Advertisement

ರಾಜಕೀಯದಿಂದ ಜಾತಿ ದೂರವಿಡಬೇಕು

09:27 PM Oct 16, 2019 | Lakshmi GovindaRaju |

ಸಂತೆಮರಹಳ್ಳಿ: ಆದರ್ಶ ಪುರುಷರ ಜಯಂತಿಗಳ ಆಚರಣೆಯಲ್ಲಿ ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳುವ ಶಪಥವನ್ನು ಮಾಡಬೇಕು ಎಂದು ಸಂಸದ ವಿ.ಶ್ರೀನಿವಾಸ್‌ ಪ್ರಸಾದ್‌ ಹೇಳಿದರು. ಯಳಂದೂರು ಪಟ್ಟಣದ ಜಹಗೀರ್ದರ್‌ ಬಂಗಲೆ ಮುಂಭಾಗ ತಾಲೂಕು ಆಡಳಿತ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

Advertisement

ರಾಮಾಯಣ ಪವಿತ್ರ ಗ್ರಂಥ: ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಪವಿತ್ರ ಗ್ರಂಥವಾಗಿದೆ. ಇಲ್ಲಿನ ತತ್ವಸಿದ್ಧಾಂತಗಳಲ್ಲಿ ಮೌಲ್ಯಗಳು ನಮ್ಮದಾಗಲಿ. ಭಾರತದಲ್ಲಿ ಧಾರ್ಮಿಕ ನಂಬಿಕೆಗಳು ಹೆಚ್ಚಾಗಿವೆ. ಎಲ್ಲವನ್ನೂ ಜಾತಿ ಹೆಸರಿನಲ್ಲಿ ನೋಡುವ ಪರಿಸ್ಥಿತಿ ದೇಶದಲ್ಲಿ ಉದ್ಭವಿಸಿದೆ. ಇದು ದೇಶದ ಪ್ರಗತಿಗೂ ಮಾರಕವಾಗುತ್ತಿದೆ ಎಂದರು.

ರಾಜಕೀಯದಿಂದ ಜಾತಿ ದೂರವಿಡಬೇಕು: ರಾಜಕೀಯದಿಂದ ಜಾತಿಯನ್ನು ದೂರವಿಟ್ಟರೆ ದೇಶಕ್ಕೆ ಭವಿಷ್ಯವಿದೆ. ಅಂಬೇಡ್ಕರ್‌ ಅವರಲ್ಲಿದ್ದ ಬುದ್ಧ, ಪುಲೆ, ಕಬೀರರ ಚಿಂತನೆಗಳು ನಮ್ಮ ಸಂವಿಧಾನದಲ್ಲಿದೆ. ಈ ದೇಶದ ಪವಿತ್ರ ಗ್ರಂಥ ಸಂವಿಧಾನವಾಗಿದೆ ಇದರ ಅನುಸರಣೆಯಲ್ಲಿ ಎಲ್ಲರೂ ಭಾಗಿಯಾಗಬೇಕು. ಭಾರತದ ಆರ್ಥಿಕತೆ ನೇಪಾಳ ಹಾಗೂ ಬಾಂಗ್ಲಾದೇಶಕ್ಕಿಂತ ಕಡಿಮೆಯಾಗಿದ್ದು ಇದಕ್ಕೂ ಕೂಡ ಭಾರತದ ಖನಿಜ ಹಾಗೂ ಮಾನವ ಸಂಪನ್ಮೂಲಗಳ ಬಳಕೆ ಸರಿಯಾಗಿ ಮಾಡದಿರುವುದೇ ಕಾರಣ ಎಂದು ತಿಳಿಸಿದರು.

ಪರೋಕ್ಷವಾಗಿ ಸಿದ್ಧರಾಮಯ್ಯ ವಿರುದ್ಧ ವಾಗ್ಧಾಳಿ: ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿಯೊಬ್ಬರು ನಮ್ಮ ಸರ್ಕಾರ ತಂದ ಸೌಲಭ್ಯಗಳ ಬಗ್ಗೆ ಮಾತನಾಡಿದ್ದಾರೆ. ಆದರೆ ಇದನ್ನು ಹೇಳಿಕೊಳ್ಳಲು ಬೇರೆ ರಾಜಕೀಯ ವೇದಿಕೆಗಳು ಇವೆ. ಅದನ್ನು ಬಿಟ್ಟು ಮಹಾನ್‌ ಪುರುಷರ ಕಾರ್ಯಕ್ರಮಗಳಲ್ಲಿ ಇವರ ಗುಣಗಾನ ಮಾಡುವುದು ಸಲ್ಲದು ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೆಸರು ಹೇಳದೆ ಪರೋಕ್ಷ ದಾಳಿ ನಡೆಸಿದರು.

ಮೀಸಲಾತಿ ನೀಡಿ: ಶಾಸಕ ಎನ್‌. ಮಹೇಶ್‌ ಮಾತನಾಡಿ, ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕು. ಪರಿಶಿಷ್ಟ ವರ್ಗಗಳಿಗೆ ರಾಜ್ಯದಲ್ಲಿ ಶೇ.7ರಷ್ಟು ಮೀಸಲಾತಿ ನೀಡಲು ಸರ್ಕಾರಕ್ಕೆ ಒತ್ತಾಯಿಸಲಾಗುವುದು. ತಳ ವರ್ಗದ ಶೂದ್ರ ಜನಾಂಗಗಳೇ ಬರೆದ ತ್ರೇತಾಯುಗದ ರಾಮಾಯಣ, ದ್ವಾಪರಯುಗದ ಮಹಾಭಾರತದ ನಂತರ ಅಂಬೇಡ್ಕರ್‌ ವಿರಚಿತ ಸಂವಿಧಾನ ಕಲಿಯುಗದ ಪವಿತ್ರ ಗ್ರಂಥವಾಗಿದೆ. ಇದರ ಅಳವಡಿಕೆಯ ನಂತರ ದೇಶದಲ್ಲಿ ಶೇ.16 ರಷ್ಟಿದ್ದ ಸಾಕ್ಷರತೆ ಶೇ.74ಕ್ಕೆ ಏರಿದೆ. ಈಗ ಶಿಕ್ಷಣ ಕಡ್ಡಾಯವಾಗಿದ್ದು ಮುಂದಿನ 30 ವರ್ಷಗಳಲ್ಲಿ ಇದರಲ್ಲಿ ಶೇ.100 ರಷ್ಟು ಪ್ರಗತಿ ಸಾಧಿಸಲಿದ್ದೇವೆ ಎಂದರು.

Advertisement

ಶಿಕ್ಷಣಕ್ಕೆ ಒತ್ತು ನೀಡಬೇಕು: ಪ್ರೇರಣಾ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಂಸ್ಥಾಪಕಿ ಕೆ.ಜೆ. ಜಯಲಕ್ಷ್ಮಮ್ಮ ಮಾತನಾಡಿ, ವಾಲ್ಮೀಕಿ ರಾಮಾಯಣ ಬುಡಕಟ್ಟು ಜನಾಂಗಗಳ ಮಹಾಕಾವ್ಯವಾಗಿದೆ. ಇದರಲ್ಲಿ ಬುಡಕಟ್ಟಿನ ಜೀವನವೇ ಅಡಕವಾಗಿದೆ. ಪರಿಶಿಷ್ಟರು, ಹಿಂದುಳಿದವರೆ ನಿಜವಾದ ಮೂಲನಿವಾಸಿಗಳಾಗಿದ್ದಾರೆ. ನಿಜವಾದ ಗೋರಕ್ಷರು ಇವರೇ ಆಗಿದ್ದಾರೆ. ಮೂಲ ವಾಲ್ಮೀಕಿ ರಾಮಾಯಣದಲ್ಲಿ ರಾವಣನೇ ನಿಜವಾದ ನಾಯಕನಾಗಿದ್ದಾನೆ. ಆದರೆ ಆತನನ್ನು ನಮ್ಮ ಕೈಯಲ್ಲೇ ಸುಡಿಸುವ ಮೂಲಕ ಒಡಕು ಉಂಟು ಮಾಡಲಾಗುತ್ತಿದೆ. ಇದರ ಬಗ್ಗೆ ನಾವು ಜಾಗೃತರಾಗಬೇಕು. ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ತಿಳಿಸಿದರು.

ಮಾಜಿ ಶಾಸಕ ಜಿ.ಎನ್‌.ನಂಜುಂಡಸ್ವಾಮಿ, ಜಿಪಂ ಅಧ್ಯಕ್ಷೆ ಶಿವಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷೆ ಉಮಾವತಿಸಿದ್ದರಾಜು, ಸದಸ್ಯರಾದ ಜೆ.ಯೋಗೇಶ್‌, ಕಮಲ್‌ನಾಗರಾಜು, ತಾಪಂ ಅಧ್ಯಕ್ಷ ನಿರಂಜನ್‌ ಉಪಾಧ್ಯಕ್ಷೆ ಮಲ್ಲಾಜಮ್ಮ, ಸದಸ್ಯರಾದ ವೆಂಕಟೇಶ್‌, ನಾಗರಾಜು, ಪಲ್ಲವಿಮಹೇಶ್‌, ಭಾಗ್ಯನಂಜಯ್ಯ, ಪದ್ಮಾವತಿ, ಪಪಂ ಸದಸ್ಯರಾದ ಮಹೇಶ್‌, ವೈ.ಜಿ.ರಂಗನಾಥ, ಮಹಾದೇವನಾಯಕ, ಸವಿತಾ, ಕೆ.ಮಲ್ಲಯ್ಯ, ಮಂಜು, ಪ್ರಭಾವತಿ, ಬಿ.ರವಿ ನಾಯಕ ಸಂಘದ ತಾಲೂಕು ಅಧ್ಯಕ್ಷ ವೈ.ಎನ್‌. ಮುರುಳಿಕೃಷ್ಣ, ತಹಶೀಲ್ದಾರ್‌ ವರ್ಷಾ, ಇಒ ಬಿ.ಎಸ್‌.ರಾಜು, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಎಂ.ಕೆ. ಮೇಘಾ, ಬಿಇಒ ವಿ.ತಿರುಮಲಾಚಾರ್‌ ಇತರರು ಇದ್ದರು.

ಗಮನ ಸೆಳೆದ ಆಕರ್ಷಕ ಮೆರವಣಿಗೆ
ಸಂತೆಮರಹಳ್ಳಿ: ಯಳಂದೂರು ಪಟ್ಟಣದಲ್ಲಿ ಪರಿಶಿಷ್ಟ ಕಲ್ಯಾಣ ವರ್ಗಗಳ ಇಲಾಖೆ ಹಾಗೂ ತಾಲೂಕು ಆಡಳಿತ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ನಿಮಿತ್ತ ನಡೆದ ಮೆರವಣಿಗೆ ಗಮನ ಸೆಳೆಯಿತು. ಮೆರವಣಿಗೆಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು. ಶಾಲೆಯ ಮಕ್ಕಳು ಮಾಡಿದ್ದ ಸ್ತಬ್ಧಚಿತ್ರಗಳು ಗಮನ ಸೆಳೆದವು. ಅಲಂಕೃತ ಕುದುರೆ ಸಾರೋಟಿನಲ್ಲಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು.

ಗಾರುಡಿಗೊಂಬೆ, ಕುದುರೆ ಮೇಲೇರಿಬಂದ ವೀರಮದಕರಿ ನಾಯಕರ ಪಾತ್ರಧಾರಿಗಳು ಗಮನಸೆಳೆದವು. ಇದರೊಂದಿಗೆ ಡೊಳ್ಳು ಸೇರಿದಂತೆ ವಿವಿಧ ಕಲಾತಂಡಗಳು ಮೆರವಣಿಗೆಗೆ ಮತ್ತಷ್ಟು ಮೆರಗು ನೀಡಿದವು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿತು. ವಿವಿಧ ಗ್ರಾಮಗಳಿಂದ ಮಹರ್ಷಿ ವಾಲ್ಮೀಕಿಯ ಚಿತ್ರಪಟಗಳನ್ನು ತಮ್ಮ ಅಲಂಕೃತ ವಾಹನಗಳ ಮೇಲೇರಿಸಿಕೊಂಡು ಬಂದಿದ್ದ ಸಾವಿರಾರು ಜನರು ಗಮನ ಸೆಳೆದರು. ಮೆರವಣಿಗೆಗೆ ಜಿಪಂ ಅಧ್ಯಕ್ಷೆ ಶಿವಮ್ಮ ಚಾಲನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next