Advertisement

ಮಧುವನಹಳ್ಳಿ ಸರ್ಕಾರಿ ಶಾಲೆಗೆ ಶತಮಾನದ ಸಂಭ್ರಮ

09:03 PM Feb 25, 2020 | Lakshmi GovindaRaj |

ಕೊಳ್ಳೇಗಾಲ: ತಾಲೂಕಿನ ಮಧುವನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನ ಕಂಡಿದೆ. ಇಲ್ಲಿ ಓದಿದ ಅನೇಕ ವಿದ್ಯಾರ್ಥಿಗಳು ವಿವಿಧ ಉನ್ನತ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಾರೆ ಎಂದು ಹನೂರು ಶಾಸಕ ಆರ್‌.ನರೇಂದ್ರ ಹೇಳಿದರು.

Advertisement

ತಾಲೂಕಿನ ಮಧುವನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ ಶತಮಾನೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಶಾಲೆಯು 1908ರಲ್ಲಿ ಆರಂಭಗೊಂಡು ಈಗ 110 ವರ್ಷ ಪೂರೈಸಿದೆ. ಸರ್ಕಾರ 100 ವರ್ಷ ಪೂರೈಸಿದ ಶಾಲೆಯನ್ನು ಪಾರಂಪರಿಕ ಶಾಲೆಯೆಂದು ಘೋಷಣೆ ಮಾಡಿದ್ದು, ಶಾಲೆಯಲ್ಲಿ ಓದುವ ವಿದ್ಯಾರ್ಥಿಗಳು ಉನ್ನತ ಮಟ್ಟದ ಶಿಕ್ಷಣ ಪಡೆದು, ಶಾಲೆಗೆ ಕೀರ್ತಿ ತರಬೇಕು ಎಂದು ಕಿವಿ ಮಾತು ಹೇಳಿದರು.

ಬ್ರಿಟಿಷರ ಕಾಲದಲ್ಲಿ ಸ್ಥಾಪನೆ: ಶಾಲೆಯು 1908ರಲ್ಲಿ ಗ್ರಾಮದ ಮನೆಯೊಂದರಲ್ಲಿ ಶಾಲೆ ಆರಂಭಗೊಂಡಿತ್ತು. ಬ್ರಿಟಿಷರ ಕಾಲದಲ್ಲಿ ಸ್ಥಾಪನೆಯಾಗಿತ್ತು. ಸ್ವತಂತ್ರದ ಬಳಿಕ ತಮಿಳುನಾಡಿಗೆ ಸೇರಿತ್ತು. ನಂತರ 1950ರಲ್ಲಿ ಮೈಸೂರು ಜಿಲ್ಲೆಗೆ ಕೊಳ್ಳೇಗಾಲ ತಾಲೂಕು ಒಳಪಟ್ಟ ಬಳಿಕ ಶಾಲೆ ಸಣ್ಣ ಕಟ್ಟಡದಲ್ಲಿ ಆರಂಭವಾಯಿತು. ಅನೇಕ ಸೌಲಭ್ಯದ ಕೊರತೆ ಇದ್ದರೂ ಸಹ ನೆಲದ ಮೇಲೆ ಕುಳಿತು ಓದಿದ ಅನೇಕ ಮಹನೀಯರು, ಉತ್ತಮ ಸೇವಾ ಕೇಂದ್ರಗಳಲ್ಲಿ ನೇಮಕಗೊಂಡಿದ್ದಾರೆ ಎಂದರು.

ಗುರುಹಿರಿಯರನ್ನು ಗೌರವಿಸಿ: ವಿದ್ಯಾರ್ಥಿಗಳು ಗುರುಹಿರಿಯರಿಗೆ ಶ್ರದ್ಧೆ ತೋರಿಸಬೇಕು. ಪೋಷಕರ ಬಗ್ಗೆಯೂ ಚಿಂತನೆ ಮಾಡಬೇಕು. ಮೊಬೈಲ್‌ ಬಳಕೆಗಳನ್ನು ದೂರವಿಡಬೇಕು. ಟಿವಿಯಲ್ಲಿ ತೋರಿಸುವ ಧಾರಾವಾಹಿಗಳಿಗೆ ಮಾರು ಹೋಗದೆ, ಓದಿನತ್ತ ಹೆಚ್ಚು ಗಮನ ಹರಿಸಬೇಕು ಎಂದು ಹೇಳಿದರು. ಈ ಹಿಂದೆ ಸರ್ಕಾರ ಯಾವುದೇ ಸೌಲಭ್ಯಗಳನ್ನು ನೀಡುತ್ತಿರಲಿಲ್ಲ. ಆದರೆ, ಈಗ ಸರ್ಕಾರ ಗುಣಮಟ್ಟ ಮತ್ತು ಕಡ್ಡಾಯ ಉಚಿತ ಶಿಕ್ಷಣವನ್ನು ನೀಡುತ್ತಿದೆ. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಂಡು, ಉನ್ನತ ಶಿಕ್ಷಣಗಳನ್ನು ಹೊಂದಬೇಕು ಎಂದರು.

ನಮ್ಮ ಕಾಲದಲ್ಲಿ ಸೌಲಭ್ಯ ಇರಲಿಲ್ಲ: ಸರ್ಕಾರಿ ಮಹದೇಶ್ವರ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಬಂತೇಜಿ ಮಾತನಾಡಿ, ಇದೇ ಶಾಲೆಯಲ್ಲಿ ನಾನು ಓದಿದೆ. ನಾವು ಓದುವ ಕಾಲದಲ್ಲಿ ಯಾವುದೇ ತರಹದ ಸೌಲಭ್ಯ ಇರಲಿಲ್ಲ. ಆದರೆ, ಈಗ ಶಾಲೆಯಲ್ಲಿ ಎಲ್ಲಾ ರೀತಿಯ ಸೌಕರ್ಯಗಳು ಇದೆ. ಇದನ್ನು ವಿದ್ಯಾರ್ಥಿಗಳು ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

Advertisement

ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ: ಬಿಇಒ ಚಂದ್ರಪಾಟೀಲ್‌ ಮಾತನಾಡಿ, ಸರ್ಕಾರ ತಾಲೂಕಿನಲ್ಲಿ ಶತಮಾನ ಪೂರೈಸಿದ ಮಧುವನಹಳ್ಳಿ ಏಕೈಕ ಶಾಲೆಯನ್ನು ಪಾರಂಪರಿಕ ಶಾಲೆ ಎಂದು ಗುರುತಿಸಿದೆ. ಇದೊಂದು ಐತಿಹಾಸಿಕ ಶಾಲೆ, ಗ್ರಾಮಸ್ಥರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು ಎಂದು ಮನವಿ ಮಾಡಿದರು.

ಸನ್ಮಾನ: ಈ ಸಂದರ್ಭದಲ್ಲಿ ಪಾರಂಪರಿಕ ಶಾಲೆಯಲ್ಲಿ ಓದಿದ ಸುಬ್ಬಶೆಟ್ಟಿ ಮತ್ತು ಹನುಮಶೆಟ್ಟಿ ಅವರನ್ನು ಸನ್ಮಾನಿಸಿದರು. ಮಧುವನಹಳ್ಳಿ ಸರ್ಕಾರಿ ಶಾಲೆ ಶತಮಾನ ಪೂರೈಸಿದ ಹಿನ್ನೆಲೆಯಲ್ಲಿ ವಿಶೇಷ ವಾರ್ಷಿಕ ಸಂಚಿಕೆಯನ್ನು ಶಾಸಕ ಆರ್‌.ನರೇಂದ್ರ ಬಿಡುಗಡೆ ಮಾಡಿದರು. ಶಾಲಾ ವಿದ್ಯಾರ್ಥಿಗಳು ವಿವಿಧ ಹಾಡುಗಳಿಗೆ ನೃತ್ಯ ಮಾಡಿ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾರ್ವಜನಿಕರನ್ನು ರಂಜಿಸಿದರು.

ಕಾರ್ಯಕ್ರಮದಲ್ಲಿ ಮಧುವನಹಳ್ಳಿ ಗ್ರಾಪಂ ಅಧ್ಯಕ್ಷೆ ಯಶೋಧಮ್ಮ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಅರುಣ್‌ಕುಮಾರ್‌, ಸದಸ್ಯ ಸಿದ್ದಪ್ಪಾಜಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಂಗಸ್ವಾಮಿ, ಕ್ಲಸ್ಟರ್‌ ಸಂಪನ್ಮೂಲ ವ್ಯಕ್ತಿ ಕೆಂಪಣ್ಣ, ಪರೀವೀಕ್ಷಕ ಜಯರಾಜು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬುಕಾನಿ, ಸಂಯೋಜಕ ಚಾಮರಾಜು, ಮಾನಸ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಚನ್ನಶೆಟ್ಟಿ, ಗ್ರಾಪಂ ಸದಸ್ಯರಾದ ಮಹದೇವ ಸ್ವಾಮಿ, ರಂಗಸ್ವಾಮಿ, ಸತೀಶ್‌, ಎಸ್‌ಡಿಎಂಸಿ ಅಧ್ಯಕ್ಷ ಮಹೇಶ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next