Advertisement

ಸಿಇಟಿ: ಮೊದಲ ಹತ್ತರಲ್ಲಿ ಎಕ್ಸ್‌ಪರ್ಟ್‌ಗೆ ಆರು; ಆಳ್ವಾಸ್‌ಗೆ ಒಂದು ರ್‍ಯಾಂಕ್‌

12:57 AM May 26, 2019 | sudhir |

ಮಂಗಳೂರು: ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಕರ್ನಾಟಕ ಸರಕಾರ ನಡೆಸಿದ್ದ ಈ ಶೈಕ್ಷಣಿಕ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಫಲಿತಾಂಶ ಶನಿವಾರ ಪ್ರಕಟವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಓದಿರುವ ಏಳು ಮಂದಿ ವಿದ್ಯಾರ್ಥಿಗಳು ಟಾಪ್‌ ಟೆನ್‌ ಪಟ್ಟಿಯಲ್ಲಿ ಒಂಬತ್ತು ರ್‍ಯಾಂಕ್‌ಗಳನ್ನು ಗಳಿಸಿ, ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

Advertisement

ಟಾಪ್‌ಟೆನ್‌ನಲ್ಲಿ ಸ್ಥಾನ ಪಡೆದವರ ಪೈಕಿ ಆರು ಮಂದಿ ಮಂಗಳೂರಿನ ಎಕ್ಸ್‌ಪರ್ಟ್‌ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಒಟ್ಟು ಎಂಟು ರ್‍ಯಾಂಕ್‌ ಕಾಲೇಜಿಗೆ ಲಭಿಸಿದೆ. ಮೂಡುಬಿದಿರೆ ಆಳ್ವಾಸ್‌ ಪಪೂ ಕಾಲೇಜಿಗೆ ಒಂದು ರ್‍ಯಾಂಕ್‌ ಬಂದಿದೆ.

ಎಕ್ಸ್‌ಪರ್ಟ್‌ ಕಾಲೇಜು ವಳಚ್ಚಿಲ್‌ ಕ್ಯಾಂಪಸ್‌ನ ಆರ್‌. ಚಿನ್ಮಯ್‌-ಎಂಜಿನಿಯರಿಂಗ್‌ನಲ್ಲಿ 2ನೇ ರ್‍ಯಾಂಕ್‌, ಫಾರ್ಮಸಿ 3ನೇ ರ್‍ಯಾಂಕ್‌; ಕೊಡಿಯಾಲ್‌ಬೈಲ್‌ ಕ್ಯಾಂಪಸ್‌ನ ಸಮರ್ಥ್ ಮಯ್ಯ-ಎಂಜಿನಿಯರಿಂಗ್‌ 5ನೇ ರ್‍ಯಾಂಕ್‌, ಬಿ. ಫಾರ್ಮ್ನಲ್ಲಿ 17ನೇ ರ್‍ಯಾಂಕ್‌; ವಳಚ್ಚಿಲ್‌ ಕ್ಯಾಂಪಸ್‌ನ ಭುವನ್‌ ವಿ.ಬಿ.-ನ್ಯಾಚುರೋಪತಿ ಆ್ಯಂಡ್‌ ಯೋಗಿಕ್‌ ಸೈನ್ಸ್‌ನಲ್ಲಿ (ಬಿಎನ್‌ವೈಎಸ್‌) 6ನೇ ರ್‍ಯಾಂಕ್‌, ಬಿಎಸ್ಸಿ (ಅಗ್ರಿ ಕಲ್ಚರ್‌)ನಲ್ಲಿ 2ನೇ, ಬಿ. ಫಾರ್ಮ್ನಲ್ಲಿ 22ನೇ ರ್‍ಯಾಂಕ್‌ ಗಳಿಸಿದ್ದಾರೆ.

ಎಕ್ಸ್‌ಪರ್ಟ್‌ ಕಾಲೇಜಿನ ಆಶಯ್‌ ಜೈನ್‌ ಸಿ. ಎ.-ನ್ಯಾಚುರೋಪತಿ ಆ್ಯಂಡ್‌ ಯೋಗಿಕ್‌ ಸೈನ್ಸ್‌ (ಬಿಎನ್‌ವೈಎಸ್‌)ನಲ್ಲಿ 7ನೇ ರ್‍ಯಾಂಕ್‌, ಪಶು ವೈದ್ಯಕೀಯ ಸೈನ್ಸ್‌ನಲ್ಲಿ 12ನೇ ರ್‍ಯಾಂಕ್‌, ಬಿಎಸ್‌ಸಿ (ಅಗ್ರಿಕಲ್ಚರ್‌)ನಲ್ಲಿ 14ನೇ ರ್‍ಯಾಂಕ್‌, ಬಿ.ಫಾರ್ಮ್ನಲ್ಲಿ 21ನೇ ರ್‍ಯಾಂಕ್‌, ಸುದೇಶ್‌ ಗೌಡ ಜೆ.-ಬಿಎಸ್ಸಿ (ಅಗ್ರಿಕಲ್ಚರ್‌)ನಲ್ಲಿ 7ನೇ ರ್‍ಯಾಂಕ್‌, ಎಂಜಿನಿಯರಿಂಗ್‌ನಲ್ಲಿ 23ನೇ ರ್‍ಯಾಂಕ್‌, ಯಶ್‌ ಬನ್ನೂರು-ಬಿಎಸ್ಸಿ (ಅಗ್ರಿಕಲ್ಚರ್‌)ನಲ್ಲಿ 9ನೇ ರ್‍ಯಾಂಕ್‌, ಬಿ. ಫಾರ್ಮ್ನಲ್ಲಿ 42ನೇ ರ್‍ಯಾಂಕ್‌, ನ್ಯಾಚುರೋಪತಿ ಮತ್ತು ಯೋಗಿಕ್‌ ಸೈನ್ಸ್‌ನಲ್ಲಿ 18ನೇ ರ್‍ಯಾಂಕ್‌ ಗಳಿಸಿದ್ದಾರೆ. ಮೂಡುಬಿದಿರೆ ಆಳ್ವಾಸ್‌ ಪಪೂ ಕಾಲೇಜಿನ ಎಸ್‌. ದರ್ಶನ್‌ ಸಮರ್ಥ-ಬಿಎಸ್ಸಿ (ಅಗ್ರಿಕಲ್ಚರ್‌)ನಲ್ಲಿ 10ನೇ ರ್‍ಯಾಂಕ್‌ ಪಡೆದಿದ್ದಾರೆ.

ಈ ಬಾರಿಯ ಸಿಇಟಿ ಪರೀಕ್ಷೆಯಲ್ಲಿ ಎಕ್ಸ್‌ಪರ್ಟ್‌ ಪ.ಪೂ. ಕಾಲೇಜಿನ 6 ಮಂದಿ ವಿದ್ಯಾರ್ಥಿಗಳಿಗೆ ವಿವಿಧ ವಿಭಾಗಗಳಲ್ಲಿ ಮೊದಲ ಹತ್ತರೊಳಗಿನ ಒಟ್ಟು 8ರ್‍ಯಾಂಕ್‌ ಬಂದಿದೆ. ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ವೃಂದದ ಕಠಿನ ಪರಿಶ್ರಮದಿಂದ ಕಾಲೇಜಿನ ವಿದ್ಯಾರ್ಥಿಗಳು ಟಾಪ್‌ಟೆನ್‌ನಲ್ಲಿ ಸ್ಥಾನ ಪಡೆಯುವುದಕ್ಕೆ ಸಾಧ್ಯವಾಗಿದೆ. ರ್‍ಯಾಂಕ್‌ ವಿಜೇತರ ಸಹಿತ ಎಲ್ಲ ವಿದ್ಯಾರ್ಥಿಗಳಿಗೂ ಉತ್ತಮ ಭವಿಷ್ಯವನ್ನು ಕೋರುತ್ತೇನೆ.
– ಪ್ರೊ| ಎಲ್‌. ನರೇಂದ್ರ ನಾಯಕ್‌, ಎಕ್ಸ್‌ಪರ್ಟ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷ

Advertisement

ಕಳೆದ ವರ್ಷವೂ 2ನೇ ರ್‍ಯಾಂಕ್‌
ಕಳೆದ ವರ್ಷದ ಸಿಇಟಿ ಪರೀಕ್ಷೆಯಲ್ಲಿಯೂ ಎಂಜಿನಿಯರಿಂಗ್‌ ವಿಭಾಗದಲ್ಲಿ ದ್ವಿತೀಯ ರ್‍ಯಾಂಕ್‌ ಮಂಗಳೂರಿನ ಪಾಲಾಗಿತ್ತು. ಕೊಡಿಯಾಲ್‌ಬೈಲ್‌ ಶಾರದಾ ಪ.ಪೂ. ಕಾಲೇಜಿನ ನಾರಾಯಣ ಪೈ ಎಂಜಿನಿಯರಿಂಗ್‌ನಲ್ಲಿ ದ್ವಿತೀಯ ಮತ್ತು ಬಿ-ಫಾರ್ಮಾದಲ್ಲಿ 5ನೇ ರ್‍ಯಾಂಕ್‌ ಗಳಿಸಿದ್ದರು. ಪಶು ವೈದ್ಯಕೀಯ ವಿಭಾಗದಲ್ಲಿ ವಳಚ್ಚಿಲ್‌ ಎಕ್ಸ್‌ಪರ್ಟ್‌ ಕಾಲೇಜಿನ ವೈಶ್ವಿ‌ 4ನೇ ರ್‍ಯಾಂಕ್‌ ಮತ್ತು ಇದೇ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಮಾಡಿದ ಬಳಿಕ ಬೀದರ್‌ ಶಾಹಿನ್‌ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ವಿನೀತ್‌ ಮೇಗೂರ್‌ ಪ್ರಥಮ ರ್‍ಯಾಂಕ್‌ ಗಳಿಸಿದ್ದರು.

ಚಿನ್ಮಯ್‌ಗೆ ವಿಜ್ಞಾನಿಯಾಗುವಾಸೆ
ಎಂಜಿನಿಯರಿಂಗ್‌ನಲ್ಲಿ 2ನೇ ರ್‍ಯಾಂಕ್‌ ಹಾಗೂ ಫಾರ್ಮಸಿಯಲ್ಲಿ 3ನೇ ರ್‍ಯಾಂಕ್‌ ಗಳಿಸಿರುವ ಎಕ್ಸ್‌ಪರ್ಟ್‌ ಪ.ಪೂ. ಕಾಲೇಜಿನ ಆರ್‌. ಚಿನ್ಮಯ್‌ ಅವರು ಮೂಲತಃ ಮೈಸೂರಿನವರು. ತಂದೆ ರವಿಶಂಕರ್‌ ಬಳ್ಳಾರಿ ಕೃಷಿ ಇಲಾಖೆಯಲ್ಲಿ ಸಹಾಯಕ ಜನರಲ್‌ ಮ್ಯಾನೇಜರ್‌ ಆಗಿದ್ದು, ತಾಯಿ ಸುಧಾ ಗೃಹಿಣಿ. ಪಿಯುಸಿಯಲ್ಲಿ 588 ಅಂಕ ಗಳಿಸಿರುವ ಚಿನ್ಮಯ್‌ ರಸಾಯನಶಾಸ್ತ್ರ, ಭೌತಶಾಸ್ತ್ರ, ಕಂಪ್ಯೂಟರ್‌ ಸೈನ್ಸ್‌ನಲ್ಲಿ 100 ಅಂಕ ಗಳಿಸಿದ್ದರು. “ಎಕ್ಸ್‌ಪರ್ಟ್‌ನ ಶಿಕ್ಷಣದೊಂದಿಗೆ, ಪಿಯುಸಿ ಪರೀಕ್ಷೆಗೆ ಓದಿದ್ದು, ಸಿಇಟಿಯಲ್ಲಿ ಉತ್ತಮ ರ್‍ಯಾಂಕ್‌ ಗಳಿಸಲು ನೆರವಿಗೆ ಬಂತು. ದಿನದಲ್ಲಿ 14 ಗಂಟೆ ಓದಿಗಾಗಿ ತೊಡಗಿಸಿಕೊಳ್ಳುತ್ತಿದ್ದೆ. 10ರೊಳಗಿನ ರ್‍ಯಾಂಕ್‌ ನಿರೀಕ್ಷೆ ಮಾಡಿದ್ದೆ. ಆದರೆ ಈಗ 2 ಮತ್ತು 3ನೇ ರ್‍ಯಾಂಕ್‌ ಬಂದಿರುವುದು ಖುಷಿಯಾಗಿದೆ’ ಎಂದು ಚಿನ್ಮಯ್‌ ಸಂತಸ ವ್ಯಕ್ತಪಡಿಸಿದರು. ಮುಂದೆ ಐಐಟಿ ಶಿಕ್ಷಣ ಪಡೆಯುವ ಗುರಿ ಇದೆ. ವಿಜ್ಞಾನಿಯಾಗುವ ಕನಸು ಚಿನ್ಮಯ್‌ರದ್ದು.

ವೈದ್ಯಕೀಯ ಕ್ಷೇತ್ರದಲ್ಲಿ ಆಸಕ್ತಿ: ಭುವನ್‌
ನ್ಯಾಚುರೋಪತಿ ಆ್ಯಂಡ್‌ ಯೋಗಿಕ್‌ ಸೈನ್ಸ್‌ನಲ್ಲಿ (ಬಿಎನ್‌ವೈಎಸ್‌) 6ನೇ ರ್‍ಯಾಂಕ್‌ ಹಾಗೂ ಬಿಎಸ್ಸಿ (ಅಗ್ರಿಕಲ್ಚರ್‌)ನಲ್ಲಿ 2ನೇ ರ್‍ಯಾಂಕ್‌ ಪಡೆದಿರುವ ಎಕ್ಸ್‌ಪರ್ಟ್‌ ಪ.ಪೂ. ಕಾಲೇಜಿನ ಭುವನ್‌ ವಿ. ಬಿ.ಗೆ ರ್‍ಯಾಂಕ್‌ ನಿರೀಕ್ಷೆ ಇತ್ತಾದರೂ, 10ರೊಳಗಿನ ಸ್ಥಾನದ ನಿರೀಕ್ಷೆ ಇರಲಿಲ್ಲ. ಮೂಲತಃ ಬೆಂಗಳೂರಿನವರಾದ ಭುವನ್‌ ಬೆಂಗಳೂರು ವೆಟರ್ನರಿ ಕಾಲೇಜಿನಲ್ಲಿ ಪ್ರೊಫೆಸರ್‌ಗಳಾಗಿರುವ ಡಾ| ಬಿ. ಎಂ. ವೀರೇಗೌಡ ಮತ್ತು ಡಾ| ಲೀನಾ ಗೌಡ ದಂಪತಿಯ ಪುತ್ರ. “ಎಕ್ಸ್‌ಪರ್ಟ್‌ನಲ್ಲಿ ಸಿಕ್ಕಿದ ಪ್ರೋತ್ಸಾಹ ಮತ್ತು ಹೆತ್ತವರ ಸಹಕಾರದಿಂದಾಗಿ ರ್‍ಯಾಂಕ್‌ ಬಂದಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಆಸಕ್ತಿ ಇರುವುದರಿಂದ ನೀಟ್‌ ಪರೀಕ್ಷೆ ಬರೆದಿದ್ದೇನೆ. ಫಲಿತಾಂಶಕ್ಕಾಗಿ ಕಾಯುತ್ತಿದ್ದೇನೆ’ ಎಂದು ಭುವನ್‌ ತಿಳಿಸಿದರು.

ಸುದೇಶ್‌ ಗೌಡ ಜೆ.
ಬಿಎಸ್ಸಿ ಎಗ್ರಿಕಲ್ಚರ್‌ನಲ್ಲಿ 7ನೇ ರ್‍ಯಾಂಕ್‌ ಗಳಿಸಿರುವ ಎಕ್ಸ್‌ಪರ್ಟ್‌ ಪ.ಪೂ. ಕಾಲೇಜಿನ ಸುದೇಶ್‌ ಗೌಡ ಜೆ. ಮೂಲತಃ ಮೈಸೂರಿನವರು. ಅಧ್ಯಾಪಕರಾಗಿರುವ ಜ್ಞಾನಶಂಕರ್‌ ಮತ್ತು ಸುಮಾ ದಂಪತಿಯ ಪುತ್ರ. ಪಿಯುಸಿ ಪರೀಕ್ಷೆಯಲ್ಲಿ 570 ಅಂಕ ಗಳಿಸಿರುವ ಸುದೇಶ್‌ ನೀಟ್‌ ಪರೀಕ್ಷೆಯನ್ನೂ ಬರೆದಿದ್ದಾರೆ. “ಸಿಇಟಿಯಲ್ಲಿ ಹತ್ತರೊಳಗಿನ ರ್‍ಯಾಂಕ್‌ ನಿರೀಕ್ಷೆ ಇರಲಿಲ್ಲ. ಆತನ ಶ್ರಮಕ್ಕೆ ತಕ್ಕಂತೆ ಇದೀಗ ರ್‍ಯಾಂಕ್‌ ಬಂದಿರುವುದು ಖುಷಿಯಾಗಿದೆ’ ಎಂದು ಸುದೇಶ್‌ ತಂದೆ ಜ್ಞಾನಶಂಕರ್‌ ಸಂತಸ ವ್ಯಕ್ತಪಡಿಸಿದರು.

ಆಶಯ್‌ ಜೈನ್‌ ಸಿ. ಎ.
ನ್ಯಾಚುರೋಪತಿ ಆ್ಯಂಡ್‌ ಯೋಗಿಕ್‌ ಸೈನ್ಸ್‌ನಲ್ಲಿ (ಬಿಎನ್‌ವೈಎಸ್‌) 7ನೇ ರ್‍ಯಾಂಕ್‌ ಪಡೆದಿರುವ ಎಕ್ಸ್‌ ಪರ್ಟ್‌ ಪ.ಪೂ. ಕಾಲೇಜಿನ ಆಶಯ್‌ ಜೈನ್‌ ಸಿ. ಎ. ಅವರಿಗೆ ಮುಂದೆ ವೈದ್ಯಕೀಯ ಕ್ಷೇತ್ರದಲ್ಲಿ ಮುಂದುವರಿಯುವ ಆಸೆ. ಮೈಸೂರಿನ ಚಾಮರಾಜನಗರದ ವೈದ್ಯ ಡಾ| ಅಭಯಕುಮಾರ್‌ ಹಾಗೂ ಗೃಹಿಣಿ ಸಹನಾ ದಂಪತಿಯ ಪುತ್ರ ಆಶಯ್‌ ಪಿಯುಸಿಯಲ್ಲಿ 579 ಅಂಕ ಗಳಿಸಿದ್ದಾರೆ. ಪುತ್ರನ ಸಾಧನೆ ಬಗ್ಗೆ ಪ್ರತಿಕ್ರಿಯಿಸಿದ ತಾಯಿ ಸಹನಾ, “ಸಿಇಟಿಯಲ್ಲಿ ರ್‍ಯಾಂಕ್‌ ಬಂದಿರುವುದಕ್ಕೆ ತುಂಬಾ ಖುಷಿಯಾಗಿದೆ. ಆತ ಈಗಾಗಲೇ ನೀಟ್‌ ಪರೀಕ್ಷೆಯನ್ನೂ ಬರೆದಿದ್ದು, ರ್‍ಯಾಂಕ್‌ ಸಿಗುವ ನಿರೀಕ್ಷೆ ಇದೆ. ಆನಂತರ ವೈದ್ಯಕೀಯ ಕ್ಷೇತ್ರದಲ್ಲಿ ಮುಂದುವರಿಯುವ ಇಚ್ಚೆ ಹೊಂದಿದ್ದಾನೆ’ ಎಂದರು.

ಯಶ್‌ ಬನ್ನೂರು
ಎಕ್ಸ್‌ಪರ್ಟ್‌ ಪ.ಪೂ. ಕಾಲೇಜಿನ ವಿದ್ಯಾರ್ಥಿ ಯಶ್‌ ಬನ್ನೂರು ಬಿಎಸ್ಸಿ ಅಗ್ರಿಕಲ್ಚರ್‌ನಲ್ಲಿ 9ನೇ ರ್‍ಯಾಂಕ್‌ ಗಳಿಸಿದ್ದಾರೆ. ವಿಜಯಪುರದ ನ್ಯಾಯವಾದಿ ಮಹಾದೇವ್‌ ಬನ್ನೂರು ಮತ್ತು ಬಿಎಲ್‌ಡಿ ಎಂಜಿನಿಯರಿಂಗ್‌ ಕಾಲೇಜಿನ ಪ್ರೊಫೆಸರ್‌ ಮುಕ್ತಾ ದಂಪತಿಯ ಪುತ್ರ. ಪಿಯುಸಿಯಲ್ಲಿ 583 ಅಂಕ ಗಳಿಸಿದ್ದರು. ಪುತ್ರನ ಸಾಧನೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿರುವ ತಾಯಿ ಮುಕ್ತಾ, “ಯಶ್‌ ಶ್ರದ್ಧೆಯಿಟ್ಟು ಓದುತ್ತಿದ್ದ. ಕಾಲೇಜಿನಲ್ಲಿ ದೊರೆತ ಸಹಕಾರ ಮತ್ತು ಆತನ ಶ್ರದ್ಧೆಯ ಓದಿನಿಂದ ಉತ್ತಮ ರ್‍ಯಾಂಕ್‌ ಗಳಿಸಿದ್ದಾನೆ’ ಎಂದರು.

ಸಮರ್ಥ್ ಮಯ್ಯಗೆ ಪೈಲಟ್‌ ಕನಸು
ಎಂಜಿನಿಯರಿಂಗ್‌ನಲ್ಲಿ 5ನೇ ರ್‍ಯಾಂಕ್‌ ಗಳಿಸಿರುವ ಎಕ್ಸ್‌ಪರ್ಟ್‌ ಪ.ಪೂ. ಕಾಲೇಜಿನ ಸಮರ್ಥ್ ಮಯ್ಯ ಮಂಗಳೂರಿನ ಮಣ್ಣಗುಡ್ಡೆ ನಿವಾಸಿಗಳಾದ ಉದ್ಯಮಿ ಸತೀಶ್‌ ಬಿ., ಗೃಹಿಣಿ ಶ್ರೀರಾಧಾ ದಂಪತಿಯ ಪುತ್ರ. ಪಿಯುಸಿಯಲ್ಲಿ 572 ಅಂಕ ಗಳಿಸಿದ್ದರು. ಎಕ್ಸ್‌ಪರ್ಟ್‌ನಲ್ಲಿ ಕಾಲೇಜು ಮುಖ್ಯಸ್ಥರು, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸಹಪಾಠಿಗಳ ಸಹಕಾರದಿಂದ ಸಿಇಟಿಯಲ್ಲಿ ಉತ್ತಮ ರ್‍ಯಾಂಕ್‌ ಗಳಿಸಲು ಸಾಧ್ಯವಾಯಿತು. ಇಪ್ಪತ್ತರೊಳಗಿನ ರ್‍ಯಾಂಕ್‌ ಬರಬಹುದೆಂಬ ನಿರೀಕ್ಷೆ ಇತ್ತು. ಇದೀಗ ಐದನೇ ರ್‍ಯಾಂಕ್‌ ಬಂದಿರುವುದಕ್ಕೆ ಸಂತಸವಾಗುತ್ತಿದೆ ಎಂದರು ಸಮರ್ಥ್. ಕಂಪ್ಯೂಟರ್‌ ಸೈನ್ಸ್‌ನಲ್ಲಿ ಮುಂದುವರಿಯಬೇಕೆಂದಿರುವ ಸಮರ್ಥ್, ಪೈಲಟ್‌ ಆಗಬೇಕೆಂಬ ಕನಸಿದೆ ಎನ್ನುತ್ತಾರೆ.

ಆಳ್ವಾಸ್‌ನ ದರ್ಶನ್‌ಗೆ 10ನೇ ರ್‍ಯಾಂಕ್‌
ಮೂಡುಬಿದಿರೆ, ಮೇ 25: ಸಿಇಟಿ ಫಲಿತಾಂಶದಲ್ಲಿ ಆಳ್ವಾಸ್‌ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಎಸ್‌. ದರ್ಶನ್‌ ಸಮರ್ಥ ಅವರು ಬಿಎಸ್ಸಿ ಅಗ್ರಿಕಲ್ಚರ್‌ ವಿಭಾಗದಲ್ಲಿ 10ನೇ ರ್‍ಯಾಂಕ್‌ ಗಳಿಸಿದ್ದಾರೆ.

ಮೂಲತಃ ಮೈಸೂರಿನ ಹೂಟಗಳ್ಳಿಯವರಾದ ದರ್ಶನ್‌ ಸಮರ್ಥ ಅವರು ಪ್ರೌಢಶಾಲಾ ಶಿಕ್ಷಕ ಎಸ್‌.ಡಿ. ಶಿವಣ್ಣ, ಗೃಹಿಣಿ ಜಲಜಾಕ್ಷಿ ಅವರ ಪುತ್ರ. ಆಳ್ವಾಸ್‌ ದತ್ತು ಸ್ವೀಕಾರ ಯೋಜನೆಯಡಿ ಉಚಿತ ಶಿಕ್ಷಣಾವಕಾಶ ಪಡೆದಿದ್ದ ದರ್ಶನ್‌ ಪಿಯುಸಿ ಫಲಿತಾಂಶದಲ್ಲಿ 591 ಅಂಕ ಗಳಿಸಿದ್ದರು.

ವೈದ್ಯನಾಗುವ ಬಯಕೆ
“ನೀಟ್‌ ಫಲಿತಾಂಶದ ನಿರೀಕ್ಷೆಯಲ್ಲಿದ್ದೇನೆ. ಅಲ್ಲಿ ಸಾವಿರದೊಳಗಿನ ರ್‍ಯಾಂಕ್‌ ಪಡೆಯುವ ವಿಶ್ವಾಸವಿದೆ. ಮುಂದೆ ಎಂಬಿಬಿಎಸ್‌ ಕಲಿತು ವೈದ್ಯನಾಗಬೇಕೆಂಬ ಕನಸಿದೆ’ ಎಂದು ಅವರು ತನ್ನ ಅನಿಸಿಕೆ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next