Advertisement

ಮಳೆಗಾಲಕ್ಕೇ ಕಾವೇರಿ ಇತ್ಯರ್ಥ?

06:00 AM Apr 01, 2018 | Team Udayavani |

ಹೊಸದಿಲ್ಲಿ: ಕಾವೇರಿ ನದಿ ನೀರಿನ ಹಂಚಿಕೆ ವಿಚಾರದಲ್ಲಿ ಜಾಣ ನಡೆ ಅನುಸರಿಸಿರುವ ಕೇಂದ್ರ ಸರಕಾರ, ಸುಪ್ರೀಂ ಕೋರ್ಟ್‌ನಲ್ಲಿ ಮತ್ತೆ “ಸ್ಕೀಮ್‌’ ವಿಚಾರವನ್ನೇ ಪ್ರಸ್ತಾವಿಸಿ, ಮೂರು ತಿಂಗಳ ಕಾಲಾವಕಾಶ ಕೇಳಿದೆ. ಒಂದು ವೇಳೆ ಸುಪ್ರೀಂ ಕೋರ್ಟ್‌ ಈ ಅರ್ಜಿಗೆ ಮಾನ್ಯ ಮಾಡಿದರೆ, ಮಳೆಗಾಲದ ಆರಂಭದ ವರೆಗೂ ಕಾವೇರಿ ಹಂಚಿಕೆ ವಿವಾದ ತಲೆದೋರದು. ಇದಕ್ಕೆ ಪ್ರತಿಯಾಗಿ ತಮಿಳುನಾಡು ಸರಕಾರ, ಕೇಂದ್ರ ಸರಕಾರದ ವಿರುದ್ಧವೇ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದೆ.

Advertisement

ಸ್ಕೀಮ್‌ ಬಗ್ಗೆ ಸ್ಪಷ್ಟನೆ ಕೊಡುವಂತೆ ಶನಿವಾರವೇ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಸೋಮವಾರ ಮುಖ್ಯ
ನ್ಯಾ| ದೀಪಕ್‌ ಮಿಶ್ರಾ ಅವರ ಪೀಠದ ಮುಂದೆಯೇ ವಿಚಾರಣೆಗೆ ಬರುವ ಸಾಧ್ಯತೆ ಇದೆ. ತೀರ್ಪಿನಲ್ಲಿ ಸ್ಕೀಮ್‌ ರೂಪಿಸುವಂತೆ ನೀಡಿದ ಆರು ವಾರಗಳ ಗಡುವು ಗುರುವಾರಕ್ಕೆ ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ, ಕೇಂದ್ರ ಸರಕಾರ ಈ ಅರ್ಜಿ ಸಲ್ಲಿಸಿದೆ.

ಕೇಂದ್ರ ಸರಕಾರ ಕೇಳಿರುವ ಸ್ಪಷ್ಟನೆಯೇನು?: ತಮಿಳುನಾಡು ಹಾಗೂ ಕರ್ನಾಟಕ ರಾಜ್ಯಗಳು ಸುಪ್ರೀಂ ಕೋರ್ಟ್‌ ತೀರ್ಪನ್ನು ವಿಭಿನ್ನವಾಗಿ ವ್ಯಾಖ್ಯಾನ ಮಾಡುತ್ತಿದ್ದು, ತದ್ವಿರುದ್ಧ ನಿಲುವು ತಳೆದಿವೆ. ರಾಜ್ಯಗಳಿಗೆ ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಆದೇಶವನ್ನು ಪಾಲಿಸುವುದನ್ನು ಮೇಲ್ವಿಚಾರಣೆ ನಡೆಸಲು ಸ್ಕೀಮ್‌ ರಚಿಸುವಂತೆ ಸುಪ್ರೀಂ ಕೋರ್ಟ್‌ ಸೂಚಿಸಿದ್ದು, ಈ ಹಿಂದೆ ಕಾವೇರಿ ಜಲ ವಿವಾದ ನ್ಯಾಯ ಮಂಡಳಿ ಪ್ರಸ್ತಾವಿಸಿದ್ದಂಥ ಕಾವೇರಿ ನಿರ್ವಹಣೆ ಮಂಡಳಿಯನ್ನು ರಚಿಸುವಂತೆ ತಮಿಳುನಾಡು ಸರಕಾರ ಆಗ್ರಹಿಸುತ್ತಿದೆ. ಆದರೆ ಕರ್ನಾಟಕ ಸರಕಾರವು ಮಂಡಳಿ ರಚನೆಗೆ ವಿರೋಧ ವ್ಯಕ್ತಪಡಿಸಿದ್ದು, ಸುಪ್ರೀಂ ಕೋರ್ಟ್‌ ಕೇವಲ ಸ್ಕೀಮ್‌ ಎಂಬುದಾಗಿ ತೀರ್ಪಿನಲ್ಲಿ ಉಲ್ಲೇಖೀಸಿದೆ ಎಂದಿದೆ. ಇತ್ತೀಚೆಗೆ ಕೇಂದ್ರ ಸರಕಾರ ನಡೆಸಿದ ಸಭೆಯಲ್ಲಿ ರಾಜ್ಯಗಳು ಈ ಬಗ್ಗೆ ಒಮ್ಮತಕ್ಕೆ ಬಂದಿಲ್ಲ. ಹೀಗಾಗಿ, ನ್ಯಾಯಮಂಡಳಿ ಈ ಹಿಂದೆ ಸೂಚಿಸಿದ್ದ ಮಂಡಳಿಗಿಂತ ವಿಭಿನ್ನವಾದ ಸ್ಕೀಮ್‌ ಅನ್ನು ನಾವು ರಚಿಸಬಹುದೇ ಎಂದು ಸುಪ್ರೀಂ ಕೋರ್ಟನ್ನು ಕೇಂದ್ರ ಸರಕಾರ ಪ್ರಶ್ನಿಸಿದೆ.

ಚುನಾವಣೆ ಪ್ರಸ್ತಾವ: ಹೆಚ್ಚುವರಿ ಸಮಯ ಕೋರಿರುವುದು ಹಾಗೂ ವಿಳಂಬಕ್ಕೆ ಸಮರ್ಥನೆ ಕೊಟ್ಟಿರುವ ಕೇಂದ್ರ, ಈಗಾಗಲೇ ಕರ್ನಾಟಕದಲ್ಲಿ ಚುನಾವಣೆ ಘೋಷಣೆಯಾಗಿದ್ದು, ಕಾವೇರಿ ನ್ಯಾಯ ಮಂಡಳಿ ರಚಿಸುವುದರಿಂದ ಗಂಭೀರ ಕಾನೂನು ಸುವ್ಯವಸ್ಥೆ ಸಮಸ್ಯೆ ಉಂಟಾಗುವ ಸಾಧ್ಯತೆಯಿದೆ. ಕಾವೇರಿ ಸಮಸ್ಯೆ ಹಲವು ಬಾರಿ ಕಾನೂನು ಸುವ್ಯವಸ್ಥೆ ಹದಗೆಡಲು ಕಾರಣವಾಗಿತ್ತು. ಚುನಾವಣೆಯ ಮಧ್ಯೆಯೇ ಮಂಡಳಿ ರಚನೆ ಮಾಡಿದರೆ, ಜನರ ಆಕ್ರೋಶದಿಂದ ಚುನಾವಣೆ ಪ್ರಕ್ರಿಯೆಗೆ ಭಾರೀ ಸಮಸ್ಯೆ ಉಂಟಾಗಬಹುದು ಎಂದು ಕೇಂದ್ರ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next