Advertisement

ಕೃಷಿ; ವೈವಿಧ್ಯ ಖುಷಿ

06:00 AM Aug 13, 2018 | |

ಒಂದು ಕಾಲದಲ್ಲಿ ಕುಡಿತದ ದೌರ್ಬಲ್ಯದಿಂದ ಕೃಷಿಯನ್ನೇ ಮರೆತಿದ್ದ ಪ್ರದೀಪ್‌, ಇದೀಗ ಯಶಸ್ವೀ ಕೃಷಿಕರಾಗಿ ಬದಲಾಗಿದ್ದಾರೆ. ಕೃಷಿಯಲ್ಲಿ ಅವರು ಮಾಡಿದ ಪ್ರಯೋಗಗಳೆಲ್ಲ ಯಶಸ್ವಿಯಾಗಿದೆ. ಈ ಯಶಸ್ಸಿನ ಹಿಂದೆ ಅವರ ಪತ್ನಿ ಗೀತಾರ ಪರಿಶ್ರಮ ಇದೆ. 

Advertisement

ಕೊಳವೆ ಬಾವಿ ಕೊರೆಯಿಸುವ ಸ್ವಂತ ವಾಹನವಿತ್ತು. ಅದೇ ಕಾರಣದಿಂದ ಬಿಡುವಿಲ್ಲದಷ್ಟು ದುಡಿಮೆಯೂ ಇತ್ತು. ಗಳಿಕೆಯೂ ಸರಾಗ. ಬೋರ್‌ವೆಲ್‌ ಕೊರೆಸುವ ಯಂತ್ರ ಖರೀದಿಗೆಂದೇ ನಲವತ್ತೆ„ದು ಲಕ್ಷ ವೆಚ್ಚ ಮಾಡಿದ್ದರು. ಬೆರಳೆಣಿಕೆಯಷ್ಟು ವರ್ಷಗಳಲ್ಲಿ ಸಾಲವನ್ನೂ ಚುಕ್ತಾಗೊಳಿಸಿದ್ದರು. ಸಂತಸದ ದುಡಿಮೆ. ಭರ್ತಿ ಗಳಿಕೆ. ಸುಂದರ ಬದುಕು ಚಿಕ್ಕೋಡಿ ತಾಲೂಕಿನ ನಾಗರಾಳ ಗ್ರಾಮದ ಪ್ರದೀಪ್‌ ಕುಮಾರ್‌ ಅವರದು.

ಆದರೆ, ಈ ಸುಖದ ದಿನಗಳು ಇವರ ಪಾಲಿಗೆ ಶಾಶ್ವತವಾಗಿರಲಿಲ್ಲ. ಕೈತುಂಬಾ ಹಣ ಬಂತಲ್ಲ. ಅದೇ ಖುಷಿಯಲ್ಲಿ ಇವರು ಕುಡಿತದ ಚಟಕ್ಕೆ ಬಿದ್ದರು. ಇದು ಎಷ್ಟು ವಿಪರೀತವಾಯಿತೆಂದರೆ , ಎರಡೇ ವರ್ಷದಲ್ಲಿ ಬೋರ್‌ವೆಲ್‌ ಕೊರೆಸುವ ಯಂತ್ರವನ್ನು ಸಹೋದರನ ಮಕ್ಕಳಿಗೆ ಹಸ್ತಾಂತರಿಸಿದರು.ಪತ್ನಿ ಗೀತಾ ಬಿಡಲಿಲ್ಲ. ಗಂಡನನ್ನು ಮದ್ಯವರ್ಜನ ಶಿಬಿರಕ್ಕೆ ಸೇರಿಸಿದರು. ಏಳು ದಿನದಲ್ಲಿ ಕುಡಿತ ಬಿಟ್ಟು ಹೋಯಿತು.  

ಮುಂದೆ ಕೈ ಹಿಡಿದದ್ದು ಕೃಷಿ
ಕುಡಿತ ಮರೆತ ಪ್ರದೀಪ, ತಂದೆಯ ಬಳಿ ಹೋಗಿ ಜಮೀನನ್ನು ಬಿಟ್ಟುಕೊಡಲು ಕೇಳಿದರು.  ಎರಡೂವರೆ ಎಕರೆಯಲ್ಲಿ ಕೃಷಿ ಶುರುಮಾಡಿದರು. ಹೆಚ್ಚು ಕಡಿಮೆ ದಶಕಗಳ ಕಾಲ ಕೃಷಿ ಕೆಲಸ ಮಾಡದೇ ಇದ್ದ ಪ್ರದೀಪ ಒಂದು ಎಕರೆಯಲ್ಲಿ ದಾಳಿಂಬೆ ಕೃಷಿ ಕೈಗೊಂಡರು. ಮೊದಲ ವರ್ಷವೇ ದಾಳಿಂಬೆಯಿಂದ 60,000 ರೂ. ಲಾಭ ಗಳಿಸಿದರು. ಎರಡನೆಯ ವರ್ಷದಲ್ಲಿ 1,40,000 ಗಳಿಕೆ ಬಂತು.  ದಾಳಿಂಬೆ ಕೃಷಿ ಕೈ ಬಿಟ್ಟ ನಂತರ ಅದೇ ಭೂಮಿಯಲ್ಲಿ ಸ್ವೀಟ್‌ ಕಾರ್ನ್ ಬೆಳೆದರು. 

ಅದು ಮೂರೇ ತಿಂಗಳಿನಲ್ಲಿ 60,000 ಗಳಿಸಿಕೊಟ್ಟಿತ್ತು. ಸ್ವೀಟ್‌ ಕಾರ್ನ್ ಕಟಾವಿನ ನಂತರ ಒಂದು ಎಕರೆಯಲ್ಲಿ ಕಲ್ಲಂಗಡಿ ಬೆಳೆದರು. 55,000 ಆದಾಯ ಬಂತು. ಕಲ್ಲಂಗಡಿ ಕೃಷಿ ಮುಗಿಯುತ್ತಿದ್ದಂತೆ ಆ ಸ್ಥಳದಲ್ಲಿಯೇ ಕಬ್ಬು ಕೃಷಿಗೆ ಆರಂಭಿಸಿದರು. ಮೊದಲ ವರ್ಷವೇ 54 ಟನ್‌ ಇಳುವರಿ ಬಂತು. ಕಬ್ಬಿನ ನಡುವೆ ಶೇಂಗಾ ಬಿತ್ತಿದರು. 15 ಚೀಲಗಳಷ್ಟು ಇಳುವರಿ ಕೈ ಸೇರಿತು.

Advertisement

ಪಾಲಿಹೌಸ್‌ನಲ್ಲಿ ತರಕಾರಿ
ಕೃಷಿಯಲ್ಲಿ, ಮಾಡಿದ ಪ್ರಯೋಗಗಳೆಲ್ಲ ಯಶಸ್ವಿಯಾದಾಗ ಬೇಸಾಯದಲ್ಲಿ ಭಿನ್ನ ಪ್ರಯೋಗ ಮಾಡಿದರು. ತೋಟಗಾರಿಕೆ ಇಲಾಖೆಯ ಸಹಕಾರ ಪಡೆದು ಇಪ್ಪತ್ತು ಗುಂಟೆ ಸ್ಥಳದಲ್ಲಿ ಪಾಲಿಹೌಸ್‌ ಹಾಕಿದರು. ಮಹಾರಾಷ್ಟ್ರದ ಕಾಮೇರಿ ಗ್ರಾಮದಿಂದ 6,400 ಉತ್ತಮ ಗುಣಮಟ್ಟದ ಕ್ಯಾಪ್ಸಿಕಂ ಸಸಿಗಳನ್ನು ತಂದು ನಾಟಿ ಮಾಡಿದರು. ಕೆಂಪು ಮತ್ತು ಹಳದಿ ಬಣ್ಣದ ಕ್ಯಾಪ್ಸಿಕಾಂ ತಳಿಗಳವು. ಗಿಡ ನಾಟಿ ಮಾಡಿದ 45 ದಿನದಿಂದ ಕಟಾವಿಗೆ ಸಿಗತೊಡಗಿತ್ತು. ಗಿಡಗಳು ಹದಿನೈದು ಅಡಿಗಳಿಗಿಂತ ಮೇಲೆ ಹಬ್ಬಿ ಭರ್ತಿ ಇಳುವರಿ ಹೊತ್ತು ನಿಂತಿದ್ದವು. ವಾರದಲ್ಲಿ ನಾಲ್ಕು ಬಾರಿ ಕೊಯ್ಲಿಗೆ ಸಿಗುತ್ತಿದ್ದವು. ಪ್ರತಿ ಕೊಯ್ಲಿನಲ್ಲಿ 500 ಕಿಲೋಗ್ರಾಂ ಕ್ಯಾಪ್ಸಿಕಂ ಸಿಗುತ್ತಿತ್ತು. ವಾರಕ್ಕೆ 200 ಕೆಜಿ ಕ್ಯಾಪ್ಸಿಕಂ ದೊರೆಯಿತು. ಒಂದು ವರ್ಷದೊಳಗೆ 25 ಟನ್‌ ಇಳುವರಿ ಪಡೆದರು.  ಈಗ ದೊಣ್ಣೆ ಮೆಣಸಿನ ಸ್ಥಳದಲ್ಲಿ ಟೊಮೆಟೋ ಕೃಷಿ ಮಾಡಲು ಜಮೀನನ್ನು ಹದ  ಮಾಡುತ್ತಿದ್ದಾರೆ.

ಸ್ವೀಟ್‌ ಆಗಿದೆ ಕಾರ್ನ್
ಸಣ್ಣ ಗಳಿಕೆಯೆಡೆಗೆ ಇವರ ಒಲವು ಜಾಸ್ತಿ. ಹಾಗಾಗಿಯೇ ಸ್ವೀಟ್‌ ಕಾರ್ನ್ ಕೃಷಿಗೆ ವಿಶೇಷ ಆದ್ಯತೆ. ಒಂದೂ ಕಾಲೆಕರೆಯಲ್ಲಿ ಸ್ವೀಟ್‌ ಕಾರ್ನ್ ಖಾಯಂ ಬೆಳೆಯೆಂದು ಬೆಳೆಸುತ್ತಾರೆ. ಅದರಿಂದ ಆರು ಟನ್‌ಗಳಷ್ಟು ಇಳುವರಿ ಪಡೆಯುತ್ತಾರೆ. ಟನ್‌ವೊಂದಕ್ಕೆ 6,500 ರೂ.ನಂತೆ ದರ ಸಿಗುತ್ತಿದೆ. ಈ ಬೆಳೆಯನ್ನು ಮನೆ ಬಾಗಿಲಿಗೆ ಬಂದು ಕೊಂಡೊಯ್ಯುವ ವ್ಯಾಪಾರಸ್ಥರಿದ್ದಾರೆ. ಅಂತರ ಬೆಳೆಯಾಗಿ ಸ್ವೀಟ್‌ ಕಾರ್ನ್  ನಡುವೆ ಶೇಂಗಾ ಬಿತ್ತುವ ರೂಢಿ ಇಟ್ಟುಕೊಂಡಿದ್ದಾರೆ. ಸರಾಸರಿ ಏಳು ಕ್ವಿಂಟಾಲ್‌ ಇಳುವರಿ ಪಡೆಯುತ್ತಿದ್ದಾರೆ. ಜಮೀನಿನಲ್ಲಿ ಮಾವು, ಹಲಸು, ತೆಂಗು ಕೂಡ ಅಲ್ಲಲ್ಲಿ ಇದೆ.

ಕುಡಿತದ ದೌರ್ಬಲ್ಯದಿಂದ ಕೃಷಿ ಮರೆತಿದ್ದ ಪತಿಯನ್ನು ಬಲಹೀನತೆಯಿಂದ ಮುಕ್ತಗೊಳಿಸಿ ಹೊಸ ಬದುಕನ್ನು ಕಟ್ಟಿಕೊಳ್ಳಲು ಮನಸ್ಸು ಮಾಡಿದ ಗೀತಾ ಅವರದು ಮಾದರಿ ಸಾಧನೆ. ಕೃಷಿಯಲ್ಲಿ ಈಗ ಇವರ ಬದುಕನ್ನು ಸುಂದರವಾಗಿಸಿದೆ ಹಾಗೆಯೇ,  ಸಾಧಕರನ್ನಾಗಿಯೂ ರೂಪಿಸಿದೆ. 

– ಜೈವಂತ ಪಟಗಾರ

Advertisement

Udayavani is now on Telegram. Click here to join our channel and stay updated with the latest news.

Next