Advertisement

Care Unit: ವಂಡ್ಸೆ ಕ್ಲಸ್ಟರ್‌ನಲ್ಲಿ ಉಪಶಾಮಕ ಆರೈಕೆ ಕೇಂದ್ರ

01:31 AM Aug 04, 2024 | Team Udayavani |

ವಂಡ್ಸೆ: ಕುಂದಾಪುರ ಬಳಿಯ ವಂಡ್ಸೆ ಕ್ಲಸ್ಟರ್‌ನಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ವಯೋವೃದ್ಧರು, ಗುಣವಾಗದ ಕಾಯಿಲೆಗಳಿಗೆ ತುತ್ತಾದವರು, ಅನಾಥರಿಗೆ ಆಶ್ರಯ, ನಿಗಾ ಒದಗಿಸುವ ಉಪಶಾಮಕ ಆರೈಕೆ ಕೇಂದ್ರ (ಪಾಲಿಯೇಟಿವ್‌ ಕೇರ್‌ ಯೂನಿಟ್‌) ಶೀಘ್ರ ಆರಂಭವಾಗಲಿದೆ.

Advertisement

ಇದಕ್ಕಾಗಿ ವಂಡ್ಸೆ, ಚಿತ್ತೂರು, ಇಡೂರು, ಆಲೂರು, ಹಕ್ಲಾಡಿ, ಹೆಮ್ಮಾಡಿ, ಕೆರಾಡಿ ಗ್ರಾ.ಪಂ. ಪ್ರತಿನಿಧಿ ಗಳು ಜು. 22ರಿಂದ ಜು. 24ರ ತನಕ ಕೇರಳದ ತಿರುವನಂತಪುರದ ಪಾಲೀಮ್‌ ಇಂಡಿಯಾ ಸಂಸ್ಥೆಗೆ ಭೇಟಿ ನೀಡಿ ಅಧ್ಯಯನ ನಡೆಸಿದ್ದಾರೆ. ತಿರುವನಂತಪುರ ಜಿಲ್ಲೆಯ ವೆಂಗನೂರು ಮತ್ತು ಭರತನೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಅಧ್ಯಯನ ಮಾಡಿರುವ ತಂಡದಲ್ಲಿ 13 ಮಂದಿ ಸದಸ್ಯರಿದ್ದು, ಬೆಂಗಳೂರಿನ ಕೆಎಚ್‌ಪಿಟಿ ಸಂಸ್ಥೆ ಪೂರಕ ವ್ಯವಸ್ಥೆ ಮಾಡಿತ್ತು.

ಏನಿದು ಪಾಲಿಯೇಟಿವ್‌ ಕೇರ್‌ ಯೂನಿಟ್‌?
ಸಮಗ್ರ ಆರೋಗ್ಯ ಮತ್ತು ಸಮುದಾಯ ಅಭಿವೃದ್ಧಿಯ ಭಾಗ ಪಾಲಿಯೇಟಿವ್‌ ಕೇರ್‌ ಯೂನಿಟ್‌. ಇದೊಂದು ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಕೇರಳದಲ್ಲಿ ಅನುಷ್ಠಾನಗೊಂಡು ಯಶಸ್ವಿಯಾಗಿ ಜನಮನ್ನಣೆ ಗಳಿಸಿದೆ. ರಾಜ್ಯದಲ್ಲೂ ಇದನ್ನು ಅನುಷ್ಠಾನ ಮಾಡಬೇಕೆಂಬ ಉದ್ದೇಶ ಸರ ಕಾರದ್ದಾಗಿದ್ದು, ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ನೇತೃತ್ವದಲ್ಲಿ ಪೈಲಟ್‌ ಕಾರ್ಯಕ್ರಮವಾಗಿ ವಂಡ್ಸೆ ಕ್ಲಸ್ಟರ್‌ನಲ್ಲಿ ಅನುಷ್ಠಾನ ಆಗಲಿದೆ.

ವಂಡ್ಸೆ ಕ್ಲಸ್ಟರ್‌ ವಂಡ್ಸೆ, ಚಿತ್ತೂರು, ಇಡೂರು, ಆಲೂರು, ಹಕ್ಲಾಡಿ, ಹೆಮ್ಮಾಡಿ, ಕೆರಾಡಿ ಗ್ರಾ.ಪಂ.ಗಳನ್ನು ಹೊಂದಿದ್ದು, ಕ್ಲಸ್ಟರ್‌ ಕೇಂದ್ರದಲ್ಲಿ ಕೇಂದ್ರವು ಕಾರ್ಯಾರಂಭ ಮಾಡಲಿದೆ. ಯೋಜನೆ ಅನುಷ್ಠಾನಕ್ಕಾಗಿ 5 ತಿಂಗಳುಗಳಿಂದ ಸಮೀಕ್ಷೆ ಕಾರ್ಯ ನಡೆದಿದ್ದು, ಎರಡು ತಿಂಗಳಲ್ಲಿ ಕಾರ್ಯಾರಂಭ ಮಾಡಲಿದೆ.

ಉದ್ದೇಶ ಏನು?
ಗ್ರಾಮ ವ್ಯಾಪ್ತಿಯಲ್ಲಿ ಆರ್ಥಿಕವಾಗಿ ದುರ್ಬಲ ರಾಗಿರುವ ಹಿರಿಯ ನಾಗರಿಕರು, ಅಸಹಾಯಕರು, ಮನೆಯಲ್ಲಿ ಒಂಟಿಯಾಗಿರುವವರ ಯೋಗ ಕ್ಷೇಮದ ಮೇಲೆ ನಿರಂತರ ಕಣ್ಗಾವಲು ಇರಿಸಿ ಆರೈಕೆ ಮಾಡುವುದು ಕೇಂದ್ರದ ಉದ್ದೇಶ. ಇಂಥವರ ಆರೋಗ್ಯ ತಪಾಸಣೆ, ತುರ್ತು ಚಿಕಿತ್ಸೆ ಅಗತ್ಯವಿದ್ದರೆ ಆಸ್ಪತ್ರೆಗಳಿಗೆ ದಾಖಲಿಸುವುದು, ಮನೆ ಯಲ್ಲಿ ಅವರ ಆರೋಗ್ಯವನ್ನು ನಿರಂತರವಾಗಿ ಗಮನಿಸುವುದು, ಕೆಲವು ಕಾಯಿಲೆ ಗಳಿಗೆ ಮನೆಯಲ್ಲೇ ಅನುಸರಣ ಚಿಕಿತ್ಸೆ ನೀಡುವುದು, ಸ್ವಾವಲಂಬಿ ಜೀವನ ನಡೆಸಲು ಆಸಕ್ತರಿದ್ದರೆ ಅವರ ಸಾಮ ರ್ಥ್ಯಕ್ಕೆ ಅನುಗುಣವಾಗಿ ಉದ್ಯೋಗಾ ವಕಾಶ ಕಲ್ಪಿಸುವುದು ಇತ್ಯಾದಿ ಕೆಲಸ ಗಳನ್ನು ಪಾಲಿಯೇಟಿವ್‌ ಕೇರ್‌ ಯೂನಿಟ್‌ ನಿರ್ವಹಿಸಲಿದೆ. ಕೇಂದ್ರವು ತನ್ನ ವ್ಯಾಪ್ತಿಯ ಮಾನಸಿಕ ರೋಗಿಗಳು, ವಿಶೇಷಚೇತನರು, ಮಕ್ಕಳು, ಎಂಡೋ ಸಲ್ಫಾ ನ್‌ ಪೀಡಿತರ ಯೋಗ ಕ್ಷೇಮದ ಮೇಲೂ ನಿಗಾ ಇರಿಸಲಿದೆ.

Advertisement

ಯಾರೆಲ್ಲ ಇರುತ್ತಾರೆ? ಏನೇನು ಸೇವೆ?
ಕೇಂದ್ರದಲ್ಲಿ ನುರಿತ ಸಿಬಂದಿ ಜತೆಗೆ ಆಶಾ ಕಾರ್ಯಕರ್ತೆಯರು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿ ಕಾರಿಗಳು ಇರುತ್ತಾರೆ. ಜತೆಗೆ ಸೇವಾ ಮನೋಭಾವವುಳ್ಳ ಖಾಸಗಿ ವೈದ್ಯರ ಉಚಿತ ಸೇವೆಯನ್ನು ಪಡೆದುಕೊಳ್ಳಲಾಗುವುದು. ಮಣಿಪಾಲ ಆಸ್ಪತ್ರೆಯಂತಹ ಖಾಸಗಿ ಆಸ್ಪತ್ರೆಗಳ ಜತೆ ಒಪ್ಪಂದ ಮಾಡಿಕೊಂಡು ಅಗತ್ಯ ಬಿದ್ದರೆ ಅಲ್ಲಿಗೆ ಕಳುಹಿಸಿ ಉಪಚರಿಸುವುದು, ಉಚಿತ ಆ್ಯಂಬುಲೆನ್ಸ್‌ ಸೇವೆ, ಉಚಿತ ಔಷಧ, ಉಚಿತ ಸಲಕರಣೆ ಇತ್ಯಾದಿ ಒಳಗೊಂಡಿರುತ್ತದೆ.

ವಂಡ್ಸೆ ಕ್ಲಸ್ಟರ್‌ ವ್ಯಾಪ್ತಿಯಲ್ಲಿ ವಂಡ್ಸೆ, ಆಲೂರು, ಹಕ್ಲಾಡಿ, ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಬೆಳ್ಳಾಲದ ಆಯುರ್ವೇದ ಆಸ್ಪತ್ರೆಯ ಸಹಕಾರ ಪಡೆದುಕೊಳ್ಳಲಾಗುತ್ತದೆ. ಇಬ್ಬರು ಖಾಯಂ ಸಿಬಂದಿ ಕಾರ್ಯನಿರ್ವಹಿಸುತ್ತಾರೆ.

ಕೇರಳದಲ್ಲಿ ಯಶಸ್ವಿ
ಕೇರಳದಲ್ಲಿ ಇದು ಯಶಸ್ವಿಯಾಗಿ ನಡೆಸಲ್ಪಡುತ್ತಿದೆ. ತಿರುವನಂತಪುರ ಜಿಲ್ಲೆಯ ಕೆಲವು ಕಡೆ 14 ಹಾಸಿಗೆಗಳ ಆಸ್ಪತ್ರೆ, ಹೊರರೋಗಿಗಳ ವಿಭಾಗ ಇತ್ಯಾದಿಗಳನ್ನು ಕೂಡ ಪಾಲೀಮ್‌ ಇಂಡಿಯಾ ಎನ್ನುವ ಸ್ವಯಂಸೇವಾ ಸಂಸ್ಥೆ ನಿರ್ವಹಿಸುತ್ತಿದೆ. ನಮ್ಮ ರಾಜ್ಯದಲ್ಲಿ 7 ಗ್ರಾ.ಪಂ. ಸೇರಿ ವಂಡ್ಸೆ ಕ್ಲಸ್ಟರ್‌ನಲ್ಲಿ ಈ ಯೋಜನೆ ಪ್ರಥಮ ಬಾರಿಗೆ ಜಾರಿಯಾಗುತ್ತಿದೆ ಎಂದು ಕುಂದಾಪುರ ತಾಲೂಕು ಪಂಚಾಯತ್‌ ರಾಜ್‌ ಒಕ್ಕೂಟದ ಅಧ್ಯಕ್ಷ ಉದಯಕುಮಾರ್‌ ಶೆಟ್ಟಿ ತಿಳಿಸಿದ್ದಾರೆ.

“ಗ್ರಾಮೀಣ ಭಾಗದ ಅಶಕ್ತರು ಸಹಿತ ತುರ್ತು ಆರೋಗ್ಯ ಸೇವೆ ಅಗತ್ಯ ಇರುವವರ ಆರೈಕೆಗಾಗಿ ಈ ಕೇಂದ್ರ ಕಾರ್ಯ ನಿರ್ವಹಿಸಲಿದೆ. ಈಗಾಗಲೇ ಗ್ರಾ.ಪಂ. ಸದಸ್ಯರು ಕೇರಳಕ್ಕೆ ಪ್ರವಾಸ ಮಾಡಿ, ಮಾಹಿತಿ ಪಡೆದುಕೊಂಡು ಬಂದಿದ್ದಾರೆ. ಪೈಲೆಟ್‌ ಯೋಜನೆಯಾಗಿ ಅನುಷ್ಠಾನವಾಗುತ್ತದೆ.”  – ಪ್ರತೀಕ್‌ ಬಾಯಲ್‌, ಸಿಇಒ, ಜಿ.ಪಂ. ಉಡುಪಿ.

 

– ಡಾ| ಸುಧಾಕರ ನಂಬಿಯಾರ್‌

Advertisement

Udayavani is now on Telegram. Click here to join our channel and stay updated with the latest news.

Next