Advertisement

ರಾಜಕಾಲುವೆಯ ಜತೆಗೆ ನದಿ ಬದಿಯಲ್ಲೂ ಒತ್ತುವರಿ!

04:35 AM Jun 05, 2018 | Team Udayavani |

ಮಂಗಳೂರಿನ ರಾಜಕಾಲುವೆ ಹಾಗೂ ದೊಡ್ಡ ತೋಡುಗಳ ವ್ಯಾಪ್ತಿಯ ಕೆಲವು ಕಡೆಗಳಲ್ಲಿ ಒತ್ತುವರಿ ಆದ ಕಾರಣದಿಂದ ಮಳೆ ನೀರು ಸರಾಗವಾಗಿ ನದಿ ಸೇರಲು ಸಾಧ್ಯವಾಗಲಿಲ್ಲ ಎಂಬ ಆರೋಪ ಕೇಳಿಬರುತ್ತಿರುವ ಮಧ್ಯೆಯೇ, ನದಿ ಬದಿಯ ಭಾಗಕ್ಕೂ ಕೆಲವರು ಕಣ್ಣು ಹಾಕಿದ್ದಾರೆ ಎಂಬ ದೂರು ಕೇಳಿಬರುತ್ತಿದೆ. ನಗರ ವ್ಯಾಪ್ತಿಯಲ್ಲಿ ಹರಿಯುವ ಎರಡು ನದಿಯ ವ್ಯಾಪ್ತಿಯಲ್ಲೂ ಒಂದಿಷ್ಟು ಒತ್ತುವರಿ ಆಗಿದ್ದು, ಈ ಕಾರಣದಿಂದ ಹಿನ್ನೀರು ಸರಾಗವಾಗಿ ಹರಿಯಲು ಸಾಧ್ಯವಾಗಲಿಲ್ಲ ಎಂಬ ಆರೋಪವೂ ಇದೀಗ ಪ್ರತಿಧ್ವನಿಸಿದೆ. ಈ ಕುರಿತಂತೆ ಬೆಳಕು ಚೆಲ್ಲುವ ‘ರಿಯಾಲಿಟಿ ಚೆಕ್‌’ ಇಲ್ಲಿದೆ.

Advertisement

ಮಹಾನಗರ: ‘ನಗರ ವ್ಯಾಪ್ತಿಯಲ್ಲಿ ಹರಿಯುವ ಜೀವನದಿಗಳಾದ ನೇತ್ರಾವತಿ ಹಾಗೂ ಫಲ್ಗುಣಿಯಲ್ಲಿ ನೀರಿನ ಉಬ್ಬರವಿದ್ದ ಕಾರಣ ಮಳೆ ನೀರು ನದಿಗಳನ್ನು ಸೇರಲು ಸಾಧ್ಯವಾಗದೆ, ಹಿನ್ನೀರಿನೊಂದಿಗೆ ತಗ್ಗುಪ್ರದೇಶಗಳು ಜಲಾವೃತವಾದವು’ ಎಂದು ದ.ಕ. ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಇತ್ತೀಚೆಗೆ ತಿಳಿಸಿದ್ದರು. ಹಾಗಾದರೆ ನದಿಯಲ್ಲಿ ಹಿನ್ನೀರು ಸರಾಗವಾಗಿ ಹರಿಯಲು ಯಾಕೆ ಕಷ್ಟವಾಗುತ್ತದೆ? ನಿಜಕ್ಕೂ ಇಲ್ಲಿ ಆಗಿರುವುದೇನು? ಎಂಬ ಕುರಿತು ಪರಿಶೀಲಿಸಿದಾಗ ಕಂಡು ಬಂದ ಸತ್ಯ ‘ನದಿ ಬದಿಯ ಕೆಲವು ಕಡೆ ಒತ್ತುವರಿ ಆಗಿದೆ’ ಎಂಬುದು!

ನೈಸರ್ಗಿಕವಾಗಿ ಎಲ್ಲಿ ನದಿಗಳು ಸಮುದ್ರವನ್ನು ಬಂದು ಸೇರುತ್ತವೆಯೋ ಅಥವಾ ಎಲ್ಲಿ ಸಮುದ್ರ ದಡ ಕಾಣಿಸುತ್ತದೆಯೋ ಅಲ್ಲಿ ಹಿನ್ನೀರು ಹರಿಯುತ್ತಿರುತ್ತದೆ. ಆದರೆ, ನಗರ ಪ್ರದೇಶಗಳಿಗೆ ಹೊಂದಿ ಕೊಂಡಿರುವ ಕಡಲ ಕಿನಾರೆ ಇರುವ ಕಡೆಗಳಲ್ಲಿ ಈಗ ಹಿನ್ನೀರು ಪ್ರದೇಶ ಕೂಡ ತನ್ನ ಅಸ್ತಿತ್ವವನ್ನು ಕಳೆದುಕೊಂಡು ಕಣ್ಮರೆಯಾಗುತ್ತಿವೆ. ಇದು ಕೂಡ ಮಂಗಳೂರಿನಲ್ಲಿ ಇತ್ತೀಚೆಗೆ ಸುರಿದ ಮಹಾಮಳೆಗೆ ಸಮಸ್ಯೆಯಾದ ಬಗ್ಗೆಯೂ ಆರೋಪಗಳಿವೆ.

ನೇತ್ರಾವತಿಯಲ್ಲಿ ಮಂಗಳೂರಿನ ಅಳಿವೆಬಾಗಿಲಿನಿಂದ ಸುಮಾರು 15 ಕಿ.ಮೀ.ದೂರದ ತುಂಬೆಯವರೆಗೆ ಹಿನ್ನೀರಿನ ವ್ಯಾಪ್ತಿ ಇದೆ. ಅಳಿವೆಬಾಗಿಲಿನಿಂದ ಮಳವೂರಿನವರೆಗೆ ಫ‌‌ಲ್ಗುಣಿ ನದಿಯ ಸುಮಾರು 9 ಕಿ.ಮೀ. ವ್ಯಾಪ್ತಿಯಲ್ಲಿ ಹಿನ್ನೀರಿನ ಚಲನೆ ಇದೆ. ಉಳಿದಂತೆ ನಂದಿನಿ ನದಿಯು ಚೇಳಾçರುವರೆಗೆ 8 ಕಿ.ಮೀ. ಮತ್ತು ಶಾಂಭವಿ ನದಿಯು ಕರ್ನಿರೆವರೆಗೆ 12 ಕಿ.ಮೀ. ವ್ಯಾಪ್ತಿಯಲ್ಲಿ ಹಿನ್ನೀರಿನ ವ್ಯಾಪ್ತಿ ಹರಡಿಕೊಂಡಿದೆ.

ದುರಂತವೆಂದರೆ, ಈ ಹಿನ್ನೀರು ಹರಿಯುವ ಜಾಗದ ಮೇಲೆ ಕಣ್ಣು ಹಾಕಿರುವ ಸ್ಥಳೀಯರು, ಉದ್ಯಮಪತಿಗಳು, ನದಿಯ ಪಾರ್ಶ್ವದಲ್ಲಿ ಮಣ್ಣುಹಾಕಿ ನದಿಯ ಭಾಗವನ್ನೇ ಕಬಳಿಸಿದ ಘಟನೆ ಕೆಲವೆಡೆ ನಡೆದಿದೆ. ಮಂಗಳೂರಿನ ಬೋಳೂರು, ಸುಲ್ತಾನ್‌ಬತ್ತೇರಿ ವ್ಯಾಪ್ತಿಯಲ್ಲಿಯೇ ಹಿನ್ನೀರು ಪ್ರದೇಶಕ್ಕೆ ಮಣ್ಣುಹಾಕಿ ಕೆಲವು ಫ್ಯಾಕ್ಟರಿಗಳು ತಲೆ ಎತ್ತಿವೆ. ಅಂಗಡಿ ಮುಂಗಟ್ಟುಗಳು, ಸಣ್ಣಪುಟ್ಟ ಕೈಗಾರಿಕೆಗಳು ಇದೇ ನದಿಯ ಪಾತ್ರದಲ್ಲಿ ತೆರೆದಿವೆ. 

Advertisement

ಕಟ್ಟಡ ತ್ಯಾಜ್ಯವೆಲ್ಲ ನದಿ ತೀರಕ್ಕೆ!
ಕೂಳೂರುವಿನ ಮೂಲಕ ಫಲ್ಗುಣಿ ನದಿ ಸಮುದ್ರ ಸೇರುತ್ತದೆ. ಇಲ್ಲಿನ ವ್ಯಾಪ್ತಿಯಲ್ಲಿ ನದಿ ಪಾತ್ರದ ಕೆಲವು ಭಾಗ ಒತ್ತುವರಿ ಆಗಿದೆ ಎಂಬ ಆರೋಪವೂ ಇದೆ. ಜತೆಗೆ ಕೂಳೂರು ಸೇತುವೆ ಸಮೀಪದ ಪಾರ್ಶ್ವದಲ್ಲಿ ನದಿ ತೀರದಲ್ಲಿ ಕಟ್ಟಡ/ಕಾರ್ಖಾನೆಯ ತ್ಯಾಜ್ಯವನ್ನು ಬೇಕಾಬಿಟ್ಟಿ ಸುರಿಯಲಾಗುತ್ತದೆ. ಇದರಿಂದಾಗಿ ನದಿ ಹರಿವಿನ ವ್ಯಾಪ್ತಿಯಲ್ಲೂ ಕೊಂಚ ವ್ಯತ್ಯಾಸವಾಗಿದೆ. ನೀರು ಸರಾಗವಾಗಿ ಹರಿಯಲು ಕಷ್ಟವಾಗುತ್ತದೆ. ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳುವ ಭಯದಿಂದ ರಾತ್ರಿ ಹೊತ್ತು ತ್ಯಾಜ್ಯ ತಂದು ಸುರಿಯಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಇಂತಹ ಘಟನೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದು ಅಗತ್ಯ.

ನೇತ್ರಾವತಿಯಲ್ಲಿ ಹಿನ್ನೀರು ಹರಿಯುವ ಸ್ಥಳದಲ್ಲೂ ಅತಿಕ್ರಮಣ ನಡೆದಿದೆ. ಅಡಂಕುದ್ರು, ಜಪ್ಪಿನಮೊಗರು, ಅಡ್ಯಾರ್‌ ವ್ಯಾಪ್ತಿಯಲ್ಲಿ ನದಿಯ ಬದಿಯಲ್ಲಿ ಮಣ್ಣು ಹಾಕಿ ಸದ್ದಿಲ್ಲದೆ ನದಿಯ ಚಿತ್ರವೇ ಬದಲಾಗಿದೆ. ಮಣ್ಣು ಹಾಕಿ ಅತಿಕ್ರಮಣ ಆದ ಸ್ಥಳವು ಹಿನ್ನೀರಿನ ಪರಿಣಾಮವಾಗಿ ಕೆಲವೇ ತಿಂಗಳುಗಳಲ್ಲಿ ಹಸಿರು ಬಣ್ಣದಿಂದ ಕಂಗೊಳಿಸುವ ಪರಿಣಾಮ ಅಲ್ಲಿ ನದಿ ಇತ್ತು ಎಂಬ ಸುಳಿವೇ ಸಿಗದ ಸ್ಥಿತಿ ನಿರ್ಮಾಣವಾಗಿದೆ. 

ಹಿನ್ನೀರಿನಿಂದ ದೊರೆಯುವ ಪ್ರಯೋಜನ
ಸಮುದ್ರದಲ್ಲಿ ಭರತ‌ ಉಂಟಾದಾಗ ನದಿಯ ಹಾಗೂ ನಾಲೆಗಳ ಮುಖಾಂತರ ಹೆಚ್ಚಿನ ನೀರು ಸಂಗ್ರಹವಾಗಿ ನದಿಯಲ್ಲಿ ಹಿಮ್ಮುಖವಾಗಿ ನೀರು ಸಂಗ್ರಹಗೊಳ್ಳುತ್ತವೆ. ಇಳಿತದ ಸಮಯದಲ್ಲಿ  ನದಿಯಲ್ಲಿ ನೀರಿನ ಮಟ್ಟ ಕಡಿಮೆ ಇರುತ್ತದೆ. ಈ ಭರತ ಇಳಿತಗಳ ಪ್ರಭಾವ ಎಲ್ಲಿಯವರೆಗೆ ಇರುವುದೋ ಅಲ್ಲಿಯವರೆಗಿನ ನದಿಯ ಭಾಗ ಉಪ್ಪು ನೀರಿನಿಂದ ಕೂಡಿರುತ್ತದೆ. ಇದನ್ನೇ ‘ಹಿನ್ನೀರು’ ಎಂದು ಕರೆಯುತ್ತಾರೆ. ಪ್ರಾಕೃತಿಕ ವಿಕೋಪ ಸಮಯದಲ್ಲಿ ಸಮುದ್ರದಿಂದ ನೆರೆ, ಚಂಡಮಾರುತ, ಸುನಾಮಿ ಇತ್ಯಾದಿ ಹಲವು ಕಾರಣಗಳಿಂದ ಬರುವ ಅಧಿಕ ನೀರನ್ನು ಅಳಿವೆಯು ಸಂಗ್ರಹಿಸಿ ಅದು ವಸತಿ ಅಥವಾ ಕೃಷಿಭೂಮಿಗಳಿಗೆ ನುಗ್ಗದಂತೆ ತಡೆಯುತ್ತದೆ. ಅಲ್ಲದೆ ಅಳಿವೆ ಪ್ರದೇಶಗಳಲ್ಲಿ ಬೆಳೆಯು ವಿಶಿಷ್ಟ ಸಸ್ಯ ಪ್ರಭೇದವಾದ ಕಾಂಡ್ಲ ಸಮೂಹಗಳು ನೀರಿನ ಪ್ರವಾಹದಿಂದ ಉಂಟಾಗುವ ಭೂಸವೆತ ಅಥವಾ ಕೊರೆತವನ್ನು ತಡೆಯುತ್ತವೆ. ಅಳಿವೆಯ ವಿಸ್ತಾರ ಹೆಚ್ಚಾದಷ್ಟು ಅದು ಜನರಿಗೆ ನೀಡುವ ರಕ್ಷಣೆ ಹೆಚ್ಚಾಗುತ್ತದೆ ಎಂಬುದು ವೈಜ್ಞಾನಿಕ ಮಾಹಿತಿ.

‘ಅತಿಕ್ರಮಿಸಿದರೆ ಕಾನೂನು ಕ್ರಮ’
ಮಂಗಳೂರು ವ್ಯಾಪ್ತಿಯಲ್ಲಿರುವ ಹಿನ್ನೀರು ಹರಿವಿನ ಸ್ಥಳದಲ್ಲಿ  ಈಗಾಗಲೇ ಮಣ್ಣುಹಾಕಿ ಅತಿಕ್ರಮಣ ನಡೆಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಜತೆಗೆ, ಕೆಲವು ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣ ಹಂತದಲ್ಲಿವೆೆ. ಹಿನ್ನೀರು ಹರಿಯುವ ಜಾಗವನ್ನು ಅತಿಕ್ರಮಿಸಿದರೆ ಕ್ರಮ ಕೈಗೊಳ್ಳಲಾಗುವುದು.
– ಮಹೇಶ್‌, ಉಪನಿರ್ದೇಶಕರು, ಮೀನುಗಾರಿಕಾ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next