Advertisement

ಚಿಂತನೆ: ಅಸಮಾನತೆಯನ್ನು ತಗ್ಗಿಸಬಲ್ಲದೇ ಕೋವಿಡ್ ?

11:06 PM Aug 10, 2020 | mahesh |

Democracy is the worst form of government except for all the others ಎನ್ನುತ್ತಾನೆ ಚರ್ಚಿಲ್ ಅನೇಕ ಸಂಗತಿಗಳಲ್ಲಿ ಚರ್ಚಿಲ್‌ ಅಭಿಪ್ರಾಯ ತಪ್ಪಾಗಿರಬಹುದು, ಆದರೆ, ಈ ಮೇಲಿನ ಸಾಲು ಮಾತ್ರ ಭಾರತದಲ್ಲಿನ ಬದುಕನ್ನು ಪೂರ್ಣ ಕಟ್ಟಿ ಕೊಡುವಂತಿದೆ.

Advertisement

ಭ್ರಷ್ಟಾಚಾರ ಮತ್ತು ವ್ಯವಸ್ಥೆಯ ಅದಕ್ಷತೆಯಿಂದ ರೋಸಿಹೋಗಿರುವ ಮಧ್ಯಮ ವರ್ಗ ಮತ್ತು ಶ್ರೀಮಂತ ವರ್ಗ, ಈ ವ್ಯವಸ್ಥೆ ಯೊಂದಿಗೆ ಏಗುತ್ತಲೇ ಬದುಕನ್ನು ರೂಪಿಸಿಕೊಳ್ಳುವ ಮಾರ್ಗವನ್ನು ಕಂಡುಕೊಂಡಿದ್ದಾರೆ. ನೀರಿನ ಟ್ಯಾಂಕರ್‌ಗಳು, ವಿದ್ಯುತ್‌ ಜನರೇಟರ್‌ಗಳು, ಖಾಸಗಿ ಭದ್ರತೆ, ಗೇಟೆಡ್‌ ಕಮ್ಯೂನಿಟಿಗಳು ಮತ್ತು ಇತ್ತೀಚಿನ ದಿನಗಳಲ್ಲಿ ಏರ್‌ ಪ್ಯೂರಿಫೈಯರ್‌ಗಳ ಲಭ್ಯತೆಯಿಂದಾಗಿ, ಅನೇಕರಿಗೆ ಹೇಳಿಕೊಳ್ಳುವಂಥ ಜೀವನ ಗುಣಮಟ್ಟ ದಕ್ಕಿದೆ.

ನಮ್ಮಲ್ಲಿ ಐಷಾರಾಮಿ, ಬಹುಮಹಡಿ ಕಟ್ಟಡಗಳ ನೆರಳಲ್ಲೇ ಸ್ಲಂಗಳೂ ಇರುತ್ತವೆ. ಆದರೆ, ಎರಡೂ ಕಡೆಯ ಜನರೂ ಎರಡು ಭಿನ್ನ ಜಗತ್ತಿನಲ್ಲಿಯೇ ವಾಸಿಸುತ್ತಿರುತ್ತಾರೆ. ವಿಸ್ತಾರವಾದ ಮಲ್ಟಿಪ್ಲೆಕ್ಸ್‌ಗಳು, ಮಾಲ್‌ಗಳು, ಅಮ್ಯೂಸೆ¾ಂಟ್‌ ಪಾರ್ಕ್‌ಗಳೆಲ್ಲವೂ ನಮ್ಮ ಸನಿಹವೇ ಇರುವ ಬಡತನದಿಂದ ನಮ್ಮ ಗಮನವನ್ನು ಬೇರೆಡೆ ಸೆಳೆಯುವುದಕ್ಕೆ ಸುಲಭವಾಗಿ ಸಹಕರಿಸಿಬಿಡುತ್ತಿದ್ದವು.

ಆದರೆ, ಬಂತು ನೋಡಿ ಕೋವಿಡ್‌-19. ಎರಡೂ ಭಿನ್ನ ಭಾರತಗಳಲ್ಲಿನ ಜನರನ್ನೂ ಈ ವೈರಾಣು, ಸೋಂಕಿಗೆ ಈಡುಮಾಡಿತು ಅಥವಾ ಸಾವಿಗೆ ಕಾರಣವಾಯಿತು. ಐಷಾರಾಮಿ ಔಡಿ ಕಾರಿರಲಿ ಅಥವಾ ಆಟೋ ಇರಲಿ ಅವನ್ನು ಸುಮ್ಮನೇ ಶೆಡ್‌ನಲ್ಲಿ ನಿಲ್ಲಿಸಬೇಕಾಯಿತು. ವಿಮಾನದ ಫಸ್ಟ್ ಕ್ಲಾಸ್‌ನಲ್ಲಿನ ಪ್ರಯಾಣವಿರಲಿ ಅಥವಾ ಬಸ್‌ನಲ್ಲಿ ಸಾಮಾನ್ಯ ದರ್ಜೆಯ ಸೀಟ್‌ ಇರಲಿ…ಅದ್ದೂರಿ ವಿವಾಹವಿರಲಿ ಅಥವಾ ಸರಳವಾದದ್ದೇ ಆಗಿರಲಿ…ಒಟ್ಟಲ್ಲಿ ಎಲ್ಲವಕ್ಕೂ ಹಠಾ ತ್ತನೆ ಬ್ರೇಕ್‌ ಹಾಕಿಬಿಟ್ಟಿದೆ ಈ ಸಾಂಕ್ರಾಮಿಕ.

ಕೋವಿಡ್ ಪೂರ್ವ ಸಮಯದಲ್ಲಿ, ಅಂತಿಮ ಯಾತ್ರೆಗಳೆನ್ನುವವೂ ಸಹ ಸಮಾಜದಲ್ಲಿ ವ್ಯಕ್ತಿಯೊಬ್ಬನ ಅಂತಸ್ತಿನ ಪ್ರತಿಫ‌ಲನದಂತಾಗಿದ್ದವು. ಆದರೆ, ಈಗ ಸಾವು ಎಲ್ಲರಿಗೂ ಸಮಾನವಾದಂತಾಗಿದೆ, ಅಂತಿಮಸಂಸ್ಕಾರಗಳು ಏಕ ರೀತಿಯಲ್ಲೇ ಆಗುತ್ತಿವೆ.

Advertisement

ನಿಸ್ಸಂಶಯವಾಗಿಯೂ ಸಮಾಜದಲ್ಲಿ ಮೊದಲಿಂದಲೂ ಆರ್ಥಿಕ ವಾಗಿ ದುರ್ಬಲವಾಗಿದ್ದ ವರ್ಗಕ್ಕೆ ಕೋವಿಡ್‌ನಿಂದಾಗಿ ಬಹಳ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ಪೆಟ್ಟು ಬಿದ್ದಿದೆ. ಅವರಷ್ಟೇ ಅಲ್ಲದೇ ಪ್ರತಿ ಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಆರ್ಥಿಕ ಬೇಗುದಿಗಳನ್ನು ಎದುರಿಸಿದ್ದಾರೆ, ಎದುರಿಸುತ್ತಿದ್ದಾರೆ. ಯಾರು ಮೂಲಭೂತ ಅಗತ್ಯಗಳ ಅಭಾವ ತುಂಬಿಕೊಳ್ಳಲು ಸಫ‌ಲರಾಗಿದ್ದರೋ, ತಮ್ಮ ಮತ್ತು ತಮ್ಮ ಕುಟುಂಬದ ಜೀವನಕ್ಕೆ ಒಂದು ಭದ್ರ, ಆಶಾದಾಯಕ ಭವಿಷ್ಯವನ್ನು ರೂಪಿಸಿಕೊಳ್ಳಲು ಆಶಿಸಿದ್ದರೋ ಅವರ ಜಗತ್ತನ್ನೂ ಸಹ ಕೋವಿಡ್‌-19 ಹಠಾತ್ತನೆ ಬುಡಮೇಲಾಗಿಸಿದೆ.

ಅನೇಕರು ಈಗ ಕೆಲಸ ಕಳೆದುಕೊಂಡಿದ್ದಾರೆ ಅಥವಾ ಅವರ ಸಂಬಳದಲ್ಲಿ ಗಣನೀಯ ಪ್ರಮಾಣದಲ್ಲಿ ಕಡಿತ ಆಗಿದೆ. ಒಟ್ಟಲ್ಲಿ ಈ ಬಿಕ್ಕಟ್ಟು, ನಾವು ಯಾವುದೇ ಕಾರಣಕ್ಕೂ ನಮಗಿಂತ ಆರ್ಥಿಕವಾಗಿ ದುರ್ಬಲವಾಗಿರುವವರಿಗಿಂತ ಶ್ರೇಷ್ಠರು ಎಂಬ ಅಹಂಭಾವನೆ ಬೆಳೆಸಿಕೊಳ್ಳಬಾರದು ಎಂದು ನೆನಪು ಮಾಡಿಕೊಡುತ್ತಿದೆ. ಎಷ್ಟೇ ಪ್ರತಿಭೆಯಿದ್ದರೂ, ಯಶಸ್ಸಿಗೆ ಒಂದಿಷ್ಟು ಅದೃಷ್ಟ ಬೇಕಾಗುತ್ತದೆ ಮತ್ತು ಅದೃಷ್ಟ ದೇವತೆ ಯಾವಾಗ ನಮ್ಮ ಜತೆಗಿರುತ್ತಾಳ್ಳೋ, ಇರುವುದಿಲ್ಲವೋ ತಿಳಿಯದಂಥ ಚಂಚಲೆ ಎನ್ನುವುದನ್ನು ಮನದಟ್ಟು ಮಾಡಿಸುತ್ತಿದೆ.

ಈ ಬಿಕ್ಕಟ್ಟು dignity of labour ಅನ್ನು ಪುನರ್‌ ಮನನ ಮಾಡಿಸಿರುವುದಷ್ಟೇ ಅಲ್ಲದೇ, ವಿನಮ್ರತೆಯ ಅಗತ್ಯವನ್ನು ಮತ್ತೆ ಮತ್ತೆ ಸಾರುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ನಿಜಕ್ಕೂ essential ಉದ್ಯೋಗಗಳು ಯಾವುವು ಎನ್ನುವುದನ್ನು ತಿಳಿಹೇಳುತ್ತಿದೆ. ಮೆತ್ತನೆಯ ಕುಷನ್‌ ಕುರ್ಚಿಗಳ ಮೇಲೆ ಕುಳಿತು ಕಚೇರಿಯಲ್ಲಿ ಮಾಡುವ ಕೆಲಸಗಳೆಲ್ಲ ಅಷ್ಟಾಗಿ “essential” ಅಲ್ಲ ಎನ್ನುವುದನ್ನು ಈ ಸಾಂಕ್ರಾಮಿಕ ಮನದಟ್ಟು ಮಾಡಿಸಿದೆ.

ನಿಜವಾದ ಹೀರೋಗಳೆಂದರೆ, ಡ್ರೈವರ್‌ಗಳು, ಮನೆ ಕೆಲಸದವರು, ಪೌರ ಕಾರ್ಮಿಕರು ಎನ್ನುವುದು ಸಾಬೀತಾಗಿದ್ದು, ಬೇಸರದ ಸಂಗತಿ ಯೆಂದರೆ, ಸಮಾಜದ ಹಿತಕ್ಕಾಗಿ ಇವರೆಲ್ಲರು ಅತ್ಯಂತ ಕಡಿಮೆ ಸಂಬಳ ಪಡೆಯುತ್ತಿದ್ದಾರೆ ಮತ್ತು ಅವರಿಗೆಲ್ಲ ಸಿಗುತ್ತಿರುವ ಗೌರವವೂ ಕಡಿಮೆಯೇ. ಒಟ್ಟಲ್ಲಿ ಯಾರ ಅಗತ್ಯ ಯಾರಿಗೆ ಅಧಿಕವಿದೆ ಎನ್ನುವು ದನ್ನು ಈ ಲೊಕ್ಡೌನ್ ನಮಗೆಲ್ಲ ಅರ್ಥಮಾಡಿಸಿತು.

ಸುತ್ತಲೂ ಬಡತನ ತುಂಬಿರುವಾಗ, ಇತರರ ಯಾತನೆಗಳು ವ್ಯಕ್ತಿ ಯೊಬ್ಬನಿಗೆ ಹೆಚ್ಚು ಯಾತನೆ ಕೊಡುವುದೇ ಇಲ್ಲ, ಅದೆಲ್ಲ ಆತನಿಗೆ ರೂಢಿಯಾಗಿಬಿಡುತ್ತದೆ. ನಮ್ಮ ದೃಷ್ಟಿಯನ್ನು ಬೇರೆಡೆ ಹರಿಸುವುದು ಒಂದು ರೀತಿಯಲ್ಲಿ coping mechanism ಆಗಿಬಿಡುತ್ತದೆ. ಒಂದು ವಿಷಯವನ್ನಂತೂ ಕೋವಿಡ್‌-19 ನಮಗೆಲ್ಲ ಸ್ಪಷ್ಟವಾಗಿ ಮನದಟ್ಟು ಮಾಡಿಸಿದೆ. ನಾವು ನಮ್ಮ ಮನೆಯ ಗೋಡೆಗಳನ್ನು ಎಷ್ಟೇ ಎತ್ತರಕ್ಕೆ ಕಟ್ಟಿಕೊಂಡರೂ, ಕೊನೆಗೂ, ನಮ್ಮ ಸಮಾಜ ಎಷ್ಟು ಬಲಿಷ್ಠವಾ ಗಿರುತ್ತದೋ, ನಾವೂ ಅಷ್ಟೇ ಬಲಿಷ್ಠವಾಗಿರಬಲ್ಲೆವು ಹಾಗೂ ನಮ್ಮ ಆರೋಗ್ಯವು ನಮ್ಮ ಅಡುಗೆಯವರು, ಮನೆಗೆಲಸದವರು ಮತ್ತು ಡ್ರೈವರ್‌ಗಳಷ್ಟೇ ಇರುತ್ತದೆ ಎನ್ನುವುದನ್ನು ಸಾರುತ್ತಿದೆ ಕೋವಿಡ್‌. ನಾವು ಕಠಿಣ ಪಾಠಗಳಿಂದಲೇ ಹೆಚ್ಚು ಕಲಿಯುತ್ತೇವೆ.

ನಾವೆಲ್ಲರೂ ಜತೆಯಾಗಿ ಸಾಗಬೇಕು ಎನ್ನುವುದನ್ನಂತೂ ಈ ಜಾಗ ತಿಕ ಸಾಂಕ್ರಾಮಿಕ ಸ್ಪಷ್ಟವಾಗಿ ರುಜುವಾತು ಮಾಡಿದೆ. ಕೋವಿಡ್‌ನ‌ CURVE ತಗ್ಗಲಿ ಎಂದು ನಾವೆಲ್ಲರೂ ಕಾಯುತ್ತಿದ್ದೇವೆ. ಆದರೆ, ನಾವೆಲ್ಲರೂ ಇದಕ್ಕಿಂತಲೂ ಹೆಚ್ಚಾಗಿ ಅಸಮಾನತೆಯ CURVE ಅನ್ನು ತಗ್ಗಿಸುವ ನಿಟ್ಟಿನಲ್ಲಿ ಜತೆಯಾಗಿ ಶ್ರಮಿಸಬೇಕಿದೆ.

ಡಾ| ಸುದರ್ಶನ ಬಲ್ಲಾಳ ಮುಖ್ಯಸ್ಥರು, ಮಣಿಪಾಲ್‌ ಆಸ್ಪತ್ರೆಗಳು

Advertisement

Udayavani is now on Telegram. Click here to join our channel and stay updated with the latest news.

Next