Advertisement

ಶಾಸಕರ ಭವನದ ಕಾರು ಚಾಲಕ ಬಂಧನ

06:46 AM Mar 03, 2019 | Team Udayavani |

ಬೆಂಗಳೂರು: ರಾಜ್ಯ ಸರ್ಕಾರದ ಪ್ರಭಾವಿ ಸಚಿವ ಎಂದು ಹೇಳಿಕೊಂಡು ತಮಿಳುನಾಡು ಮೂಲದ ಗೋಡಂಬಿ ಉದ್ಯಮಿ ರಮೇಶ್‌ ಎಂಬುವರಿಗೆ 1.12 ಕೋಟಿ ರೂ. ಹಣ ವಂಚಿಸಿದ ಪ್ರಕರಣ ಸಂಬಂಧ ಕಬ್ಬನ್‌ಪಾರ್ಕ್‌ ಪೊಲೀಸರು ಶಾಸಕರ ಭವನದ ಸರ್ಕಾರಿ ಕಾರು ಚಾಲಕನೊಬ್ಬನನ್ನು ಬಂಧಿಸಿದ್ದಾರೆ.

Advertisement

ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ಮೂಲದ ಸತೀಶ್‌(38) ಬಂಧಿತ. ಆರೋಪಿ ಹತ್ತಾರು ವರ್ಷಗಳಿಂದ ಶಾಸಕರ ಭವನದಲ್ಲಿ ಸರ್ಕಾರಿ ಕಾರು ಚಾಲಕನಾಗಿದ್ದಾನೆ. ಹಣದಾಸೆಗೆ ವಂಚನೆ ಪ್ರಕರಣದ ಪ್ರಮುಖ ಆರೋಪಿ ಕಾರ್ತಿಕೇಯನ್‌ ಅಲಿಯಾಸ್‌ ಕೆ.ಕೆ.ಶೆಟ್ಟಿಗೆ ಸಹಾಯ ಮಾಡಿ ಸಿಕ್ಕಿ ಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೋಟ್ಯಂತರ ರೂ. ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಬ್ಬನ್‌ಪಾರ್ಕ್‌ ಪೊಲೀಸರು ಫೆ.13ರಂದು ಶೇಷಾದ್ರಿಪುರ ನಿವಾಸಿ ಪಿ.ಕಾರ್ತಿಕೇಯನ್‌(60) ಸೇರಿದಂತೆ ಎಂಟು ಮಂದಿಯನ್ನು ಬಂಧಿಸಿದ್ದರು. 10ಕ್ಕೂ ಹೆಚ್ಚು ವರ್ಷಗಳಿಂದ ಶಾಸಕರ ಭವನದಲ್ಲಿ ಸರ್ಕಾರಿ ಕಾರು ಚಾಲಕನಾಗಿರುವ ಸತೀಶ್‌ಗೆ ಪ್ರಕರಣದ ಪ್ರಮುಖ ಆರೋಪಿ ಕಾರ್ತಿಕೇಯನ್‌ ಒಂದೆರಡು ಸಾವಿರ ರೂ. ನೀಡಿ ಸರ್ಕಾರಿ ಕಾರು ಬಾಡಿಗೆ ಪಡೆಯುತ್ತಿದ್ದ.

ಶಾಸಕರ ಭವನದ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡದೆ, ಆರೋಪಿ ಸತೀಶ್‌ ಕೂಡ ಹಣದಾಸೆಗೆ ನಾಲ್ಕೈದು ಬಾರಿ ಸರ್ಕಾರಿ ಕಾರನ್ನು ಕಾರ್ತಿಕೇಯನ್‌ನ ಕೃತ್ಯಕ್ಕೆ ಬಳಕೆ ಮಾಡಿದ್ದಾನೆ ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next