Advertisement

ದಿನಕ್ಕೊಂದು ಹವಾಮಾನ: ಗೇರು ಕೃಷಿಗೆ ಸಂಕಷ್ಟ

08:12 PM Nov 27, 2021 | Team Udayavani |

ಕುಂದಾಪುರ: ಜಾಗತಿಕ ತಾಪಮಾನದಿಂದಾಗಿ ದಿನಕ್ಕೊಂದು ರೀತಿಯ ಹವಾಮಾನವಿದ್ದು, ಇದು ಗೇರು ಬೆಳೆಯನ್ನೇ ನೆಚ್ಚಿಕೊಂಡಿರುವ ಕರಾವಳಿ ಭಾಗದ ಸಾವಿರಾರು ಮಂದಿ ಗೇರು ಕೃಷಿಕರಿಗೆ ಸಂಕಷ್ಟ ತಂದೊಡ್ಡಿದೆ. ಹೂವು ಬಿಡುವ ಹೊತ್ತಿನಲ್ಲಿಯೇ ವಾತಾವರಣದಲ್ಲಿ ಭಾರೀ ಪ್ರಮಾಣದ ಏರುಪೇರಾಗುತ್ತಿರುವುದು ರೈತರ ನಿದ್ದೆಗೆಡಿಸಿದೆ.

Advertisement

ಕುಂದಾಪುರ, ಬೈಂದೂರು ತಾಲೂಕು ಸೇರಿದಂತೆ ಕರಾವಳಿ ಜಿಲ್ಲೆಗಳ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಗೇರು ಕೃಷಿಯೂ ಒಂದಾಗಿದೆ. ಉಡುಪಿ ಜಿಲ್ಲೆಯಲ್ಲಿ ಒಟ್ಟಾರೆ 17,386 ಹೆಕ್ಟೇರ್‌ ವಿಸ್ತೀರ್ಣದಲ್ಲಿ ವಾರ್ಷಿಕ 34,772 ಮೆಟ್ರಿಕ್‌ ಟನ್‌ ಗೇರು ಉತ್ಪಾದನೆಯಾಗುತ್ತಿದೆ. ಸುಮಾರು 9 ಸಾವಿರ ಹೆಕ್ಟೇರ್‌ ರೈತರದ್ದಾಗಿದ್ದು, ಬಾಕಿ 8 ಸಾವಿರ ಹೆಕ್ಟೇರ್‌ನಷ್ಟು ಗೇರು ಅಭಿವೃದ್ಧಿ ನಿಗಮದ್ದಾಗಿದೆ. ಅಂದಾಜು 15 ಸಾವಿರಕ್ಕೂ ಅಧಿಕ ಮಂದಿ ಗೇರು ಕೃಷಿಕರಿದ್ದಾರೆ.

ಹೂವು ಬಿಡುವ ಪ್ರಕ್ರಿಯೆ ವಿಳಂಬ
ಈಗಾಗಲೇ ಕುಂದಾಪುರದ ಕೆಲವೆಡೆಗಳಲ್ಲಿ ಗೇರು ಮರದಲ್ಲಿ ಹೂವು ಬಿಟ್ಟಿದ್ದು, ಆದರೆ ಭಾರೀ ಪ್ರಮಾಣದಲ್ಲಿ ಹೂವು ಬಿಡುವ ಪ್ರಕ್ರಿಯೆ ಆರಂಭವಾಗಿಲ್ಲ. ಇನ್ನು ಮುಂದಿನ ದಿನಗಳಲ್ಲಿ ಮಳೆ ಹೀಗೆ ಮುಂದುವರಿದರೆ ಗೇರು ಮರ ಚಿಗುರುತ್ತ ಹೋಗಲಿದ್ದು, ಸೆಖೆ ಬೀಳುವವರೆಗೆ ಹೂವು ಬಿಡುವ ಪ್ರಕ್ರಿಯೆ ಆರಂಭವಾಗುವುದಿಲ್ಲ ಎನ್ನುತ್ತಾರೆ ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು.

ಇದನ್ನೂ ಓದಿ:ರಾಜ್ಯದಲ್ಲಿ ಮತ್ತೆ ಬಿಜೆಪಿ-ಶಿವಸೇನೆ ಸರಕಾರ: ಭವಿಷ್ಯ ನುಡಿದ ಅಠಾವಳೆ

ಹವಾಮಾನ ವೈಪರೀತ್ಯದಿಂದ ತೊಂದರೆ
ವಾತಾವರಣದಲ್ಲಿ ದಿನಕ್ಕೊಂದು ಬದಲಾವಣೆ ಯಾಗುತ್ತಿದ್ದು, ಒಂದು ದಿನ ಮಳೆ, ಮೋಡ, ಚಳಿ, ಸೆಖೆ ಹೀಗೆ ಆಗಾಗ ಏರುಪೇರಾಗುತ್ತಿದೆ. ಇದರಿಂದ ಗೇರು ಸಹಿತ ಹಲಸು, ಮಾವು, ಕೊಕ್ಕೊ ಮತ್ತಿತರ ತೋಟಗಾರಿಕಾ ಬೆಳೆಗಳ ಹೂ-ಕಾಯಿ ಆಗುವ ಪ್ರಕ್ರಿಯೆ ಅಡ್ಡಿಯಾಗುತ್ತಿದೆ. ಹೂವು ಬಿಟ್ಟ ಬಳಿಕ ಮೋಡ ಹೆಚ್ಚಿಗೆ ಇದ್ದರೆ ಅದು ಸಹ ಸಮಸ್ಯೆಯಾಗುತ್ತದೆ. ಇದರಿಂದ ಈ ಬಾರಿಯ ಒಟ್ಟಾರೆ ಇಳುವರಿ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನುವ ಆತಂಕ ಕೃಷಿಕರದ್ದಾಗಿದೆ.

Advertisement

ವಿಳಂಬ ಸಂಭವ
ಗೇರು ಮರದಲ್ಲಿ ಈಗಾಗಲೇ ಹೂವು ಬಿಟ್ಟಿದ್ದರೆ ಮಳೆಯಿಂದ ತೊಂದರೆಯಿಲ್ಲ. ಆದರೆ ಮಳೆ ಇನ್ನಷ್ಟು ದಿನಗಳ ಕಾಲ ಮುಂದುವರಿಯುತ್ತಲೇ ಇದ್ದರೆ ಮಾತ್ರ ಹೂವು ಬಿಡುವ ಪ್ರಕ್ರಿಯೆ ವಿಳಂಬವಾಗಬಹುದು. ಮಳೆ ಬರುತ್ತಲೇ ಇದ್ದರೆ ಗೇರು ಮರ ಚಿಗುರುತ್ತಲೇ ಇರುತ್ತದೆ. ಆಗ ಹೂವು ಬಿಡಲು ಸಾಧ್ಯವಿಲ್ಲ. ಸೆಖೆ ಆರಂಭವಾದರೆ ಮಾತ್ರ ಬೇಗ ಹೂವು ಬಿಡಬಹುದು. ಮಳೆಯಿಂದಾಗಿ ಗೇರು ಕೃಷಿಗೆ ಸಂಕಷ್ಟ ಇದ್ದೇ ಇದೆ.
– ಡಾ| ಧನಂಜಯ ಬಿ., ಹಿರಿಯ ವಿಜ್ಞಾನಿ,
ಕೆವಿಕೆ ಬ್ರಹ್ಮಾವರ

ಈವರೆಗೆ ಸಮಸ್ಯೆಯಿಲ್ಲ
ಈಗಾಗಲೇ ನಮ್ಮಲ್ಲಿನ ಕೆಲವು ಗೇರು ಮರಗಳಲ್ಲಿ ಹೂವು ಬಿಟ್ಟಿದೆ. ಅದಕ್ಕೆ ಈವರೆಗೆ ಏನೂ ಸಮಸ್ಯೆಯಾಗಿಲ್ಲ. ಮುಂದಿನ ದಿನಗಳಲ್ಲಿ ಹೇಗೆ ಅಂತ ಗೊತ್ತಿಲ್ಲ. ಇನ್ನು ಒಂದೆರಡು ವಾರಗಳಲ್ಲಿ ಗೊತ್ತಾಗಬಹುದು. ಇಷ್ಟೊತ್ತಿಗಾಗಲೇ ಕಾಣಿಸಿಕೊಳ್ಳುತ್ತಿದ್ದ ಚಹಾ ಸೊಳ್ಳೆ ರೋಗ ಬಾಧೆ ಈವರೆಗೆ ಕಾಣಿಸಿಕೊಂಡಿಲ್ಲ.
– ಚಂದ್ರಶೇಖರ ಉಡುಪ ಕೆಂಚನೂರು, ಗೇರು ಕೃಷಿಕರು

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next