Advertisement

ರಾಜಕೀಯದ ಘನತೆ ಕುಗ್ಗಿಸುವ ಜಾತಿ ರಾಜಕಾರಣ

01:44 AM Apr 03, 2019 | sudhir |

ಸುಮಲತಾ ಅವರು ಜನ್ಮತಾ ಒಕ್ಕಲಿಗರಲ್ಲ ಎಂಬ ಕಾರಣಕ್ಕೆ ಅವರನ್ನು ಈ ಎರಡು ಪಕ್ಷಗಳು ವಿರೋಧಿಸುತ್ತವೆ ಮತ್ತು ಸುಮಲತಾ ಇಲ್ಲಿಂದ ಆಯ್ಕೆ ಆಗಬಾರದು ಎಂದು ವಾದಿಸುತ್ತವೆ. ಮಂಡ್ಯದ ಹಾಲಿ ಸಂಸದ, ಜೆಡಿಎಸ್‌ ಮುಖಂಡ ಶಿವರಾಮೇ ಗೌಡ ಅವರು ಸುಮಲತಾರ ನಾಯ್ಡು ಜಾತಿಯನ್ನು ಗುರಿಯಾಗಿಸಿ ಭಾರೀ ವಾಗ್ಧಾಳಿ ಮಾಡುತ್ತಿದ್ದಾರೆ.

Advertisement

ಕರ್ನಾಟಕದ ಕೆಲವು ಲೋಕಸಭಾ ಕ್ಷೇತ್ರಗಳು ಸ್ಪಷ್ಟವಾದ ಜಾತಿ ರಾಜಕೀಯ ಮತ್ತು ಜಾತ್ಯತೀತ ವಿರೋಧಿ ನಿಲುವಿಗೆ ಸಾಕ್ಷಿಯಾಗಿವೆ. ಜಾತಿವಾದಿ ವ್ಯಕ್ತಿಯನ್ನು ಜಾತ್ಯತೀತವಾದಿ ಎಂದು ಹೇಳಿಕೊಳ್ಳಲು ಸಾಧ್ಯವೇ ಇಲ್ಲ.
ಸಂವಿಧಾನದ ಸಮಾಜವಾದ ಮತ್ತು ಪ್ರಜಾಸತ್ತಾತ್ಮಕ ಎಂಬೆರಡು ಪ್ರಮುಖ ಅಂಶಗಳು ಕೂಡ ಕೆಲವು ಅಭ್ಯರ್ಥಿಗಳಿಂದ ಉಲ್ಲಂಘನೆಯಾಗುತ್ತಿವೆ. ಅಭ್ಯರ್ಥಿಗಳ ಆಸ್ತಿ ಘೋಷಣೆ ವಿಷಯದಲ್ಲಿ ಇದು ಸ್ಪಷ್ಟವಾಗುತ್ತದೆ. ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪಕ್ಷಗಳಿಗೆ ಮತ್ತು ಮುಖಂಡರಿಗೆ ಪ್ರಜಾಪ್ರಭುತ್ವದ ಅರ್ಥ ಗೊತ್ತಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಕೆಲವು ನಾಯಕರು ನಿರ್ದಿಷ್ಟ ಕುಟುಂಬಗಳಲ್ಲಿ ಜನಿಸಿದ್ದಾರೆ ಎಂಬ ಕಾರಣದಿಂದಲೇ ಅಭ್ಯರ್ಥಿಗಳಾಗಿದ್ದಾರೆ!

ಮಂಡ್ಯದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರು ಅತಿ ಅಸಹ್ಯವಾದ ಜಾತಿವಾದವನ್ನು ಮುನ್ನಡೆಸುತ್ತಿದ್ದಾರೆ. ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಜನ್ಮತಾ ಒಕ್ಕಲಿಗರಲ್ಲ ಎಂಬ ಕಾರಣಕ್ಕೆ ಅವರನ್ನು ಈ ಎರಡು ಪಕ್ಷಗಳು ವಿರೋಧಿಸುತ್ತವೆ ಮತ್ತು ಸುಮಲತಾ ಇಲ್ಲಿಂದ ಆಯ್ಕೆ ಆಗಬಾರದು ಎಂದು ವಾದಿಸುತ್ತವೆ. ಮಂಡ್ಯದ ಹಾಲಿ ಸಂಸದ, ಜೆಡಿಎಸ್‌ ಮುಖಂಡ ಶಿವರಾಮೇ ಗೌಡ ಅವರು ಸುಮಲತಾರ ನಾಯ್ಡು ಜಾತಿಯನ್ನು ಗುರಿಯಾಗಿಸಿ ಭಾರೀ ವಾಗ್ಧಾಳಿ ಮಾಡುತ್ತಿದ್ದಾರೆ. ಕಳೆದ ಉಪ ಚುನಾವಣೆಯಲ್ಲಿ ಗೆದ್ದು ಸಂಸದರಾಗಿರುವ ಶಿವರಾಮೇಗೌಡರು ಮುಖ್ಯಮಂತ್ರಿಯ ಪುತ್ರ ಹಾಗೂ ಜೆಡಿಎಸ್‌ ವರಿಷ್ಠ ದೇವೇಗೌಡರ ಮೊಮ್ಮಗ ನಿಖೀಲ್‌ ಕುಮಾರಸ್ವಾಮಿಗಾಗಿ ತನ್ನ ಸ್ಥಾನವನ್ನು “ತ್ಯಾಗ’ ಮಾಡಿದ್ದಾರೆ. ಇವರು ಕೇವಲ ಒಂದೇ ಒಂದು ಸಂಸತ್‌ ಅಧಿವೇಶನದಲ್ಲಿ ಹಾಜರಾದವರು ಎಂಬುದು ಗಮನಿಸಬೇಕಾದ ಸಂಗತಿ.

ನಟ ಅಂಬರೀಷ್‌ರನ್ನು ಮದುವೆಯಾದ ಕಾರಣಕ್ಕೆ ಮಾತ್ರ ಸುಮಲತಾ ಅವರು ತನ್ನನ್ನು ಗೌಡ್ತಿ ಎಂದು ಕರೆಸಿಕೊಳ್ಳುವುದನ್ನು ಪ್ರಶ್ನಿಸುವ ಏಕೈಕ ಜೆಡಿಎಸ್‌ ನಾಯಕರೇನೂ ಶಿವರಾಮೇ ಗೌಡರಲ್ಲ. ಇತರ ಕೆಲವು ಜೆಡಿಎಸ್‌ ನಾಯಕರು ಕೂಡ ಸುಮಲತಾ ಅವರು ಹೊರಗಿನವರು, ಅಂದರೆ ಆಂಧ್ರ ಮೂಲದವರು ಎಂದು ಹೇಳುತ್ತಿದ್ದಾರೆ. ಹಾಗೆ ನೋಡಿದರೆ ಈಗಲೂ ಕೆಲವು ಮಹಿಳೆಯರು ತಾವು ಮದುವೆಯಾದ ಪುರುಷನ ಜಾತಿ ಹೆಸರನ್ನು ತಮ್ಮ ಹೆಸರಿನ ಮುಂದೆ ಸೇರಿಸಿಕೊಳ್ಳುತ್ತಿಲ್ಲ.

ಇವರೆಲ್ಲರೂ ಹೇಳುವ ಪ್ರಮುಖ ಅಂಶವನ್ನು ಸಂಕ್ಷಿಪ್ತವಾಗಿ “ಮಂಡ್ಯವು ಕೇವಲ ಒಕ್ಕಲಿಗರಿಗಾಗಿ ಮಾತ್ರ’ ಎಂದು ಅರ್ಥೈಸಿಕೊಳ್ಳಬಹುದು. ಇದು ನಮಗೆ ಪಾಕಿಸ್ಥಾನ, ಬಾಂಗ್ಲಾದೇಶದಂಥ ರಾಷ್ಟ್ರಗಳ ಕಾನೂನನ್ನು ನೆನಪಿಸುವಂತೆ ಮಾಡುತ್ತದೆ. ಈ ದೇಶಗಳಲ್ಲೆಲ್ಲ ಇಸ್ಲಾಂ ಅಧಿಕೃತ ಧರ್ಮ ಮತ್ತು ಇತರ ಧಾರ್ಮಿಕ ಅಲ್ಪಸಂಖ್ಯಾಕರಾದ ಹಿಂದೂ, ಕ್ರಿಶ್ಚಿಯನ್‌ ಮುಂತಾದವರು ಇಸ್ಲಾಂಗೆ ವಿಧೇಯರಾಗಿಯೇ ಬದುಕಬೇಕಾಗಿದೆ. ಒಂದೇ ಜಾತಿಯ ನಾಯಕನನ್ನು ಆರಿಸಿ ಕಳುಹಿಸುವ ರಾಜ್ಯ ಮತ್ತು ದೇಶದ ಕೆಲವು ಲೋಕಸಭಾ ಕ್ಷೇತ್ರಗಳಲ್ಲಿ ಮಂಡ್ಯ ಕೂಡ ಒಂದು. 1952ರಿಂದೀಚೆಗೆ ಮಂಡ್ಯದಿಂದ ಆಯ್ಕೆಯಾದ ಸಂಸದರೆಲ್ಲರೂ ಒಕ್ಕಲಿಗರಾಗಿದ್ದರು. ಈ ಜಿಲ್ಲೆಯ ಮೀಸಲು ಕ್ಷೇತ್ರವಾದ ಮಳವಳ್ಳಿ ಹೊರತುಪಡಿಸಿ ಉಳಿದೆಲ್ಲ ವಿಧಾನಸಭಾ ಕ್ಷೇತ್ರಗಳಿಂದ ಆರಿಸಿ ಬರುವ ಶಾಸಕರು ಕೂಡ ಒಕ್ಕಲಿಗರೇ ಆಗಿದ್ದಾರೆ. ನಾಗಮಂಗಲದಿಂದ ಗೆದ್ದಿದ್ದ ಚಿಗರಿ ಗೌಡ ಮತ್ತು ಪಾಂಡವಪುರದಿಂದ (ಈಗ ಮೇಲುಕೋಟೆ ಎಂದು ಹೆಸರು ಬದಲಾಗಿದೆ) ಜಯ ಗಳಿಸಿದ್ದ ಹಿಂದಿನ ರೈತ ಸಂಘದ ಮುಖಂಡ ಕೆ. ಎಸ್‌. ಪುಟ್ಟಣ್ಣಯ್ಯ ಅವರು ಮಾತ್ರ ಬೇರೆ ಜಾತಿಗೆ ಸೇರಿದ್ದರು. ಇವರಿಬ್ಬರೂ ಕುರುಬ ಸಮುದಾಯದವರಾಗಿದ್ದರು. ಆದರೆ ಸ್ವಾತಂತ್ರ್ಯ ಪೂರ್ವದಲ್ಲಿ ಒಕ್ಕಲಿಗೇತರರಾದ ಬ್ರಾಹ್ಮಣರು ಮೈಸೂರು ರೆಪ್ರಸೆಂಟೇಟಿವ್‌ ಅಸೆಂಬ್ಲಿಗೆ ಆಯ್ಕೆಯಾಗುತ್ತಿದ್ದರು. ಆ ದಿನಗಳಲ್ಲಿ ಅವರು ದೊಡ್ಡ ಭೂಮಾಲಕರಾಗಿದ್ದುದು ಇದಕ್ಕೆ ಪ್ರಮುಖ ಕಾರಣವಾಗಿರುತ್ತಿತ್ತು. ರಾಜ್ಯದಲ್ಲಿ ಭೂ ಸುಧಾರಣಾ ಮಸೂದೆ ಜಾರಿಗೆ ಬಂದ ಬಳಿಕ ಭೂಮಾಲಕತ್ವದ ಸ್ಥಿತಿ ಬದಲಾಗಿ, ಅದು ರಾಜಕೀಯದಲ್ಲೂ ಬದಲಾವಣೆಗೆ ಕಾರಣವಾಯಿತು.

Advertisement

ಯಡಿಯೂರಪ್ಪ ಮತ್ತು ಅವರ ಮಾತೃ ಜಿಲ್ಲೆ: ಮಂಡ್ಯ ಮೂಲದವರಾಗಿರುವ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಮುಖಂಡ ಬಿ.ಎಸ್‌. ಯಡಿಯೂರಪ್ಪ ಕೂಡಾ ತನ್ನ ಮಾತೃಜಿಲ್ಲೆಯಲ್ಲಿ ರಾಜಕೀಯ ಭವಿಷ್ಯವನ್ನು ಪರೀಕ್ಷಿಸಲು ಮುಂದಾಗಿಲ್ಲ. ಇವರು ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲೂಕಿನ ಬೂಕನಕೆರೆ ಗ್ರಾಮದವರಾಗಿದ್ದರೂ ರಾಜಕೀಯ ಬದುಕಿಗೆ ಆರಿಸಿಕೊಂಡದ್ದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರವನ್ನು. ಅವರು ಲಿಂಗಾಯತ ಸಮುದಾಯಕ್ಕೆ ಸೇರಿದ ಕಾರಣದಿಂದಲೇ ಮಂಡ್ಯದಿಂದ ರಾಜಕೀಯಕ್ಕೆ ಮುಂದಾಗಿಲ್ಲ ಎಂಬುದು ಒಪ್ಪತಕ್ಕ ಸಂಗತಿ.

ಮಂಡ್ಯ ಜಿಲ್ಲೆಯಲ್ಲಿ ಒಕ್ಕಲಿಗರ ಜನಸಂಖ್ಯೆ ಸುಮಾರು ಶೇ. 57ರಷ್ಟು ಎಂದು ಅಂದಾಜಿಸಲಾಗಿದೆ. ಕಾವೇರಿ ನದಿಯ ನೀರನ್ನು ಆಶ್ರಯಿಸಿಕೊಂಡಿರುವ ಕೃಷಿ ಪ್ರಧಾನ ಜಿಲ್ಲೆಯಾಗಿದ್ದರೂ ಕಾವೇರಿ ಕಾಲುವೆ ತಲುಪದ ಒಣ ಭೂಮಿಯೂ ಜಿಲ್ಲೆಯಲ್ಲಿದೆ. ಮಹಾ ಚುನಾವಣೆಯಲ್ಲಿ ಮಂಡ್ಯದಿಂದ ಒಕ್ಕಲಿಗೇತರ ನಾಯಕರನ್ನು ಕಣಕ್ಕಿಳಿಸುವ ಧೈರ್ಯವನ್ನು ಯಾವ ಪಕ್ಷದವರೂ ಮಾಡುತ್ತಿಲ್ಲ. 1978ರಲ್ಲಿ ಕಾಂಗ್ರೆಸ್‌ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಆದರೆ ಅವರು ಸೋಲು ಅನುಭವಿಸುವ ಮೂಲಕ ಇಂಥ ಪ್ರಯೋಗಗಳಿಗೆ ಇಲ್ಲಿ ಅವಕಾಶವಿಲ್ಲ ಎಂಬ ಪರೋಕ್ಷ ಸಂದೇಶ ಸಿಕ್ಕಿತ್ತು.

ಈ ಬಾರಿ ಇಲ್ಲಿ ಒಕ್ಕಲಿಗರ‌ಲ್ಲದ, ನಾಯ್ಡು ಸಮುದಾಯದಲ್ಲಿ ಜನಿಸಿರುವ ಸುಮಲತಾ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಅವರು ತನ್ನ ಪತಿ ಅಂಬರೀಷ್‌ ಅವರ ಸಿನಿಮಾ ಮೂಲದ ಸಾಧನೆಯ ಬಂಡವಾಳ ಹೊಂದಿದ್ದಾರೆ ಮತ್ತು ಅದೇ ಕಾರಣ ಮುಂದಿಟ್ಟು ಮತ ಯಾಚನೆ ಮಾಡುತ್ತಿದ್ದಾರೆ. ಅಂಬರೀಷ್‌ ಅವರು ಓರ್ವ ವಿಶಿಷ್ಟ ರಾಜಕಾರಣಿ, ಸಚಿವ ಹಾಗೂ ಸಂಸದರಾಗಿದ್ದರು. ಅವರಿಗೆ ಈಗಲೂ ಇಲ್ಲಿ ದೊಡ್ಡ ಅಭಿಮಾನಿ ವರ್ಗವಿದೆ. ಅವರು ಎರಡು ಪ್ರಮುಖ ಪಕ್ಷಗಳಲ್ಲಿ ಸೇವೆ ಸಲ್ಲಿಸಿದ್ದವರು ಕೂಡ. ಇವರಿಗೆ ಈ ರೀತಿಯ ಅಭಿಮಾನಿ ವರ್ಗ ಇರಲು ಇವರ ಅಜ್ಜನ ಕೊಡುಗೆಯೂ ಇದೆ. ಅಂಬರೀಷ್‌ ಅವರ ಅಜ್ಜ ತಿರುಮಕೂಡಲು ಚೌಡಯ್ಯ ಅವರು ಖ್ಯಾತ ವಯೊಲಿನ್‌ ವಾದಕರಾಗಿದ್ದರು ಹಾಗೂ ಸಿನಿಮಾ ರಂಗದ ಸಾಧಕರಾಗಿದ್ದರು. ಚೌಡಯ್ಯ 1940ರಲ್ಲೇ ಪ್ರಖ್ಯಾತ ಕರ್ನಾಟಕ ಸಂಗೀತಕಾರ ಚೆಂಬೈ ವಿದ್ಯಾನಾಥ ಭಾಗವತರ್‌ ಅವರನ್ನು ನಾಯಕನಾಗಿಸಿಕೊಂಡು “ವಾಣಿ’ ಎಂಬ ಕನ್ನಡ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಚೌಡಯ್ಯನವರ ವಯೊಲಿನ್‌ ಸಾಧನೆಯ ಕೀರ್ತಿಯು ರಾಜ್ಯದ ಗಡಿ ದಾಟಿ ಮುಂದುವರಿದಿತ್ತು. ಅಂಥ ಸಾಧಕನ ಮೊಮ್ಮಗನಾಗಿದ್ದುದು ಕೂಡ ಅಂಬರೀಷ್‌ಗೆ ಈಗಲೂ ಮಂಡ್ಯದಲ್ಲಿ ಒಂದು ದೊಡ್ಡ ಅಭಿಮಾನಿ ವರ್ಗವನ್ನು ಉಳಿಸಿಕೊಡಲು ಸಹಕಾರಿಯಾಗಿದೆ ಎಂದು ಹೇಳಬಹುದು.

ಶಿವರಾಮೇ ಗೌಡರಂಥ ಕೆಲವು ರಾಜಕಾರಣಿಗಳ ಹಿತಕ್ಕಾಗಿ ಮಾತ್ರವೇ ನಾಯ್ಡುಗಳು ಕರ್ನಾಟಕಕ್ಕೆ ಮಿತ್ರರಾಗಿಲ್ಲ ಮತ್ತು ಇಲ್ಲಿಗೆ ಅವರ ಕೊಡುಗೆ ಏನೂ ಇಲ್ಲ ಎಂದು ಹೇಳಬಹುದೇ ಹೊರತು ವಾಸ್ತವ ಸಂಗತಿ ಹಾಗಿಲ್ಲ ಎಂಬುದನ್ನು ನಾವು ಗಮನಿಸಬೇಕಾಗಿದೆ. ನಾಯ್ಡು ಸಮುದಾಯದವರು ತಮ್ಮ ಎರಡು ಮಾತೃರಾಜ್ಯಗಳಿಂದ ಹೊರಗೂ ಸಾಧನೆ ಮಾಡಿದ ಸಾಕಷ್ಟು ಉದಾಹರಣೆಗಳಿವೆ. ಕರ್ನಾಟಕದಲ್ಲಿ ನೆಲೆಸಿದ್ದ ನಾಯ್ಡುಗಳು ಕೂಡ ಸಾಕಷ್ಟು ಪ್ರತಿಭಾವಂತರಾಗಿದ್ದರು. ಕರ್ನಾಟಕದಲ್ಲಿ ನೆಲೆಸಿದ್ದ ನಾಯ್ಡುಗಳು ದೇಶಕ್ಕೆ ಓರ್ವ ಮುಖ್ಯ ನ್ಯಾಯಮೂರ್ತಿ, ರಾಜ್ಯಕ್ಕೆ ಇಬ್ಬರು ಮುಖ್ಯ ಕಾರ್ಯದರ್ಶಿಗಳು, ಐಎಎಸ್‌, ಐಪಿಎಸ್‌ ಅಧಿಕಾರಿಗಳು, ಚಿಂತಕರು, ಶಿಕ್ಷಣ ತಜ್ಞರು, ಖ್ಯಾತ ನ್ಯಾಯವಾದಿಗಳು ಹಾಗೂ ಇತರ ವೃತ್ತಿಪರರು, ಸಿನಿಮಾ ಕಲಾವಿದರು, ಸಚಿವರು, ಶಾಸಕರು, ಉದ್ಯಮಿಗಳು, ಕೈಗರಿಕೋದ್ಯಮಿಗಳು, ಸಂಗೀತಕಾರರು ಮುಂತಾದ ಹಲವು ಸಾಧಕರನ್ನು ನೀಡಿದ ಪ್ರಮುಖ ಸಮುದಾಯವಾಗಿದೆ.

ಕರ್ನಾಟಕದ ವಿಧಾನಸಭೆಯು ರಾಜ್ಯಸಭೆಗೆ ಆರಿಸಿ ಕಳುಹಿಸಿಕೊಟ್ಟಿರುವ ಎಂ. ವೆಂಕಯ್ಯ ನಾಯ್ಡು ಅವರು ಈಗ ದೇಶದ ಉಪ ರಾಷ್ಟ್ರಪತಿಯಾಗಿದ್ದಾರೆ. ಎಂ.ವಿ. ಸುಬ್ಬಯ್ಯ ನಾಯ್ಡು ಅವರು ಕನ್ನಡದ ಹಿಂದಿನ ಕಾಲದ ಹೀರೋ ಆಗಿದ್ದರು. ಇವೆಲ್ಲವನ್ನೂ ಮಂಡ್ಯದಲ್ಲಿ ಸಂಕುಚಿತ ಜಾತಿವಾದ ಮತ್ತು ಸ್ಥಳೀಯತೆ ವಾದವನ್ನು ಎತ್ತಿ ಹಿಡಿಯುವವರು ಗಮನಿಸಬೇಕಾಗಿದೆ.

ಮಂಡ್ಯದಲ್ಲಿ ಈಗ ಏನು ನಡೆಯುತ್ತಿದೆಯೋ ಅದೊಂದು ರೀತಿಯ ಸಂಕಷ್ಟದ ಸ್ಥಿತಿಯಲ್ಲಿದೆ. ದಕ್ಷಿಣ ಕರ್ನಾಟಕದಲ್ಲಿ ಸಂಚರಿಸುತ್ತಿರುವ ದೊಡ್ಡ ಸಂಖ್ಯೆಯ ವಾಣಿಜ್ಯ ವಾಹನಗಳು ಮತ್ತು ಮಂಡ್ಯದ ಆಟೋರಿûಾಗಳಲ್ಲಿ “ಮಂಡ್ಯದ ಸಲಗ’ ಅಥವಾ “ಮಂಡ್ಯದ ಗಂಡು’ ಎಂಬ ವಾಕ್ಯ ಎದ್ದು ಕಾಣುತ್ತಿದೆ.

ಇವೆಲ್ಲವೂ ಅಂಬರೀಷ್‌ಗೆ ಅಲ್ಲಿನ ಜನತೆ ಕೊಡುತ್ತಿರುವ ಗೌರವ ಮತ್ತು ಅವರ ಪರವಾಗಿ ತೋರಿಸುತ್ತಿರುವ ಅಭಿಮಾನವಾಗಿದೆ. ಆದರೆ ಅಲ್ಲಿನ ಕೆಲವು ರಾಜಕಾರಣಿಗಳು ಅಂಬರೀಷ್‌ ಪತ್ನಿಯು ಗಂಡನ ಹೆಸರಲ್ಲಿ ಗೆಲ್ಲಲು ಶ್ರಮಿಸುತ್ತಿರುವುದರ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಮಂಡ್ಯಕ್ಕೆ ಸುಮಲತಾ ಕೊಡುಗೆ ಕಡಿಮೆ ಎಂಬ ಆರೋಪ ಕೆಲವರಿಂದ ಕೇಳಿ ಬರುತ್ತಿದೆ. ಆದರೆ ಅದೇ ಮಾತು ನಿಖೀಲ್‌ ಕುಮಾರಸ್ವಾಮಿಗೂ ಅನ್ವಯವಾಗುತ್ತದೆ. ದೇವೇಗೌಡರ ಕುಟುಂಬ ಸದಸ್ಯರೊಬ್ಬರು ಇದೇ ಮೊದಲ ಬಾರಿಗೆ ಇಲ್ಲಿಂದ ಸ್ಪರ್ಧಿಸುತ್ತಿದ್ದಾರೆ ಮತ್ತು ಅವರು ಕೂಡ ಈ ಕ್ಷೇತ್ರದ ಹೊರಗಿನವರು ಎಂಬುದು ಗಮನಿಸಬೇಕಾದ ಸಂಗತಿ.

Advertisement

Udayavani is now on Telegram. Click here to join our channel and stay updated with the latest news.

Next