Advertisement

coffee, ಔಷಧೀಯ ಉತ್ಪನ್ನ, ಸಂಬಾರ ಪದಾರ್ಥ ಖರೀದಿಗೆ ಕ್ಯಾಂಪ್ಕೊ ಚಿತ್ತ

11:53 PM Sep 27, 2023 | Team Udayavani |

ಮಂಗಳೂರು: ಅಡಿಕೆ ಬೆಳೆಗಾರರ ಸಹಕಾರ ಸಂಸ್ಥೆ ಕ್ಯಾಂಪ್ಕೋ ತನ್ನ ಬೈಲಾದಲ್ಲಿ ತಿದ್ದುಪಡಿ ಮಾಡಿದ್ದು, ಬೆಳೆಗಾರರಿಗೆ ಅನುಕೂಲವಾಗಲು ಹಲವು ಕ್ರಮಗಳನ್ನು ಕೈಗೊಂಡಿದೆ.

Advertisement

ಅಡಿಕೆ, ಕೊಕ್ಕೊ, ರಬ್ಬರ್‌, ಗೇರು, ತೆಂಗಿನಕಾಯಿಯ ಜತೆಗೆ ಸಂಬಾರ ಪದಾರ್ಥ, ಕಾಫಿ, ಔಷಧೀಯ ಉತ್ಪನ್ನ, ಅರೊಮ್ಯಾಟಿಕ್‌ ಪ್ಲಾಂಟ್ಸ್‌ ಹಾಗೂ ತಾಳೆ ಬೆಳೆ ಖರೀದಿಗೆ ಸಮ್ಮತಿಸಿದೆ. ಹಳದಿ ಎಲೆ ರೋಗಕ್ಕೂ ಸಂಶೋಧನೆಗೆ ಅನುದಾನ ನೀಡಲು ಅನುಮತಿಸಲಾಗಿದೆ. ಆಡಳಿತ ಮಂಡಳಿಗೆ ನಿರ್ದೇಶಕರ ಸಂಖ್ಯೆಯನ್ನು 19ಕ್ಕೆ ಏರಿಕೆ ಮಾಡಲಾಗಿದೆ. ಇದರಲ್ಲಿ ಇಬ್ಬರು ಮಹಿಳಾ ನಿರ್ದೇಶಕರ ನೇಮಕಕ್ಕೂ ನಿರ್ಧರಿಸಿದೆ ಎಂದು ಸಂಘನಿಕೇತನದಲ್ಲಿ ಬುಧವಾರ ನಡೆದ ಕ್ಯಾಂಪ್ಕೋ ವಾರ್ಷಿಕ ಮಹಾಸಭೆಯಲ್ಲಿ ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ ತಿಳಿಸಿದರು.

ಅಡಿಕೆ ಕೃಷಿಕರಿಗೆ ಮಣ್ಣಿನ ಫಲವತ್ತತೆ ಹಾಗೂ ಹೆಚ್ಚಿನ ಇಳುವರಿಗಾಗಿ ಕೇರಳ-ಕರ್ನಾಟಕದ ಅಂತಾರಾಜ್ಯ ಸಹಕಾರ ಸಂಸ್ಥೆ ಕ್ಯಾಂಪ್ಕೋ ತನ್ನದೇ ಬ್ರ್ಯಾಂಡ್‌ನ‌ಲ್ಲಿ ಆಯುಷ್‌ ಹಾಗೂ ಪೌಷ್ಟಿಕ ಎಂಬ ಎರಡು ಗೊಬ್ಬರಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದು ನವೆಂಬರ್‌ ಅಂತ್ಯದೊಳಗೆ ಎಲ್ಲ ಬೆಳೆಗಾರರಿಗೆ ಕೈಗೆಟಕುವ ದರದಲ್ಲಿ ಲಭ್ಯವಾಗಲಿದೆ. ಇದು ಅಡಿಕೆ ಜತೆಗೆ ಇತರ ಉಪ ಬೆಳೆಗಳಿಗೂ ಉಪಯುಕ್ತವಾಗಲಿದೆ ಎಂದರು.

ಜಿಎಸ್‌ಟಿ ಸಮಸ್ಯೆಗೆ ನಿಯೋಗ
ಅಡಿಕೆ ಮಾರಾಟದ ಮೇಲೆ ಕೇಂದ್ರ ಸರಕಾರ ಜಿಎಸ್‌ಟಿ ತೆರಿಗೆ ವಿಧಿಸುತ್ತಿದ್ದು, ಇದು ಅ. 7ರ ಜಿಎಸ್‌ಟಿ ಕೌನ್ಸಿಲ್‌ ಸಭೆಗೆ ಮುನ್ನ ಇತ್ಯರ್ಥವಾಗಬೇಕಾಗಿದೆ. ಅದ ಕ್ಕಾಗಿ ಅಡಿಕೆ ಟಾಸ್ಕ್ಫೋರ್ಸ್‌ ಸಮಿತಿ ಅಧ್ಯಕ್ಷ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ದಿಲ್ಲಿಗೆ ಕ್ಯಾಂಪ್ಕೋ ಸೇರಿದಂತೆ ಬೆಳೆಗಾರ ಸಂಘಟನೆಗಳ ನಿಯೋಗ ತೆರಳಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್‌ ಅವರಿಗೆ ಮನವರಿಕೆ ಮಾಡಬೇಕಾಗಿದೆ ಎಂದರು.

ರಾಷ್ಟ್ರಪತಿಗಳಿಂದ ಸಸ್ಯತಳಿ ಸಂರಕ್ಷಕ ಪುರಸ್ಕಾರ ಪಡೆದ ಬಿ.ಕೆ. ದೇವರಾಯ ಹಾಗೂ ಕರಿಮೆಣಸು ಸಂಸ್ಕರಣ ಯಂತ್ರ ಆವಿಷ್ಕರಿಸಿದ ಗೋಪಾಲಕೃಷ್ಣ ಶರ್ಮ ಅವರಿಗೆ ಆರ್‌ಎಸ್‌ಎಸ್‌ ಮುಖಂಡ ಕಜಂಪಾಡಿ ಸುಬ್ರಹ್ಮಣ್ಯ ಭಟ್‌ ಅವರು ಕ್ಯಾಂಪ್ಕೋ ಸುವರ್ಣ ಮಹೋತ್ಸವ ಪ್ರಶಸ್ತಿ ನೀಡಿ ಗೌರವಿಸಿದರು.

Advertisement

ಸುವರ್ಣ ಮಹೋತ್ಸವ ಸ್ಮರಣ ಸಂಚಿಕೆ ” ಪೂಗಸಿರಿ’ಯನ್ನು ಆರ್‌ಎಸ್‌ಎಸ್‌ ಮುಖಂಡ ಡಾ| ಪ್ರಭಾಕರ ಭಟ್‌ ಕಲ್ಲಡ್ಕ ಬಿಡುಗಡೆಗೊಳಿಸಿದರು.

ಕ್ಯಾಂಪ್ಕೋ ಪೌಷ್ಟಿಕ ಮತ್ತು ಆಯುಷ್‌ ಗೊಬ್ಬರವನ್ನು ಅಡಿಕೆ ಟಾಸ್ಕ್ ಫೋರ್ಸ್‌ ಸಮಿತಿ ಅಧ್ಯಕ್ಷ ಅರಗ ಜ್ಞಾನೇಂದ್ರ ಬಿಡುಗಡೆಗೊಳಿಸಿದರು.

ಉಪಾಧ್ಯಕ್ಷ ಶಂಕರನಾರಾಯಣ ಭಟ್‌ ಖಂಡಿಗ, ಎಸ್‌.ಆರ್‌. ಸತೀಶ್ಚಂದ್ರ, ದಯಾನಂದ್‌ ಹೆಗ್ಡೆ, ಕೃಷ್ಣ ಪ್ರಸಾದ್‌ ಮಡ್ತಿಲ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next