Advertisement

ನಗುವಿನೊಳಗೊಂದು ಪುಟ್ಟ ನಗು

06:00 AM Sep 19, 2018 | |

ನನ್ನೊಳಗೆ ಚಿಗುರೊಡೆದು ಮೃದುವಾಗಿ ಅರಳುತ್ತಿರುವ ಪುಟ್ಟ ಜೀವದ ಬಗ್ಗೆ ನೆನೆಸಿಕೊಂಡಾಗ ಕಣ್ತುಂಬಿ ಬರುತ್ತೆ. ನನಗಿಷ್ಟವಾದ ಪಾನಿ ಪೂರಿ, ಮಸಾಲ ಪೂರಿ, ಬಜ್ಜಿ ಇತ್ಯಾದಿಗಳ ಸ್ಥಾನವನ್ನು ದಾಳಿಂಬೆ, ಸೇಬು, ಕಿತ್ತಳೆ ತುಂಬುತ್ತಿವೆ. ಹಾಗಂತ ನಂಗೆ ಬೇಜಾರಿಲ್ಲ. ಖುಷಿಯಿದೆ. ನನ್ನ ಮುದ್ದು ಕಂದಮ್ಮನಿಗೋಸ್ಕರ ನಾಲಗೆ ಚಪಲಾನ ಒಂದಷ್ಟು ದಿನ ತ್ಯಾಗ ಮಾಡೋಕಾಗಲ್ವಾ ಅಂತ ಅನ್ನಿಸುತ್ತೆ. ನಮ್ಮವರ ಜೊತೆಗೆ ವಾಕಿಂಗ್‌ ಹೋಗುವಾಗ ಸಿಗುವ ಮಕ್ಕಳ ಬಟ್ಟೆ ಅಂಗಡಿ ಯಾವಾಗಲೂ ನನ್ನನ್ನು ಆಕರ್ಷಿಸುತ್ತದೆ. ಪುಟ್ಟ ಪುಟ್ಟ ಅಂಗಿ, ಪ್ಯಾಂಟು, ಫ್ರಾಕು, ಟೋಪಿ ನೋಡಿದಾಗ, ಯಾವಾಗ ನನ್ನ ಮುದ್ದು ಕಂದನಿಗೆ ಇದನ್ನೆಲ್ಲ ಹಾಕೋದು ಅನಿಸುತ್ತೆ.

Advertisement

ಇವೆಲ್ಲಾ ಬರೀ ಗರ್ಭಿಣಿಯಾದ ಒಂದು ಹೆಣ್ಣುಮಗಳ ಮನಸ್ಥಿತಿಯಲ್ಲ. ತಾಯಂದಿರಾಗುವ ಎಲ್ಲರ ಮನಸ್ಥಿತಿ. ಗರ್ಭಿಣಿಯಾದಾಕೆ ಒಂದೆಡೆ ಹೀಗೆಲ್ಲಾ ಕನಸು ಕಾಣುತ್ತಿರುವ ಸಂದರ್ಭದಲ್ಲಿ ಆಕೆಯ ಯಜಮಾನರು ಮತ್ತು ತಾಯ್ತಂದೆಯರು, ಗರ್ಭಿಣಿಯ ಮಾನಸಿಕ ಆರೋಗ್ಯದ ಕುರಿತೂ ಹೆಚ್ಚಿನ ಪ್ರಾಮುಖ್ಯತೆ ಕೊಡಬೇಕು. ಒಳ್ಳೆಯ ಆಹಾರ ಪದ್ಧತಿಯೊಂದಿಗೆ, ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಬೇಕಾದ ಉತ್ತಮ ಜೀವನಶೈಲಿಯನ್ನು ಗರ್ಭಿಣಿಗೆ ಅಭ್ಯಾಸ ಮಾಡಿಸಬೇಕು. 

 ದೈಹಿಕ ಆರೋಗ್ಯಕ್ಕೆ ಬೇಕಾದ ಮುತುವರ್ಜಿ
    -ವಾಕಿಂಗ್‌, ಸರಳ ವ್ಯಾಯಾಮ, ಧ್ಯಾನ
    -ತಾಜಾ ಆಹಾರ (ಹಣ್ಣು, ತರಕಾರಿ, ಡ್ರೈಪ್ರೂಟ್ಸ್‌, ಸಿರಿಧಾನ್ಯಗಳು)

ಮಾನಸಿಕ ಅರೋಗ್ಯ ಕಾಪಾಡಿಕೊಳ್ಳಲು
ಒಳ್ಳೆಯ ಅಭಿರುಚಿಗಳನ್ನು ರೂಢಿಸಿಕೊಳ್ಳುವುದು. ಉದಾಹರಣೆಗೆ: ಸಂಗೀತ, ಪೇಂಟಿಂಗ್‌, ಒಳ್ಳೆ ಪುಸ್ತಕಗಳನ್ನು ಓದುವುದು, ಕುಟುಂಬದವರ ಜೊತೆ ಹೆಚ್ಚು ಸಮಯ ಕಳೆಯುವುದು.

ಮನೆಯವರಿಗೆ ಕಿವಿಮಾತು
     ಗರ್ಭಿಣಿಯ ಮಾನಸಿಕ ಆರೋಗ್ಯಕ್ಕೂ, ಮಗುವಿನ ದೈಹಿಕ ಬೆಳವಣಿಗೆಗೂ ನೇರ ನಂಟಿದೆ. ತಾಯಂದಿರ ನಕಾರಾತ್ಮಕ ಭಾವನೆಗಳು, ಮಗುವಿನ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಕುಂದುಂಟು ಮಾಡುತ್ತದೆ. ಹಾಗಾಗಿ, ಜಗಳ, ಹಿಂಸಾತ್ಮಕ ದೃಶ್ಯಗಳು, ತೀವ್ರ ನೋವುಂಟು ಮಾಡುವ ಸಂಭಾಷಣೆಗಳು, ಅನವಶ್ಯಕ ಗದ್ದಲದಿಂದ ಗರ್ಭಿಣಿ ದೂರವಿರುವಂತೆ ನೋಡಿಕೊಳ್ಳಬೇಕು. ಆಕೆ ಸದಾ ಹಿತನುಡಿಗಳನ್ನು ಕೇಳುತ್ತ, ನಗು ನಗುತ್ತ ಇರುವಂಥ ವಾತಾವರಣ ರೂಪಿಸಬೇಕು. ಪ್ರತಿಕ್ಷಣವೂ ಆಕೆಯ ಕುರಿತು ಕಾಳಜಿ ತೋರುವುದು, ಧೈರ್ಯ ಹೇಳುವುದು, ಪೋಷಕರ ಕರ್ತವ್ಯವಾಗಬೇಕು. ಮಮತೆ, ಕಾಳಜಿಯನ್ನು ವ್ಯಕ್ತಪಡಿಸುವುದು ಅತ್ಯವಶ್ಯಕ.

Advertisement

ಮಾನಸಿಕ ಸಮಸ್ಯೆಯ ಚಿಹ್ನೆಗಳು
ಗರ್ಭಿಣಿಯರಲ್ಲಿ ಈ ಕೆಳಕಂಡ ಬದಲಾವಣೆಗಳು ಕಾಣಿಸಿದರೆ, ಕೂಡಲೇ ಸೂಕ್ತ ಚಿಕಿತ್ಸೆ ಕೊಡಿಸುವುದು ಒಳಿತು.
ತೀವ್ರ ದುಃಖ
ಸಾಂದ್ರತೆಯ ಸಮಸ್ಯೆ
ಅತೀ ಹೆಚ್ಚು ಅಥವಾ ಅತೀ ಕಡಿಮೆ ನಿದ್ರೆ
ನಿರಾಸಕ್ತಿ 
ಆತ್ಮಹತ್ಯೆಯ ಬಗ್ಗೆ ಮರುಕಳಿಸುವ ಆಲೋಚನೆಗಳು
ವಿನಾಕಾರಣ ಆತಂಕ
ಆಹಾರ ಸೇವನೆಯಲ್ಲಿ ತೀವ್ರ ಏರುಪೇರು.

ಗರ್ಭಿಣಿಯರು, ಸದಾ ಸಕಾರಾತ್ಮಕ ಚಿಂತನೆಗಳು, ಉತ್ತಮ ಅಭಿರುಚಿಗಳು, ಹವ್ಯಾಸ ಮುಂತಾದವುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರೆ, ಮಾನಸಿಕವಾಗಿ ಮತ್ತು ದೈಹಿಕವಾಗಿ ಉತ್ತಮ ಆರೋಗ್ಯ ಹೊಂದಿದ ಮಗುವನ್ನು ಪಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ. 

ಗರ್ಭಾವಸ್ಥೆಯ ಸಮಯದಲ್ಲಿ ಮಾನಸಿಕ ಅಸ್ವಸ್ಥತೆಗೆ ಸೂಕ್ತ ಚಿಕಿತ್ಸೆ ಸಿಗದಿದ್ದಲ್ಲಿ, ತಾಯಿ ಹಾಗು ಮಗುವಿನ ಮಾನಸಿಕ ವಿಕಾಸಕ್ಕೆ ದುಷ್ಪರಿಣಾಮ ಉಂಟಾಗುವುದು ಖಂಡಿತ.

– ಡಾ. ಸುಹಾಸಿನಿ ರಾಮ್‌

Advertisement

Udayavani is now on Telegram. Click here to join our channel and stay updated with the latest news.

Next