Advertisement

Caste census ಕೂಗು ಮತ್ತಷ್ಟು ಜೋರು!: ಸರಕಾರ ಬಿದ್ದರೂ ಪರವಾಗಿಲ್ಲ, ಪ್ರಕಟಿಸಿ

01:37 AM Oct 07, 2024 | Team Udayavani |

ಬೆಂಗಳೂರು: ಮುಡಾ ನಿವೇಶನ ಹಂಚಿಕೆ ಪ್ರಕರಣ ಬೆಳಕಿಗೆ ಬಂದ ಬಳಿಕ ಒಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರಕಾರ ಡೋಲಾಯಮಾನವಾಗಿದೆ ಎಂದು ವಿಪಕ್ಷಗಳು ಆರೋಪಿಸುತ್ತಿದ್ದರೆ, ಮತ್ತೂಂದೆಡೆ ಮುಖ್ಯಮಂತ್ರಿ ಬದಲಾವಣೆ ಚರ್ಚೆ ರಾಜಕೀಯ ವಲಯದಲ್ಲಿ ತೀವ್ರಗೊಳ್ಳುತ್ತಿದೆ.

Advertisement

ಈ ನಡುವೆ “ಈ ಸರಕಾರ ಹೋಗುತ್ತದೆ ಎನ್ನುವು ದಾದರೆ ಹೋಗಲಿ. ಆದರೆ ಜಾತಿಗಣತಿ ಜಾರಿ ಮಾಡಲಿ’ ಎಂದು ವಿಧಾನ ಪರಿಷತ್ತಿನ ಸದಸ್ಯ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್‌ ಹೇಳಿಕೆ ಭಾರೀ ಸಂಚಲನ ಮೂಡಿಸಿದೆ. ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ, ಮಾಜಿ ಸಚಿವ ಎಚ್‌.ಎಂ. ರೇವಣ್ಣ ಆಗ್ರಹದ ಬೆನ್ನಲ್ಲೇ ಹರಿಪ್ರಸಾದ್‌ ಹೇಳಿಕೆ ಕುತೂಹಲ ಮೂಡಿಸಿದೆ.

“ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿಗಣತಿ) ವರದಿ ಜಾರಿಗೊಳಿಸುವುದು ನಮ್ಮ ಪಕ್ಷ ಮತ್ತು ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್‌ ಗಾಂಧಿ ಅವರ ಆಶಯ ಮತ್ತು ಆದ್ಯತೆಯಾಗಿದೆ.

ಇದೇ ಕಾರಣಕ್ಕೆ ಈಚೆಗಷ್ಟೇ ಸ್ವತಃ ರಾಹುಲ್‌ ಗಾಂಧಿ, ಪ್ರಪಂಚ ತಮ್ಮ ಮೇಲೆ ಬಿದ್ದರೂ ಜಾತಿಗಣತಿ ಮಾಡುವು ದಾಗಿ ಘೋಷಿಸಿದ್ದಾರೆ. ಆದರೆ ರಾಜ್ಯ ಸರಕಾರ ಯಾಕೆ ಈ ನಿಟ್ಟಿನಲ್ಲಿ ಯೋಚನೆ ಮಾಡುತ್ತಿದೆ ಗೊತ್ತಾಗುತ್ತಿಲ್ಲ. ಸರಕಾರ ಹೋಗುತ್ತದೆ ಎನ್ನುವುದಾದರೆ ಹೋಗಲಿ’ ಎಂದು ಗುಡುಗಿದರು.

ಶೇಷಾದ್ರಿಪುರಂನಲ್ಲಿ ರವಿವಾರ ಹಮ್ಮಿಕೊಂಡಿದ್ದ ಕೆ.ಎನ್‌. ಲಿಂಗಪ್ಪ ರಚಿಸಿದ “ಮೀಸಲಾತಿಯ ಒಳಮುಖ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಜನಸಾಮಾನ್ಯರ ಹಣದಿಂದ ಜಾತಿಗಣತಿ ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸಿದ್ದೀರಿ. ವಿಧಾನಸಭಾ ಚುನಾವಣೆಪೂರ್ವ ಪಕ್ಷದ ಪ್ರಣಾಳಿಕೆಯಲ್ಲೂ ಹೇಳಿದ್ದೀರಿ. ಕಾಂಗ್ರೆಸ್‌ ರಾಷ್ಟ್ರೀಯ ನಾಯಕ ರಾಹುಲ್‌ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಜಾತಿಗಣತಿ ಜಾರಿ ಪರವಾಗಿದ್ದಾರೆ. ಹೀಗಿರುವಾಗ ಮೀನಮೇಷ ಯಾಕೆ’ ಎಂದು ಪ್ರಶ್ನಿಸಿದರು.

Advertisement

ಸ್ವತಃ ಸರಕಾರದಲ್ಲಿನ ಸಚಿವರು ವರದಿ ವಿರೋಧಿಸಿ ಸಹಿ ಸಂಗ್ರಹಿಸಿ ಅರ್ಜಿ
ಸಲ್ಲಿಸಿದ್ದಾರೆ. ಹೀಗಿರುವಾಗ ಈ ವರದಿಗೆ ಮಹತ್ವ ಇದೆಯೇ ಎಂದು ಕೇಳಿದಾಗ,
“ಸಚಿವರ ಪರ ಅಥವಾ ವಿರೋಧದಿಂದ ಇದು ಮಹತ್ವ ಪಡೆದುಕೊಳ್ಳುವುದಿಲ್ಲ. ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಹೇಳಿದ್ದರಿಂದ ಇದು ಮಹತ್ವದ್ದಾಗಿದೆ. ಪಕ್ಷದ ಪ್ರಣಾಳಿಕೆ ಮತ್ತು ರಾಹುಲ್‌ ಗಾಂಧಿ ಅವರ ಮೇಲೆ ಗೌರವ ಇರುವವರೆಲ್ಲರೂ ಇದಕ್ಕೆ ಬೆಂಬಲ ಕೊಡಬೇಕು’ ಎಂದು ಸೂಚ್ಯವಾಗಿ ಹೇಳಿದರು.

ಲೋಕಸಭಾ ಚುನಾವಣೆ ಬಳಿಕ ನಡೆಯುವ ಮೊದಲ ಸಂಪುಟ
ದಲ್ಲೇ ಜಾತಿ ಗಣತಿ ವರದಿಯನ್ನು ಮುಂದಿಡುವುದಾಗಿ ಸಿಎಂ ಹೇಳಿ ದ್ದರು ಎಂದು ನೆನಪಿಸಿದಾಗ, “ಚುನಾವಣೆ ಇದೆಯೋ ಇಲ್ಲವೋ ಅಥವಾ ಸರಕಾರ ಇದೆಯೋ ಇಲ್ಲವೋ, ಪ್ರಪಂಚ ಮೇಲೆ ಬಿದ್ದರೂಜಾರಿಗೆ ತರುವುದಾಗಿ ನಮ್ಮ ನಾಯಕರು ಹೇಳಿದ್ದಾರೆ. ಅದರಂತೆ ಜಾತಿಗಣತಿ ಜಾರಿಗೆ ಬರಬೇಕಷ್ಟೇ’ ಎಂದು ಪುನರುಚ್ಚರಿಸಿದರು.

ಪ್ರಣಾಳಿಕೆ ನೋಡಿದ್ದಾರೋ ಗೊತ್ತಿಲ್ಲ; ಸುರೇಶ್‌ಗೆ ಹರೀಶ್‌ ತಿರುಗೇಟು: ಜಾತಿ ಗಣತಿ ವಿಚಾರದಲ್ಲಿ ಸಿಎಂ ಎಚ್ಚರಿಕೆಯ ಹೆಜ್ಜೆ ಇಡಬೇಕು ಎಂಬ ಮಾಜಿ ಸಂಸದ ಡಿ.ಕೆ. ಸುರೇಶ್‌ ಹೇಳಿಕೆಯ ಬಗ್ಗೆ ಗಮನ ಸೆಳೆದಾಗ, “ಯಾರಿಗೆ ಎಚ್ಚರಿಕೆ ಕೊಟ್ಟಿದ್ದಾರೆ ಎಂದು
ಗೊತ್ತಿಲ್ಲ. ಇದು ರಾಹುಲ್‌ ಗಾಂಧಿ ಮತ್ತು ಕಾಂಗ್ರೆಸ್‌ ಕಾರ್ಯ ಕ್ರಮವಾಗಿದೆ. ಜನರಿಗೆ ನಾವು ಆಶ್ವಾಸನೆ ಕೊಟ್ಟಿದ್ದೇವೆ. ಸುರೇಶ್‌ ಒಮ್ಮೆ ಪ್ರಣಾಳಿಕೆ ನೋಡಬೇಕಾಗುತ್ತದೆ. ಪ್ರಣಾಳಿಕೆ ನೋಡಿ ಹೇಳಿ ದ್ದಾರೋ ಇಲ್ಲವೋ ಗೊತ್ತಿಲ್ಲ’ ಎಂದು ತಿರುಗೇಟು ನೀಡಿದರು.

ಜಾತಿ ಗಣತಿ ವಿಚಾರವಾಗಿ ಗೃಹ ಸಚಿವ ಡಾ| ಪರಮೇಶ್ವರ ಮಾತನಾಡಿ, “ಇದೊಂದು ವಿಚಿತ್ರ ಸಂದರ್ಭ. ಜಾತಿಗಣತಿ ಸ್ವೀಕಾರ ಮಾಡಿಲ್ಲ ಎಂದಾದರೆ, ಮಾಡಿಲ್ಲ ಎನ್ನುತ್ತಾರೆ. ಸ್ವೀಕರಿಸಿದರೆ ಯಾಕೆ ತಗೊಂಡಿರಿ ಅಂತ ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನ ಮಾಡುತ್ತಾರೆ. ಜಾತಿ ಗಣತಿ ಸ್ವೀಕಾರ ವಿಳಂಬಕ್ಕೂ ಕಾರಣಗಳಿವೆ. ಸಂಪುಟದಲ್ಲಿ ಚರ್ಚೆ ಮಾಡಿ ಅಧಿವೇಶನದಲ್ಲಿ ಮಂಡಿಸಬೇಕೋ ಬೇಡವೋ ಎಂಬುದನ್ನು ನಿರ್ಧರಿಸಲಾಗುವುದು. ಅಧಿವೇಶನದಲ್ಲಿ ಮಂಡಿಸಬೇಕಿಲ್ಲ ಅಂತ ಸಂಪುಟ ತೀರ್ಮಾನ ಮಾಡಿದರೆ ಮುಗಿಯಿತು’ ಎಂದರು.
ಲೆಕ್ಕ ಕೊಡಬೇಕಲ್ಲ; ಡಾ| ಪರಮೇಶ್ವರ: ರಾಜ್ಯ ಸರಕಾರ 160 ಕೋಟಿ ರೂ. ಖರ್ಚು ಮಾಡಿದೆ. ಅದಕ್ಕೂ ಲೆಕ್ಕ ಕೊಡಬೇಕು. ನಾಳೆ ಮಹಾಲೆಕ್ಕ ಪರಿಶೋಧಕರು (ಸಿಎಜಿ) ಕೂಡ ಇದಕ್ಕೆ ಆಕ್ಷೇಪ ಮಾಡಬಹುದು. ಹೀಗಾಗಿ ರಾಜ್ಯದ ಜಾತಿ ಗಣತಿ ಸಂಪುಟಕ್ಕೆ ತರುತ್ತೇವೆ ಎಂದು ಸ್ಪಷ್ಟಪಡಿಸಿದರು. “ಈ ನಡುವೆ ಕೇಂದ್ರ ಸರಕಾರ ಕೂಡ ಜಾತಿ ಗಣತಿ ಮಾಡಬೇಕು.

ಪುನರಾವರ್ತನೆ ಆಗಿದ್ದರೆ ಮುಂದೆ ಸರಿಪಡಿಸಿಕೊಳ್ಳಬಹುದು. ಯಾವುದಾದರೂ ಸಮುದಾಯದ ಅಂಕಿ-ಸಂಖ್ಯೆ ಹೆಚ್ಚು ಕಮ್ಮಿ ಆಗಿದ್ದರೆ ಆಮೇಲೆ ಸರಿ ಮಾಡಿಕೊಳ್ಳಬಹುದು. ಯಾವಾಗಲೂ ಕೇಂದ್ರ ಸರಕಾರದ ಜಾತಿ ಗಣತಿಯನ್ನೇ ಎಲ್ಲರೂ ಪರಿಗಣಿಸುತ್ತಾರೆ ಹಾಗೂ ಉಪಯೋಗಿಸುತ್ತಾರೆ. ಒಂದು ಸಾರಿ ಸಂಪುಟಕ್ಕೆ ಬಂದು ಚರ್ಚೆಯಾಗಲಿ, ಆಮೇಲೆ ನೋಡೋಣ’ ಎಂದರು.

ಹರಿಪ್ರಸಾದ್‌ ಹೇಳಿದ್ದೇನು?
ಪ್ರಪಂಚ ಬಿದ್ದರೂ ಜಾತಿಗಣತಿ ವರದಿ ಘೋಷಿಸುತ್ತೇನೆಂದಿದ್ದ ರಾಹುಲ್‌
ವರದಿ ಬಿಡುಗಡೆಗೆ ರಾಜ್ಯ ಸರಕಾರ ಹಿಂದೇಟು ಯಾಕೆಂದು ತಿಳಿಯುತ್ತಿಲ್ಲ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೂ ಜಾತಿಗಣತಿ ಜಾರಿಗೆ ಬದ್ಧ
ವಿಧಾನಸಭಾ ಚುನಾವಣೆ ಪೂರ್ವ ಪಕ್ಷದ ಪ್ರಣಾಳಿಕೆಯಲ್ಲೂ ಭರವಸೆ
ಕಾಂಗ್ರೆಸ್‌ ಪ್ರಣಾಳಿಕೆಯನ್ನು ಡಿ.ಕೆ. ಸುರೇಶ್‌ ನೋಡಿಲ್ಲ ಎಂದು ಕಾಣಿಸುತ್ತದೆ

Advertisement

Udayavani is now on Telegram. Click here to join our channel and stay updated with the latest news.

Next