ರಾಯಚೂರು: ಇನ್ನೇನು ಕಟಾವು ಮಾಡಬೇಕಿದ್ದ ಭತ್ತದ ಗದ್ದೆಗೆ ಕಾಲುವೆ ನೀರು ನುಗ್ಗಿ ಬೆಳೆಯೆಲ್ಲ ಹಾಳಾದ ಘಟನೆ ತಾಲೂಕಿನ ಕಲಮಲ ಗ್ರಾಮದಲ್ಲಿ ಬುಧವಾರ ಬೆಳಗಿನ ಜಾವ ನಡೆದಿದೆ.
ತುಂಗಭದ್ರಾ ಎಡದಂಡೆ ಕಾಲುವೆ ಅ ಧಿಕಾರಿಗಳ ನಿರ್ಲಕ್ಷ್ಯದಿಂದ ಈ ಯಡವಟ್ಟು ನಡೆದಿದ್ದು, ಟಿಎಲ್ಬಿಸಿ ಕಾಲುವೆಗೆ ನೀರು ಹರಿಸುವಲ್ಲಿ ಗೇಜ್ ನಿರ್ವಹಣೆ ಮಾಡದಿರುವುದೇ ಸಮಸ್ಯೆ ಕಾರಣವಾಗಿದೆ.
ರಾತ್ರೋರಾತ್ರಿ ಕಾಲುವೆಗೆ ಅಗತ್ಯಕ್ಕಿಂತ ಹೆಚ್ಚು ನೀರು ಹರಿದಿದ್ದು, ಶಿವರಾಜ್ ಎನ್ನುವ ರೈತನ 14 ಎಕರೆ ಭತ್ತದ ಜಮೀನಿಗೆ ನೀರು ನುಗ್ಗಿದೆ. ಕಲಮಲ ಗ್ರಾಮದಲ್ಲಿರುವ ಕರಿಯಪ್ಪ ತಾತನ ದೇವಾಲಯದ ಹತ್ತಿರ ಬರುವ ಕಾಲುವೆಗೆ ಅಪಾರ ಪ್ರಮಾಣದಲ್ಲಿ ನೀರು ಹರಿಸಲಾಗಿದೆ. ಇದರಿಂದ ಬೆಳೆಯೆಲ್ಲ ನೀರು ಪಾಲಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.
ಈ ಬಗ್ಗೆ ನೀರಾವರಿ ಇಲಾಖೆ ಇಂಜಿನಿಯರ್ ಗಳನ್ನು ಸಂಪರ್ಕಿಸಿದರೆ, ಇದೆಲ್ಲ ಸರ್ವೇ ಸಾಮಾನ್ಯ ನಾವೇನು ಮಾಡಲು ಸಾಧ್ಯ ಎಂದು ಉಡಾಫೆ ಉತ್ತರ ನೀಡುತ್ತಾರೆ ಎಂದು ರೈತರು ದೂರಿದ್ದಾರೆ. ಇನ್ನೊಂದೆರಡು ದಿನಗಳಲ್ಲಿ ಬೆಳೆ ಕೈ ಸೇರುತ್ತಿತ್ತು. ಕಳೆದ ವಾರ ಮಳೆಯಿಂದ ಬೆಳೆ ಹಾನಿಯಾಗಿತ್ತು. ಉಳಿದ ಬೆಳೆಯಾದರೂ ಕೈ ಸೇರಬಹುದು ಎಂದು ಭಾವಿಸಿದ್ದರೆ ಈಗ ಕಾಲುವೆ ನೀರು ನುಗ್ಗಿ ಅವಾಂತರವಾಗಿದೆ. 14 ಎಕರೆ ಜಮೀನು ಲೀಸ್ ಮಾಡಿದ್ದು, ಲಕ್ಷಾಂತರ ರೂ. ಖರ್ಚು ಮಾಡಿದ್ದೇನೆ. ಈಗ ಉಂಟಾದ ಬೆಳೆಹಾನಿಗೆ ಪರಿಹಾರ ನೀಡಲಿ ಎಂದು ರೈತ ಶಿವರಾಜ್ ಒತ್ತಾಯಿಸಿದ್ದಾರೆ.