Advertisement

ದೇಸೀ ಪಠ್ಯಕ್ಕೆ ಸಲಹೆ ನೀಡಿ: ಆನ್‌ಲೈನ್‌ ಸಲಹೆ ನೀಡಲು ದೇಶವಾಸಿಗಳಿಗೆ ಕೇಂದ್ರದ ಮನವಿ

10:47 AM Aug 17, 2022 | Team Udayavani |

ಹೊಸದಿಲ್ಲಿ: ರಾಷ್ಟ್ರೀಯ ಹೊಸ ಶಿಕ್ಷಣ ನೀತಿ ರಚಿಸಿ ದೇಶದ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರಲು ಕೇಂದ್ರ ಸರಕಾರ ಸಜ್ಜಾಗಿದೆ. ಇದಕ್ಕೆ ಪೂರಕವಾಗಿ ಶಾಲೆ ಮತ್ತು ಕಾಲೇಜು ಶಿಕ್ಷಣದ ಪಠ್ಯಕ್ರಮವನ್ನು ಹೊಸ ದಾಗಿ ರಚಿಸಲು ಮುಂದಾಗಿದ್ದು, ದೇಶವಾಸಿಗಳಿಂದ ಆನ್‌ಲೈನ್‌ ಸಮೀಕ್ಷೆ ನಡೆಸಿ ಸಲಹೆ ಆಹ್ವಾನಿಸಿದೆ. “ನವ ಭಾರತದ ನಿರ್ಮಾಣಕ್ಕಾಗಿ ಹೊಸ ಪಠ್ಯಕ್ರಮ’ದ ಅನ್ವಯ ಪಠ್ಯಕ್ರಮ ಸಿದ್ಧಪಡಿಸಲು ಉದ್ದೇಶಿಸಲಾಗಿದೆ. ಅದಕ್ಕಾಗಿ ಸಲಹೆ ನೀಡಬೇಕು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಟ್ವೀಟ್‌ ಮಾಡಿದ್ದಾರೆ.

Advertisement

ಪಠ್ಯಕ್ರಮ ರಚಿಸುವ ಉದ್ದೇಶದಿಂದ ರಾಷ್ಟ್ರೀಯ ಪಠ್ಯಕ್ರಮ ಕಾರ್ಯಸೂಚಿ (ಎನ್‌ಸಿಎಫ್) ಯನ್ನು ರಚಿಸಿದೆ ಎಂದು ಅವರು ಬರೆದು ಕೊಂಡಿದ್ದಾರೆ. ವಿಕಸಿತ ಭಾರತ ನಿರ್ಮಾಣದ ಉದ್ದೇಶದಿಂದ ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯ ಅನ್ವಯ ನೂತನ ಪಠ್ಯಕ್ರಮ ರಚಿಸಲು ಕೇಂದ್ರ ಸರಕಾರ ಉದ್ದೇಶಿಸಿದೆ. ಬ್ರಿಟಿಷರ ಕಾಲದ ವಸಾ ಹತು ಶಾಹಿ ಮನೋಭಾವನೆಯ ಶಿಕ್ಷಣ ವ್ಯವಸ್ಥೆಯ ಬದಲಾಗಿ ಆಧುನಿಕ ಜಗತ್ತಿಗೆ ಅಗತ್ಯ ವಾದ ಮತ್ತು ದೇಶದ ಸಂಸ್ಕೃತಿಗೆ ಅನುಗುಣ ವಾದ ಶಿಕ್ಷಣ ವ್ಯವಸ್ಥೆ ರೂಪಿಸಬೇಕಾಗಿದೆ.

ಅದಕ್ಕಾಗಿ ಸಾರ್ವಜನಿಕರು https://ncfsurvey.ncert.gov.in/#/ ಗೆ ಭೇಟಿ ನೀಡಿ ಸಲಹೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಎನ್‌ಸಿಇಆರ್‌ಟಿ, ಚುನಾವಣ ಆಯೋಗ, ಐಸಿಎಆರ್‌, ಡಿಆರ್‌ಡಿಒ, ಪ್ರಮುಖ ಸಚಿವಾಲಯಗಳ ಹಿರಿಯ ಅಧಿಕಾರಿಗಳ ಜತೆಗೆ ಈ ಬಗ್ಗೆ ಸಭೆ ನಡೆಸಲಾಗಿತ್ತು. ನಾವೀನ್ಯ, ತಂತ್ರಜ್ಞಾನ, ಕೃಷಿ ಬೆಳವಣಿಗೆ, ಕೌಶಲಾಭಿವೃದ್ಧಿ ಸಹಿತ ಹಲವು ವಿಚಾರಗಳ ಸೇರ್ಪಡೆಯ ಬಗ್ಗೆ ಚರ್ಚಿಸಲಾಗಿತ್ತು. ಇದೇ ಉದ್ದೇಶಕ್ಕಾಗಿ ರಾಜ್ಯಗಳ ಮಟ್ಟದಲ್ಲಿ 700 ವಿಷಯ ತಜ್ಞರ ಸಮಿತಿ, ಅಂತಾರಾಷ್ಟ್ರೀಯ ಮಟ್ಟದ ತಜ್ಞರನ್ನು ಒಳಗೊಂಡಂತೆ 25 ಮಂದಿ ರಾಷ್ಟ್ರ ಮಟ್ಟದ ತಜ್ಞರ ಸಮಿತಿಯನ್ನೂ ರಚಿಸಲಾಗಿದೆ.

ಸಂಸ್ಥೆಗಳ ವಿಲೀನಕ್ಕೆ ಚಿಂತನೆ
ಪ್ರಥಮ ದರ್ಜೆ ಕಾಲೇಜುಗಳು, ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಮಾನ್ಯತೆ ನೀಡುವ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಪರಿಷತ್‌ (ಎನ್‌ಎಎಸಿ- ನ್ಯಾಕ್‌) ಮತ್ತು ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೆ ಮಾನ್ಯತೆ ನೀಡುವ ರಾಷ್ಟ್ರೀಯ ಮಾನ್ಯತಾ ಸಂಸ್ಥೆ (ಎನ್‌ಬಿಎ)ಯನ್ನು ವಿಲೀನಗೊಳಿಸಲು ಕೇಂದ್ರ ಸರಕಾರ ಮುಂದಾಗಿದೆ. ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯ ಅನ್ವಯ ಎರಡೂ ಸಂಸ್ಥೆಗಳನ್ನು ವಿಲೀನ ಗೊಳಿಸಿ ಒಂದನ್ನಾಗಿ ರೂಪಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ.

Advertisement

ಇದನ್ನು ಯಾವ ರೀತಿ ಅನುಷ್ಠಾನಗೊಳಿಸಬಹುದು ಎಂಬ ಬಗ್ಗೆ ಪರಿಶೀಲನೆ ನಡೆಸಿ ಸರಕಾರಕ್ಕೆ ಸಲಹೆ ನೀಡುವುದಕ್ಕಾಗಿ ನ್ಯಾಕ್‌ನ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಭೂಷಣ್‌ ಪಟವರ್ಧನ್‌ ನೇತೃತ್ವದಲ್ಲಿ ಆರು ಮಂದಿ ಸದಸ್ಯರ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿ ನ್ಯಾಕ್‌- ಎನ್‌ಬಿಎ ವಿಲೀನ, ಸದ್ಯ ಕೇಂದ್ರ ಶಿಕ್ಷಣ ಸಚಿವಾಲಯದಿಂದ ವಾರ್ಷಿಕವಾಗಿ ಶಿಕ್ಷಣ ಸಂಸ್ಥೆಗಳಿಗೆ ನೀಡುವ ಶ್ರೇಯಾಂಕ ವ್ಯವಸ್ಥೆಯನ್ನು ಬದಲಾಯಿಸುವ ಬಗ್ಗೆ ಅಧ್ಯಯನ ನಡೆಸಲಿದೆ.

ಸಾರ್ವಜನಿಕವಾಗಿ ಪ್ರಕಟಿಸಲಾಗಿರುವ ಶಿಕ್ಷಣ ಸಂಸ್ಥೆಯ ಸಾಧನೆ ವಿವರ, ಅದು ಹೊಂದಿರುವ ಆಡಳಿತ ವ್ಯವಸ್ಥೆ, ಪ್ರಾಥಮಿಕ ನಿಯಮಗಳ ಅನ್ವಯ ಶಿಕ್ಷಣ ಸಂಸ್ಥೆಗಳ ಮೌಲ್ಯಮಾಪನ ನಡೆಯಬೇಕಾಗಿದೆ. ಅದಕ್ಕಾಗಿ ರಾಷ್ಟ್ರೀಯ ಮೌಲ್ಯಮಾಪನ ಪರಿಷತ್‌ (ಎನ್‌ಎಸಿ) ಸ್ಥಾಪಿಸಬೇಕು ಎಂದು ಶಿಕ್ಷಣ ನೀತಿಯಲ್ಲಿ ಸಲಹೆ ನೀಡಲಾಗಿತ್ತು.

ಕೆಲವು ದಿನಗಳ ಹಿಂದೆಯಷ್ಟೇ ವೈದ್ಯ ಕೀಯ ಪ್ರವೇಶಕ್ಕಾಗಿ ಇರುವ ನೀಟ್‌, ಎಂಜಿ ನಿಯರಿಂಗ್‌ ಪರೀಕ್ಷೆಗಾಗಿ ಇರುವ ಜೆಇಇ ಪರೀಕ್ಷೆಗಳನ್ನು ಕೇಂದ್ರೀಯ ವಿ.ವಿ. ಗಳಲ್ಲಿ ಪ್ರವೇಶ ಪಡೆಯಲು ಇರುವ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ (ಸಿಯುಇಟಿ) ಜತೆಗೆ ವಿಲೀನ ಮಾಡುವ ಪ್ರಸ್ತಾವವನ್ನು ಯುಜಿಸಿ ಅಧ್ಯಕ್ಷ ಜಗದೀಶ್‌ ಕುಮಾರ್‌ ಮಾಡಿದ್ದರು. ಇದರ ಜತೆಗೆ ದೇಶದ ಉನ್ನತ ಶಿಕ್ಷಣ ಕ್ಷೇತ್ರದ ನಿಯಂತ್ರಕ ಸಂಸ್ಥೆಯಾಗಿರುವ ವಿಶ್ವವಿದ್ಯಾಲಯ ಧನಸಹಾಯ ಆಯೋಗ(ಯುಜಿಸಿ)ದ ಸ್ಥಾನದಲ್ಲಿ ಭಾರತದ ಉನ್ನತ ಶಿಕ್ಷಣ ಆಯೋಗ (ಎಚ್‌ಇಸಿಐ) ಸ್ಥಾಪನೆಯ ಸಾಧ್ಯತೆಗಳ ಬಗ್ಗೆಯೂ ಕೇಂದ್ರ ಸರಕಾರ ಪರಿಶೀಲಿಸುತ್ತಿದೆ.

ಪರೀಕ್ಷೆ ವಿಲೀನಕ್ಕೆ ಆತುರ ಇಲ್ಲ
ಸಾಮಾನ್ಯ ವಿಶ್ವವಿದ್ಯಾನಿಲಯ ಪ್ರವೇಶ ಪರೀಕ್ಷೆ (ಸಿಯುಇಟಿ) ಪ್ರವೇಶ ಪರೀಕ್ಷೆ ಜತೆಗೆ ನೀಟ್‌, ಜೆಇಇಗಳನ್ನು ವಿಲೀನಗೊಳಿಸುವ ಬಗ್ಗೆ ಸಮಿತಿ ಯನ್ನು ಸ್ಥಾಪಿಸಲಾಗುತ್ತದೆ ಎಂದು ಯುಜಿಸಿ ಅದ್ಯಕ್ಷ ಜಗದೀಶ್‌ ಕುಮಾರ್‌ ಹೇಳಿದ್ದಾರೆ. ಅದು ದೇಶ ಮತ್ತು ವಿದೇಶ ಗಳಲ್ಲಿರುವ ಪ್ರವೇಶ ಪರೀಕ್ಷೆಗಳ ಮಾದರಿಗಳನ್ನು ಅಧ್ಯಯನ ನಡೆಸಿ ವರದಿ ಸಲ್ಲಿಸಲಿದೆ. ಮುಂದಿನ ವರ್ಷ ಅದನ್ನು ಜಾರಿಗೊಳಿಸಬೇಕು ಎಂದಾದರೆ ಈಗಿನಿಂದಲೇ ಅದರ ಪ್ರಕ್ರಿಯೆ ಆರಂಭಿಸಬೇಕು ಎಂದಿದ್ದಾರೆ. ಸಿಯುಇಟಿಯ ಆರಂಭಿಕ ಹಂತದಲ್ಲಿ ಉಂಟಾಗಿರುವ ತಾಂತ್ರಿಕ ತೊಂದರೆ ನಮಗೆ ಪಾಠ ಕಲಿಸಿದೆ ಎಂದರು.

4ನೇ ಹಂತ
ಸಿಯುಇಟಿಯ ನಾಲ್ಕನೇ ಹಂತ ಬುಧವಾರದಿಂದ ಶನಿವಾರದ ವರೆಗೆ ನಡೆಯ ಲಿದೆ. 3.6 ಲಕ್ಷ ಮಂದಿ ಪ್ರವೇಶಾ ಕಾಂಕ್ಷಿಗಳು ಪರೀಕ್ಷೆ ಬರೆಯಲಿದ್ದಾರೆ.

ಕನ್ನಡದಲ್ಲೂ ಅಭಿಪ್ರಾಯಕ್ಕೆ ಅವಕಾಶ
ಕೇಂದ್ರ ಶಿಕ್ಷಣ ಸಚಿವಾಲಯ ನಡೆಸುವ ಸಮೀಕ್ಷೆಯಲ್ಲಿ ಕನ್ನಡ, ಕೊಂಕಣಿ ಸೇರಿದಂತೆ 23 ಭಾಷೆಗಳಲ್ಲಿ ಅಭಿಪ್ರಾಯ ಸಲ್ಲಿಕೆಗೆ ಅವಕಾಶವಿದೆ. ಶಾಲೆಯಲ್ಲಿ ಶಿಕ್ಷಣ ನೀಡುವ ವೇಳೆ ಯಾವ ರೀತಿಯ ಮೌಲ್ಯಗಳನ್ನು ಹೇಳಿ ಕೊಡಬಹುದು, ಒಂದನೇ ತರಗತಿಯಿಂದ ಯಾವ ಭಾಷೆಯನ್ನು ಕಲಿಸಬಹುದು ಎಂಬ ಪ್ರಶ್ನೆಯನ್ನು ಕೇಳಲಾಗಿದೆ. ಮಕ್ಕಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಶಿಕ್ಷಕರು ಯಾವ ಪಾತ್ರ ವಹಿಸಬಹುದು ಎಂಬ ಪ್ರಶ್ನೆಯೂ ಇದೆ. 3-5, 6-8ರ ತರಗತಿಯಲ್ಲಿ ಯಾವ ರೀತಿ ಮಕ್ಕಳಿಗೆ ವಿಷಯಗಳನ್ನು ಹೇಳಿ ಕೊಡ ಬಹುದು, 3-8 ವರ್ಷ ವಯೋಮಿತಿಯವರಿಗೆ ಕಲಿಸುವ ಸಂದರ್ಭದಲ್ಲಿ ಯಾವ ಅಂಶಗಳ ಬಗ್ಗೆ ಗಮನ ಕೇಂದ್ರೀಕರಿಸಬಹುದು ಎಂದೂ ಕೇಳಲಾಗಿದೆ.

23 ಇಷ್ಟು ಭಾಷೆಗಳಲ್ಲಿ ಅಭಿಪ್ರಾಯ ಸಲ್ಲಿಕೆಗೆ ಅವಕಾಶ

ಯಾರಿಂದ ಸರ್ವೇ?
ಶಿಕ್ಷಣ ಮತ್ತು ಸಂಶೋಧನೆಗಾಗಿ ಇರುವ ರಾಷ್ಟ್ರೀಯ ಪರಿಷತ್ತು (ಎನ್‌ಸಿಇಆರ್‌ಟಿ) ಮತ್ತು ಕೇಂದ್ರ ಶಿಕ್ಷಣ ಸಚಿವಾಲಯದ ವತಿ ಯಿಂದ ಆನ್‌ಲೈನ್‌ ಸಮೀಕ್ಷೆ ನಡೆಸಲಾಗುತ್ತಿದೆ.

ಯಾವ ವೆಬ್‌ಸೈಟ್‌? https://ncfsurvey.ncert.gov.in/#/

Advertisement

Udayavani is now on Telegram. Click here to join our channel and stay updated with the latest news.

Next