ. ತೆರಿಗೆಯಲ್ಲಿ ವಿಶೇಷ ಪರಿಣತಿ ಹೊಂದಿದ್ದು, 3 ವರ್ಷಗಳಿಂದ ವಿವಿಧೆಡೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುತ್ತಿದ್ದಾರೆ.

ಈ ಬಜೆಟ್‌ ಯುವ ಜನರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ. ಉದ್ಯೋಗ ಸೃಷ್ಟಿಗೆ ಕಾರಣವಾಗಲಿದ್ದು, ಆ ಮೂಲಕ ಬಲಿಷ್ಠ ಭಾರತದ ಕನಸು ನನಸಾಗುವ ನಿರೀಕ್ಷೆ ಹೆಚ್ಚಾಗಿದೆ.
-ಯಶಸ್ವಿನಿ ಅಮೀನ್‌, ಯುವ ಆರ್ಥಿಕ ಪರಿಣತೆ

ಆರ್ಥಿಕತೆ-ಬ್ಯಾಂಕಿಂಗ್‌ ವಲಯಕ್ಕೆ ಚೇತೋಹಾರಿ
ಈ ಬಜೆಟ್‌ ಆರ್ಥಿಕ ಮತ್ತು ಬ್ಯಾಂಕಿಂಗ್‌ ಕ್ಷೇತ್ರವನ್ನು ಒಳಗೊಂಡಂತೆ ಸಮಗ್ರವಾಗಿ ಉತ್ತೇ ಜನದಾಯಕವಾಗಿದೆ.ನಿಯಂತ್ರಣ ಮತ್ತು ಹೊಂದಾಣಿಕೆ (ಚೆಕ್‌ ಆ್ಯಂಡ್‌ ಬ್ಯಾಲೆನ್ಸ್‌) ಸೂತ್ರ ಹೆಚ್ಚು ಕಂಡುಬರುತ್ತಿದೆ. ಬ್ಯಾಂಕಿಂಗ್‌ ಕ್ಷೇತ್ರದ ಉತ್ತೇಜನಕ್ಕೆ ಆರ್ಥಿಕ ನೆರವು ಸಹಿತ ಕೆಲವು ಪ್ರೋತ್ಸಾಹದಾಯಕ ಉಪಕ್ರಮಗಳನ್ನು ಒಳಗೊಂಡಿದೆ. ಬ್ಯಾಂಕ್‌ಗಳಿಗೆ ಕೇಂದ್ರ ಸರಕಾರ ಬಂಡವಾಳ ನೀಡುತ್ತದೆ ಎಂದರೆ ಬ್ಯಾಂಕ್‌ಗಳು ನಷ್ಟದಲ್ಲಿವೆ ಎಂದರ್ಥವಲ್ಲ. ಮಾರುಕಟ್ಟೆಗೆ ಇನ್ನಷ್ಟು ಆರ್ಥಿಕ ನೆರವು ಒದಗಿಸಲು ಪೂರಕ ವಾಗಿ ಈ ಕ್ರಮ. ಜತೆಗೆ ಉದ್ಯಮ ಕ್ಷೇತ್ರ ದಲ್ಲಿ ಕೆಲವು ಮಿತಿಗಳಿಗೆ ಒಳಪಟ್ಟು ಎನ್‌ಪಿಎ ಸ್ವರೂಪ ವನ್ನು ಮರು ವಾಖ್ಯಾನಿಸಿರುವುದು ಶ್ಲಾಘನೀಯ.

ಸಾಮಾನ್ಯವಾಗಿ ಬಜೆಟ್‌ ಎಂದಾಗ ಜನರಲ್ಲಿ ಶೀಘ್ರ ಫಲಿತಾಂಶದ ನಿರೀಕ್ಷೆಗಳಿರುತ್ತವೆ. ಈ ನಿಟ್ಟಿನಲ್ಲಿ ಸದ್ಯದ ಆರ್ಥಿಕ ಸವಾಲುಗಳಿಗೆ ಹೆಚ್ಚು ಪೂರಕವಾಗಿಲ್ಲ. ದೀರ್ಘ‌ಕಾಲಿಕವಾಗಿ ಇದು ಒಟ್ಟು ಆರ್ಥಿಕ ಅಭಿವೃದ್ಧಿಗೆ ಅನೇಕ ಅತ್ಯುತ್ತಮ ಉಪಕ್ರಮಗಳಿವೆ. ಎಲ್ಲ ಕ್ಷೇತ್ರಗಳನ್ನು ಗಮನದಲ್ಲಿರಿಸಿ ದೂರದೃಷ್ಟಿ ಹೊಂದಿದ ಕೆಲವು ಅಂಶಗಳನ್ನು ಅಳವಡಿಸಲಾಗಿದೆ. ಇದು ಭವಿಷ್ಯದ ದೃಷ್ಟಿಯಿಂದ ಸೂಕ್ತವಾದ ಕ್ರಮ.
ಆದಾಯ ತೆರಿಗೆ ಮಿತಿಯಲ್ಲಿ 5 ಲಕ್ಷ ರೂ.ವರೆಗಿನ ವಿನಾಯಿತಿ ಔದ್ಯೋಗಿಕ ಮತ್ತು ಕಿರು ಉದ್ದಿಮೆ ವಲಯಕ್ಕೆ ಹೆಚ್ಚು ಅನುಕೂಲಕರವಾಗಿದೆ. ಇದರಿಂದ ಜನರಲ್ಲಿ ಒಂದಷ್ಟು ಹಣ ಉಳಿತಾಯವಾಗಿ ಇದು ಗ್ರಾಹಕ ಮಾರುಕಟ್ಟೆಗೆ ಹರಿದು ಬರುವ ಸಾಧ್ಯತೆಗಳಿವೆ.

ಕಾರ್ಪೊರೇಶನ್‌ ಬ್ಯಾಂಕಿನ ಮಹಾಪ್ರಬಂಧಕರಾಗಿದ್ದ ಬಿ.ಆರ್‌. ಭಟ್‌ ಅವರು ಬ್ಯಾಂಕಿಂಗ್‌ ಮತ್ತು ಆರ್ಥಿಕ ಕ್ಷೇತ್ರದಲ್ಲಿ ವಿಶೇಷ ಪರಿಣತಿ ಹೊಂದಿದವರು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ವೇದಿಕೆಗಳಲ್ಲಿ ಹಲವು ಉಪನ್ಯಾಸಗಳನ್ನು ನೀಡಿ ಪ್ರಸಿದ್ಧರಾಗಿದ್ದಾರೆ.

ನಿಯಂತ್ರಣ ಮತ್ತು ಹೊಂದಾಣಿಕೆಯ ಸೂತ್ರಗಳನ್ನು ಒಳಗೊಂಡಿರುವ ಬಜೆಟ್‌ ಇದಾಗಿದೆ. ಸಮಗ್ರವಾಗಿ ಇದು ಅತ್ಯುತ್ತಮ ಬಜೆಟ್‌.
– ಬಿ.ಆರ್‌. ಭಟ್‌,
ಹಿರಿಯ ಬ್ಯಾಂಕರ್‌

ದೀರ್ಘಾವಧಿಗೆ ಫಲ ನೀಡುವ ದೂರದೃಷ್ಟಿ ಬಜೆಟ್‌
ಇದು ದೀರ್ಘಾವಧಿಯಲ್ಲಿ ಫಲಾನುಭವ ನೀಡುವ ದೂರದೃಷ್ಟಿಯ ಬಜೆಟ್‌.
ಡಿಜಿಟಲೈಸೇಶನ್‌ಗೆ ಆದ್ಯತೆ ನೀಡಲಾಗಿದೆ. ರೈತರಿಗೆ ತಮ್ಮ ಉತ್ಪನ್ನ ಗಳನ್ನು ಕೆಡ ದಂತೆ ಸಂರಕ್ಷಿಸಲು ಕೋಲ್ಡ್‌ ಸ್ಟೋರೇಜ್‌, ಕಿಸಾನ್‌ ಕ್ರೆಡಿಟ್‌ ಕಾರ್ಡ್‌, ಉಡಾನ್‌ ಯೋಜನೆಯ ವಿಸ್ತರಣೆ ಮಾಡಲಾಗಿದೆ. ವ್ಯಾಪಾರ-ಉದ್ಯಮಕ್ಕೆ ಉತ್ತೇಜನ, ಜೀವನಾನುಕೂಲ ಬಜೆಟ್‌ ಎನ್ನಬಹುದು.

ಮೇಲ್ನೋಟಕ್ಕೆ ಚೆನ್ನಾಗಿದೆ. ಆದರೆ ಸಾಮಾನ್ಯ ವರ್ಗದ ಜನರಿಗೆ ಆಗುವ ಪ್ರಯೋಜನ ಏನೆಂಬುದನ್ನು ಈಗಲೇ ಹೇಳಲಾಗದು; ಅದನ್ನು ಕಾದು ನೋಡಬೇಕು.
ವಾಣಿಜ್ಯ ಬ್ಯಾಂಕ್‌ ಮತ್ತು ಶೆಡ್ನೂಲ್ಡ್‌ ಬ್ಯಾಂಕ್‌ಗಳಲ್ಲಿ ಠೇವಣಿ ಇರಿಸುವವರಿಗೆ ಸಮಸ್ಯೆಯಿಲ್ಲ ಎಂಬುದಾಗಿ ಹೇಳಿರುವುದು ಸ್ವಾಗತಾರ್ಹ. ವೈಯಕ್ತಿಕ ಆದಾಯ ತೆರಿಗೆ ಮಿತಿಯನ್ನು 5 ಲಕ್ಷ ರೂ.ಗೆ ಏರಿಸಿ ಅದಕ್ಕೆ ಅನ್ವಯವಾಗುತ್ತಿದ್ದ ಎಲ್ಲ ವಿನಾಯಿತಿಗಳನ್ನು ರದ್ದುಪಡಿಸಿರುವುದು ಹೊಸ ಉಪಕ್ರಮ. ಇದರಿಂದ ಹೊಸ ತೆರಿಗೆದಾರರಿಗೆ ಅನುಕೂಲವಾಗಲಿದೆ. ಬೆಂಗಳೂರು- ಚೆನ್ನೈ ಚತುಷ್ಪಥ ರಸ್ತೆಯಂತಹ ಯೋಜನೆಗಳು ನಮ್ಮ ಜಿಲ್ಲೆಗೆ ಪ್ರಯೋಜನವಿಲ್ಲ. ಮಂಗಳೂರು- ಬೆಂಗಳೂರು ಹೆದ್ದಾರಿ ಚತುಷ್ಪಥ ಆಗಬೇಕು. ಮಂಗಳೂರು- ಬೆಂಗಳೂರು ರೈಲು ಮಾರ್ಗಕ್ಕೆ ಶಿರಾಡಿ ಘಾಟಿ ಬಳಿ ಸುರಂಗ ಮಾರ್ಗ ನಿರ್ಮಾಣ ಆಗಬೇಕು. 4-5 ಗಂಟೆಯಲ್ಲಿ ಮಂಗಳೂರಿ ನಿಂದ ಬೆಂಗಳೂರು ತಲುಪುವಂತಾಗಬೇಕು. ಇದಾವುದೂ ಉಲ್ಲೇಖವಾಗದಿರುವುದು ಬೇಸರ ತಂದಿದೆ.

30 ವರ್ಷಗಳಿಂದ ಲೆಕ್ಕ ಪರಿಶೋಧಕರಾಗಿ ಸೇವೆ ಸಲ್ಲಿಸುತ್ತಿರುವ ಎಸ್‌.ಎಸ್‌. ನಾಯಕ್‌ ಭಾರತೀಯ ಲೆಕ್ಕ ಪರಿಶೋಧಕರ ಸಂಘದ ಮಂಗಳೂರು ಘಟಕದ ಉಪಾಧ್ಯಕ್ಷರಾಗಿದ್ದಾರೆ. ಜೀವಮಾನ ಸಾಧನೆಗಾಗಿ ಎಂಎಸ್‌ಎಂಇ ರತ್ನ ಪ್ರಶಸ್ತಿ ಸಹಿತ 3 ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಮೇಲ್ನೋಟಕ್ಕೆ ಇದೊಂದು ಟ್ವೆಂಟಿ-ಟ್ವೆಂಟಿ ಬಜೆಟ್‌. ಟ್ವೆಂಟಿ-ಟ್ವೆಂಟಿ ಟೆಸ್ಟ್‌ ಅಲ್ಲ; ಬದಲಿಗೆ ಒನ್‌ಡೇ ಇಂಟರ್‌ನ್ಯಾಷನಲ್‌ ಮ್ಯಾಚ್‌.
-ಎಸ್‌.ಎಸ್‌. ನಾಯಕ್‌,
ಖ್ಯಾತ ಲೆಕ್ಕ ಪರಿಶೋಧಕ

Advertisement

Udayavani is now on Telegram. Click here to join our channel and stay updated with the latest news.

Next